ಮೊಟ್ಟೆಯೊಳಗಿದ್ದಾಗಲೇ ಅಪಾಯ ಗ್ರಹಿಸುಕೆ
Team Udayavani, May 23, 2019, 3:46 PM IST
ಹೊಟ್ಟೆಯೊಳಗಿದ್ದಾಗಲೇ ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವುದು
ಹೇಗೆಂಬುದನ್ನು ಕಲಿತಿದ್ದ ಅಭಿಮನ್ಯು. ಅವನ ಹಾಗೆಯೇ ಪ್ರಾಣಿಗಳ ಪ್ರಪಂಚದಲ್ಲೊಂದು ಸದಸ್ಯನಿದೆ. ಅದು ಮರಕಪ್ಪೆ. ಮೊಟ್ಟೆಯೊಳಗಿದ್ದಾಗಲೇ ಅದು ಶತ್ರುವಿನ ಅಪಾಯವನ್ನು ಗ್ರಹಿಸುತ್ತದೆ. ಭ್ರೂಣಾವಸ್ಥೆಯಲ್ಲಿದ್ದಾಗ ಕಣ್ಣುಗಳೇ ಸರಿಯಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಆದರೆ ಕಪ್ಪೆಗೆ ಶತ್ರುವಿನಿಂದ ಅಪಾಯ ಒದಗುತ್ತಿರುವುದು
ಹೇಗೆ ತಿಳಿಯುತ್ತದೆ ಎಂಬುದು ಒಳ್ಳೆಯ ಪ್ರಶ್ನೆ. ಹೇಗೆಂದರೆ, ಕಂಪನಗಳ ಮೂಲಕ. ಸೂಕ್ಷ್ಮವಾದ ಕಂಪನಗಳ ಸಹಾಯದಿಂದ ಈ ಮರಕಪ್ಪೆ, ಮಳೆ
ಬೀಳುವುದನ್ನೂ ಗ್ರಹಿಸುತ್ತದೆ ಎಂದರೆ ಅದಕ್ಕೆಷ್ಟು ಸಾಮರ್ಥ್ಯ ಇರಬಹುದು
ಊಹಿಸಿ. ಶತ್ರುವಿನಿಂದ ಅಪಾಯವನ್ನು ಗ್ರಹಿಸಿದ ಮಾತ್ರಕ್ಕೆ ಏನಾಗುತ್ತದೆ, ಇನ್ನೂ ಮೊಟ್ಟೆಯೊಳಗಿರುವ ಅದು ತನ್ನನ್ನು ಹೇಗೆ ತಾನೇ ರಕ್ಷಿಸಿ ಕೊಳ್ಳಬಲ್ಲದು? ಇದಕ್ಕುತ್ತರ ಇನ್ನೂ ಸೋಜಿಗವಾದುದು. ಮೊಟ್ಟೆಯೊಡೆದು ಮರಿ ಹೊರಬರುವುದಕ್ಕೆ ನಾಲ್ಕೈದು ದಿನಗಳು ಉಳಿದಿದ್ದರೂ ಅಪಾಯ ಗ್ರಹಿಸಿದ ತಕ್ಷಣ ಮೊಟ್ಟೆಯೊಡೆದು ಮರಿ ಹೊರ ಬಂದುಬಿಡುತ್ತದೆ. ಗೊದ್ದವಾಗಿ ಸಮೀಪದ ನೀರಿನ ಮೂಲವನ್ನು ಸೇರಿ ಬಚಾವಾಗಿಬಿಡುತ್ತದೆ.