ಚಮತ್ಕಾರಿ ಚಪ್ಪಟೆ ಹುಳು!
Team Udayavani, Oct 3, 2019, 9:56 AM IST
ಮನೆಯ ಕುಂಡದ ಕೆಳಗೆ ಆಗಾಗ ಈ ಹುಳುವನ್ನು ನೀವು ನೋಡಿರುತ್ತೀರಿ. ಪ್ರಪಂಚದಾದ್ಯಂತ ಹರಡಿರುವ ಸಂಬಂಧಿಗಳನ್ನು ಹೊಂದಿರುವ ಎಕೈಕ ಹುಳು ಇದು. ಹೆಸರು ಚಪ್ಪಟೆ ಹುಳು. ಹಗಲೆಲ್ಲಾ ನಿದ್ರಿಸುವ ಇಲ್ಲವೆ ತಟಸ್ಥವಾಗಿರುವ ಈ ಹುಳು ರಾತ್ರಿ ಕ್ರಿಯಾಶೀಲವಾಗುತ್ತದೆ.
ಮನೆಯ ಅಂಗಳದಲ್ಲಿ ಜೋಡಿಸಿರುವ ಹೂಕುಂಡಗಳ ಕೆಳಗಿನ ತೇವಾಂಶಯುಕ್ತ ಜಾಗದಲ್ಲಿ ಚಪ್ಪಟೆ ದೇಹ ಮತ್ತು ಸುತ್ತಿಗೆಯಾಕಾರದ ತಲೆ ಇರುವ ಹುಳುವೊಂದು ಆಗಾಗ ನೀವು ಗಮನಿಸಿದ್ದೀರಾ? ಥಟ್ಟನೆ ನೋಡಿದರೆ ನಾಗರಹಾವಿನ ಮರಿ ಇರಬಹುದು ಎಂಬ ಭಾವನೆ ಬರುತ್ತದಾದರೂ ಲೋಳೆಯುಕ್ತ ಮೈ ಮತ್ತು ಎರೆಹುಳುವಿನಂತೆ ನಿಧಾನಗತಿಯ ಚಲನೆ ಹೊಂದಿರುವುದರಿಂದ ಹಾವಿನ ಜಾತಿಗೆ ಸೇರಿದ್ದಲ್ಲ ಎಂಬುದು ದೃಢವಾಗುತ್ತದೆ. ಇದನ್ನು ಬೈಪೇಲಿಯಮ್, ಪ್ಲನೇರಿಯನ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಚಪ್ಪಟೆ ಹುಳು ಇಲ್ಲವೇ ಸುತ್ತಿಗೆ ಹುಳು ಎಂಬಿತ್ಯಾದಿ ಹೆಸರುಗಳಿವೆ.
ಪ್ರಪಂಚವ್ಯಾಪಿ ಸುತ್ತಿಗೆ ಹುಳು
ಇದು ಪ್ರಪಂಚದ ಎಲ್ಲ ವಾಯುಗುಣಕ್ಕೆ ಹೊಂದಿಕೊಳ್ಳಬಲ್ಲ ಗುಣ ಹೊಂದಿರುವುದರಿಂದ ವಿಶ್ವದ ಮೂಲೆ ಮೂಲೆಯಲ್ಲೂ ಕಾಣಸಿಗುತ್ತದೆ. ಇಡೀ ಫ್ರಾನ್ಸ್ ದೇಶದಾದ್ಯಂತ ಇರುವ ಇವು, ಜೀವಶಾಸ್ತ್ರಜ್ಞರಿಗೇ ಅಚ್ಚರಿಯುಂಟುಮಾಡಿವೆ. ಹೊಸ ಜಾಗದಲ್ಲಿ ಯಾವ ಶತ್ರುವನ್ನೂ ಹೊಂದಿರದ ಇವು ಬೇಗನೆ ಅಲ್ಲಿಗೆ ಹೊಂದಿಕೊಂಡು ಅಸಂಖ್ಯ ಸಂಖ್ಯೆಯಲ್ಲಿ ಜಮೆಯಾಗುತ್ತವೆ. ಅಂಟಾರ್ಕ್ಟಿಕಾ ಪ್ರದೇಶದಲ್ಲಿ ಮಾತ್ರ ಇವು ಕಂಡು ಬಂದಿಲ್ಲ. ಸುಮಾರು 80ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಕಂದು, ಹಳದಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಇದು ಕಂಡು ಬರುತ್ತದೆ. ನಿಮ್ಮ ಮನೆಯಂಗಳದ ಪಾಟ್ಗಳ ಕೆಳಗೆ ಇದು ಸಿಕ್ಕರೆ ನೋಡಿ ಆನಂದಿಸಿ. ಹಾನಿ ಮಾಡಬೇಡಿ.
ಹೋದಲ್ಲೆಲ್ಲಾ ಗುರುತು
ಸುತ್ತಿಗೆಯಾಕಾರದ ತಲೆಯಲ್ಲಿ ಸೂಕ್ಷ್ಮಗಾತ್ರದ ತಂತುಗಳಿದ್ದು ತಲೆಯ ಮಂಭಾಗಕ್ಕೂ ಚಾಚಿಕೊಂಡ ಸ್ಪರ್ಶ ಮತ್ತು ರಾಸಾಯನಿಕ ವಸ್ತುವಿನ ಸಂಪರ್ಕವನ್ನು ತೀಕ್ಷ್ಣವಾಗಿ ಗ್ರಹಿಸುತ್ತವೆ. ವಿಕಾಸದ ಹಂತದಲ್ಲಿ ತೀರಾ ಕೆಳಮಟ್ಟದಲ್ಲಿರುವ ಇವುಗಳಿಗೆ ಯಾವುದೇ ರಕ್ತ ಪರಿಚಲನೆ, ಉಸಿರಾಟ ಮತ್ತು ಅಸ್ಥಿಪಂಜರ ವ್ಯವಸ್ಥೆಯಾಗಲೀ ಇರುವುದಿಲ್ಲ. ಇಡೀ ದೇಹ ಲೋಳೆ ಪದಾರ್ಥವನ್ನು ಹೊಂದಿರುವುದರಿಂದ ಹುಳು ನೆಲದ ಮೇಲೆಯೇ ತೆವಳುತ್ತಾ ಮುಂದುವರಿದಂತೆಲ್ಲಾ ಬೆಳ್ಳಿ ಬಿಳಿಯ ಲೋಳೆಯ ಅಚ್ಚನ್ನು ಬಿಡುತ್ತದೆ.
ರೈತನ ಮಿತ್ರರೇ ಇವುಗಳಿಗೆ ಆಹಾರ
ರೈತನ ಮಿತ್ರ ಎಂದೇ ಕರೆಯಲ್ಪಡುವ ಎರೆಹುಳುಗಳೇ ಇದರ ಆಹಾರ. ಎರೆಹುಳು ಕಂಡೊಡನೆ ಆಕ್ರಮಣ ಮಾಡಿ, ಮೈಯ ಅಂಟಿನಿಂದ ಬಂಧಿಸಿ ಅವನ್ನು ನುಂಗುತ್ತವೆ. ವಿನೇಗರ್ ಮತ್ತು ಉಪ್ಪು ಇದರ ಶತ್ರು. ಈ ಜೀವಿ ಒಂದು ವರ್ಷದವರೆಗೂ ಆಹಾರ ಇಲ್ಲದೆ ಜೀವಿಸಬಲ್ಲದು. ಉತ್ತರ ಅಮೇರಿಕ, ಯುರೋಪ್ಗ್ಳ ಜೀವಿ ಆವಾಸಗಳಲ್ಲಿ ಇದು ದೊಂಬಿ ಎಂಬಿಸಿದೆ. ಅಲ್ಲಿನ ಮೂಲ ನಿವಾಸಿಗಳಾದ ಗೊಣ್ಣೆ ಹುಳು, ಶಂಖದ ಹುಳು ಮತ್ತು ಎರೆಹುಳುಗಳ ವಂಶವನ್ನೇ ನಿರ್ನಾಮ ಮಾಡಿದ ಅಪಕೀರ್ತಿ ಇದರದ್ದು. ನಮ್ಮ ಪಶ್ಚಿಮಘಟ್ಟ, ಮಲೆನಾಡು ಪ್ರದೇಶ, ಉತ್ತರ ಭಾರತದ ಪರ್ವತಶ್ರೇಣಿ ಮತ್ತು ಪಶ್ಚಿಮ ಭಾರತದ ಬಹುತೇಕ ಭಾಗಗಳಲ್ಲಿ ಇವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.
-ಗುರುರಾಜ್ ಎಸ್. ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’