ಟಿಂಕು ಮೊಲ ಮತ್ತು ಇಂದ್ರ!
Team Udayavani, Feb 8, 2018, 8:15 AM IST
ಒಂದೂರಿನಲ್ಲಿ ಒಂದು ಮೊಲವಿತ್ತು. ಅದರ ಹೆಸರು ಟಿಂಕು. ಅದು ಧಾರಾಳ ಸ್ವಭಾವದ್ದು. ಸಹವರ್ತಿಗಳಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಟಿಂಕುವನ್ನು ಕಂಡರೆ ಎಲ್ಲರಿಗೂ ತುಂಬಾ ಪ್ರೀತಿ ವಿಶ್ವಾಸ. ಟಿಂಕುವಿನ ಕೀರ್ತಿ ದೇವಲೋಕದವರೆಗೆ ಹೋಯಿತು. ಒಂದು ದಿನ ಟಿಂಕುವನ್ನು ಪರೀಕ್ಷಿಸುವ ಸಲುವಾಗಿ ಇಂದ್ರ, ಮನುಷ್ಯನ ವೇಷ ಧರಿಸಿ ಕಾಡಿಗೆ ಬಂದ. ಆ ಸಮಯದಲ್ಲಿ ಟಿಂಕು ಮೊಲ ತನ್ನ ಕೆಲಸದಲ್ಲಿ ನಿರತವಾಗಿತ್ತು.
ಇಂದ್ರ ಟಿಂಕುವನ್ನು ಉದ್ದೇಶಿಸಿ” ಅಯ್ನಾ ಮೊಲವೇ ನನಗೆ ತುಂಬಾ ಹಸಿವೆಯಾಗಿದೆ. ಏನಾದರೂ ತಿನ್ನಲು ಕೊಡುವೆಯಾ?’ ಎಂದು ದೈನ್ಯದಿಂದ ಕೇಳಿಕೊಂಡ. ಟಿಂಕು “ಅಯ್ನಾ ಮನುಷ್ಯ ನನ್ನ ಬಳಿ ಸದ್ಯಕ್ಕೆ ಚಿಗುರು ಹುಲ್ಲು ಬಿಟ್ಟು ಬೇರೇನೂ ಇಲ್ಲ, ಕ್ಷಮಿಸು’ ಎಂದಿತು. ಆಗ ಇಂದ್ರ ನನಗೆ ಹುಲ್ಲು ತಿಂದು ಅಭ್ಯಾಸವಿಲ್ಲ. ನಾನು ತಿನ್ನುವಂಥದ್ದೇನನ್ನಾದರೂ ನನಗೆ ನೀನು ಕೊಡಲೇಬೇಕು. ಇಲ್ಲದಿದ್ದರೆ ನಾನು ಹಸಿವಿನಿಂದ ಸಾಯುತ್ತೇನೆ’ ಎಂದು ಪೀಡಿಸಿದ.
ಟಿಂಕು ಕ್ಯಾರೆಟ್ ಏನಾದರೂ ಸಿಗುವುದೇ ಎಂದು ಹುಡುಕಿಕೊಂಡು ಹೋಯಿತು. ಕಾಡಿನಲ್ಲೊಂದು ಕಡೆ ಕ್ಯಾರೆಟ್ ಬೆಳೆದ ಜಾಗವಿತ್ತು. ಆದರೆ ಅದು ಇನ್ನೊಬ್ಬರ ಒಡೆತನದಲ್ಲಿತ್ತು. ಅದರ ಯಜಮಾನನ ಅನುಮತಿ ಪಡೆದು ಕ್ಯಾರೆಟ್ ತೆಗೆದುಕೊಳ್ಳೋಣವೆಂದು ಅಲ್ಲಿಗೆ ಹೋಯಿತು. ಯಜಮಾನ ಕ್ಯಾರೆಟ್ ಕೊಡಲು ಮೊದಲು ಒಪ್ಪಲಿಲ್ಲ ಆಮೇಲೆ ಶರತ್ತಿನ ಮೇಲೆ ಒಪ್ಪಿದ. ಅದರಂತೆ ಟಿಂಕು ಕ್ಯಾರೆಟ್ ತೆಗೆದುಕೊಂಡು ಮನುಷ್ಯನ ಬಳಿಗೆ ಬಂದಿತು. ಮನುಷ್ಯ ಕ್ಯಾರೆಟ್ಗಳನ್ನು ಗಬಗಬನೆ ತಿಂದನು.
ನಂತರ ಕ್ಯಾರೆಟ್ ಸಿಕ್ಕಿದ್ದು ಹೇಗೆ ಎಂದು ಕೇಳಿದಾಗ ಟಿಂಕು ಹೊಲದ ಯಜಮಾನ ಮೊಲದ ಮಾಂಸದ ರುಚಿ ನೋಡಿ ಬಹಳ ದಿನವಾಗಿದೆಯಂತೆ ಹೀಗಾಗಿ ಕ್ಯಾರೆಟ್ಗಳ ಬದಲಿಗಂ ನನ್ನನ್ನು ನಾನೇ ಆತನಿಗೆ ಮಾರಿಕೊಂಡೆ ಎಂದಿತು. ಇಂದ್ರನ ವೇಷದ ಮನುಷ್ಯ ದುಃಖದಿಂದ ಟಿಂಕುವನ್ನು ಬೀಳ್ಕೊಟ್ಟ. ಇತ್ತ ಟಿಂಕು ತಾನು ಕೊಟ್ಟ ಮಾತಿನಂತೆ ಯಜಮಾನನ ಬಳಿಗೆ ಬಂದಿತು. ಇನ್ನೇನು ಕತ್ತಿ ತೆಗೆದುಕೊಂಡು ಟಿಂಕುವಿಗೆ ಇರಿಯಬೇಕು ಎನ್ನುವಷ್ಟರಲ್ಲಿ ಇಂದ್ರ ಪ್ರತ್ಯಕ್ಷನಾದ. ಯಜಮಾನ ಬೇರಾರೂ ಆಗಿರದೆ ಇಂದ್ರನ ಸಹವರ್ತಿಯೇ ಆಗಿದ್ದ. ಅವರಿಬ್ಬರೂ ಈ ನಾಟಕದಲ್ಲಿ ಭಾಗಿಯಾಗಿದ್ದರು. ಟಿಂಕು ಮೊಲದ ಪ್ರಾಮಾಣಿಕತೆ ಮತ್ತು ಪರೋಪಕಾರಿ ಗುಣವನ್ನು ಮೆಚ್ಚಿದ ಇಂದ್ರ ನಿನ್ನ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ, ಮೂರು ಲೋಕಕ್ಕೂ ನಿನ್ನ ಖ್ಯಾತಿ ಹಬ್ಬಲಿ ಎಂಬ ಉದ್ದೇàಶದಿಂದ ಚಂದ್ರನ ಮೇಲೆ ಮೊಲದ ಚಿತ್ರವನ್ನು ಬಿಡಿಸಿದ.
ಎಂ.ಎಸ್.ರಾಘವೇಂದ್ರ, ಹೊಸಕೊಟೆ