ಬಕ ಪಕ್ಷಿ ಯಿಂದ ಮೀನುಗಳು ಪಾರಾಗಿದ್ದು ಹೇಗೆ?
Team Udayavani, Feb 15, 2018, 12:20 PM IST
ಕಾಡಿನ ಮಧ್ಯೆ ಪುಟ್ಟದೊಂದು ಕೊಳ. ಕೊಳದಲ್ಲಿರುವ ಮೀನುಗಳನ್ನು ತಿನ್ಕೊಂಡು ಒಂದು ಬಕಪಕ್ಷಿಯೊಂದು ಜೀವನ ಸಾಗಿಸುತ್ತಿತ್ತು. ಕಾಲ ಕಳೆದಂತೆ ಬಕಪಕ್ಷಿಗೆ ವಯಸ್ಸಾಯಿತು. ಮೀನು ಹಿಡಿದು ತಿನ್ನುವಷ್ಟು ಶಕ್ತಿ ಬಕಪಕ್ಷಿಗೆ ಇರಲಿಲ್ಲ. ಕೆಲ ದಿನಗಳ ಕಾಲ ಯಾವುದೇ ಬೇಟೆ ಇಲ್ಲದೆ, ಏನನ್ನೂ ತಿನ್ನದೆ ಬಕಪಕ್ಷಿ ಹಸಿವಿನಿಂದ ಬಡಕಲಾಯಿತು. ಇದೇ ಪರಿಸ್ಥಿತಿ ಮುಂದುವರಿದರೆ ಶೀಘ್ರದಲ್ಲೇ ತಾನು ಸಾಯೋದು ಖಚಿತ ಎಂದು ಅದಕ್ಕೆ ತಿಳಿದುಹೋಯಿತು.
ಅದಕ್ಕೇ ಒಂದು ಉಪಾಯ ಮಾಡಿತು. ಕೊಳದ ತುದಿಯಲ್ಲಿ ಒಂದೇ ಕಾಲಿನಲ್ಲಿ ನಿಂತು ಧ್ಯಾನ ಮಾಡ್ತಾ ಇರೋಹಾಗೆ ನಾಟಕ ಮಾಡತೊಡಗಿತು. ಬಕಪಕ್ಷಿಯ ಸನಿಹದಲ್ಲೇ ಸುಳಿದಾಡಿದರೂ ಅದು ಅಲ್ಲಾಡದೆ ಸುಮ್ಮನಿರುವುದನ್ನು ಕಂಡು ಮೀನುಗಳಿಗೆಲ್ಲಾ ಆಶ್ಚರ್ಯವಾಯಿತು. ಹಿಂದೆಲ್ಲಾ ಹೀಗಾಗಿದ್ದೇ ಇಲ್ಲ. ಮೀನು ಕಂಡ ತಕ್ಷಣ ಬಕ ಪಕ್ಷಿ ಬಾಯಿ ಹಾಕಿಬಿಡುತ್ತಿತ್ತು. ಒಂದು ಮೀನು ಧೈರ್ಯ ಮಾಡಿ ಕೇಳಿಯೂ ಬಿಟ್ಟಿತು “ಬಕ ಪಕ್ಷಿಯೇ, ಏನಾಗಿದೆ ನಿನಗೆ. ಮೀನು ತಿನ್ನೋದನ್ನು ನಿಲ್ಲಿಸಿದೆಯಾ?’ ಎಂದು. ಬಕಪಕ್ಷಿಯು ಸನ್ಯಾಸಿಯಂತೆ ನಿಧಾನಕ್ಕೆ ಕಣ್ತೆರೆದು “ನಿನ್ನೆ ಕೊಳದ ಹತ್ತಿರ ಒಬ್ಬ ಜ್ಯೋತಿಷಿ ಬಂದು ಹೇಳಿದ, ಈ ಸಲ ಬೇಸಿಗೆಯಲ್ಲಿ ನಮ್ಮ ಕೊಳ ಬತ್ತಿ ಹೋಗುತ್ತದೆ ಎಂದು. ಆ ಜ್ಯೋತಿಷಿ ಮಾತನ್ನು ಕೇಳಿದ ನನಗೆ ತುಂಬಾ ಬೇಸರವಾಯಿತು. ಯಾಕೆಂದರೆ ನಾನು ಇದೇ ಕೊಳದಲ್ಲಿ ಹುಟ್ಟಿ ಬೆಳೆದವನು. ಈ ಕೊಳದ ನೀರು ಬತ್ತಿಹೋದರೆ ನಿಮಗೆ ಉಳಿಗಾಲವಿಲ್ಲ. ಆದಕ್ಕೇ ನಿಮಗೆಲ್ಲಾ ಮುಕ್ತಿ ಸಿಗಲೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡ್ತಾ ಇದ್ದೀನಿ’ ಎಂದಿತು ಬೇಸರದಿಂದ.
ಈ ಮಾತನ್ನು ಕೇಳಿ ಹೆದರಿದ ಮೀನುಗಳು, ಅಯ್ನಾ ಬಕ ಪಕ್ಷಿಯೇ ಈ ವಿಚಾರವನ್ನು ಮುಂಚಿತವಾಗಿ ತಿಳಿಸಿದ್ದಕ್ಕೆ ನಿನಗೆ ಧನ್ಯವಾದ. ಆ ಜ್ಯೋತಿಷಿ ಈ ಅಪಾಯದಿಂದ ನಾವು ಪಾರಾಗುವ ಬಗೆಯನ್ನು ತಿಳಿಸಿದರೇ?’ ಎಂದು ಕೇಳಿದವು. ತಾನು ಹೇಳಿದ್ದನ್ನು ಮೀನುಗಳು ಸಂಪೂರ್ಣವಾಗಿ ನಂಬಿದವೆಂದು ತನ್ನ ಚಾಣಾಕ್ಷತನಕ್ಕೆ ತಲೆದೂಗಿತು ಬಕ ಪಕ್ಷಿ. ಆ ಸಂತಸವನ್ನು ಮುಖದಲ್ಲಿ ತೋರಗೊಡದೆ ಬಕಪಕ್ಷಿ “ಹೌದು, ಅವರು ಇದಕ್ಕೆ ಪರಿಹಾರವನ್ನೂ ತಿಳಿಸಿದ್ದಾರೆ. ಇಲ್ಲೇ ಸ್ವಲ್ಪ ದೂರದಲ್ಲಿ ಇನ್ನೊಂದು ದೊಡ್ಡ ಕೊಳ ಇದೆಯಂತೆ. ಅಲ್ಲಿ ತುಂಬಾ ನೀರಿದೆಯಂತೆ. ನೀವು ಇಲ್ಲಿಂದ ಅಲ್ಲಿಗೆ ಸ್ಥಳಾಂತರಗೊಳ್ಳುವುದೇ ನೀವು ಪಾರಾಗಲು ಇರುವ ದಾರಿ’ ಎಂದು ಹೇಳಿತು. ಆ ಕೊಳಕ್ಕೆ ಹೇಗೆ ಹೋಗುವುದೆಂದು ಮೀನುಗಳೆಲ್ಲಾ ಸಭೆ ನಡೆಸಿದವು. ಅವುಗಳಿಗೆ ಏನೂ ತೋಚಲಿಲ್ಲ. ಕಡೆಗೆ ಬಕ ಪಕ್ಷಿಯೇ ಸಮಯ ನೋಡಿ “ಬೇಕಾದರೆ ನಾನೇ ನಿಮ್ಮನ್ನೆಲ್ಲ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ’ ಎಂದಿತು. ಮೀನುಗಳೆಲ್ಲಾ ಬಕ ಪಕ್ಷಿಯನ್ನು ಕೊಂಡಾಡಿದವು, ಬಕ ಪಕ್ಷಿ ಒಂದೇ ಶರತ್ತು ಹಾಕಿತು ಒಂದು ದಿನಕ್ಕೆ ಒಂದೇ ಮೀನನ್ನು ಬೆನ್ನಮೇಲೆ ಕೂರಿಸಿಕೊಂಡು ಹೋಗುತ್ತೀನಿ ಎಂದು. ಮೀನುಗಳೆಲ್ಲಾ ಒಪ್ಪಿದವು.
ಬಕ ಪಕ್ಷಿಯ ಕುತಂತ್ರ ಫಲಿಸಿತ್ತು. ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತೇನೆಂದು ಸುಳ್ಳು ಹೇಳಿ ದಾರಿ ಮಧ್ಯ ಯಾರಿಗೂ ತಿಳಿಯದಂತೆ ಮೀನನ್ನು ಗಬಕ್ಕನೆ ತಿಂದುಬಿಡುತ್ತಿತ್ತು. ತುಂಬಾ ದಿನ ಇದು ಮುಂದುವರಿಯಿತು. ಕೆಲ ದಿನಗಳ ನಂತರ ಕೊಳದಲ್ಲಿದ್ದ ಏಡಿಯೊಂದು ಹುಷಾರು ತಪ್ಪಿತು. ಅದಕ್ಕೇ ಇತರೆ ಮೀನುಗಳಿಗಿಂತ ಮುಂಚೆ ಅದನ್ನು ದೊಡ್ಡ ಕೊಳಕ್ಕೆ ಸ್ಥಳಾಂತರಿಸಬೇಕೆಂದು ತೀರ್ಮಾನವಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಬಕ ಪಕ್ಷಿ ಒಪ್ಪಿತು.
ಏಡಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಬಕ ಪಕ್ಷಿ ಹೊರಟಿತು. ಮಧ್ಯ ದಾರಿ ತಲುಪುವಷ್ಟರಲ್ಲಿ ಕೆಳಗೆ ಬಂಡೆಯೊಂದರ ಮೇಲೆ ತುಂಬಾ ಮೀನಿನ ಮೂಳೆಗಳು ಬಿದ್ದಿರುವುದನ್ನು ಏಡಿ ಗಮನಿಸಿತು. ಬಕ ಪಕ್ಷಿಯ ಹುನ್ನಾರವೆಲ್ಲಾ ಅದಕ್ಕೆ ತಿಳಿದುಹೋಯಿತು. ಏಡಿ “ಬಕ ಪಕ್ಷಿಯೇ ನಿನಗೆ ಸುಸ್ತಾಗಿರಬೇಕು. ಕೆಳಗೆ ಬಂಡೆಯೊಂದರ ಮೇಲೆ ವಿಶ್ರಾಂತಿ ತೆಗೆದುಕೊಂಡು ನಂತರ ಮುಂದುವರಿಯೋಣ.’ ಎಂದಿತು. ಬಕ ಪಕ್ಷಿ ಕೆಳಗೆ ಇಳಿಯುವಷ್ಟರಲ್ಲಿ ಏಡಿ ಅದರ ಕತ್ತನ್ನು ಕಚ್ಚಿಬಿಟ್ಟಿತು. ಗಾಯಗೊಂಡ ಬಕ ಪಕ್ಷಿ ನೆಲಕ್ಕೆ ಬಿತ್ತು. ಏಡಿ ತನ್ನ ಸ್ವಸ್ಥಾನಕ್ಕೆ ಹಿಂದಿರುಗಿ ಮೀನುಗಳಿಗೆಲ್ಲಾ ನಿಜ ಕಥೆಯನ್ನು ಹೇಳಿತು. ಉಳಿದ ಮೀನುಗಳೆಲ್ಲಾ ಏಡಿಗೆ ಧನ್ಯವಾದ ಸಲ್ಲಿಸಿದವು.
– ಉಮ್ಮೆ ಅಸ್ಮ ಕೆ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ