ಸಂಜೀವಕನ ಕತೆ
Team Udayavani, Nov 22, 2018, 6:00 AM IST
ಒಬ್ಬ ಶ್ರೀಮಂತ ವ್ಯಾಪಾರಿ ಮಧುರಾ ಪಟ್ಟಣಕ್ಕೆ ಎರಡು ಎತ್ತುಗಳು ಎಳೆಯುವ ಬಂಡಿಯಲ್ಲಿ ಪ್ರಯಾಣ ಮಾಡುತ್ತಿದ್ದ. ಅವನ ಆಳು ಕಾಳುಗಳು ಬಂಡಿಯ ಹಿಂದೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಅವರು ಒಂದು ಕಾಡನ್ನು ದಾಟಿ ಹೋಗುತ್ತಿದ್ದಾಗ ಸಂಜೀವಕ ಎನ್ನುವ ಒಂದು ಎತ್ತು ದಾರಿಯಲ್ಲಿದ್ದ ಒಂದು ತೂತಿನಲ್ಲಿ ಕಾಲು ಸಿಕ್ಕಿಕೊಂಡು ಗಾಯಗೊಂಡಿತು. ಸಂಜೀವಕನನ್ನು ಕಂಡರೆ ವ್ಯಾಪಾರಿಗೆ ಬಹಳ ಪ್ರೀತಿ. ಹಾಗಾಗಿ ಪ್ರಯಾಣಕ್ಕೆ ತಡೆ ಹಾಕಿ ನಿಲ್ಲಿಸಿದ. ಸಂಜೀವಕನ ಗಾಯ ಬೇಗನೆ ವಾಸಿಯಾಗಿ ಪ್ರಯಾಣ ಮುಂದುವರಿಸಬಹುದು ಎಂದುಕೊಂಡ ಆತ. ಆದರೆ ಮೂರು ದಿನಗಳು ಕಳೆದರೂ ಸಂಜೀವಕನ ಸ್ಥಿತಿ ಸುಧಾರಿಸಲಿಲ್ಲ. ಸಂಜೀವಕನನ್ನು ಸರಿಯಾಗಿ ನೋಡಿಕೊಳ್ಳುವಂತೆ ತನ್ನ ಆಳುಗಳಿಗೆ ಆಜ್ಞಾಪಿಸಿ ವ್ಯಾಪಾರಿ ಪ್ರಯಾಣವನ್ನು ಮುಂದುವರಿಸಿದ. ಆದರೆ ಆತನ ಆಳುಗಳು ಸಂಜೀವಕನನ್ನು ವ್ಯಾಪಾರಿಗೆ ಗೊತ್ತಾಗದಂತೆ ಅಲ್ಲಿಯೇ ಬಿಟ್ಟು ಮುಂದುವರಿದರು. ಮಾರನೇ ದಿನ ಅವರು ವ್ಯಾಪಾರಿಯನ್ನು ಕೂಡಿಕೊಂಡು, ಸಂಜೀವಕ ಸತ್ತು ಹೋಯಿತೆಂದು ಹೇಳಿಬಿಟ್ಟರು. ತಮ್ಮ ಅವಿಧೇಯತೆಯನ್ನು ಮುಚ್ಚಿಹಾಕಲು ಅವರು ಸುಳ್ಳು ಹೇಳಿದ್ದರು.
ಆದರೆ ದೇವರು ಅಸಹಾಯಕರ ಕೈಬಿಡುವುದಿಲ್ಲ! ಸಂಜೀವಕನ ವಿಷಯದಲ್ಲಿಯೂ ಹಾಗೆಯೇ ಆಯಿತು. ಯಮುನಾ ನದಿಯಿಂದ ಬೀಸುತ್ತಿದ್ದ ತಂಗಾಳಿ ಸಂಜೀವಕನಿಗೆ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡಿತು. ಎಲೆಯ ಹುಲ್ಲಿನ ಗರಿಕೆಗಳು ಅದರ ಮೈಕೈ ಗಟ್ಟಿಯಾಗಲು ನೆರವಾಯಿತು. ಅದರ ಗಾಯ ಪೂರ್ತಿಯಾಗಿ ವಾಸಿಯಾಯಿತು. ತಲೆ ಎತ್ತಿ ಧೈರ್ಯದಿಂದ ಅತ್ತ ಇತ್ತ ಓಡಾಡಿತು. ಭಯಂಕರವಾಗಿ ಹೋಂಕರಿಸುತ್ತಿದ್ದ ಸಂಜೀವಕನ ಧ್ವನಿ ಇಡೀ ಅರಣ್ಯದಲ್ಲಿ ಪ್ರತಿಧ್ವನಿಸಿತು. ಅದು ಮೊದಲಿಗಿಂತಲೂ ಹೆಚ್ಚು ಗಟ್ಟಿಮುಟ್ಟಿಯಾಯಿತು.
ಕೃಪೆ: ಓರಿಯೆಂಟಲ್ ಲಾಂಗ್ಮನ್