ತಂಗಳವಾಡಿಯ ವೀರಾಂಜನೇಯ
Team Udayavani, Jul 28, 2018, 11:47 AM IST
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಆನಂದಪುರಂ ಹೋಬಳಿಯ ತಂಗಳವಾಡಿ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವಿದೆ. ಆನಂದಪುರದಲ್ಲಿ ಕೆಳದಿ ಅರಸರ ಆಳ್ವಿಕೆ ಇತ್ತು. ಆಗ ಕೆಲವು ವರ್ಷಗಳ ಕಾಲ ಊರಿನ ಕೋಟೆ ಅಭಿವೃದ್ಧಿ ಮತ್ತು ಆಡಳಿತದ ಮುಖ್ಯ ಕೇಂದ್ರದ ಸ್ಥಾಪನೆ ನಡೆದಿತ್ತು. ಕೆಳದಿ ಅರಸರು ಆಗಾಗ ಆನಂದಪುರಂ ಸುತ್ತಮುತ್ತಲ ಗ್ರಾಮಗಳ ಮುಖ್ಯಸ್ಥರ ಸಭೆ ನಡೆಸುತ್ತಿದ್ದರು. ತಂಗಳವಾಡಿಯ ಈ ಪ್ರದೇಶದಲ್ಲಿ ಹೊಸಕೊಪ್ಪ, ಕಣ್ಣೂರು, ಗಿಳಾಲಗುಂಡಿ ಸೇರಿದಂತೆ ಸುತ್ತಮುತ್ತಲ ವಿಶಾಲವಾದ ಭತ್ತದ ಗದ್ದೆಯ ಪ್ರದೇಶ
ವಿತ್ತು. ಈ ಗ್ರಾಮದಲ್ಲಿ 5-6 ಮನೆಗಳಲ್ಲಿ ವಾಡೆ ಇತ್ತು. ವೀರಶೈವ ಮತದ ಅಯ್ಯನವರು ಸಹ ಈ ವಾಡೆಯಲ್ಲಿದ್ದರಂತೆ. ಊರ ಪ್ರಮುಖರೊಬ್ಬರಿಗೆ ಸುತ್ತಮುತ್ತಲ ಪ್ರದೇಶದ ಸುಂಕ ಸಂಗ್ರಹ ಇತ್ಯಾದಿಗಳ ಉಸ್ತುವಾರಿ ನೀಡಲಾಗಿತ್ತು.
ಕೆಳದಿ ಅರಸರು ತಮ್ಮಗಳ ವಾಡೆಯನ್ನು “ತಂಗಳವಾಡೆ’ ‘ತಮ್ಮ ವಾಡೆ’ ಎಂದು ಪದೆ ಪದೇ ಬಳಕೆ ಮಾಡುತ್ತಿದ್ದರು. ಹೀಗಾಗಿ ತಂಗಳವಾಡಿ ಎಂಬ ಹೆಸರು ಉಳಿದುಕೊಂಡಿತು ಎಂಬ ಪ್ರತೀತಿ ಇದೆ.
ಗಿಳಾಲಗುಂಡಿಯಿಂದ ಹೊಸಕೊಪ್ಪ ,ಕಣ್ಣೂರು,ಗೌತಮಪುರ, ತ್ಯಾಗರ್ತಿ ಭಾಗವನ್ನು ತಲುಪಬೇಕಾದರೆ ಈ ಗ್ರಾಮದ ಮೂಲಕವೇ ಸಾಗಬೇಕಿತ್ತು. ಆಗ ಬಹು ಪ್ರಾಚೀನ ಕುದುರೆ ಗಾಡಿ ರಸ್ತೆ ಇತ್ತು. ಅಲ್ಲದೆ ಹುಂಚದ ಜಿನದತ್ತ ಅರಸನ ಆಳ್ವಿಕೆ ಕಾಲದಲ್ಲಿ ಸಹ ಮುಗುಡ್ತಿ-ಮಾದಾಪುರ ಮೂಲಕ ತಂಗಳವಾಡಿ ಗ್ರಾಮ ದಾಟಿ ತ್ಯಾಗರ್ತಿ ತಲುಪಲು ಸಂಪರ್ಕ ರಸ್ತೆ ಇತ್ತು ಎಂಬ ಪ್ರತೀತಿ ಇದೆ.
ತುಂಬಾ ಹಿಂದೆ, ದಟ್ಟ ಕಾಡಿನ ಪ್ರದೇಶ ಇದಾಗಿದ್ದು ಜನ ವಸತಿ ಅತಿ ವಿರಳವಾಗಿತ್ತು. ಮಾರ್ಗದಲ್ಲಿ ಸಂಚರಿಸುತ್ತಿದ್ದ ತಪಸ್ವಿಯೊಬ್ಬರಿಗೆ ಹುತ್ತದ ಮಧ್ಯೆ ಇರುವ ಈ ಆಂಜನೇಯನ ಮೂರ್ತಿ ಕಂಡಿತು. ಅವರು ಇಲ್ಲಿಯೇ ಕೆಲಕಾಲ ನೆಲೆಸಿ ಆಂಜನೇಯನನ್ನು ಸ್ತುತಿಸುತ್ತಾ ಹುತ್ತ ತೆರವುಗೊಳಿಸಿ ಪೂಜಿಸಲು ಆರಂಭಿಸಿದರು. ಹಲವು ವರ್ಷಗಳ ಕಾಲ ಈ ದೇವರು ಗುಡಿ ಇಲ್ಲದೆ, ರಸ್ತೆಯ ಪಕ್ಕ ಬಯಲಿನಲ್ಲಿ ಪೂಜಿಸಲ್ಪಡುತ್ತಿತ್ತು. ನಂತರ ಭಕ್ತರೆಲ್ಲ ಸೇರಿ ಚಿಕ್ಕ ಗುಡಿ ನಿರ್ಮಿಸಿದರು.
ಸುತ್ತಮುತ್ತಲ ಗ್ರಾಮಗಳಿಗೆ ಈ ಆಂಜನೇಯನದ್ದೇ ರಕ್ಷಣೆ ಅನ್ನೋ ನಂಬಿಕೆ ಇದೆ. ತಂಗಳವಾಡಿ, ಮೆಣಸಿನ ಸರ ಗ್ರಾಮಗಳ ನಡುವೆ ಭತ್ತದ ಗದ್ದೆ, ಹಕ್ಕಲು ಪ್ರದೇಶದಲ್ಲಿ ಸುಮಾರು 5 ರಿಂದ 6 ಅಡಿ ಎತ್ತರದ ಹಲವು ಶಿಲಾ ಕಲ್ಲುಗಳು ನಿಂತ ಭಂಗಿಯಲ್ಲಿವೆ. ಈ ಪ್ರದೇಶದಲ್ಲಿ ಕಳ್ಳತನ ಮಾಡಿ ಹೊರ ಹೋಗುವ ಸಂದರ್ಭದಲ್ಲಿ ಈ ಆಂಜನೇಯನೇ ಅಡ್ಡಗಟ್ಟಿ ಕಳ್ಳರನ್ನು ಕಲ್ಲುಗಳನ್ನಾಗಿ ನಿಲ್ಲಿಸಿದ್ದಾನೆ ಎಂಬ ಕಥೆಗಳೂ ಇವೆ. ಈಗಲೂ ಸಹ ಹೊಸಕೊಪ್ಪ,ಕಣ್ಣೂರು, ತಂಗಳವಾಡಿ ಗ್ರಾಮಗಳಲ್ಲಿ ಕಳ್ಳತನಗಳು ನಡೆಯುವುದಿಲ್ಲ. ಈ ದೇವರ ಮೇಲಿನ ಭಯದಿಂದ ಕಳ್ಳರು ಸಹ ಇಲ್ಲಿ ಓಡಾಡುವುದಿಲ್ಲ ಎನ್ನಲಾಗುತ್ತದೆ.
ಈ ಗ್ರಾಮದ ಮೇಲ್ಭಾಗದ ಗುಡ್ಡದಲ್ಲಿ ಶ್ರೀ ಭಾಗೆÂàಶ್ವರ ದೇವರ ಆಲಯ ಪಾಳು ಬಿದ್ಧ ಸ್ಥಿತಿಯಲ್ಲಿದೆ. ಹಲವು ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಭಾಗೆÂàಶ್ವರ ದೇವಾಲಯದ ಪರಿವಾರ ದೇವತೆಗಳಿಗೆ ಸಂಬಂಧಿಸಿದಂತೆ ಮುಖ್ಯ ದೇವಾಲಯ ಈ ಆಂಜನೇಯ ದೇಗುಲ ಎಂಬ ನಂಬಿಕೆ ಇದೆ.
ಹಲವು ವರ್ಷಗಳಿಂದ ದೇವರ ಗುಡಿ ಉರುಳಿ ಬಿದ್ದು ಶಿಥಿಲಾವಸ್ಥೆಯಲ್ಲಿತ್ತು. ಗ್ರಾಮದಲ್ಲಿ 28-30 ಮನೆಗಳಿದ್ದು ಪ್ರತಿ ಕುಟುಂಬದರವರೂ ಕೃಷಿ, ಜಾನುವಾರು ಸಾಕಣೆ ,ಕುಟುಂಬ ಅಶಾಂತಿ ಹೀಗೆ ಪದೇ ಪದೇ ತೊಂದರೆ ಅನುಭವಿಸುತ್ತಿದ್ದರು. ಗ್ರಾಮದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಈ ಆಂಜನೇಯ ದೇವಾಲಯ ಜಿರ್ಣೋದ್ಧಾರ ಮತ್ತು ನಿತ್ಯ ಪೂಜೆಯ ವ್ಯವಸ್ಥೆ ಆಗಬೇಕು ಎಂದು ಅಷ್ಟಮಂಗಲ ಪ್ರಶ್ನಾ ಚಿಂತನದಿಂದ ತಿಳಿದು ಬಂದಿತು.
2010ರಲ್ಲಿ ಗ್ರಾಮಸ್ಥರೆಲ್ಲ ಸೇರಿ ದೇವಾಲಯ ಜೀರ್ಣೋದ್ಧಾರ ನಡೆಸಿ, ಇದರ ಸನ್ನಿಧಾನದಲ್ಲಿ ನಾಗದೇವತೆಯನ್ನೂ
ಸ್ಥಾಪಿಸಿ, 2011 ರಲ್ಲಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಸಿದರು. ಆನಂತರದಲ್ಲಿ, ಗ್ರಾಮದ ಪ್ರತಿಯೊಂದು ಕುಟುಂಬದಲ್ಲಿ ಉತ್ತಮ ಕೃಷಿ ಫಸಲು, ಅಭಿವೃದ್ಧಿ ಮತ್ತು ನೆಮ್ಮದಿ ಕಂಡು ಬಂತು. ಈ ಬದಲಾವಣೆಗೂ ಆಂಜನೇಯನೇ ಕಾರಣ ಅನ್ನೋದು ಇಲ್ಲಿನವರ ನಂಬಿಕೆ.
ಪೂರ್ವಾಭಿಮುಖವಾಗಿರುವ ಈ ದೇವಾಲಯದಲ್ಲಿ 5 ಅಡಿ ಎತ್ತರದ ವಿಗ್ರಹವಿದೆ. ವಿಗ್ರಹ ಅಭಯ ಪ್ರದಾಯಕ ಭಂಗಿಯಲ್ಲಿದೆ. ವಿಗ್ರಹದ ಪಾದದ ಬಳಿ ರಾವಣನ ಚಿತ್ರವಿರುವುದು ವಿಶೇಷ. ಪ್ರತಿನಿತ್ಯ ಬೆಳಗ್ಗೆ ಸ್ಥಳೀಯ ಕುಟುಂಬಸ್ಥರೊಬ್ಬರು ಪೂಜೆ ನಡೆಸುತ್ತಾರೆ. ಪ್ರತಿ ಶನಿವಾರ ಮತ್ತು ಮಂಗಳವಾರ ಗೌತಮಪುರದಿಂದ ಅರ್ಚಕರು ಆಗಮಿಸಿ ಪೂಜೆ ನಡೆಸುತ್ತಾರೆ. ಶ್ರಾವಣಮಾಸದಲ್ಲಿ ಪ್ರತಿ ಸೋಮವಾರ ಮತ್ತು ಶನಿವಾರ ಪಂಚಾಮೃತಾಭಿಷೇಕ ಪೂಜೆ, ಕಾರ್ತಿಕ ಮಾಸದಲ್ಲಿ ಪ್ರತಿ ಶನಿವಾರ ಸಂಜೆ ದೀಪೋತ್ಸವ ನಡೆಯುತ್ತದೆ. ಪ್ರಮುಖ ಹಬ್ಬಗಳಂದು ಗ್ರಾಮಸ್ಥರೆಲ್ಲ ಇಲ್ಲಿಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಎನ್.ಡಿ.ಹೆಗಡೆ ಆನಂದಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ