ಮುಕೇಶ್ ಬಂಗಾಳದ ಹೀರೊ
Team Udayavani, Mar 7, 2020, 6:04 AM IST
ಗಾಳ ತಂಡ 13 ವರ್ಷದ ಬಳಿಕ ರಣಜಿ ಕ್ರಿಕೆಟ್ ಕೂಟದ ಫೈನಲ್ ಪ್ರವೇಶಿಸಿದ ಸಂಭ್ರಮದಲ್ಲಿದೆ. 30 ವರ್ಷದ ಹಿಂದೆ ಬಂಗಾಳ ಕೊನೆಯದಾಗಿ ರಣಜಿ ಟ್ರೋಫಿ ಗೆದ್ದಿತ್ತು. ಅದುವೇ ಮೊದಲು ಅದುವೇ ಕೊನೆ, ಮತ್ತೆಂದೂ ಬಂಗಾಳ ತಂಡಕ್ಕೆ ಟ್ರೋಫಿ ಗೆಲ್ಲುವ ಅದೃಷ್ಟ ಒಲಿದು ಬರಲಿಲ್ಲ. ಇದೀಗ ಬಂಗಾಳ ಕೂಟದ ಫೈನಲ್ ಹಂತಕ್ಕೆ ಪ್ರವೇಶಿಸಿದ್ದು ಒಂದೊಳ್ಳೆ ಅವಕಾಶವಿದೆ. ಬಂಗಾಳ ಇಂತಹದೊಂದು ಪ್ರಚಂಡ ಸಾಧನೆ ಮಾಡಿರುವುದರ ಹಿಂದೆ ಓರ್ವ ಮಧ್ಯಮ ವೇಗಿಯ ಪಾತ್ರವಿದೆ.
ಆತ ಬೇರ್ಯಾರೂ ಅಲ್ಲ, ಎರಡನೇ ಇನಿಂಗ್ಸ್ನಲ್ಲಿ 61ಕ್ಕೆ 6 ವಿಕೆಟ್ ಕಿತ್ತು ಕರ್ನಾಟಕ ಬ್ಯಾಟಿಂಗ್ ಬೆನ್ನೆಲುಬು ಮುರಿದಿರುವ ಮುಕೇಶ್ ಕುಮಾರ್, ಇವರ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಹೌದು, ಈಡನ್ಗಾರ್ಡನ್ ರಣಜಿ ಸೆಮಿಫೈನಲ್ನಲ್ಲಿ ಆತಿಥೇಯ ಬಂಗಾಳ ಮುನ್ನಡೆ ಪಡೆದಿತ್ತು. ಹಾಗಂತ ಅದು ಬೀಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಕರ್ನಾಟಕ 98ಕ್ಕೆ3 ವಿಕೆಟ್ ಕಳೆದುಕೊಂಡಿದ್ದರೂ ಅದಕ್ಕೆ 4 ಹಾಗೂ 5ನೇ ದಿನದ ಪೂರ್ಣ ಆಟಬಾಕಿ ಇತ್ತು.
ಆದರೆ ಅಂತಿಮ ದಿನದ ಆಟದಲ್ಲಿ 5 ವಿಕೆಟ್ ಸೇರಿದಂತೆ ಒಟ್ಟಾರೆ 6 ವಿಕೆಟ್ ಕಬಳಿಸಿ ಮುಕೇಶ್ ಇನ್ನೂ ಒಂದು ದಿನದ ಆಟ ಬಾಕಿ ಇರುವಂತೆ ಬಂಗಾಳವನ್ನು ಗೆಲುವಿನ ದಡ ಸೇರಿಸಿದರು. ಮುಕೇಶ್ ಒಟ್ಟಾರೆ 21 ರಣಜಿ ಪಂದ್ಯದಲ್ಲಿ ಆಡಿದ್ದಾರೆ. ಒಟ್ಟು 78 ವಿಕೆಟ್ ಕಬಳಿಸಿದ್ದಾರೆ. ಕರ್ನಾಟಕ ವಿರುದ್ಧದ ಸಾಧನೆ ಜೀವನಶ್ರೇಷ್ಠ ವಾಗಿದೆ. ಇದೇ ಫಾರ್ಮ್ ಮುಂದುವರಿಸಿದರೆ ಭವಿಷ್ಯದಲ್ಲಿ ಇವರು ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.