ಗಾದೆ ಪುರಾಣ
Team Udayavani, Nov 8, 2018, 7:00 AM IST
1. ಅತಿ ಮುದ್ದು ಒಳ್ಳೆಯದಲ್ಲ
ಅಂಕೆ ಶಂಕೆ ಇಲ್ಲದ ಮಕ್ಕಳು, ಮುಂದೆ ದೊಡ್ಡವರಾದ ಮೇಲೆ ಸಮಾಜಕಂಟಕರಾಗುವ ಸಂದರ್ಭವೇ ಹೆಚ್ಚು. ಇವರ ಪೈಕಿ ಕೆಲವರು, ತಮ್ಮ ಕೆಟ್ಟ ನಡತೆಗೆ ಹೆತ್ತವರು ಕಲಿಸಿದ ಪಾಠವೇ ಕಾರಣ ಎನ್ನುತ್ತಾರೆ. ಅತಿಯಾದ ಮುದ್ದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗಬಹುದು. ಬಾಲ್ಯದಿಂದಲೇ ಮಕ್ಕಳನ್ನು ತಿದ್ದುವ ಕೆಲಸವಾಗಬೇಕು. ಸರಿ-ತಪ್ಪುಗಳ ಅರಿವು ಮೂಡಿಸಬೇಕು. ಆ ಮೂಲಕ ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗಬೇಕು.
2. ಮನೆಯೇ ಮಂತ್ರಾಲಯ
ಪ್ರತಿಯೊಬ್ಬರಿಗೂ ಮನೆಯೇ ಸ್ವರ್ಗ. ಹೊರಗಿನ ಪ್ರಪಂಚದ ಕಷ್ಟನಷ್ಟ, ಅಪಮಾನ, ಹಿಂಸೆ, ದುಗುಡ ದುಮ್ಮಾನ, ಬಳಲಿಕೆ ಮುಂತಾದವನ್ನು ಮರೆತು ನಾವು ನಾವಾಗಿಯೇ ಇರುತ್ತಾ, ನಮ್ಮವರೊಂದಿಗೆ ಸಮಾಧಾನ ಕಂಡುಕೊಳ್ಳುವ ನೆಲೆಯೇ ಮನೆ. ಹೀಗಾಗಿ ಮನೆಯೇ ಮಂತ್ರಾಲಯ, ಅದುವೇ ದೇವಾಲಯ. ಮನೆಯನ್ನು ಸ್ವತ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳಬೇಕು.
3. ಉಕ್ಕಿ ಹೋದ ಹಾಲಿಗೆ ಬಿಕ್ಕಿ ಬಿಕ್ಕಿ ಅತ್ತು ಫಲವೇನು?
ಹಾಲು ಕಾಯಿಸುವಾಗ ಗಮನವನ್ನು ಎತ್ತಲೋ ಹರಿಸಿ, ಅದು ಉಕ್ಕಿ ಚೆಲ್ಲಿ ಹೋದಾಗ, “ಅಯ್ಯೋ ಹಾಲು ಹೋಯಿತಲ್ಲಾ’ ಎಂದು ಬೇಸರಿಸಿಕೊಳ್ಳುವುದು ಯಾಕೆ? ಸರಿಯಾದ ಸಿದ್ಧತೆಯಿಲ್ಲದೆ, ತರಾತುರಿಯಲ್ಲಿ ಏನನ್ನಾದರೂ ಮಾಡಿ, ವಿಫಲರಾದ ಮೇಲೆ ತನ್ನನ್ನು ಅಥವಾ ಬೇರೆಯವರನ್ನು ನಿಂದಿಸಿದರೆ ಆಗುವ ಲಾಭವಾದರೂ ಏನು?
4. ಸೂತ್ರವಿದ್ದರೆ ಎಲ್ಲವೂ ಸುಸೂತ್ರ
ಸೂತ್ರವಿಲ್ಲದ ಗಾಳಿಪಟ ಗಿರಕಿ ಹೊಡೆದು ನೆಲಕ್ಕೆ ಬೀಳುತ್ತದೆ. ನಮ್ಮ ಬಾಳಿನಲ್ಲಿ ನೀತಿಸಂಹಿತೆಯೇ ಸೂತ್ರ. ಬಾಳಿಗೆ ರೀತಿ ನೀತಿ ಇಲ್ಲದಿದ್ದರೆ ಗೊತ್ತು ಗುರಿಯಿಲ್ಲದೆ, ಜನರಿಂದ ಥೂ, ಛೀ ಎನ್ನಿಸಿಕೊಂಡು ನಿರರ್ಥಕವಾಗಿ ಬಾಳುತ್ತೇವೆ. ನಮ್ಮ ಬಾಳಿಗೆ ಸೂತ್ರ ಹಾಕುವವರು ಪಾಲಕರು, ಶಿಕ್ಷಕರು ಹಾಗೂ ಹಿರಿಯರು. ಅವರ ಮಾರ್ಗದರ್ಶನದಲ್ಲಿ ಬದುಕು ಸಾಗಿದರೆ ಉತ್ತಮ.