ಸಂತೋಷವನ್ನು ತ್ಯಾಗ ಮಾಡಿ ಯಶಸ್ಸಿನ ಬೆನ್ನೇರಿದ ಕಾರ್ತಿಕ್ ತ್ಯಾಗಿ
Team Udayavani, Feb 1, 2020, 6:02 AM IST
ಕಾರ್ತಿಕ್ ತ್ಯಾಗಿ….ಈ ಹೆಸರನ್ನು ನೀವು ಕೇಳಿದ್ದೀರಾ? ಬಹುಶಃ ಕ್ರಿಕೆಟ್ ಪ್ರೇಮಿಗಳು ಅಲ್ಲಲ್ಲಿ, ಆಗಾಗ ಕೇಳಿರಬಹುದು. ಐಪಿಎಲ್ ಹರಾಜಿನ ಸಂದರ್ಭದಲ್ಲಿ ಸ್ವಲ್ಪ ಜಾಸ್ತಿ ಕೇಳಿರುತ್ತೀರಿ. ಕಾರಣ ಬಡರೈತನ ಮಗ 1.30 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮಾರಾಟವಾಗಿದ್ದು. ಈತ ಪಡೆದ ಬೆಲೆಗಿಂತ ಈತನ ಹಿನ್ನೆಲೆ ಆಗ ಸದ್ದು ಮಾಡಿತ್ತು. ಮಾರಾಟವಾದಾಗ ಕಾರ್ತಿಕ್ ಪ್ರತಿಕ್ರಿಯಿಸಿದ್ದು ಹೀಗೆ, ನಾನು ಬಡ ರೈತಕುಟುಂಬದಿಂದ ಬಂದವನು.
ಉತ್ತರಪ್ರದೇಶದ ಹಪೂರ್ ಎಂಬ ನನ್ನೂರಿನ ಹೆಸರನ್ನು, ಇದಕ್ಕೂ ಮುನ್ನ ನನ್ನ ಸಹ ಕ್ರಿಕೆಟಿಗರೇ ಕೇಳಿರುವುದು ಅನುಮಾನ ಎಂದಿದ್ದರು. ಹಾಗೆ ಬಡತನದಲ್ಲಿ ಕಷ್ಟಪಟ್ಟು ಬೆಳೆದುಬಂದ ಅವರು 19 ವಯೋಮಿತಿ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾದರು. ಅದು ಅತ್ಯಂತ ಸೂಕ್ತವಾದ ಆಯ್ಕೆಯೆಂದು ಈಗ ಸಾಬೀತು ಮಾಡಿದ್ದಾರೆ. 19 ವಯೋಮಿತಿ ವಿಶ್ವಕಪ್ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿ, ಭಾರತ ಸೆಮಿಫೈನಲ್ಗೇರಲು ಕಾರಣವಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 1, ಜಪಾನ್ ವಿರುದ್ಧ 3, ಶ್ರೀಲಂಕಾ ವಿರುದ್ಧ 1, ಆಸ್ಟ್ರೇಲಿಯ ವಿರುದ್ಧ 4 ವಿಕೆಟ್ ಕಿತ್ತು ಮೆರೆದಾಡಿದ್ದಾರೆ. ಬಲಗೈ ಮಧ್ಯಮ ವೇಗಿಯಾಗಿರುವ ಈತ ಭವಿಷ್ಯದಲ್ಲಿ ಭಾರತ ತಂಡ ಪ್ರವೇಶಿಸುವ ಸುಳಿವನ್ನು ಈಗಲೇ ನೀಡಿದ್ದಾರೆ. ಸದ್ಯ ಭಾರತ ತಂಡದಲ್ಲಿ ಬಹಳ ಪೈಪೋಟಿಯಿದೆ. ಅದನ್ನು ಮೀರಿ ನಿಲ್ಲಬೇಕಾದರೆ ಅಸಾಧಾರಣ ಪ್ರತಿಭೆ, ಪರಿಶ್ರಮ, ಶ್ರದ್ಧೆ, ಬದ್ಧತೆ, ಸವಾಲಿಗೆ ಎದೆಯೊಡ್ಡುವ ಶಕ್ತಿ ಇರಬೇಕಾಗುತ್ತದೆ. ಕಾರ್ತಿಕ್ಗೆ ಅವೆಲ್ಲ ಸಿಗಲಿ ಎನ್ನುವುದು ಇಲ್ಲಿನ ಹಾರೈಕೆ.