ದಯೆಯ ಅನುಸಂಧಾನ
Team Udayavani, Nov 2, 2019, 4:06 AM IST
ಶಿವನು ನಿರ್ಮಿಸಿದನು ಮಾನವನು
ಮಾನವರು ರಚಿಸಿಹರು ಜಾತಿ- ಮತಗಳನು
ಜಾತಿ- ಮತಗಳೆಷ್ಟಾದರೇನು, ನೀತಿಯೊಂದಲ್ಲವೇ?
ನೀತಿ ನಿಯಮದಿ ನಿಲ್ಲೆ ಮಹಾಮಾನವನೆಂದ ನಮ್ಮ ಮೃಡಗಿರಿ ಅನ್ನದಾನೀಶ
ಮಾನವನು ಶಿವ ನಿರ್ಮಿತನಾದರೆ, ಜಾತಿಯು ಮಾನವ ನಿರ್ಮಿತ. ಜಾತಿ- ಮತಗಳೆಷ್ಟಾದರೂ ನೀತಿ- ನಿಯಮಗಳೇ ಮಾನವಧರ್ಮದ ಮೇರುದಂಡವಾಗಿದೆ. ಕಾರ್ಯತತ್ಪರನಾಗಲು ಜೀವನದಲ್ಲಿ ಮೊದಲು ಧೈರ್ಯ ಬೇಕು. ಧೃತಿಯಿಂದ ಸತ್ಕಾರ್ಯಗಳು ಸಿದ್ಧಿಸುತ್ತವೆ. ಶ್ರೇಯಸ್ಸಾಧನೆಯಲ್ಲಿ ಧೃತಿ ಮುಖ್ಯ. ದುರ್ಮಾರ್ಗದತ್ತ ಧೈರ್ಯ ಪ್ರವೃತ್ತರಾದರೆ, ಮಾನವನು ದಾನವನಾಗುವನು. ಸತ್ಯ, ಅಹಿಂಸೆಗಳನ್ನು, ನ್ಯಾಯ- ನೀತಿಗಳನ್ನು ಸಾಧಿಸುವಲ್ಲಿ ಧೃತಿ ಅವಶ್ಯವಾಗಿದೆ.
ಶಿಕ್ಷೆಯಿಂದ ಮನುಷ್ಯನು ಸೇಡಿನ ಭಾವ ಹೊಂದಬಹುದು. ಕ್ಷಮೆಯಿಂದ ಮನಃಪರಿವರ್ತನೆ ಹೊಂದಲು ಸಾಧ್ಯವಿದೆ. ಧೃತಿ, ಕ್ಷಮೆಗಳು ಮನದಟ್ಟಾಗಲು ದಯೆಯ ಅನುಸಂಧಾನ ಪ್ರಮುಖವಾಗಿದೆ. ಬಹಿರಿಂದ್ರಿಯ ನಿಗ್ರಹದಿಂದ ಧೃತಿ, ಕ್ಷಮೆಗಳು ಭದ್ರವಾಗಿರುತ್ತವೆ. ಆರ್ಥಿಕ ಸಮತೆಯನ್ನು ಸಾಧಿಸಲು ಆಸ್ಥೆಯ ವ್ರತವು ಮಹತ್ವದ್ದಾಗಿದೆ. ಇದರಿಂದ ಸಾಮಾಜಿಕ ಜೀವನದಲ್ಲಿ ಕೊರತೆ ಬಾರದು. ಅಭಾವ ಪರಿಸ್ಥಿತಿ ದೂರಾಗುವುದು.
ಅದೇರೀತಿ ಅಂತರಂಗ, ಬಹಿರಂಗ ಸಾಧನೆಗಾಗಿ ಶೌಚವು ಅವಶ್ಯ. ಒಳಗೂ- ಹೊರಗೂ ಶುಭ್ರವಾದ ಲಾಂದ್ರದ ಹರಳು ಅಧಿಕ. ಬೆಳಕನ್ನು ನೀಡುವಂತೆ ಶೌಚವುಳ್ಳವನು ಸುಜ್ಞಾನ ಬೆಳಕನ್ನು ಬೀರುವನು. ಶೌಚದಿಂದ ದೇವಪ್ರೀತಿಗೆ ಪಾತ್ರನಾಗುವನು. ದೇವನೊಲುಮೆಗೆ ಅಂತಃ ಶೌಚವೇ ಮೂಲವಾಗಿದೆ. ಪರಿಶುದ್ಧ ಹಾಗೂ ನಿಶ್ಚಲವಾದ ಮನವೇ ಪರಮಾತ್ಮನ ಸಾûಾತ್ಕಾರದ ಕಾರಣ ವಸ್ತು. ಮೋಕ್ಷದ ಸಾಧನ. ಮನೋನಿಗ್ರಹಿಯಾದ ಮೇಲೆ ಧರ್ಮಬುದ್ಧಿಯವರಾಗಿ, ಅಧ್ಯಾತ್ಮ ವಿದ್ಯೆಯನ್ನು ಸಂಪಾದಿಸುವನು. ಇದು ಮಾನವನಿಗೆ ಸುಜ್ಞಾನ ನೀಡುವುದು.
ಆತ್ಮಸಾಕ್ಷಾತ್ಕಾರದ ಅರಿವು, ಸತ್ಯಾನ್ವೇಷಣೆಯ ಪ್ರಮುಖಘಟ್ಟ. ಈ ಸತ್ಯಾನ್ವೇಷಣೆಯೇ ಮನುಕುಲದ ಗುರಿ. ಸತ್ಯವನ್ನು ಅರಿತವನು, ಕ್ರೋಧವನ್ನು ಕಳಕೊಳ್ಳುವನು. ಅವನಲ್ಲಿ ಅಕ್ರೋಧ ಅಥವಾ ಮಹಾಶಾಂತಿ ಲಭಿಸುವುದು. ಇದುವೇ ಮಾನವಧರ್ಮದ ಫಲ. ವಿಶ್ವಮಾನವ ಧರ್ಮವನ್ನು ಸಾಧಿಸ ಬಯಸುವವರು ಧರ್ಮದ ಧೃತಿ- ಕ್ಷಮಾದಿ ಹತ್ತು ಅಂಶಗಳನ್ನು ಮೈಗೂಡಿಸಿಕೊಂಡರೆ, ಮಾನವಧರ್ಮದ ಯಥಾರ್ಥತೆಯ ಅರಿವಾಗುವುದು.
* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್