ಅಕ್ಷಯ ಪಾತ್ರೆ to ಅಕ್ಷರಪಾತ್ರೆ
ನಿತ್ಯ 1.31 ಲಕ್ಷ ಮಕ್ಕಳಿಗೆ ಹುಬ್ಬಳ್ಳಿ ಇಸ್ಕಾನ್ ಅನ್ನದಾನ
Team Udayavani, Feb 15, 2020, 6:07 AM IST
ಪ್ರಸಾದವನ್ನು ಹಂಚಿ ತಿಂದರೆ ಶ್ರೇಯಸ್ಸು ಎನ್ನುವ ಮಾತಿದೆ. ಹುಬ್ಬಳ್ಳಿಯಲ್ಲಿನ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಅನ್ನಪ್ರಸಾದ, ಸುತ್ತಲಿನ ಶಾಲಾ ಮಕ್ಕಳಿಗೆಲ್ಲ ಹಂಚಿಕೆಯಾಗುತ್ತದೆ. ಇಲ್ಲಿನ ಅಡುಗೆಮನೆ, ಏಷ್ಯಾದಲ್ಲಿಯೇ ಅತಿದೊಡ್ಡದು ಎಂಬ ಖ್ಯಾತಿಯನ್ನೂ ಪಡೆದಿದೆ.
2006ರಲ್ಲಿ ಇನ್ಫೋಸಿಸ್ ಫೌಂಡೇಶನ್ ನೀಡಿದ ಅನುದಾನದಿಂದ ಇಸ್ಕಾನ್ ಕೃಷ್ಣ ದೇವಸ್ಥಾನ ಸಮೀಪದಲ್ಲಿ ಬೃಹತ್ ಅಡುಗೆಮನೆ ನಿರ್ಮಿಸಲಾಗಿದೆ. ಅಂದಿನಿಂದ ಈವರೆಗೆ ನಿತ್ಯ ಧಾರವಾಡ ಜಿಲ್ಲೆಯ 800 ಶಾಲೆಯ 1.31 ಲಕ್ಷ ಮಕ್ಕಳಿಗೆ ರುಚಿಕರ ಭೋಜನ ನೀಡಲಾಗುತ್ತಿದೆ. ಅಡುಗೆಯಾಗುತ್ತಿದ್ದಂತೆಯೇ ಬಿಸಿಬಿಸಿ ಊಟವನ್ನು 61 ವಾಹನಗಳಲ್ಲಿ ಸಾಗಣೆ ಮಾಡಿ, ಮಕ್ಕಳ ತಟ್ಟೆಗೆ ಬಡಿಸಲಾಗುತ್ತದೆ. ಬೆಳಗ್ಗೆ ಮಕ್ಕಳ ಹಾಲು ಪೂರೈಸಲಾಗುತ್ತದೆ.
ನಸುಕಿನಿಂದಲೇ ಅಡುಗೆ: ಪ್ರತಿದಿನ ನಸುಕಿನ ಜಾವ 3 ಗಂಟೆಯಿಂದ ಬೆಳಗ್ಗೆ 9ರ ವರೆಗೆ ಅಡುಗೆ ಮಾಡಲಾಗುತ್ತದೆ. ನಂತರ ಮಧ್ಯಾಹ್ನ 1ರ ವರೆಗೆ ಅಡುಗೆಮನೆ ಸ್ವತ್ಛಗೊಳಿಸಲಾಗುತ್ತದೆ. ಇಲ್ಲಿರುವ 8 ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ನಲ್ಲಿ ಮರುದಿನಕ್ಕೆ ಬೇಕಾಗುವ ತರಕಾರಿ ಕತ್ತರಿಸಿ ಇಡಲಾಗುತ್ತದೆ.
ಏನೇನು ತರಕಾರಿ?: ಪ್ರತಿದಿನ ಗಜ್ಜರಿ, ಬೀಟ್ರೂಟ್, ಬೀನ್ಸ್, ಬೂದುಕುಂಬಳ, ಸೌತೆ, ಸೋರೆ ಕಾಯಿ, ಅವರೆ ಕಾಯಿ ಸೇರಿ 8 ರೀತಿಯ ತರಕಾರಿ ಬಳಸಲಾಗುತ್ತದೆ. ಅಡುಗೆಗೆ ಸನ್ಫ್ಲವರ್ ಎಣ್ಣೆ ಹಾಗೂ ನಂದಿನಿ ತುಪ್ಪ ಬಳಸಲಾಗುತ್ತದೆ.
ಸಂಖ್ಯಾಸೋಜಿಗ
15- ನಿಮಿಷಗಳಲ್ಲಿ 1 ಕ್ವಿಂಟಲ್ ಅನ್ನ ಸಿದ್ಧ
40- ಬಾಣಸಿಗರಿಂದ ಅಡುಗೆ
45- ನಿಮಿಷಗಳಲ್ಲಿ ಸಾಂಬಾರ್ ತಯಾರಿ
800- ಶಾಲೆಯ ಮಕ್ಕಳು ಫಲಾನುಭವಿಗಳು
3,000- ಕಿಲೊ ಬೇಳೆ ನಿತ್ಯ ಅವಶ್ಯ
8,000- ಕಿಲೊ ತರಕಾರಿಯಿಂದ ಅಡುಗೆ
14,000- ಕಿಲೊ ಅಕ್ಕಿಯಿಂದ ಅನ್ನ ತಯಾರಿ
1,31,000- ಲಕ್ಷ ಮಕ್ಕಳಿಗೆ ನಿತ್ಯ ಊಟ
ಭಕ್ಷ್ಯಗಳೇನು?: ವಾರದಲ್ಲಿ 4 ದಿನ ಅನ್ನ- ಸಾಂಬಾರ್, 1 ದಿನ ಪಲಾವ್- ದಾಲ್, 1 ದಿನ ಉಪ್ಪಿಟ್ಟು- ಕೇಸರಿಬಾತ್, ಸೋಮವಾರ ಹಾಗೂ ಗುರುವಾರ ಗೋದಿ ರವೆ ಪಾಯಸ ನೀಡಲಾಗುತ್ತದೆ.
ಬೃಹದಾಕಾರದ ಅಡುಗೆಮನೆ: ಅಡುಗೆಮನೆ 1 ಎಕರೆ ವಿಸೀರ್ಣ ಹೊಂದಿದೆ. 2 ಟನ್ ಸಾಮರ್ಥ್ಯದ ಬಾಯ್ಲರ್. ಅದರಲ್ಲಿ ಸೀrಮ್ ಜನರೇಟ್ ಮಾಡಲಾಗುತ್ತದೆ. 600 ಲೀಟರ್ ಸಾಮರ್ಥಯದ 11 ರೈಸ್ ಕುಕ್ಕರ್ಗಳಿದ್ದು, ಒಂದು ಕುಕ್ಕರ್ನಲ್ಲಿ 1 ಕ್ವಿಂಟಲ್ ಅನ್ನ 15 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ತಲಾ 1200 ಲೀಟರ್ ಸಾಮರ್ಥ್ಯದ, ಸಾಂಬಾರ್ ತಯಾರಿಸುವ 8 ಬೃಹತ್ ಪಾತ್ರೆಗಳಿವೆ. 45 ನಿಮಿಷಗಳಲ್ಲಿ ಸಾಂಬಾರ್ ಸಿದ್ಧವಾಗುತ್ತದೆ.
ವಿಶೇಷತೆಗಳು ಒಂದೆರಡಲ್ಲ…
– ಪಾಕಶಾಲೆಯಲ್ಲಿ ಒಟ್ಟು 400 ಸಿಬ್ಬಂದಿಯ ಸೇವೆಯಿದೆ.
– 12 ರೂ. ವೆಚ್ಚದಲ್ಲಿ ಊಟ ಸಿದ್ಧಪಡಿಸಲಾಗುತ್ತಿದ್ದು, ಅದರಲ್ಲಿ ಶೇ.60 ಸರಕಾರ ಅನುದಾನ, ಉಳಿದ ವೆಚ್ಚವನ್ನು ದೇಣಿಗೆಯಿಂದ ಸರಿದೂಗಿಸಲಾಗುತ್ತದೆ.
– ಬಯೋ ಡೈಜೆಸ್ಟರ್ ಮೂಲಕ ಇಲ್ಲಿ ತರಕಾರಿ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಉತ್ಪಾದಿಸಲಾಗುತ್ತದೆ. ನೀರನ್ನು ಮರುಬಳಕೆ ಮಾಡಲಾಗುತ್ತದೆ. 2 ಕೊಳವೆ ಬಾವಿಗಳಿದ್ದು, ಅವುಗಳಿಗೆ ಮಳೆ ನೀರು ಕೊಯ್ಲು ಅಳವಡಿಸಲಾಗಿದೆ.
– “ಪದ್ಮಶ್ರೀ’ ಮಧು ಪಂಡಿತ ದಾಸ ಅಕ್ಷಯ ಪಾತ್ರೆ ಚೇರ್ಮನ್ ಆಗಿದ್ದು, ಅಕ್ಷಯ ಪಾತ್ರೆ ಹುಬ್ಬಳ್ಳಿ- ಧಾರವಾಡದ ಘಟಕದ ಅಧ್ಯಕ್ಷರಾಗಿ ರಾಜೀವ ಲೋಚನ ಸೇವೆ ಸಲ್ಲಿಸುತ್ತಿದ್ದಾರೆ.
– ಅಕ್ಷಯ ಪಾತ್ರೆ ಅಡುಗೆಮನೆಗೆ ರತನ್ ಟಾಟಾ, ನಾರಾಯಣ ಮೂರ್ತಿ, ಸುಧಾ ಮೂರ್ತಿ, ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ ಸತ್ಯಾರ್ಥಿ, ಚಿತ್ರನಟ ರಮೇಶ್, ರಾಹುಲ್ ಭೋಸ್, ಯುಟಿವಿ ಚೇರ್ಮನ್ ರೋನಿ ಸ್ಕೂವಾಲಾ ಭೇಟಿ ನೀಡಿದ್ದಾರೆ.
– ಅಕ್ಷಯ ಪಾತ್ರೆ ಅಡುಗೆಮನೆಗೆ ಆಹಾರ ಸುರಕ್ಷತೆಗೆ ಐಎಸ್ಒ 22001 ಹಾಗೂ ಪರಿಸರ ರಕ್ಷಣೆಗೆ ಐಎಸ್ಒ 14001 ಪ್ರಮಾಣ ಪತ್ರ ನೀಡಲಾಗಿದೆ.
* ವಿಶ್ವನಾಥ ಕೋಟಿ