ಇದೇ ಚಿರತೆ ಸೃಷ್ಟಿಸೋ ಅವತಾರ!
ಕುಂಚದಲ್ಲಿ ಅರಳಿದ ನಾಗು ವನ್ಯಲೋಕ
Team Udayavani, Feb 22, 2020, 6:09 AM IST
ಕಾಡಿನಲ್ಲಿ ಪ್ರಾಣಿಗಳ ಮಾಯಕ ಚಿತ್ರಲೋಕ ಸೃಷ್ಟಿಸಿ, ಪ್ರಾಣಿಗಳು ಮಾತ್ರವೇ ಅಲ್ಲ, ಮನುಷ್ಯರ ಕಣ್ಣುಗಳಿಗೂ ಮೋಸ ಮಾಡುವ ಕಲಾ ನಿಪುಣ ನಾಗರಾಜ್. ಇವರು ಬಿಡಿಸಿದ ಚಿತ್ರಗಳಿಗೆ, ವನ್ಯಜೀವಿಗಳು ಮುಖಾಮುಖಿ ಆದಾಗ ಅವುಗಳಿಗೆ ಆಶ್ಚರ್ಯವೋ ಆಶ್ಚರ್ಯ…
ಯಾಕೋ ಚಿರತೆ ಗಕ್ಕನೆ ನಿಂತಿತು. ಆಹ್… ಈ ಚಿರತೆಯೂ ನನ್ನಂತೆಯೇ ಉಂಟಲ್ಲ. ಅದೇ ಮೀಸೆ, ಅದೇ ಕಪ್ಪುಗೋಲಿಯ ಕಣ್ಣು, ಒರಟು ಮೂಗು, ಮೈ ತುಂಬಾ ಕಪ್ಪುಚುಕ್ಕಿಗಳು… ನಾನೇನಾದರೂ ಡಬಲ್ ಆ್ಯಕ್ಟಿಂಗ್ ಮಾಡುತ್ತಿದ್ದೇನಾ ಎಂಬ ಅನುಮಾನ ಅದಕ್ಕೆ. ಅದು ನಿಧಾನಕ್ಕೆ ಹೆಜ್ಜೆ ಇಡುತ್ತಾ, ತನ್ನದೇ ಪ್ರತಿರೂಪದತ್ತ ಸಮೀಪಿಸಿದಾಗ, ಆಶ್ಚರ್ಯವೋ ಆಶ್ಚರ್ಯ.
ಕಾಡಿನಲ್ಲಿ ಪ್ರಾಣಿಗಳ ಮಾಯಕ ಚಿತ್ರಲೋಕ ಸೃಷ್ಟಿಸಿ, ಪ್ರಾಣಿಗಳು ಮಾತ್ರವೇ ಅಲ್ಲ, ಮನುಷ್ಯರ ಕಣ್ಣುಗಳಿಗೂ ಮೋಸ ಮಾಡುವ ಕಲಾವಿದ ನಾಗರಾಜ್. ಚಿತ್ರದುರ್ಗದ ಜೋಗಿಮಟ್ಟಿಗೆ ಹೋಗುವಾಗ, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಫಲಕಗಳಲ್ಲಿ ಕಾಣುವ ವನ್ಯಜೀವಿಗಳ ಚಿತ್ರಗಳು ಇವರದ್ದೇ ಸೃಷ್ಟಿ. ಅಲ್ಲಿನ ವಾಚ್ ಟವರ್, ಸೆಕ್ಯೂರಿಟಿ ರೂಮ್ಗಳ ಗೋಡೆಗಳಲ್ಲೂ ಚಿರತೆ, ನವಿಲು, ಕರಡಿಗಳ ಕಲಾಕೃತಿಗಳು ಸಜೀವಂತಿಕೆಯಿಂದ ಸೆಳೆಯುತ್ತವೆ.
ನಮಗೆ ಗೊತ್ತಿಧ್ದೋ, ಗೊತ್ತಿಲ್ಲದೆಯೋ ನಾವು ವಾಸಿಸುವ ಪರಿಸರ ನಮ್ಮನ್ನು ನಿರ್ಮಿಸಿರುತ್ತದೆ. ಚಿತ್ರದುರ್ಗದ ಕೋಟೆ, ಕೊತ್ತಲ, ಮಠ- ಮಾನ್ಯಗಳು, ಮೃಗಾಲಯ, ಜೋಗಿಮಟ್ಟಿಯ ಪರಿಸರ, ದುರ್ಗದವರ ಬದುಕಿನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಚ್ಚಾಗಿದೆ. ಹಾಗೆಯೇ ಜೋಗಿಮಟ್ಟಿಯ ಕಾಡಿನ ಮೋಡಿಗೆ ಒಳಗಾದವರು, ನಾಗರಾಜ್.
ಜಿಗಿಯುವ ಚಿತ್ರಗಳು: ಜೋಗಿಮಟ್ಟಿ ಅಲ್ಲದೆ, ಆಡು ಮಲ್ಲೇಶ್ವರ, ದಾಂಡೇಲಿ ಅಭಯಾರಣ್ಯ, ಬ್ಯಾಡಗಿ ಅರಣ್ಯ ಪ್ರದೇಶ, ಉಳವಿ, ಅತ್ತಿಬೆಲೆಗಳಲ್ಲಿ ಮೈಮೇಲೆ ಜಿಗಿಯುವಂತೆ ಕಾಣುವ ಹುಲಿ, ಚಿರತೆಯ ಕಲೆಗಳು ಅರಳಿರುವುದು ಇದೇ ನಾಗು ಆರ್ಟ್ಸ್ನ ಕುಂಚದಿಂದ. ಅಷ್ಟೇ ಏಕೆ, ಬೆಂಗಳೂರಿನ ಹಲವು ಫುಟ್ಪಾತ್ಗಳಲ್ಲಿ ಬಿಬಿಎಂಪಿ ಕೂಡಾ ನಾಗರಾಜ್ ಅವರಿಂದ ಸಾಕಷ್ಟು ಪರಿಸರ ಕಾಳಜಿ ಕುರಿತ ವಾಲ್ ಪೇಂಟಿಂಗ್ಗಳನ್ನು ಮಾಡಿಸಿದೆ. ಹತ್ತನೇ ವಯಸ್ಸಿನಲ್ಲಿಯೇ ಇವರಿಗೆ ಪ್ರಾಣಿ, ಪಕ್ಷಿ, ಮರ, ಗಿಡಗಳನ್ನು ಚಿತ್ರಿಸುವ ಖಯಾಲಿ ಶುರುವಾಗಿತ್ತು. ಇವರ ಚಿತ್ರ ಕಲೆಯ ಹುಚ್ಚು ಎಷ್ಟೆಂದರೆ, ಇವರನ್ನು ಹತ್ತನೇ ತರಗತಿಯಲ್ಲಿ ಫೇಲ್ ಮಾಡಿಸಿದ್ದು ಕೂಡ ಇವೇ ಪೇಂಟಿಂಗ್ಸ್ ಅಂತೆ!
ಟೈಗರ್ ಪೇಂಟಿಂಗ್ ಇಷ್ಟ: ನಾಗರಾಜ್ಗೆ ಹುಲಿಯ ಚಿತ್ರ ಬರೆಯುವುದು ಇಷ್ಟವಂತೆ. ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಚಿತ್ರಿಸಿ ರುವ ಹುಲಿ, ಜೀವ ತುಂಬಿದಂತಿದೆ. ವಾಲ್ ಪೇಂಟಿಂಗ್, ವೈಲ್ಡ್ಲೈಫ್ ಪೇಂಟಿಂಗ್ಗಳಿಗೆ ಒಂದೊಂದು ಚಿತ್ರಕ್ಕೆ ಎರಡು ದಿನ ಸಮಯ ತೆಗೆದುಕೊಳ್ಳುತ್ತಾರೆ.
ಇವರ ಚಿತ್ರಗಳು ಇಷ್ಟು ಪಫೆಕ್ಟಾಗಿ ಅರಳಲು ಇನ್ನೊಂದು ಕಾರಣ, ಇವರ ಫೋಟೊಗ್ರಫಿ ಕಲೆ. ಪ್ರತಿ ಭಾನುವಾರವೂ ಗೆಳೆಯರು, ಆಸಕ್ತರನ್ನೆಲ್ಲಾ ಸೇರಿಸಿಕೊಂಡು ಚಿತ್ರದುರ್ಗದ ಜೋಗಿಮಟ್ಟಿ, ಆಡುಮಲ್ಲೇಶ್ವರ ಭಾಗದಲ್ಲಿ ಚಾರಣ ಮಾಡುವುದು 30 ವರ್ಷದಿಂದ ಇವರು ನಿಲ್ಲಿಸಿಲ್ಲ. ಕಡಿದಾದ ಬೆಟ್ಟದ ತುದಿಯ ಗುಹೆಗಳನ್ನು ಸ್ವತ್ಛಗೊಳಿಸಿ, ಅಲ್ಲಿರುವ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿ ಬರುವುದು ಇವರ ಶ್ರದ್ಧೆಗೆ ಹಿಡಿದ ಕನ್ನಡಿ ಎನ್ನಬಹುದು.
ಕಾಡಿನ ಜಲಸಂರಕ್ಷಕ: ನಾಗರಾಜ್ ಅವರ ದಿನಚರಿ ಕೇವಲ ಬಣ್ಣಗಳ ಜೊತೆ ಮುಗಿದು ಹೋಗುವುದಿಲ್ಲ. ಇವರೊಳಗೊಬ್ಬ ಪರಿಸರ ಸಂರಕ್ಷಕನೂ ಇದ್ದಾನೆ. ಜೋಗಿಮಟ್ಟಿ ಮತ್ತಿತರೆ ಅರಣ್ಯ ಪ್ರದೇಶಗಳಲ್ಲಿ ಪುಟ್ಟ ಪುಟ್ಟ ಕಲ್ಯಾಣಿ, ಹೊಂಡ, ಹೆಬ್ಬಂಡೆಗಳ ಮೇಲೆ ನೀರು ನಿಲ್ಲುವ ದೊಣೆಗಳಿವೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಮಣ್ಣು ತುಂಬಿ, ಗಿಡ ಬೆಳೆದು ನೀರು ನಿಲ್ಲದಂತಾಗಿದ್ದವು. ನಾಗರಾಜ್ ಮತ್ತವರ ತಂಡ ಕಳೆದ 3-4 ವರ್ಷಗಳಿಂದ ಸತತವಾಗಿ ಪುಟ್ಟ ಕಲ್ಯಾಣಿಗಳನ್ನು ಸcತ್ಛಗೊಳಿಸಿ, ಹೂಳು ತೆಗೆದು ನೀರು ನಿಲ್ಲುವಂತೆ ಮಾಡಿದ್ದಾರೆ. ಇದರಿಂದ ಕಾಡು ಪ್ರಾಣಿಗಳು, ಪಕ್ಷಿ ಸಂಕುಲಕ್ಕೆ ಅನುಕೂಲವಾಗಿದೆ.
* ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ