ಭಾರತ-ಪಾಕ್ ಪಂದ್ಯ: ರಾಹುಲ್ ಜತೆ ಅಭಿಮಾನಿಯ ತುಳು ಮಾತು!
Team Udayavani, Jun 22, 2019, 10:26 AM IST
ಭಾರತ-ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಲ್ಲೊಂದು ಕುತೂಹಲವಿರುತ್ತದೆ. ಏನಾದರೂ ವಿಶೇಷತೆಗೆ ಸಾಕ್ಷಿಯಾಗಿರುತ್ತದೆ. ಅಂತೆಯೇ ಮ್ಯಾಂಚೆಸ್ಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಭಿಮಾನಿಯೊಬ್ಬ ಟೀಂ ಇಂಡಿಯಾದ ತಾರಾ ಆಟಗಾರ ಕೆ.ಎಲ್.ರಾಹುಲ್ ಜತೆ ತುಳುವಿನಲ್ಲಿ ಸಂಭಾಷಣೆ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯ ನೋಡಲು ಬಂದ ಮಂಗಳೂರಿನ ಇಬ್ಬರು ಗ್ಯಾಲರಿಯಲ್ಲಿ ಕೂತು ರಾಹುಲ್ ಅವರನ್ನು ಉಲ್ಲೇಖೀಸಿ ತುಳುವಿನಲ್ಲೇ ಮಾತನಾಡಿದ್ದಾರೆ. ಮಲೇಷ್ಯಾದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನ ಕದ್ರಿಯ ರೋಹನ್ ಶೆಟ್ಟಿ ಮತ್ತು ಉರ್ವಾದ ಸುಶಾಂತ್ ಅವರು ಕ್ರಿಕೆಟ್ ವೀಕ್ಷಣೆಗೆ ಮ್ಯಾಂಚೆಸ್ಟರ್ಗೆ ತೆರಳಿದ್ದರು. ಡೀಪ್ ಸ್ಕೆ Ìàರ್ಲೆಗ್ ಸ್ಟಾಂಡ್ನಲ್ಲಿ ಕ್ರಿಕೆಟ್ ವೀಕ್ಷಿಸುವಾಗ ಅಲ್ಲೇ ಕೂಗಳತೆ ದೂರದಲ್ಲಿ ರಾಹುಲ್ ಅವರು ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ರಾಹುಲ್ ಕೂಡ ಮಂಗಳೂರಿನವರಾದ್ದರಿಂದ ಅವರನ್ನು ಉಲ್ಲೇಖೀಸಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ.
ಎಂಕ್ಲೆಗೆ ಸೆಂಚುರಿ ಬೋಡು (ನಮಗೆ ಶತಕ ಬೇಕು):
ರಾಹುಲ್ ಎಂಚ ಉಲ್ಲರ್ .. ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು .. ಎಂಕ್ಲ ಕುಡ್ಲಡ್ ಬೈದ’ (ರಾಹುಲ್ ಹೇಗಿದ್ದೀರಿ, ರಾಹುಲ್ ನಮಗೆ ನಿಮ್ಮ ಶತಕ ನೋಡಬೇಕು .. ನಾವು ಮಂಗಳೂರಿನಿಂದ ಬಂದಿದ್ದೇವೆ) ಎಂದು ರೋಹನ್ ಶೆಟ್ಟಿ ಅವರು ರಾಹುಲ್ ಅವರಿಗೆ ಕೇಳುವಂತೆ ಹೇಳಿದ್ದಾರೆ. ಸುಶಾಂತ್ ಅವರು ವೀಡಿಯೊ ಮಾಡಿದ್ದಾರೆ. ಇವರ ಮಾತು ಕೇಳಿದ ರಾಹುಲ್ ಇವರತ್ತ ಕೈ ಬೀಸಿದ್ದಾರೆ.
ರೋಹನ್ ಶೆಟ್ಟಿ ಅವರು ಉದಯವಾಣಿ’ ಜೊತೆ ಮಾತನಾಡಿ, ನಾನು ಮತ್ತು ನನ್ನ ಸ್ನೇಹಿತ ವಿಶ್ವಕಪ್ ಕ್ರಿಕೆಟ್ನ ಭಾರತ ತಂಡವಾಡಿದ ಕಳೆದ ಮೂರು ಪಂದ್ಯಕ್ಕೂ ಆಗಮಿಸಿದ್ದೆವು. ಪಾಕ್ ವಿರುದ್ಧದ ಪಂದ್ಯಕ್ಕೆ ಕೆಲವು ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದೆವು. ರಾಹುಲ್ ಅವರು ನಾವು ಕುಳಿತ ಗ್ಯಾಲರಿ ಪಕ್ಕದಲ್ಲಿಯೇ ಕ್ಷೇತ್ರರಕ್ಷಣೆಯಲ್ಲಿದ್ದರು. ಹೀಗಾಗಿ ತುಳು ಭಾಷೆಯಲ್ಲೇ ಮಾತನಾಡಿದೆವು’ ಎಂದರು.
ರಾಹುಲ್ ಅವರ ಬಾಲ್ಯದ ಕ್ರಿಕೆಟ್ ಕೋಚ್ ಜಯರಾಜ್ ಅವರು ಉದಯವಾಣಿ’ಗೆ ಪ್ರತಿಕ್ರಿಯಿಸಿ, ರಾಹುಲ್ಗೆ ಬಾಲ್ಯದಲ್ಲಿಯೇ ಕ್ರಿಕೆಟ್ ಎಂದರೆ ಆಸಕ್ತಿ. ನೆಹರೂ ಮೈದಾನದಲ್ಲಿ ಕ್ರಿಕೆಟ್ ಕಲಿಯುವ ವೇಳೆ ತನ್ನ ಸಹಪಾಠಿಗಳೊಂದಿಗೆ ತುಳು ಭಾಷೆಯಲ್ಲೇ ಹಾಸ್ಯ ಚಟಾಕಿ ಹಾರಿಸುತ್ತಿದ್ದರು’ ಎಂದು ನೆನಪಿಸಿದರು.
ರಾಹುಲ್ ತುಳು ಭಾಷೆಯನ್ನು ಸರಾಗವಾಗಿ ಮಾತನಾಡುತ್ತಾನೆ. ಅವನಿಗೆ ಮಂಗಳೂರು ಮೂಲದ ಅನೇಕ ಸ್ನೇಹಿತರಿದ್ದಾರೆ. ಅವರ ಜತೆ ಬೆರೆತು ತುಳು ಭಾಷೆಯಲ್ಲೇ ಮಾತನಾಡುತ್ತಾನೆ. ಮಂಗಳೂರಿಗ ಎಂಬ ಹೆಮ್ಮೆ ಅವನಿಗಿದೆ’
– ರಾಜೇಶ್ವರಿ, ಕೆ.ಎಲ್. ರಾಹುಲ್ ತಾಯಿ
ನವೀನ್ ಭಟ್ ಇಳಂತಿಲ