ವೀರ ಸನ್ಯಾಸಿಯ ಮ್ಯೂಸಿಯಂ
ವಿವೇಕಾನಂದರು ತಂಗಿದ್ದ ಮನೆಯ ಚಿತ್ರಗಳು
Team Udayavani, Jan 11, 2020, 5:51 AM IST
ವಿವೇಕಾನಂದರು ಅಂದು ಬೆಳಗಾವಿಯ ಈ ಮನೆಗೆ ಬಂದಾಗ ಬಳಸಿದ್ದ ಕೋಲು, ಮಂಚ, ಕನ್ನಡಿಗಳನ್ನು ಹಾಗೆಯೇ ಸಂರಕ್ಷಿಸಿ ಇಡಲಾಗಿದೆ. ವಿವೇಕಾನಂದರು ತಂದಿದ್ದ, ಅವರ ತಾಯಿಯ ಮೂಲ ಫೋಟೋ ಕೂಡ ಇಲ್ಲಿನ ವಿಶೇಷತೆಗಳಲ್ಲಿ ಒಂದು…
ಸ್ವಾಮಿ ವಿವೇಕಾನಂದರು ದೇಶ ಸುತ್ತುವ ವೇಳೆ ಕರ್ನಾಟಕದಲ್ಲಿ ಮೊದಲು ಬಂದಿದ್ದು ಬೆಳಗಾವಿಗೆ. ಅದು 1892ರ ಅಕ್ಟೋಬರ್ 16. ಅಂದು ವೀರ ಸನ್ಯಾಸಿ, ಬೆಳಗಾವಿಯ ರಿಸಾಲದಾರ್ ಗಲ್ಲಿಯಲ್ಲಿದ್ದ ವಕೀಲ, ಸದಾಶಿವ ಭಾಟೆ ಎಂಬುವರ ಮನೆಯಲ್ಲಿ ಮೂರು ದಿನ ತಂಗಿದ್ದರು. ಈಗ ಈ ಮನೆಗೆ ಕಾಲಿಟ್ಟರೆ, ಅಲ್ಲಿ ವಿವೇಕಾನಂದರ ಜಗತ್ತೇ ಕಾಣಿಸುತ್ತದೆ. ಮನೆ ಈಗ, ಸಿಡಿಲ ಸನ್ಯಾಸಿಯ ನೆನಪನ್ನು ತೆರೆದಿಡುವ ಮ್ಯೂಸಿಯಂ. ಅಂದು ಸ್ವಾಮೀಜಿ ಬಳಸಿದ್ದ ವಸ್ತುಗಳನ್ನು ನೋಡುವುದೇ ಒಂದು ರೋಮಾಂಚನ.
ಸುಮಾರು 147 ವರುಷದ ಕಟ್ಟಡ. 2014ರಲ್ಲಿ ಇದನ್ನು ರಾಮಕೃಷ್ಣಾಶ್ರಮವು ಸುಪರ್ದಿಗೆ ತೆಗೆದುಕೊಂಡು, ಕಾಯಕಲ್ಪ ನೀಡಿದ್ದರೂ, ಮೂಲಸ್ವರೂಪಕ್ಕೆ ಧಕ್ಕೆಯಾಗದೆ, ಹಳೇ ಚೆಲುವಿನಲ್ಲೇ ಈ ಮನೆಗೆ ಸಂಗೀತ ಹಾಡುತ್ತದೆ. ಇಲ್ಲಿ ವೀರಸನ್ಯಾಸಿಯ ನೆನಪುಗಳನ್ನು ಚೆಂದದ ಫ್ರೆàಮ್ನಲ್ಲಿ ತೋರಿಸಲಾಗಿದೆ. ಗಂಗಾ ನದಿಯ ತೀರದಲ್ಲಿರುವ ಕೋಲ್ಕತ್ತಾದ ಬೇಲೂರು ಮಠಕ್ಕೆ ಹೋದವರಿಗೆ, ವಿವೇಕಾನಂದರು ವಾಸವಿದ್ದ ಕೋಣೆಯ ಅಪೂರ್ವ ದರ್ಶನವಾಗುತ್ತದೆ. ಅಲ್ಲಿ ವಿವೇಕಾನಂದರು ಬಳಸಿದ್ದ ಮಂಚವನ್ನು ಹಾಗೆಯೇ ಇಡಲಾಗಿದೆ. ಬೇಲೂರು ಮಠದ ಆ ನೆನಪುಗಳ ಪ್ರತಿಕೃತಿಯಂತೆ, ಇಲ್ಲಿಯೂ ಕೆಲವು “ವಿವೇಕವಿಸ್ಮಯ’ಗಳನ್ನು ರೂಪಿಸಲಾಗಿದೆ.
ಕೋಲು- ಮಂಚ- ಕನ್ನಡಿ…
ವಿವೇಕಾನಂದರು ಅಂದು ಇಲ್ಲಿಗೆ ಬಂದಾಗ ಬಳಸಿದ್ದ ಕೋಲು, ಮಂಚ, ಕನ್ನಡಿಗಳನ್ನು ಹಾಗೆಯೇ ಸಂರಕ್ಷಿಸಿ ಇಡಲಾಗಿದೆ. ವಿವೇಕಾನಂದರ ತಾಯಿಯ ಮೂಲ ಫೋಟೋ ಕೂಡ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಎರಡು ಅಂತಸ್ತಿನ ಒಟ್ಟು 20 ಕೊಠಡಿಗಳಿರುವ ಈ ಕಟ್ಟಡದಲ್ಲಿ, ವಿವೇಕಾನಂದರ ಜೀವನ ಮತ್ತು ವಿಚಾರಧಾರೆಗಳ ದರ್ಶನವಾಗುತ್ತದೆ. ನರೇಂದ್ರನ ಬಾಲ್ಯ ಜೀವನ, ಪರಮಹಂಸರು- ವಿವೇಕಾನಂದರ ಭೇಟಿ, ಧೀರಸನ್ಯಾಸಿಯ ಸಂದೇಶಗಳಿರುವ ತೈಲವರ್ಣದ ಚಿತ್ರಗಳು- ವಿವೇಕಾನಂದರ ಕುರಿತು ಅಭಿಮಾನ ಮೂಡಿಸುವಂತಿವೆ.
ಫೋಟೊಶೂಟ್ನ ನೆನಪು…
ಮೂರು ದಿನಗಳ ನಂತರ ಇಲ್ಲಿಂದ ವಿವೇಕಾನಂದರು ಬಂಗಾಳಿ ಮೂಲದ ಅರಣ್ಯಾಧಿಕಾರಿ ಹರಿಪದ ಮಿತ್ರರ ಮನೆಗೆ ತೆರಳಿದ್ದರಂತೆ. ಅಲ್ಲಿ ಒಂಬತ್ತು ದಿನ ತಂಗಿದ್ದರಂತೆ. ಆ ವೇಳೆ ಹರಿಪದ ಅವರ ಒತ್ತಾಯದ ಮೇರೆಗೆ ವಿವೇಕಾನಂದರು, ಕೊಲ್ಲಾಪುರ ಮಹಾರಾಣಿ ಕೊಟ್ಟ ಟರ್ಬನ್ ಹಾಗೂ ಉಡುಪು ಧರಿಸಿ, ಇಲ್ಲಿನ ಸ್ಟುಡಿಯೊದಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಅದರ ಮ್ಯೂರಲ್ ಪ್ರತಿಮೆ ಕಣ್ಮನಗಳನ್ನು ಸೆಳೆಯುವಂತಿದೆ.
ಡಿಜಿಟಲ್ ಪೇಂಟಿಂಗ್ಸ್ನಲ್ಲಿ ವಿವೇಕ ಲೋಕ ಕಟ್ಟಿಕೊಟ್ಟಿರುವುದು, ಮ್ಯೂಸಿಯಂನ ವಿಶೇಷತೆಗಳಲ್ಲೊಂದು. ಪರಮಹಂಸರು, ಶಾರದಾದೇವಿ, ವಿವೇಕಾನಂದರ ಮೂರ್ತಿಗಳನ್ನು ನೋಡುತ್ತಲೇ ಇರಬೇಕು ಅಂತನ್ನಿಸುತ್ತದೆ. ಅಷ್ಟು ಸುಂದರವಾಗಿವೆ. ಇಲ್ಲಿ ಧ್ಯಾನದ ಕೊಠಡಿಯೂ ಇದ್ದು, ಸಾರ್ವಜನಿಕರಿಗೆ ಧ್ಯಾನ ಮಾಡಲು ಅವಕಾಶವಿದೆ. ನಿತ್ಯ ಪೂಜೆ- ಪುನಸ್ಕಾರಗಳೂ ನಡೆಯುತ್ತವೆ.
ಮಕ್ಕಳಿಗೆ ವಿವೇಕಪಾಠ
ಈ ಕಟ್ಟಡದಲ್ಲಿ ಡಿಜಿಟಲ್ ಹಾಲ್ ಇದ್ದು, ಮಕ್ಕಳು ಜಿಕ್ಸ್ ಆಟ ಆಡಿ, ನಂತರ ವಿವೇಕಾನಂದರ ಸಂದೇಶಗಳನ್ನು ಓದಿ ತಿಳಿದುಕೊಳ್ಳುವ ವ್ಯವಸ್ಥೆ ಇದೆ! ಇನ್ನು ಆಡಿಯೋ ವಿಷುವಲ್ ರೂಂನಲ್ಲಿ ಶಾಲಾ- ಕಾಲೇಜು ಮಕ್ಕಳಿಗೆ ವಿವೇಕಾನಂದರ ಬಗ್ಗೆ 40 ನಿಮಿಷಗಳ ಆಡಿಯೋ, ವಿಡಿಯೋ, ಅನಿಮೇಷನ್ ಮಾದರಿಗಳನ್ನು ತೋರಿಸಲಾಗುತ್ತದೆ. ಪ್ರತಿ ಸೋಮವಾರ ಈ ಮೆಮೋರಿಯಲ್ಗೆ ರಜೆ ಇರುತ್ತೆ. ಶಾಲಾ- ಕಾಲೇಜು ಮಕ್ಕಳು ಇದರ ವೀಕ್ಷಣೆಗೆ ಬರುವ ಯೋಜನೆ ಇದ್ದರೆ ಮೊದಲೇ ಅನುಮತಿ ಪಡೆದುಕೊಳ್ಳಬೇಕಾಗುತ್ತೆ.
– ಶಿವಲೀಲಾ ನಿರಂಜನಮೂರ್ತಿ, ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ