ಸಾಧಕನ ಶಕ್ತಿ ಏಕಾಂತದಲ್ಲಿದೆ…
Team Udayavani, Apr 27, 2019, 6:10 AM IST
ಮಿತಭಾಷಿ ಯಾವತ್ತೂ ಸುಖವಾಗಿಯೇ ಇರುತ್ತಾನೆ. ಹಿತಮಿತವಾದ ಮಾತಿನಿಂದ ಕಲಹವೂ ಉಂಟಾಗುವುದಿಲ್ಲ; ಅನವಶ್ಯಕವಾಗಿ ಸಮಯವೂ ಹಾಳಾಗುವುದಿಲ್ಲ. ಮಾತು ನಮ್ಮ ವ್ಯಕ್ತಿಣ್ತೀದ ಕನ್ನಡಿ ಇದ್ದಹಾಗೆ. ಅದು ನಮ್ಮ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮೊಳಗಿನ ಸಂಸ್ಕಾರವನ್ನೂ ಪ್ರತಿಬಿಂಬಿಸುತ್ತದೆ. ಹಾಗಾಗಿ, ಮಾತು ನಮ್ಮತನವನ್ನು ಹಾಳುಗೆಡವದಂತೆ ಜಾಗರೂಕರಾಗಿರಬೇಕು.
ಮುನಿಯಾದವನು ಮೊದಲು ಒಬ್ಬಂಟಿಯಾಗಿರಬೇಕು. ಇರುವ ಜಾಗದಲ್ಲಿ ಮಮತೆ ಇರಬಾರದು. ಎಚ್ಚರಿಕೆಯಿಂದ ಇರಬೇಕು. ಏಕಾಂತದಲ್ಲಿ ಅಥವಾ ಗುಹೆಯಲ್ಲಿ ವಾಸಿಸಬೇಕು. ತನ್ನ ಆಚಾರ-ವ್ಯವಹಾರದಿಂದ ತನ್ನನ್ನು ಯಾರ ಮುಂದೆಯೂ ಪ್ರಕಟಿಸಬಾರದು. ಮಿತಭಾಷಿಯಾಗಿರಬೇಕು.
ಯಾವೊಬ್ಬನೂ ಏಕಾಂತವಿಲ್ಲದೆ ಮುನಿಯಾಗಲಾರ. ಯಾವುದೇ ಮೋಹಕ್ಕೊಳಗಾಗದೆ, ಸ್ವಂತ ಬಿಡಾರವನ್ನು ಕಟ್ಟಿಕೊಳ್ಳದೆ, ಗುಂಪು ಅಥವಾ ಮಂಡಳಿಯನ್ನು ಕಟ್ಟಿಕೊಳ್ಳದೆ, ಎಲ್ಲಿ ಆಗುತ್ತದೆಯೋ ಅಲ್ಲಿ ವಾಸಮಾಡಬೇಕು.
ಹೇಗೆ ಹಾವು, ಇಲಿ ಕೊರೆದ ಬಿಲದಲ್ಲಿ ವಾಸಮಾಡುವುದೋ ಹಾಗೆ ಬದುಕಿಬಿಡಬೇಕು. ಒಂದು ಪ್ರದೇಶ ಅಥವಾ ಸ್ಥಳದ ಮೇಲೆ ಮಮಕಾರ ಇಟ್ಟು ಕೊಳ್ಳದೆ ಅದನ್ನು ತೊರೆಯಲು ಸಿದ್ಧನಿರಬೇಕು. ಮಾತು ಮನಸ್ಸನ್ನು ಕೆಡಿಸುತ್ತದೆ, ಹಾಗಾಗಿ ಮುನಿಯಾದವ ಮಿತಭಾಷಿಯಾಗಿರಬೇಕು. ಇದು ಮುನಿಗೆ ಸಂಬಂಧಪಟ್ಟು ಹೇಳಿದ ಪಾಠವಾದರೂ ಸಾಮಾನ್ಯ ಮಾನವನಿಗೂ ಅನ್ವಯಿಸುತ್ತದೆ.
ಮಮತೆ ಬಂಧನದಿಂದ ದೂರವಿರಿ
ಮೊದಲನೆಯದಾಗಿ ಮಿತಭಾಷಿ ಯಾವತ್ತೂ ಸುಖವಾಗಿಯೇ ಇರುತ್ತಾನೆ. ಹಿತಮಿತವಾದ ಮಾತಿನಿಂದ ಕಲಹವೂ ಉಂಟಾಗುವುದಿಲ್ಲ; ಅನವಶ್ಯಕವಾಗಿ ಸಮಯವೂ ಹಾಳಾಗುವುದಿಲ್ಲ. ಮಾತು ನಮ್ಮ ವ್ಯಕ್ತಿಣ್ತೀದ ಕನ್ನಡಿ ಇದ್ದಹಾಗೆ. ಅದು ನಮ್ಮ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮೊಳಗಿನ ಸಂಸ್ಕಾರವನ್ನೂ ಪ್ರತಿಬಿಂಬಿಸುತ್ತದೆ. ಹಾಗಾಗಿ, ಮಾತು ನಮ್ಮತನವನ್ನು ಹಾಳುಗೆಡವದಂತೆ ಜಾಗರೂಕರಾಗಿರಬೇಕು. ಇನ್ನೊಂದು ಜಾಗದ ಮೇಲಿನ ಮಮತೆಯೂ ನಮ್ಮ ಬದುಕನ್ನು ಸಂಕೀರ್ಣಗೊಳಿಸಿಬಿಡುತ್ತದೆ.
ಇಲ್ಲಿ ಜಾಗ ಅಂದರೆ ಒಂದು ವಿಶಾಲವಾದ ಪ್ರದೇಶ, ಅಲ್ಲಿನ ಜನ, ಆಚಾರ-ವಿಚಾರ, ಬಂಧು-ಬಾಂಧವರು ಎಲ್ಲವೂ ಸೇರುತ್ತದೆ. ಯಾವುದೇ ಕ್ಷಣದಲ್ಲಿ ಇವೆಲ್ಲವನ್ನು ಬಿಟ್ಟು ಹೊರಡಬೇಕಾಗಿ ಬರಬಹುದು. ಇಂದಿನ ಬದುಕಿನ ರೂಪವೇ ಹಾಗಿದೆ. ಜಾಗದ ಮೇಲಿನ ಮಮತೆಯಿಂದ ಬಂಧಿಸಲ್ಪಟ್ಟರೆ ಜೀವನದ ಸಾಧನೆ ಅಲ್ಲಿಯ ಕರಗಿ ಹೋಗಬಹುದು. ಏಕಾಂಗಿಯಾಗಿ ಬದುಕಲು ಮುನಿಗಳಿಗೆ ಮಾತ್ರ ಸಾಧ್ಯ. ಆದರೆ ಕೆಲವೊಂದು ಸಾಧನೆಗೆ ಹುಲುಮಾನವನೂ ಏಕಾಂಗಿಯಾಗಬೇಕಾಗುತ್ತದೆ.
ಕೆಲವು ಸಾಧನೆಯ ಮಾರ್ಗಗಳು ಏಕಾಂತವನ್ನು ಸಿದ್ಧಿಸಿಕೊಂಡಾಗ ಮಾತ್ರ ಕಾಣಿಸುತ್ತವೆ. ಏಕಾಂತ ಎಂಬುದು ಏಕಾಗ್ರತೆ. ಒಂದು ನಿರ್ದಿಷ್ಟತೆ. ಇದನ್ನು ಮುರಿಯಲು ಚಂಚಲಗೊಳಿಸುವ ಅಂಶಗಳು ಬೇಗನೆ ನಮ್ಮನ್ನು ತಗಲಾಕಿಕೊಂಡು ಬಿಡುತ್ತವೆ. ಎಚ್ಚರಿಕೆ ಅತ್ಯಗತ್ಯ. ಮಮತೆ ಮನಸ್ಸನ್ನು ವಿಶಾಲಗೊಳಿಸಲು ಅಡ್ಡಿಯಾದರೆ, ಮಾತು ಮನಸ್ಸನ್ನು ಕೆಡಿಸುವ ಸಂಭವವೇ ಹೆಚ್ಚು. ಹಾಗಾಗಿ, ಈ ಎಲ್ಲ ಪಾಠಗಳು ಇಂದಿನ ಬದುಕಿಗೆ ಮಾರ್ಗದರ್ಶಕ.
ಬದುಕಿಗೆ ಜ್ಞಾನ ಅಗತ್ಯ
ಪ್ರಪಂಚದ ಎಲ್ಲಾ ಕಡೆಯೂ ಸುತ್ತಬೇಕು, ಎಲ್ಲ ಜ್ಞಾನವನ್ನು ಹೊಂದಬೇಕು. ಆದರೆ, ಎಷ್ಟೇ ಜ್ಞಾನವಿದ್ದರೂ ಅದು ಅರಿವಿಗೆ ಬಾರದೇ ಇದ್ದರೆ ಏನೂ ಪ್ರಯೋಜವಿಲ್ಲ. ಈ ಅರಿವಿಗೆ ಏಕಾಂತ ಅನುಕೂಲ. ಒಳ್ಳೆಯ ನಿರ್ಧಾರಕ್ಕೆ ಹಲವರ ಸಲಹೆ, ಅನುಭವಗಳು ಅನುಕೂಲವಾದರೂ ನಮ್ಮ ನಿರ್ಧಾರ ಏನು? ಎಂಬುದು ನಾವೇ ಖುದ್ದಾಗಿ, ಏಕಾಂತದಲ್ಲಿ ಯೋಚಿಸಿಯೇ ಆಗಬೇಕು.
ಅರ್ಥ ಇಷ್ಟೇ: ಅಪರಿಮಿತವಾದ ಜ್ಞಾನ ಬದುಕಿಗೆ ಅಗತ್ಯ, ಅದಕ್ಕೆ ಬದುಕು ನಿಂತ ನೀರಿನಂತಾಗದೆ, ಹರಿವ ನೀರಾಗಬೇಕು. ಮುಂದೆ ನಡೆದವರ ಹೆಜ್ಜೆ ಗುರುತು ಗುರಿಗೊಂದು ತೋರು ಬೆರಳು. ನಮ್ಮದೇ ಆದ ಗುರಿಯೂ ಇರಬೇಕು; ದಾರಿಯೂ ಹೊಸತಾಗಿರಬೇಕು. ಪ್ರತಿಕ್ಷಣವೂ ಮುಕ್ತಿಯ ಅನುಭವವನ್ನೇ ನೀಡಬೇಕು.
— ವಿಷ್ಣು ಭಟ್ ಹೊಸ್ಮನೆ