ಮಂಚದ ಕೆಳಗೆ ಯಾರಲ್ಲಿ?
Team Udayavani, Nov 2, 2017, 1:44 PM IST
ಒಂದು ದಿನ ಗುಂಡಪ್ಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಎದುರಿನಿಂದ ಒಬ್ಟಾತ ಬರುತ್ತಿದ್ದ. ಅವನ ಮುಖದಲ್ಲಿ ಚಿಂತೆ ಕಾಣಿಸುತ್ತಿತ್ತು. ನಸ್ರುದ್ದೀನ್ ಸುಮ್ಮನಿರಲಾರದೆ ಅವನನ್ನು ನಿಲ್ಲಿಸಿ ಕೇಳಿಯೇಬಿಟ್ಟ “ಏನಪ್ಪಾ ನಿನ್ನ ಚಿಂತೆ? ಅದ್ಯಾಕೆ ಮುಖ ಇಂಗು ತಿಂದ ಮಂಗನಂತಾಗಿದೆ?’ ಅಂತ. ಅದಕ್ಕೆ ಆ ವ್ಯಕ್ತಿ, “ಏನು ಹೇಳ್ಳೋದು… ತುಂಬಾ ದಿನದಿಂದ ನನಗೊಂದು ಕೆಟ್ಟ ಕನಸು ಬೀಳುತ್ತಿದೆ. ನನ್ನ ಮಂಚದ ಅಡಿ ಯಾರೋ ಅಡಗಿ ಕುಳಿತಂತೆ ಕನಸು. ಎದ್ದು ನೋಡಿದರೆ ಅಲ್ಲಿ ಯಾರೂ ಇರುವುದಿಲ್ಲ. ರಾತ್ರಿಯಿಡೀ ನಿದ್ರೆ ಇಲ್ಲದೆ ನೆಮ್ಮದಿ ಹಾಳಾಗಿಹೋಗಿದೆ. ಇಲ್ಯಾರೋ ಒಬ್ಬರು ನೂರು ನಾಣ್ಯಗಳನ್ನು ಕೊಟ್ಟರೆ ಇಂಥ ಸಮಸ್ಯೆಗಳನ್ನೆಲ್ಲ ಪರಿಹರಿಸುತ್ತಾರಂತೆ. ಅವರಲ್ಲಿಗೇ ಹೋಗುತ್ತಿದ್ದೇನೆ. ಆದರೂ ನೂರು ನಾಣ್ಯ ಬಹಳ ಜಾಸ್ತಿಯಾಯ್ತು’ ಅಂತ ಗೊಣಗಿದ. ಸಮಸ್ಯೆ ಕೇಳಿದ ಗುಂಡಪ್ಪ “ತಮ್ಮಾ, ಕೇವಲ ಇಪ್ಪತ್ತು ನಾಣ್ಯಗಳಿಗೆ ನಿನ್ನ ಸಮಸ್ಯೆಗೆ ಪರಿಹಾರ ನೀಡುತ್ತೇನೆ’ ಎಂದ. ಆ ವ್ಯಕ್ತಿ ತಕ್ಷಣ ಜೇಬಿನಿಂದ ನಾಣ್ಯಗಳನ್ನು ತೆಗೆದು ಗುಂಡಪ್ಪನಿಗಿತ್ತ. ಹಣವನ್ನು ಕಿಸೆಗಿಳಿಸಿ ಗುಂಡಪ್ಪ, “ನೀನು ಇವತ್ತಿನಿಂದ ಚಾಪೆ ಹಾಸಿಕೊಂಡು ನೆಲದ ಮೇಲೆ ಮಲಗು ತಮ್ಮಾ, ಅದ್ಯಾರು ನುಸುಳುತ್ತಾರೆ ನೋಡಿಯೇ ಬಿಡೋಣ!’ ಎಂದು ಕೈಬೀಸಿಕೊಂಡು ಹೋದ.
ಗುಣಗಾನದಿಂದಾದ ನಷ್ಟ
ಗುಂಡಪ್ಪನ ಬಳಿ ಕತ್ತೆಯೊಂದಿತ್ತು. ಹೂಜಾನಿಗೆ ಅದರ ಮೇಲೆ ಅಸಡ್ಡೆ. ಈ ಸೋಮಾರಿ ಕತ್ತೆಯನ್ನು ಸಾಕುವುದಕ್ಕಿಂತ ಮಾರುವುದು ಲೇಸು ಅಂದುಕೊಂಡು ಅದನ್ನು ಸಂತೆಗೆ ಹೊಡೆದುಕೊಂಡು ಹೋದ. ಅಲ್ಲಿ ವ್ಯಾಪಾರಿಯೊಬ್ಬನಿಗೆ 3000 ರೂ.ಗಳಿಗೆ ಕತ್ತೆಯನ್ನು ಮಾರಿದ. ಆ ವ್ಯಾಪಾರಿ ಕತ್ತೆಯನ್ನು ಹರಾಜಿಗೆ ಇಟ್ಟು, ಕತ್ತೆಯ ಗುಣಗಳನ್ನು ಹಾಡಿ ಹೊಗಳತೊಡಗಿದ. “ಇದು ಅಂತಿಂಥ ಕತ್ತೆಯಲ್ಲ. ಕತ್ತೆಗಳಲ್ಲೇ ಅತ್ಯುತ್ತಮ ಕತ್ತೆ. ಇದರ ಬಲಿಷ್ಠವಾದ ಕಾಲುಗಳನ್ನು ನೋಡಿ. ಇದು ಮೂರು ಕತ್ತೆಗಳ ಕೆಲಸವನ್ನು ಮಾಡುತ್ತದೆ’. ಕತ್ತೆಯ ಗುಣಗಾನ ಗುಂಡಪ್ಪನ ಕಿವಿಗೆ ಬಿತ್ತು! ಅರೇ, ನನ್ನ ಸೋಮಾರಿ ಕತ್ತೆ ಇಷ್ಟೊಂದು ಶ್ರೇಷ್ಠವೇ ಎಂದು ಆತ ಚಕಿತನಾದ. ಹರಾಜಿನಲ್ಲಿ ಕತ್ತೆ ಎಷ್ಟು ಬೆಲೆಗೆ ಹೋಗಬಹುದೆಂದು ಅಲ್ಲಿಯೇ ನಿಂತು ಕುತೂಹಲದಿಂದ ಗಮನಿಸತೊಡಗಿದ. ಜನರೆಲ್ಲ ಕತ್ತೆಯನ್ನು ಮೆಚ್ಚಿದರು. ಒಬ್ಬ “4,000′ ಎಂದು ಕೂಗಿದ, ಇನ್ನೊಬ್ಬ “5,000′ ಎಂದ, ಮತ್ತೂಬ್ಬ “5,500’…ಹೀಗೆ ಕತ್ತೆಯ ಬೆಲೆ ಏರತೊಡಗಿತು. ಗುಂಡಪ್ಪ ನಿಂತಲ್ಲೇ ಚಡಪಡಿಸಿದ. ಇಷ್ಟು ಒಳ್ಳೆಯ ಕತ್ತೆಯನ್ನು ಮಾರಿಬಿಟ್ಟೆನಲ್ಲ ಎಂದು ಪಶ್ಚಾತ್ತಾಪಪಟ್ಟ. ಇನ್ನೇನು 6000 ರೂ.ಗಳಿಗೆ ಕತ್ತೆ ಮಾರಾಟವಾಗುವುದರಲ್ಲಿತ್ತು. ಆಗ ಗುಂಡಪ್ಪನೇ “7,000 ರೂ.’ ಎಂದು ಜೋರಾಗಿ ಕೂಗಿ, ದುಡ್ಡು ತೆತ್ತು ಕತ್ತೆಯನ್ನು ವಾಪಸ್ ಕರೆದುಕೊಂಡು ಹೊರಟ!
ಪ್ರಿಯಾ