ಗಬ್ಬುರಾಜನಿಗೆ ಜಯವಾಗಲಿ
Team Udayavani, Feb 20, 2020, 4:15 AM IST
“ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು’ ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು ಹುಡುಗಿ ಮಾತ್ರ ಗಬ್ಬುರಾಜನಿಗೆ ಜಯವಾಗಲಿ ಎಂದುಬಿಟ್ಟಳು. ಕುಮಾರನಿಗೆ ಅವಮಾನವಾದಂತಾಯಿತು.
ಕುಮಾರ, ಶಂಕರ ಇಬ್ಬರೂ ಗೆಳೆಯರಾಗಿದ್ದರು. ಶಾಲೆಯಲ್ಲಿ ಅವರಿಬ್ಬರ ಆಟ- ಪಾಠ- ಜಗಳ ಎಲ್ಲವೂ ಒಟ್ಟಿಗೆ ಆಗುತ್ತಿತ್ತು. ಕುಮಾರ ಅಶಿಸ್ತಿನ ಹುಡುಗನಾಗಿದ್ದ. ಸಮವಸ್ತ್ರ ಧರಿಸುವುದರಿಂದ ಹಿಡಿದು ಶುಚಿತ್ವ ಕಾಪಾಡುವಲ್ಲಿಯವರೆಗೆ ಅವನಿಗೆ ನಿರಾಸಕ್ತಿ. ಶಂಕರ ಈ ಬಗ್ಗೆ ಅದೆಷ್ಟು ಸಲ ಬುದ್ಧಿವಾದ ಹೇಳಿದ್ದರೂ ಅವನು ಕೇಳುತ್ತಿರಲಿಲ್ಲ. ಈ ವಿಷಯವಾಗಿಯೇ ಮತ್ತೂಮ್ಮೆ ಅವರಿಬ್ಬರ ನಡುವೆ ಮುನಿಸು ಬಂದಿತು. ಶಂಕರ ತಾನೇ ಅವನ ಬಳಿ ತೆರಳಿ ಸ್ನೇಹ ಹಸ್ತ ಚಾಚಿದ. ಕುಮಾರ ಮಾತನಾಡಲೊಲ್ಲ. ಕಡೆಗೆ ಅವನ ಗಮನ ಸೆಳೆಯಲು ಶಂಕರ ಒಂದು ಉಪಾಯ ಮಾಡಿದ. “ಲೋ… ಕುಮಾರ ನಾವ್ಯಾಕೋ ಎಲ್ಲಾರೂ ಸೇರಿ ಒಂದು ನಾಟಕ ಮಾಡಬಾರದು? ಎಲ್ಲಾರು ಸೇರಿ ನಾಟಕ ಮಾಡಿದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವೇನೊ’ ಅಂದ. ನಾಟಕ ಅಂತ ಅಂದ ತಕ್ಷಣ ಕುಮಾರನ ಮುಖ ಖುಷಿಯಿಂದ ಅರಳಿತು. ಅವನು ಶಂಕರನ ಮುಖ ನೋಡಿದ. ಆಗ ಶಂಕರ ಹೇಳಿದ. “ಲೋ ಕುಮಾರ, ನೀನೆ ಕಣೋ ಇದರಲ್ಲಿ ರಾಜ. ನಾನು ಮಂತ್ರಿ ಆಗ್ತಿನಿ’ ಎಂದ. ಕುಮಾರ ಮತ್ತು ಶಂಕರ ಇಬ್ಬರೂ ತರಗತಿಯ ಎಲ್ಲಾ ಮಕ್ಕಳಿಗೂ “ನಾಟಕ ಮಾಡೋಣ ಬನ್ರೊ’ ಅಂತ ಕರೆದರು. ಎಲ್ಲಾ ಮಕ್ಕಳೂ ಹುರುಪಿನಿಂದ ಬಂದರು.
ತರಗತಿಯ ಎಲ್ಲಾ ಮಕ್ಕಳೂ ಸೇರಿಕೊಂಡು, ನಾಟಕ ಆಡಲು ಶುರುಮಾಡಿದರು. ಅವರಲ್ಲಿ ಕುಮಾರ ರಾಜನ ಪಾತ್ರ, ಶಂಕರ ಮಂತ್ರಿ ಪಾತ್ರ, ಇನ್ನು ಹುಡುಗರು ಮತ್ತು ಹುಡುಗಿಯರಲ್ಲಿ ಕೆಲವರು ಸೈನಿಕರು, ಮತ್ತೆ ಕೆಲವರು ಸೇವಕರ ಪಾತ್ರಗಳನ್ನು ಮಾಡಲು ಒಪ್ಪಿಕೊಂಡರು.
ಕುಮಾರ ಬಂದಾಗ, ಅಂದರೆ ರಾಜ ಬಂದಾಗ ಸೈನಿಕರು ಮತ್ತು ಸೇವಕರು ಎಲ್ಲಾರು ಸೇರಿಕೊಂಡು ಒಟ್ಟಿಗೆ “ರಾಜನಿಗೆ ಜಯವಾಗಲಿ, ರಾಜನಿಗೆ ಜಯವಾಗಲಿ’ ಎಂದು ಹೇಳಬೇಕು ಎಂದು ಶಂಕರ ಹೇಳಿದ. ಆಗ ಎಲ್ಲಾ ಮಕ್ಕಳು “ಆಯ್ತು, ಆಯು’¤ ಅಂತ ಒಪ್ಪಿಕೊಂಡರು. ರಾಜನ ಪಾತ್ರ ಮಾಡಿದ ಕುಮಾರ ಬಹಳ ಠೀವಿಯಿಂದ ಕೈಲೊಂದು ಕೋಲನ್ನು ಖಡ್ಗದಂತೆ ಹಿಡಿದುಕೊಂಡು ಬರತೊಡಗಿದ. ಆಗ ಸೈನಿಕರು ಮತ್ತು ಸೇವಕರ ಪಾತ್ರ ಮಾಡಿದ ಮಕ್ಕಳೆಲ್ಲರೂ ಜೋರಾಗಿ “ರಾಜನಿಗೆ ಜಯವಾಗಲಿ, ರಾಜನಿಗೆ ಜಯವಾಗಲಿ’ ಅಂತ ಕೂಗಲು ಪ್ರಾರಂಭಿಸಿದರು.
ಅವರಲ್ಲಿ ಒಬ್ಬಳು ಹುಡುಗಿ “ಗಬ್ಬು ರಾಜನಿಗೆ ಜಯವಾಗಲಿ’ ಅಂತ ಜೋರಾಗಿ ಕೂಗಿದಳು. ಅವಳು ಹಾಗೆಂದ ತಕ್ಷಣ ಎಲ್ಲಾ ಹುಡುಗರು “ಗಬ್ಬು ರಾಜನಿಗೆ ಜಯವಾಗಲಿ, ಗಬ್ಬು ರಾಜನಿಗೆ ಜಯವಾಗಲಿ ಅಂತ ಜೋರಾಗಿ ಕೂಗತೊಡಗಿದರು. ಆಗ ಕುಮಾರನಿಗೆ ಬಹಳ ಕೋಪ ಬಂತು. “ಏನ್ರೊà, ರಾಜ ಆದ ನನಗೇನೆ ಗಬ್ಬು ರಾಜ ಅಂತಿರೇನ್ರೊà’ ಅಂತ ರೇಗಿದ. ಅವರಲ್ಲಿ ಗಬ್ಬು ರಾಜ ಎಂದು ಕೂಗಿದ ಹುಡುಗಿ ಬಹಳ ಜಾಣೆ ಮತ್ತು ದಿಟ್ಟೆ ಕೂಡ. ಅವಳು ಮುಂದೆ ಬಂದು “ಏ ಕುಮಾರ, ರಾಜ ಯಾವತ್ತಾದರೂ ಕೊಳಕಾಗಿರ್ತಾನಾ? ರಾಜ ಅಂದರೆ ನೀಟಾಗಿ ಒಗೆದಿರುವ ಬಟ್ಟೆ ಹಾಕ್ಕೋತಾನೆ; ಹಲ್ಲು ಚೆನ್ನಾಗಿ ಉಜ್ಜುತ್ತಾನೆ; ದಿನಾಲೂ ಸ್ನಾನ ಮಾಡುತ್ತಾನೆ; ಕೂದಲನ್ನು ಚೆನ್ನಾಗಿ ಬಾಚಿಕೊಂಡಿರ್ತಾನೆ; ಉಗುರುಗಳನ್ನು ಉದ್ದಕ್ಕೆ ಬಿಡೋದಿಲ್ಲ’ ಅಂದಳು.
ಆಗ ಕುಮಾರನಿಗೆ ಅರ್ಥವಾಯಿತು. ಆ ಸಹಪಾಠಿಯ ಮಾತುಗಳಲ್ಲಿ ಸತ್ಯಾಂಶ ಇದೆ ಎಂದು ತೋರಿತು. ಶಾಲೆಯಿಂದ ಮನೆಗೆ ಹೋದವನೇ ತನ್ನ ಅಮ್ಮನಿಗೆ ಶಾಲೆಯಲ್ಲಿ ನಡೆದಿದ್ದನ್ನು ಹೇಳಿದ “ಏನಮ್ಮ, ನೀನು ನನ್ನನ್ನು ಸರಿಯಾಗಿ ತಯಾರು ಮಾಡಿ ಕಳಿಸೋದಿಲ್ಲ. ಶಾಲೆಯಲ್ಲಿ ರಾಜನ ಪಾರ್ಟ್ ಮಾಡೋದಕ್ಕೆ ಹೋದರೆ ಎಲ್ಲರೂ ನನ್ನನ್ನು ಗಬ್ಬು ರಾಜ ಅಂತ ಆಡಿಕೋಳ್ತಾರೆ’ ಅಂತ ಸಪ್ಪೆಮೋರೆ ಹಾಕಿಕೊಂಡು ದೂರಿದ. ಆಗ ಅವರ ಅಮ್ಮ, “ಅಲ್ಲಾ ಕಣೋ, ನಾನು ಯಾವಾಗಲೂ ಹೇಳ್ತಾನೆ ಇರ್ತೀನಿ, ನೀಟಾಗಿರು ಅಂತ. ಬಾರೋ ಸ್ನಾನ ಮಾಡಿಸ್ತೀನಿ ಅಂತ ಕರೆದರೂ ಹಾಗೇ ಓಡಿ ಹೋಗ್ತಿàಯಾ! ನಾನೇನ್ ಮಾಡ್ಲಿ ಹೇಳು’ ಅಂದರು. ಆಗ ಕುಮಾರ “ಇಲ್ಲಮ್ಮ, ಇನ್ನು ಮೇಲೆ ನಾನು ಹಾಗೆ ಮಾಡಲ್ಲ. ನಿನ್ನ ಮಾತು ಕೇಳ್ತೀನಿ. ನೀನು ಕರೆದಾಗ ಬರುತ್ತೀನಿ’ ಎಂದು ಹುರುಪಿನಿಂದ ಹೇಳಿದ.
ಮಾರನೆ ದಿನ ಕುಮಾರ ಹಲ್ಲನ್ನು ಚೆನ್ನಾಗಿ ತಿಕ್ಕಿಕೊಂಡ. ಉದ್ದಕ್ಕೆ ಬೆಳೆದು ಕೊಳಕಾಗಿದ್ದ ಉಗುರುಗಳನ್ನೆಲ್ಲ ಕತ್ತರಿಸಿಕೊಂಡ. ಸ್ವತ್ಛವಾಗಿ ಸ್ನಾನ ಮಾಡಿ ಶುಭ್ರವಾದ ಸಮವಸ್ತ್ರ ಹಾಕಿಕೊಂಡು, ತಲೆ ಬಾಚಿಕೊಂಡು ತರಗತಿಗೆ ಬಂದ. ಮಕ್ಕಳಿಗೆಲ್ಲ ಆಶ್ಚರ್ಯವಾಯಿತು. ಎಲ್ಲಾ ಹುಡುಗರೂ ಜೋರಾಗಿ “ಮಹಾರಾಜರಿಗೆ ಜಯವಾಗಲಿ’ ಎಂದು ಕೂಗತೊಡಗಿದರು. ಕುಮಾರ ಮುಗುಳು ನಗುತ್ತಾ ಗಾಂಭೀರ್ಯದಿಂದ, ರಾಜನಂತೆ ತನ್ನ ಕೈಗಳನ್ನು ಮೇಲಕ್ಕೆತ್ತಿ ಬೀಸತೊಡಗಿದನು.
ಪ್ರೇಮಾ ಬಿರಾದಾರ