ಶೆಟ್ಟರ ಚಿತ್ರಕಲಾ ಪರಿಷತ್ತು
Team Udayavani, Aug 4, 2018, 3:58 PM IST
ಎಂ.ಎಫ್. ಹುಸೇನ್, ಮದರಾಸಿನ ವಿಶ್ವನಾಥನ್, ಆಂಧ್ರದ ಲಕ್ಷ್ಮೇಗೌಡರ್, ಚೆಫ್ಟಿ ಬರ್ಮನ್, ವಾಸುದೇವ್, ಖಂಡೇರಾವ್, ವೈಕುಂಠಂ, ಪುಷ್ಪಾ ದ್ರಾವಿಡ್, ಮಣಿ …ಹೀಗೆ ಮಹಾನ್ ಕಲಾವಿದರನ್ನೆಲ್ಲಾ ಒಟ್ಟಿಗೆ ನೋಡಬೇಕು ಎಂದರೆ ನಮ್ಮ ಹಿರಿಯ ಸಂಶೋಧಕ ಷ. ಶೆಟ್ಟರ್ ಮನೆಗೆ ಬರಬೇಕು. ಇವರ ಮನೆಯಲ್ಲಿ ಗೋಡೆಗಳೇ ಇಲ್ಲ. ಬರೀ ಪಟಗಳೇ ಇವೆ. 50ಕ್ಕೂ ಹೆಚ್ಚು ಕಲಾವಿದರ, ನೂರಾರು ವರ್ಷದ ಅಮೂಲ್ಯ ಚಿತ್ರಗಳು ಇವರ ಮನೆಯಲ್ಲಿವೆ. ಬನ್ನಿ ಒಂದು ರೌಂಡ್ ಹೊಡೆದು ಬರೋಣ.
“ನಾನು ಬರೋದು ಹತ್ತು ನಿಮಿಷ ತಡವಾಗ್ತದೆ. ಒಂದು ಕೆಲ್ಸ ಮಾಡಿ, ನೀವು ಮನೆಯೊಳಗೆ ಹೋಗಿ ಕುಳಿತುಕೊಳ್ಳಿ. ಬತೇìನೆ’ -ಹಿರಿಯ ಸಂಶೋಧಕರಾದ ಪ್ರೊ. ಷ. ಶೆಟ್ಟರ್ ಹೀಗಂದರು. ಅವರು ಇರುವುದು ಭೂಪಸಂದ್ರದ ಅಪಾರ್ಟ್ಮೆಂಟ್ವೊಂದರ ಎರಡನೇ ಫ್ಲೋರಿನಲ್ಲಿ. ಮೆಲ್ಲಗೆ ಹೋಗಿ ಆ ಮನೆ ಮುಂದೆ ನಿಂತರೆ ಬಾಗಿಲು ತೆರದೇ ಇದೆ. ಕಾಲು ಒಳಗಿಡಬೇಕು ಅನ್ನೋ ಹೊತ್ತಿಗೆ ಕಣ್ಣುಗಳು ಗೋಡೆಯ ಕಡೆಗೆ ತಿರುಗಿ, ತಕ್ಷಣ ಹಾವು ಕಚ್ಚಿದಂಥ ಭಯ ಹರಿದು ಕಾಲು ಹಿಂದೆಳೆಯಬೇಕಾಯಿತು. ಏಕೆಂದರೆ, ಆ ಮನೆಯಲ್ಲಿ ಗೋಡೆಗಳೇ ಇರಲಿಲ್ಲ; ಬರೀ ಫೋಟೋಗಳಿದ್ದವು !
ಶ್ರೀ ಕೃಷ್ಣನ ಲೀಲೆಗಳು, ತಂಜಾವೂರಿನ ರಾಜರ ವೈಭವಗಳೇ ಅಲ್ಲಿ ಗೋಡೆಗಳಾಗಿವೆ.
ಇದು ಆರ್ಟ್ ಗ್ಯಾಲರಿಯಾ?
ಅನುಮಾನ ಬಂತು. ನೀಗಿಸಿಕೊಳ್ಳಲು ಮಗದೊಮ್ಮೆ ಕಣ್ಣು ಹಿಗ್ಗಿಸಿದರೆ- ಕೃಷ್ಣ , ಗೋಪಿಕಾ ಸ್ತ್ರೀಯರ ಜೊತೆ ಕುಳಿತ ಪಟ ಕಂಡಿತು, ಎದುರಿಗೆ ಕೃಷ್ಣ-ರಾಧೆಯೊಂದಿಗಿರುವ ಇನ್ನೊಂದು ಪಟ. ಒಳಗಿದ್ದ ಚಿನ್ನದ ಚೌಕಟ್ಟು, ಇದು ಈ ಕಾಲದ ಪಟವಲ್ಲ ಅನ್ನೋದನ್ನು ಸಾರಿ ಹೇಳುತ್ತಿತ್ತು. ಅದರಲ್ಲೂ ಗೋಪಿಕಾಸ್ತ್ರೀಯರ ಪಟ ಇದೆಯಲ,É ಅದು ಬರೋಬ್ಬರಿ 6 ಅಡಿ ಎತ್ತರವಿದೆ. ಸೋಫಾ ಎದುರಿನ ಗೋಡೆ ಮೇಲೆ ತಂಜಾವೂರಿನ ದೊರೆ ಕುದುರೆಯ ಏರಿ ಯುದ್ಧಕ್ಕೆ ನಿಂತಿದ್ದಾನೆ. ಎಡಭಾಗಕ್ಕೆ ಒಂದು ಟೇಬಲ್ಮೇಲೆ ರೈತನೊಬ್ಬ ಕೆಲಸ ಮಾಡುತ್ತಿರುವ ಮ್ಯೂರಲ್ ಇತ್ತು. ಸೋಫದ ಬೆನ್ನ ಹಿಂದಿನ ಗೋಡೆಯನ್ನು ದೊಡ್ಡ ರಾಜಸ್ಥಾನಿ ಕಲಾಕೃತಿ ಅಮರಿಕೊಂಡಿದೆ. ಇದ್ಯಾವುದೋ ಕಲಾವಿದರ ಮನೆಯೇ ಇರಬೇಕು ಅಂತ ಬಾಗಿಲ ಬುಡದಿಂದ ಕಾಲೆ¤ಗೆಯುವ ಹೊತ್ತಿಗೆ ಭುಜ ಭಾರವಾಯಿತು. “ಇದೇ ನಮ್ಮನೆ, ನೀವು ಸರಿಯಾಗೇ ಬಂದಿದ್ದೀರಿ. ಬನ್ನಿ ಒಳಗ ‘ ನಿರ್ಮಲವಾಗಿ ನಕ್ಕು, ಇದ್ದ ಅನುಮಾನವನ್ನು ನಿವಾಳಿಸಿ ಎಸೆದು ಒಳಕ್ಕೆ ಕರೆದೊಯ್ದರು ಪ್ರೊ. ಷ. ಶೆಟ್ಟರ್.
ಶೆಟ್ಟರ್ ಅವರ ಮನೆ ಮಿನಿ ಚಿತ್ರಕಲಾಪರಿಷತ್ತೇ. ಹೆಚ್ಚುಕಮ್ಮಿ 60ವರ್ಷಗಳಿಂದ ಕೂಡಿಟ್ಟ ಮ್ಯೂರಲ್, ಚಿತ್ರಪಟಗಳ ನೋಡುವ ಕಣ್ಣಿಗೆ ಜಾತ್ರೆಯ ವೈಭವ. ತಂಜಾವೂರಿನ ಗೋಲ್ಡ್ ಪ್ಲೇಟೆಡ್ ಚಿತ್ರಗಳಿಗೆ 200 ವರ್ಷ ದಾಟಿದೆ. ಅಂಥವೂ ಹೆಚ್ಚು ಕಮ್ಮಿ 15 ಪಟಗಳಿವೆ. ಎಲ್ಲವೂ ಲೈಫ್ ಸೈಜ್ನದ್ದು. ಅವರ ಬಳಿ ಮಾರ್ಡನ್ ಪೇಂಟಿಂಗ್, ಒರಿಸ್ಸಾ ಪೇಂಟಿಂಗ್, ಕಾಂಟೆಪರರಿ, ಆಯಿಲ್, ವಾಟರ್ ಕಲರ್ ಪೇಂಟಿಂಗ್… ಹೀಗೆ ನಾನಾ ವಿಧದ ನೂರಾರು ಪೇಂಟಿಂಗ್ಗಳಿವೆ.
ಹಾಲಿನ ಎಡಭಾಗದಲ್ಲಿದ್ದ ಪುಟ್ಟ ರೂಮಿನೊಂದಿಗೆ ಪಟದರ್ಶನದ ಯಾತ್ರೆ ಶುರುವಾಯಿತು.
“ಇಂದಿರಾಗಾಂಧಿ ಸೆಂಟರ್ ಫಾರ್ ಆರ್ಟ್ನಲ್ಲಿ ಸುಮಾರು ಪ್ರಯೋಗಕ್ಕೆ ಅಂತ ಹಳೆಯ ತಂತ್ರಗಳನ್ನು ಬಳಸಿದ 18 ಶಿವನ ಮೂರ್ತಿಗಳನ್ನು ಮಾಡಿಸಿದ್ವಿ. ಅಂಥದ್ದು ಇದೂ ಒಂದು’ ಅಂತ ತೋರಿಸಿದರು.
ಪಕ್ಕದಲ್ಲಿದ್ದ ರೂಮಿಗೆ ಹೋದರೂ ಗೋಡೆಗಳೆಲ್ಲವೂ ಚಿತ್ರಗಳಿಂದ ತುಂಬಿಹೋಗಿವೆ. “ಅದು ಪುಷ್ಪದ್ರಾವಿಡ್ ಅವರ ಚಿತ್ರ, ಇಲ್ನೋಡಿ , ಗೆಳೆಯ ಘೋರ್ಪಡೆ ತೆಗೆದ ಚಿತ್ರ. ನಾನೂ ಅವರು ಅಗಧಿ ಸ್ನೇಹಿತರು. ಅವರು ವೈಲ್ಡ್ ಲೈಫ್ ಫೋಟೋಗ್ರಾಫರ್. ನನ್ನ ಜೊತೆ ಬಂದರೆ ಇಂಥ ಮಾನೋಮೆಂಟ್ ತೆಗೆಯೋರು’ ಅಂತ ವಿವರಿಸಿದರು.
ಅವರ ಬೆಡ್ರೂಮಿಗೆ ಹೊಕ್ಕರೆ ಲಕ್ಷ್ಮೇಗೌಡರು, ಎಂ.ಎಫ್ ಹುಸೇನ್, ಶಾಂತಿನಿಕೇತನದ ಚಿತ್ರಗಳನ್ನು ದೇವರ ಪಟದಷ್ಟೇ ಭಕ್ತಿಯಿಂದ ನೇತುಹಾಕಿದ್ದಾರೆ. “ಇಲ್ಲಿ ಬರೇ ಕಾಂಟೆಂಪರರಿ ಚಿತ್ರಗಳಿವೆ. ಅಲ್ನೋಡಿ. ಅದು ಹುಸೇನ್ ಬಿಡಿಸಿಕೊಟ್ಟದ್ದು’ ಅಂತ ಬಿಳಿ ಪಕ್ಷಿಯೊಂದು ಹಾರುತ್ತಿರುವ ಚಿತ್ರ ತೋರಿಸಿದರು. ಇದೇ ರೂಮಿನಲ್ಲಿ ಶೆಟ್ಟರ್ ಅವರ ಪೂರ್ವಿಕರು ಪೂಜಿಸುತ್ತಿದ್ದ ದಶಕಗಳ ಹಿಂದಿನ ಮಿನೇಚರ್ಗಳನ್ನು ಕೂಡಿಟ್ಟು, ಫ್ರೆàಂ ಹಾಕಿಸಿಟ್ಟಿದ್ದಾರೆ.
“ಇದು ನೋಡಿದ್ರಾ? ಯಾವ ಪೇಂಟರ್ ಇರಬಹುದು ಊಹಿಸಿ’ ಅಂದರು. ಅಲ್ಲಿ ಮದರ್ ಥೆರೇಸ ನಮಸ್ಕರಿಸುತ್ತಿರುವ ಚಿತ್ರವಿತ್ತು. “ಗೊತ್ತಾಗ್ಲಿಲ್ಲ ಅಲಾ’ ಅಂದು. “ಈ ಪ್ರೋ. ಷ. ಶೆಟ್ಟರ್ ಬರೆದದ್ದು’ ಹೀಗೆ ಗಂಭೀರವಾಗಿ ಹೇಳಿ, ಹಾಗೇ ನಕ್ಕು “ಅದನ್ನು, ಕಾಫಿದ್ರಲ್ಲಿ ಬರೆದದ್ದು. ಬಹಳ ಹಳೇ ಕಲೆಕ್ಷನ್’ ಅಂತ ವಿವರಿಸಿದರು. ಓಣಿಯಲ್ಲಿ ಎಂ.ಎಫ್ ಹುಸೇನ್ ಕೊಟ್ಟ 10-20 ಪಟಗಳು ಇವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದವು.
ಡೈನಿಂಗ್ ಹಾಲಿಗೆ ಬಂದಾಗಲಂತೂ ಆಶ್ಚರ್ಯ ಕಾದಿತ್ತು. ಮೂರು ಅಡಿ ಎತ್ತರ, ಹತ್ತು ಅಡಿ ಅಗಲದ ದೊಡ್ಡ ಕ್ಯಾನ್ವಾಸ್ ಮಧ್ಯೆ ದೊಡ್ಡ ಗಣಪನ ಚಿತ್ರ, ಸುತ್ತಲೂ ನೂರಾರು ನಾನಾ ಭಂಗಿಯ ಪುಟ್ಟ, ಪುಟ್ಟ ಗಣಪತಿಗಳು ದುಷ್ಟಾಂತಗಳನ್ನು ಹೇಳುವ ಕುಸುರಿ ಚಿತ್ರಗಳನ್ನು ನಯನ ಮನೋಹರವಾಗಿ ಬಿಡಿಸಿದ್ದರು.
ಅದನ್ನು ತೋರಿಸಿ- ಭುವನೇಶ್ವರಕ್ಕೆ ಹೋಗೋ ದಾರಿಯಲ್ಲಿ ಗುರುದಾಸಪುರ ಅನ್ನೋ ಹಳ್ಳಿ ಇದೆ. ಇಲ್ಲಿನ ಪ್ರತಿ ಮನೆಯಲ್ಲೂ ಮಕ್ಕಳು, ಹಿರಿಯರು, ಸೊಸಯಂದಿರು ಎಲ್ಲರೂ ಪೇಂಟರ್ಗಳೇ. ಸುಮ್ಮನೆ ನೋಡಿಕೊಂಡು ಬರೋಣ ಅಂತ ಹೋದ್ವಿ. ನೋಡ್ತಾ ನೋಡ್ತಾ ಇಡೀ ದಿನ ಅಲ್ಲೇ ಕಳೆದು ಬಿಟ್ವಿ. ಒಂದು ಕುಟುಂಬದ ಅಷ್ಟೂ ಜನ 365 ದಿವಸ ಈ ಚಿತ್ರದ ಮೇಲೆ ಕೆಲಸ ಮಾಡಿದ್ದಾರೆ ನೋಡಿ’ ಅಂತ ವಿವರಿಸಿದರು.
ಮನೆಯ ಎಲ್ಲ ಐದು ರೂಮಿನಲ್ಲೂ ಭರ್ತಿ ಪಟಗಳಿವೆ. ಕಣ್ಣಿಟ್ಟ ಕಡೆಯಲ್ಲಾ ಕಾಣೋದು ಪಟಗಳೇ. ಎಂ.ಎಫ್. ಹುಸೇನ್, ಮದರಾಸಿನ ವಿಶ್ವನಾಥನ್, ಆಂಧ್ರದ ಲಕ್ಷೆ$¾àಗೌಡರ್, ಚೆಫ್ಟಿ ಬರ್ಮನ್, ವಾಸುದೇವ್, ಖಂಡೇರಾವ್, ವೈಕುಂಠಂ, ಪುಷ್ಪಾ ದ್ರಾವಿಡ್, ಮಣಿ … ಹೀಗೆ ಲೆಕ್ಕ ಹಿಡಿಯುತ್ತಾ ಹೋದರೆ 50ಕ್ಕೂ ಹೆಚ್ಚು ಕಲಾವಿದರು ಇಲ್ಲಿ ನೆಲೆಸಿದ್ದಾರೆ.
ಪ್ರೊ. ಷ. ಶೆಟ್ಟರ್ ಹೀಗೆ ಬದುಕಿನ ಕನಸನ್ನೆಲ್ಲಾ ಒಂದು ಕಡೆ ಸೇರಿಸಿ, ಫ್ರೆಂ ಹಾಕಿಟ್ಟಿದ್ದಾರೆ. ಸಂಪಾದನೆಯ ಬಹುಪಾಲು ಹಣವನ್ನು ಇದಕ್ಕಾಗಿ ಸುರಿದಿದ್ದಾರೆ. ಆರಂಭದಲ್ಲಿ ಅವರ ಹೆಂಡತಿ “ಏನಿವ್ರು, ಸಂಪಾದನೆ ಮಾಡೋದನ್ನೆಲ್ಲಾ ಹೀಗೆ ಚಿತ್ರಗಳ ಮೇಲೆ ಹಾಕ್ತಾರೆ’ ಅಂತ ಅನ್ನೋರಂತೆ. ಆಮೇಲಾಮೇಲೆ ಅವರಿಗೂ ಈ ಚಿತ್ರಸಂಗ್ರಹದ ರುಚಿ ಹತ್ತಿ- ಈಗ ಅವರೇ ಅಮೂಲ್ಯ ಸಂಗ್ರಹದ ರಕ್ಷಣೆ ಮಾಡುತ್ತಿದ್ದಾರಂತೆ. ನಾವು ಮೊದಲು ಡಾಲರ್ಸ್ ಕಾಲೋನಿಯಲ್ಲಿ ಇದ್ವಿ. ಈ ಚಿತ್ರ ಸಂಗ್ರಹ, ಸಂರಕ್ಷಣೆ ಮಾಡಕ್ಕಾಗಿಯೇ 5 ಬೆಡ್ರೂಮಿನ ಮನೆಗೆ ಶಿಫ್ಟ್ ಆದೆವು’ ಅಂತ ನಗುತ್ತಾ ಹೇಳಿದರು ಶೆಟ್ಟರ್.
ಶೆಟ್ಟರ್, ಇತಿಹಾಸವನ್ನೇ ಮನೆಗೆ ತಂದು ಇನ್ನೊಂದು ಇತಿಹಾಸ ನಿರ್ಮಿಸಿದ್ದಾರೆ ಅನ್ನೋದು ಹೆಮ್ಮೆಯ ಸಂಗತಿ ಅನ್ನೋದೇನೋ ಸರಿ. ಆದರೆ ಅವನ್ನೆಲ್ಲಾ ಹೇಗೆ ಕಾಪಾಡೋದು? ” ಇದೇ ತಲೇನೋವು. 15ದಿನಕ್ಕೆ ಒಂದು ಸಲ ವ್ಯಾಕ್ಯೂಮ್ನಿಂದ ಕ್ಲೀನು ಮಾಡಿಸ್ತೀವಿ. ಪಟಗಳ ಮೇಲೆ ಧೂಳು ಕೂರದಂತೆ ನೋಡಿಕೊಳ್ಳಬೇಕು. ಗ್ಲಾಸು ಒಡೆಯದಂತೆ ಕಾಪಾಡಬೇಕು. ಮನೆಗೆಲಸ ಮಾಡುವವರನ್ನು ಮೊದಲು ಪಟಗಳ ಬಗ್ಗೆ ಪ್ರೀತಿ ಹುಟ್ಟುವಂತೆ ಟ್ರೈನ್ ಮಾಡಬೇಕು’ ಪಟ ಕೊಳ್ಳುವಾಗಿನ ಪ್ರೀತಿಯನ್ನು ಅವುಗಳನ್ನು ಉಳಿಸಿಕೊಳ್ಳುವ ತನಕ ಕಾಪಿಟ್ಟುಕೊಳ್ಳಬೇಕು ಅನ್ನೋದನ್ನು ಹೇಳಿದರು.
ನಿಜ, ಷ. ಶೆಟ್ಟರ್ ಅವರು ಪಟಗಳನ್ನು ಪ್ರೀತಿಯಿಂದ ಕೊಂಡ ನಂತರ ಉಳಿಸಿಕೊಳ್ಳಲೂ ಹೋರಾಟ ಮಾಡುತ್ತಿದ್ದಾರೆ. ಅವರು ಡಾಲರ್ಸ್ ಕಾಲನಿಯಿಂದ ಈ ಮನೆಗೆ ಸ್ಥಳಾಂತರಿಸಬೇಕಾದರೆ ಎಷ್ಟು ಒದ್ದಾಟ ಆಗಿರೊಲ್ಲ? ಈ ಪಟಗಳನ್ನು ಮನೆಯಲ್ಲಿ ಸೇರಿಸುವುದು ಸುಲಭದ ಕೆಲಸವಲ್ಲ. ಮೊದಲು ಅದಕ್ಕೆ ಹೊಂದುವ ಜಾಗವನ್ನು ಹುಡುಕಬೇಕು. ಅಗಲ, ಎತ್ತರ ಸರಿಯಾಗಿದೆಯಾ ನೋಡಬೇಕು. ಸಾಗಿಸುವಾಗ, ಗ್ಲಾಸು ಒಡೆಯಬಾರದು. ಅದರಲ್ಲೂ ತಂಜಾವೂರಿನ ಫೋಟೋಗಳದ್ದು. ಗ್ಲಾಸಿಗೂ ನೂರರ ವಯಸ್ಸಾಗಿದೆ. ಇವೆಲ್ಲವನ್ನೂ ನಿಭಾಯಿಸುವ ಮೇಸಿŒ ಸಿಗಬೇಕು.
ಆದ್ರೂ ಇದನ್ನು ಹೇಗೆ ಸಾಗಿಸಿದ್ರಿ ಅಂದರೆ…
“8-10 ಜನ ಕೂಡಿಕೊಂಡು ಬಂದ್ರು. ಲಿಫ್ಟ್ನಗೇ ಬರೋಂಗಿಲ್ಲ ಇವು. ಎಲ್ಲಿ ಗ್ಲಾಸ್ ಹೊಡೀತಾರೋ ಭಯ. ಕಾರಿಡಾರನಗೆ ಇಟ್ವಿ. ರಾತ್ರಿ ಎಲ್ಲಾ ಅಲ್ಲೇ ಇತ್ತು. ಇನ್ಸ್ಟಾಲ್ ಮಾಡೋಕೆ 8-10 ದಿನ ಒದ್ದಾಡಿದ್ವಿ. ಕಾಪೆìಂಟ್ರಾ ಬರ್ತಿದ್ರು ನೋಡ್ತಿದ್ರು, ಹೋಗ್ತಿದ್ರು. ಸಮಸ್ಯೆ ಏನಂದ್ರ, ಅದನ್ನು ನಾಲ್ಕು ಜನ ಎತ್ತಿ ಹಿಡೀಬೇಕು. ಆಮೇಲೆ ಗೋಡೆ ಮೇಲೆ ಮಾರ್ಕ್ ಮಾಡ್ಕೊàಬೇಕು. ಸ್ಪೇಸ್ ಕರೆಕ್ಟಾಗಿದೆಯಾ ನೋಡ್ಕೊàಬೇಕು. ಅಳತೆ ವ್ಯತ್ಯಾಸ ಆದ್ರ ಡಿಸ್ಪ್ಲೇ ಚನ್ನಾಗಿರಂಗಿಲ್ಲ.. ಹ್ಯಾಂಗ್ ಮಾಡೋದು ಅಂತ ತಲೆ ನೋವಾಗ್ತಾ ಇತ್ತು. ಎತ್ತುವಾಗ ಬಿದ್ರ ಬಹಳ ಕಷ್ಟ. ಇವೆಲ್ಲ ಅಡ್ವೆಂಚರಸ್ಸು- ಅಂತ ಹೇಳಿ ಎದುರಿಗೆ ಪಂಕ್ತಿಯಲ್ಲಿ ನಿಂತಿದ್ದ ಪಟಗಳನ್ನು ತೋರಿಸಿ ಹೇಳಿದರು. ಅವೂ ಕೂಡ ಇವರ ಮಾತಿಗೆ ತಲೆಯಾಡಿಸಿದಂತೆ ಕಂಡವು.
ಮುಂದೇನು ಮಾಡೋದು?
ಷ. ಶೆಟ್ಟರ್ ಅವರಿಗೆ ಫೋಟೋಗಳ ಜೊತೆಗೆ ಸಂಕಷ್ಟವೂ ನೇತು ಹಾಕಿಕೊಂಡಿದೆ. ಅದೇನೆಂದರೆ, ಭವಿಷ್ಯದಲ್ಲಿ ಇವುಗಳ ರಕ್ಷಣೆ ಹೇಗೆ? ಅನ್ನೋದು. ಯಾರಿಗಾದರೂ ದಾನ ಮಾಡಿಬಿಟ್ಟರೆ ಅನ್ನೋ ಯೋಚನೆ ಬಂತಂತೆ. ದಾನ ಪಡೆದವರಿಗೂ ಇವರಷ್ಟೇ ಚಿತ್ರಪ್ರೀತಿ ಇರಬೇಕು. ಇಲ್ಲವಾದರೆ, ಕಲಾವಿದ ರೋರಿಕ್ ಅವರ ಚಿತ್ರಗಳಿಗೆ ಆದ ಅನಾಥಗತಿಯೇ ತಮ್ಮ ಪಟಗಳಿಗೂ ಆಗಿಬಿಟ್ಟರೆ ಅನ್ನೋ ಭಯ ಆವರಿಸಿತಂತೆ. ಸರಿ, ಮಕ್ಕಳಿಗೆ ಕೊಡೋಣ ಅಂದರೆ ಅವರು ವಿದೇಶದಲ್ಲಿದ್ದಾರೆ. ಅವರೂ ಎಲ್ಲವನ್ನೂ ಅಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ.
” ಮೊನ್ನೆ ಮೊನ್ನೆಯಷ್ಟೇ ಮಗನ ಮನೆಗೆ ಅಂತ ವಿದೇಶಕ್ಕೆ ಹೋದ್ವಿ. ಹೀಗೆ ತಿಂಗಳಾನುಗಟ್ಟಲೆ ಮನೆ ಬಿಡಬೇಕಾದ್ರ ಪ್ರತಿ ಚಿತ್ರಕ್ಕೆ ಹೊದಿಕೆ ಹೊದಿಸಬೇಕು. ಮುತುವರ್ಜಿಯಿಂದ ನೋಡಿಕೊಳ್ಳುವವರಿಗೆ ಹೇಳಿ ಹೋಗಬೇಕಾಗ್ತದ. ಅಂಥ ಮನಸ್ಸುಗಳು ಸಿಗುವುದು ಬಹಳ ಕಷ್ಟ. ಇನ್ನೂ, ಯೋಚನೆ ಮಾಡ್ತಾ ಇದ್ದೀವಿ. ಭವಿಷ್ಯದಲ್ಲಿ ಏನು ಮಾಡಬೇಕು ಅಂತ. ಪೇಂಟಿಂಗ್ ಮಾರೋವರೆಗೂ ಮನೆ ಮಾರಂಗಿಲ್ಲ, ಮನೆ ಮಾರೋವರೆಗೂ ಪೇಂಟಿಂಗ್ ಕೊಡಂಗಿಲ್ಲ. ತಗಳ್ಳೋದಕ್ಕಿಂತ ನಿರ್ವಹಣೆ ಮಾಡೋದೇ ಕಷ್ಟ ‘ ತಮ್ಮ ಪ್ರೀತಿ, ತಮಗೇ ಹೇಗೆ ಭಾರವಾಗಿದೆ ಅನ್ನೋದನ್ನೂ ಹೇಳಿದರು ಶೆಟ್ಟರ್.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ