“ಕುಪ್ಪಳಿ’ಸುತಾ ಬಂದ ನೆನಪುಗಳು
ರಸಋಷಿ ಮನೆಯೊಳಗಿನ ಮಧುರಲೋಕ
Team Udayavani, Feb 15, 2020, 6:10 AM IST
ಕುಪ್ಪಳಿಯಲ್ಲಿನ ಕುವೆಂಪು ಮನೆಯ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು “ಬಾಣಂತಿ ಕೋಣೆ’ ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು, ಬಾಣಂತಿ ಮಂಚವೆಲ್ಲಾ ಕಂಡು ಇತ್ತೀಚೆಗಷ್ಟೇ ಬಾಣಂತನ ಮುಗಿಸಿಕೊಂಡವಳಿಗೆ ಎದೆತುಂಬಿ ಬಂತು…
ತೀರ್ಥಹಳ್ಳಿಯ ಸರ್ಕಲ್ಲಿನಲ್ಲಿ ಕುವೆಂಪು ಪ್ರತಿಮೆ ಕಂಡೊಡನೆ ಬೆಳಗ್ಗಿನಿಂದ ಕಟ್ಟಿಟ್ಟುಕೊಂಡ ಕಾತರಗಳೆಲ್ಲಾ ಕಂಬಳಿಹುಳದಿಂದ ಆಗಷ್ಟೇ ಹೊರಬಂದ ಮರಿಚಿಟ್ಟೆಯಂತೆ ಪಕಪಕನೆ ಕುಣಿಯತೊಡಗಿದವು. ಕುಪ್ಪಳ್ಳಿಯೆಡೆಗೆ ನಮ್ಮ ವಾಹನ ತಿರುಗಿದೊಡನೆ ಮಡಿಲಲ್ಲಿದ್ದ ಮರಿಗುಬ್ಬಿಯನ್ನೂ ಮರೆತು ರಸಋಷಿಯು ಓಡಾಡಿದ ಹಾದಿಯನ್ನು ಮನ ಕಣ್ತುಂಬಿಕೊಳ್ಳತೊಡಗಿತು. ಸುಮಾರು 15 ಕಿ.ಮೀ. ದೂರ ಪ್ರಯಾಣದ ನಂತರ “ಕವಿಶೈಲಕ್ಕೆ ದಾರಿ’ ಎಂಬ ಫಲಕ ಕಾಣಿಸಿತು. ಚಿಟ್ಟೆಗಳೆಲ್ಲಾ ಹಾರಿ ಅದಾಗಲೇ ಕುಪ್ಪಳಿ ಮನೆಯ ಹೆಬ್ಟಾಗಿಲು ದಾಟಿದ್ದವೆನೋ, ನಾವೂ ತಲುಪಿದೆವು. ಮರಿಗುಬ್ಬಿಯನ್ನು ಮನೆಯವರ ಬಳಿ ಬಿಟ್ಟು, “ಮನೆ ಮನೆ ನನ್ನ ಮನೆ…’ ಎಂದು ಗುನುಗುತ್ತಾ ರಸಋಷಿಯುಸಿರ ಹೊತ್ತ ಗುಡಿಯ ರಸಸ್ವಾದಿಸಲು ನಾನೊಬ್ಬಳೇ ಹೊರಟೆ.
ಅಕ್ಷರಬ್ರಹ್ಮನ ದೇಗುಲ: ದೇವಸ್ಥಾನದ ಹೊಸ್ತಿಲು ದಾಟುವಾಗ ನಮಸ್ಕರಿಸಿಯೇ ಮುಂದಡಿ ಇಡುವುದು ರೂಢಿ. ಇಲ್ಲಿಯೂ ಹಾಗೇ ಮಾಡಿದಾಗ ಕೆಲವರು ಪಿಸಕ್ಕೆಂದರು, ಆದರೆ ನನಗದು ದೇಗುಲವೇ, ಅವರು ಅಕ್ಷರಬ್ರಹ್ಮನೇ. ಮೂರು ಚೌಕಿಯ, ಮೂರಂತಸ್ತಿನ ಹೆಮ್ಮನೆಯ ಒಳಬರುತ್ತಿದ್ದಂತೆಯೇ ಗಮನ ಸೆಳೆದವಳು ಸೊಂಪಾಗಿ ಬೆಳೆದು ನಳನಳಿಸುತ್ತಿರುವ ತುಳಸಿ. ಕವಿಮನೆಯ ಹಳೆಬಾಗಿಲು, ದಿಂಡಿಗೆ, ಪತ್ತಾಸು, ಅವರು ಮದುವೆಯಾದ ಮಂಟಪ, ಲಗ್ನಪತ್ರಿಕೆಯ ಪ್ರತಿ, ಹಿತ್ತಲ ಬಾಗಿಲ ಬಳಿಯಿರುವ ಕವಿದಂಪತಿಗಳ ದೊಡ್ಡ ಭಾವಚಿತ್ರ ಎಲ್ಲವೂ ಕಣ್ಮನಗಳಿಗೆ ಮಧುರಾನುಭೂತಿಯುಂಟು ಮಾಡಿತು. ಅದೆಷ್ಟೋ ಹೊತ್ತು ಆ ಭಾವಚಿತ್ರದೆದುರು ಸುಮ್ಮನೆ ನಿಂತಿದ್ದೆ ಭಾವಪರವಶಳಾಗಿ. ತನ್ನ ಮನೆಗೆ ಬಂದ ಕೂಸನ್ನು ಅವರೀರ್ವರು ಮಾತನಾಡಿಸುತ್ತಾ ಎದುರು ನಿಂತಿದ್ದಾರೆ ಎಂಬ ಭಾವದಲಿ ಕಣ್ಮುಚ್ಚಿದೆ, ಆ ಅಮೃತ ಘಳಿಗೆ ನನ್ನದಾಯಿತು.
ಬಾಣಂತಿ ಕೋಣೆಯೊಳಗೆ…: ಕವಿ ಉಪಯೋಗಿಸಿದ ದಿವಾನದ ಮೇಲಿದ್ದ ಹಳೆಯ ಕಾಲದ ಟೆಲಿಫೋನ್ ನೋಡಿ ಉತ್ಸುಕಳಾಗಿ ಅದನ್ನೊಮ್ಮೆ ಮುಟ್ಟಿಯೇ ಬಿಟ್ಟೆ. ಯಾವುದನ್ನೂ ಯಾರೂ ಮುಟ್ಟಬಾರದೆಂಬ ಮೂಲ ನಿಯಮ ಆ ಹೊತ್ತಲ್ಲಿ ಅರಿವಿಗೇ ಬರಲಿಲ್ಲ. ಕವಿಯ ಸ್ಪರ್ಶದ ಅನುಭವವಾಗುವ ಮೊದಲೇ ಕೈ ಹಿಂತೆಗೆದೆ. ನಂತರ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು “ಬಾಣಂತಿ ಕೋಣೆ’ ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು, ಬಾಣಂತಿ ಮಂಚವೆಲ್ಲಾ ಕಂಡು ಇತ್ತೀಚೆಗಷ್ಟೇ ಬಾಣಂತನ ಮುಗಿಸಿಕೊಂಡವಳಿಗೆ ಎದೆತುಂಬಿ ಬಂತು. ಹೊರಗಿರುವ ಮರಿಗುಬ್ಬಿಯ ನೆನಪಾಗಿ ಅಲ್ಲೇ ಇದ್ದ ಕಿಟಕಿಯಲ್ಲಿ ಇಣುಕಿದರೆ ಅವ ರೆಕ್ಕೆ ಬಲಿಯುತ್ತಿರುವ ಹಕ್ಕಿಯಂತೆ ಬೇರೆ ಪುಟಾಣಿಗಳೊಂದಿಗೆ ನಲಿಯುತ್ತಿದ್ದ.
ಮನ ನಿರಾಳವಾಗಿ ಮುಂದುವರಿದೆ. ಬಾಣಂತಿ ಕೋಣೆಯ ಪಕ್ಕದ ಕೋಣೆಯಲ್ಲಿ ಕವಿಯ ಕುಟುಂಬಸ್ಥರ ಅಪರೂಪದ ಸುಂದರ ಭಾವಚಿತ್ರಗಳೂ, ಅವರ “ಫ್ಯಾಮಿಲಿ ಟ್ರೀ’ ನಕ್ಷೆಯೂ ಇತ್ತು. ನಂತರದ ಅಡುಗೆ ಮನೆಯಲ್ಲಿ ಕೈಬಟ್ಟಲು, ಕಂಚಿನ ಲೋಟಗಳು, ಹಾಳೆಟೊಪ್ಪಿ, ಮಡಿಕೆಗಳು, ಚರಿಗೆ, ಕಡಗೋಲು ಮುಂತಾದ ಕವಿಮನೆಯ ಎಲ್ಲಾ ದಿನಬಳಕೆಯ ವಸ್ತುಗಳೇ ತುಂಬಿದ್ದವು. ಅಲ್ಲಿಂದ ಉಪ್ಪರಿಗೆ ಮೆಟ್ಟಿಲ ಹತ್ತಿ ಹೊರಟರೆ ಕಂಡದ್ದು ಸಣ್ಣ ಸಂಗ್ರಹಾಲಯ ಅವರು ಉಪಯೋಗಿಸಿದ ಪೆನ್ನು, ಕೋಟು, ಸ್ವೆಟರ್, ಚಪ್ಪಲಿ, ಕೂದಲುಗಳು, ಪಂಚೆ- ಹೀಗೆ ಕವಿ ಬಳಸಿದ್ದರೆನ್ನಲಾದ ವಸ್ತುಗಳ ಕಂಡೊಡನೆ ಪರವಶಳಾದೆ.
ಅದನ್ನು ನೋಡುತ್ತಾ, ಆ ಕಂಪನ್ನು ಸವಿಯುತ್ತಾ ಮಂಡಿಯೂರಿ ಕುಳಿತೇ ಬಿಟ್ಟಿದ್ದೆ. ಅದೆಲ್ಲಾ ಕೇವಲ ವಸ್ತುವಾಗಿರಲಿಲ್ಲ ನನಗೆ, ಅದೊಂದು ಹೇಳಲಾಗದ ಭಾವ, ಅಕ್ಷರಕ್ಕೆ ನಿಲುಕದ್ದು. ಅವರಿಗೆ ಸಂದ ಅನೇಕಾನೇಕ ಪ್ರಶಸ್ತಿಗಳನ್ನೆಲ್ಲಾ ನೋಡಿ ಕಣ್ತುಂಬಿಕೊಂಡು, ಹೊರಬಂದು, ಮತ್ತೂಂದು ಉಪ್ಪರಿಗೆ ಮೆಟ್ಟಿಲೇರಿದರೆ, ಅಲ್ಲೊಂದು ಸಾರಸ್ವತ ಲೋಕವೇ ಧರೆಗಿಳಿದಂತಿತ್ತು. ಅವರು ಬರೆದ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ಆ ಅಕ್ಷರಗಳ ಸಂತೆಯ ಘಮಲನ್ನು ಒಳಗಿಳಿಸಿಕೊಳ್ಳುತ್ತಾ ಅಲ್ಲಿಂದ ಹೊರಬಂದರೆ ಮತ್ತೂಂದು ಏಣಿ ಕಾಣಿಸಿತು. ಆ ಪುಟಾಣಿ ಏಣಿ ಹತ್ತಿದಾಗ ಕಾಣಿಸಿದ್ದೇ ಕವಿಯ ಪ್ರೀತಿಯ ಸ್ಥಳ, ನನ್ನದೂ.
ಅದು ದೈವಿಕ ಜಾಗ: ವಿಶಾಲವಾದ ಕಿಟಕಿ, ಒಂದು ಕಡೆ ಗೋಡೆಯಿಲ್ಲದ ತೆರೆದ ಕೋಣೆ, ಕವಿ ಬರೆಯಲು- ಓದಲು ಬಳಸುತ್ತಿದ್ದ ಆರಾಮ ಖುರ್ಚಿ ಇವಿಷ್ಟೇ ಅಲ್ಲಿದ್ದುದು, ನೋಡುಗರಿಗೆ. ನನಗೆ ಮಾತ್ರ ಅದು ಅಭೂತಪೂರ್ವ ಅನುಭವ ನೀಡಿದ ದೈವಿಕ ಜಾಗ ಅನಿಸಿತ್ತು. ಮನಸ್ಸಿಲ್ಲದ ಮನಸ್ಸಿಂದ ಅಲ್ಲಿಂದ ಕಾಲೆತ್ತಿಟ್ಟಾಗ ಮನದೊಳು
“ರನ್ನನು ಪಂಪನು ಬಹರಿಲ್ಲಿ
ಶ್ರೀ ಗುರುವಿಹನಿಲ್ಲಿ
ಮಿಲ್ಟನ್, ಷೆಲ್ಲಿ ಬಹರಿಲ್ಲಿ
ಕವಿವರಹರಿಹರಿಲ್ಲಿ,
ಮುದ್ದಿನ ಹಳ್ಳಿ
ಕುಪ್ಪಳ್ಳಿ,
ಬಾ ಕಬ್ಬಿಗ ನಾನಿಹೆನಿಲ್ಲಿ!’ ಎಂಬ ಸಾಲಿನದ್ದೇ ನರ್ತನ. ತವರನ್ನು ಬಿಟ್ಟು ಹೊರಟ ಮಗಳಂತೆ ಮತ್ತೆ ಮತ್ತೆ ಕವಿಮನೆಯನ್ನು ನೋಡುತ್ತಾ ಹಿಂತಿರುಗಿದೆ.
* ಶುಭಶ್ರೀ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ