ತೆಂಗಿನಕಾಯಿ ಮಹಿಮೆ
ಪೀಸ್ ಪೀಸ್!
Team Udayavani, Dec 5, 2019, 4:15 AM IST
ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು ಅಲ್ಲೇ ಇದ್ದ ತೆಂಗಿನಕಾಯಿ ರಾಶಿಯಿಂದ ಒಂದನ್ನು ಆರಿಸಿ ಏನೋ ಮಣಮಣ ಮಂತ್ರ ಹೇಳಿ ಒಂದು ಮಣೆಯ ಮೇಲೆ ಇಡುತ್ತಾನೆ. “ಅದರ ಮೇಲೆ ತೀರ್ಥವನ್ನು ಪ್ರೋಕ್ಷಿಸಿದಾಗ ಕಾಯಿ ಒಡೆಯದಿದ್ದರೆ ನಿನ್ನ ಕಷ್ಟಗಳೆಲ್ಲಾ ಪರಿಹಾರವಾದುವೆಂದು ತಿಳಿದುಕೋ, ಒಂದು ವೇಳೆ ಒಡೆದರೆ ನಿನಗೆ ವಿಪರೀತ ಕಷ್ಟಗಳು ಇವೆ ಅಂತ ತಿಳಿದುಕೋ’ ಎಂಬುದಾಗಿ ಹೇಳಿ ಅವುಗಳಿಗೆ ಸೂಕ್ತ ಪರಿಹಾರವನ್ನೂ ತಾನೇ ಒದಗಿಸುತ್ತೇನೆ ಎಂದು ಅಭಯ ನೀಡುತ್ತಾನೆ. ತೀರ್ಥವನ್ನು ಪ್ರೋಕ್ಷಿಸಿದ ಕೂಡಲೇ ತೆಂಗಿನಕಾಯಿ ಒಡೆದು ಹೋಗುತ್ತದೆ! ಮಂತ್ರವಾದಿಯ ಬಲೆಗೆ ಒಬ್ಬ ಬಡಪಾಯಿ ಬೀಳುತ್ತಾನೆ.
ಇದೇನಪ್ಪಾ…? ಜಾದೂಗಾರರು ಮ್ಯಾಜಿಕ್ ಹೇಳಿಕೊಡೋದು ಬಿಟ್ಟು ಪವಾಡ ಕಥೆ ಹೇಳ್ತಿದ್ದಾರಲ್ಲಾ ಅಂತ ಅಂದುಕೊಳ್ಳಬೇಡಿ. ನಮ್ಮ ಸಮಾಜದಲ್ಲಿ ಕೆಲವರು ಮ್ಯಾಜಿಕ್ ಮೂಲಕ ಅಮಾಯಕರಿಗೆ ಹೇಗೆ ಮಂಕುಬೂದಿ ಎರಚುತ್ತಾರೆ ಎಂಬುದಕ್ಕೆ ಉದಾಹರಣೆಯಿದು. ಆ ಮ್ಯಾಜಿಕ್ಕನ್ನೇ ಅಮಾಯಕ ಜನರು ಪವಾಡ ಎಂದು ನಂಬುತ್ತಾರೆ. ಈ ಮ್ಯಾಜಿಕ್ಕನ್ನು ನೀವೂ ಕಲಿಯಬಹುದು.
ತಂತ್ರದ ರಹಸ್ಯ
ಮಂತ್ರವಾದಿಯು ಬಳಸುವ ತೆಂಗಿನಕಾಯಿ ಆತ ಮೊದಲೇ ಸಿದ್ಧಪಡಿಸಿಟ್ಟುಕೊಂಡಿದುದಾಗಿತ್ತು. ಸಿಪ್ಪೆ ತೆಗೆದ ತೆಂಗಿನಕಾಯಿಯನ್ನು ಐದಾರು ದಿನಗಳ ಕಾಲ ಸುಣ್ಣದ ತಿಳಿನೀರಲ್ಲಿ ನೆನೆಹಾಕಿ, ಚೆನ್ನಾಗಿ ಒಣಗಿಸಬೇಕು. ನಂತರ, ಅದರ ಮೇಲೆ ನೀರನ್ನು ಚಿಮುಕಿಸಿದಾಗ ಅದು ತನ್ನಷ್ಟಕ್ಕೇ ಒಡೆದು ಹೋಗುತ್ತದೆ. ಅದರ ಹಿಂದಿರುವುದು ವಿಜ್ಞಾನ, ಮಾಯಾ ತಂತ್ರವಲ್ಲ! ಇದೇ ಮಂತ್ರವಾದಿಯ ಕುತಂತ್ರ!
ಉದಯ್ ಜಾದೂಗಾರ್