ಆಪರೇಷನ್ ನಾಗರ ಹಾವು
Team Udayavani, Mar 10, 2018, 11:43 AM IST
ಹಾವನ್ನು ಹತ್ತಿರದಲ್ಲಿ ಕಂಡರೇ ಬೆಚ್ಚಿ ಬೀಳುವ ನಮಗೆ ಇನ್ನು ವಿಷಕಾರಿಯಾದ ಹಾವುಗಳನ್ನು ಹಿಡಿಯುವ ಕೆಲಸವೆಂದರೆ ಬಗಲಲ್ಲಿ ಕೆಂಡವನ್ನು ಕಟ್ಟಿಕೊಂಡಂತೆಯೇ.ನೀವೆಷ್ಟೇ ಪರಿಣತಿ ಹೊಂದಿದ್ದರೂ ಒಂದು ಸಣ್ಣ ತಪ್ಪು ಕೂಡಾ ನಿಮ್ಮ ಜೀವಕ್ಕೆ ಎರವಾಗಬಲ್ಲದು. ಆದರೂ ಈ ಚಾಲೆಂಜಿಂಗ್ ಕೆಲಸವನ್ನು ಪ್ರವೃತ್ತಿಯಾಗಿ ಸ್ವೀಕರಿಸಿದ ಒಬ್ಬ ವ್ಯಕ್ತಿ ಕಳೆದ ಹತ್ತು ವರ್ಷಗಳಲ್ಲಿ ಯಾರದೇ ಮನೆಯಲ್ಲಿ, ಎಷ್ಟು ಗಂಟೆಗೂ ಕರೆ ಬಂದರೂ ಕೂಡಲೇ ಬಂದು ಸಂದುಗೊಂದುಗಳಲ್ಲಿ ಅವಿತಿರುತಿದ್ದ ಅಪಾಯಕಾರಿಯಾದ ಹಾವುಗಳನ್ನು ಕ್ಷಣಮಾತ್ರದಲ್ಲಿ ಹಿಡಿದು ನಮಗೆ ನಿರಾಳತೆ ಕೊಡುತ್ತಾ ಬಂದಿದ್ದಾರೆ. ಖಂಡಿತವಾಗಿಯೂ ಇದು ಯಾವ ಸಮಾಜಸೇವೆಗಿಂತಲೂ ಕಮ್ಮಿಯಿಲ್ಲದ್ದು. ಹೌದು, ನಾನೀಗ ಹೇಳಲು ಹೊರಟಿದ್ದು ನಮ್ಮದೇ ಸಂಸ್ಥೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮತ್ತು ಹವ್ಯಾಸಿ ವೃತ್ತಿಯಾಗಿ ಹಾವು ಹಿಇಯುವ ಕೆಲಸ ಮಾಡುತ್ತಿರುವ ಸುಕುಮಾರ್ ಕುರಿತು. ಇವರನ್ನು ಜನ ಪ್ರೀತಿಯಿಂದ ಸ್ನೇಕ್ ಸುಕುಮಾರ್ ಅಂತಲೂ ಕರೆಯುವುದುಂಟು.
ಮುಖ್ಯ ವಿಷಯವನ್ನು ಹೇಳುವುದರ ಮೊದಲು ನನ್ನದೇ ಒಂದು ವೈಯಕ್ತಿಕ ಅನುಭವದಿಂದ ಆರಂಭಿಸಿದರೆ ಹೇಗೆ? ಅಂದು ಮಧ್ಯರಾತ್ರಿಯ ಒಂದು ಗಂಟೆಯ ಸಮಯ. ಯಾವುದೋ ಒಂದು ಸಣ್ಣ ಶಬ್ದಕ್ಕೆ ಅಕಸ್ಮಾತ್ ಆಗಿ ಎಚ್ಚರವಾದ ನನ್ನ ಹೆಂಡತಿ ಎದುರಿನ ದೃಶ್ಯ ಕಂಡು ಕೂಗಲು ಬಾಯಿ ಬರದೆ ನನ್ನನ್ನು ಎಬ್ಬಿಸಿದ್ರು . ನೋಡಿದ್ರೆ, ಮಗು ಮಲಗಿದ ತೊಟ್ಟಿಲ ಅಡಿಯಲ್ಲಿ ಒಂದು ಅಡಿ ಉದ್ದದ ಕನ್ನಡಿ ಹಾವೊಂದು ತೊಟ್ಟಿಲ ಆಧಾರ ಕಂಬಕ್ಕೆ ಸುತ್ತಿಕೊಂಡಿದೆ! ಒಂದು ಕ್ಷಣ ಗಾಬರಿಯಾದರೂ ಪರಿಸ್ಥಿತಿಯ ಅರಿವಾಗಿ ತೊಟ್ಟಿಲ ಮಗುವನ್ನು ಅಲ್ಲಿಂದ ಎತ್ತಿ ಬೇರೆ ಕಡೆ ಮಲಗಿಸಿದೆ. ಅಲ್ಲಿಯೇ ಮಂಚದ ಮೇಲೆ ಮಲಗಿದ್ದ ಮಗಳನ್ನು ಎಬ್ಬಿಸಿ ಹೊರಗೆ ಕಳಿಸಿ ಸುಕುಮಾರ್ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಮದ್ಯರಾತ್ರಿಯ ಸುಖ ನಿ¨ªೆಯಲ್ಲಿದ್ದರೂ ಗೊಣಗದೇ, ಆ ಹಾವನ್ನು ಬೇರೆ ಕಡೆ ಹೋಗದಂತೆ ಮಾಡಲು ತೆಗೆದುಕೊಳ್ಳಬೇಕಿರುವ ಮುನ್ನೆಚ್ಚರಿಕೆಯನ್ನೆಲ್ಲಾ ಫೋನ್ ನಲ್ಲಿಯೇ ನೀಡಿದರು.
ಕನ್ನಡಿ ಹಾವು ಕತ್ತಲಲ್ಲಿ ಬಲು ಚಟುವಟಿಕೆಯ ಹಾವಾದ್ದರಿಂದ ಅವರು ಬರುವುದರೊಳಗೆ ಅದೆಲ್ಲಿ ಕಣ್ಣು ತಪ್ಪಿಸಿ ಹೋಯಿತೋ ಗೊತ್ತಾಗಲಿಲ್ಲ. ಆದರೂ ಸುಕುಮಾರ್ ಬಂದು,ಕೂಡಲೇ ನಮ್ಮ ಕಣ್ಣುತಪ್ಪಿಸಿ ಮಲಗುವ ಮಂಚದ ಬಿರುಕಿನಲ್ಲಿ ಅವಿತಿದ್ದ ಹಾವನ್ನು ಹುಡುಕಿ ಹಿಡಿದು ಚೀಲಕ್ಕೆ ವರ್ಗಾಯಿಸಿದಾಗಲೇ ನಮಗೆ ನಿರಾಳ ಭಾವ.
ಹೀಗೆ ಅದೆಷ್ಟೋ ಹಾವುಗಳನ್ನು ಹಿಡಿದಿದ್ದರೂ ಅದರ ಲೆಕ್ಕವನ್ನು ಸ್ವತಃ ಅವರೇ ಇಟ್ಟಿಲ್ಲ. ದಕ್ಷಿಣ ಭಾರತದಲ್ಲಿ ಕಂಡುಬರುವ ಎಲ್ಲಾ ಪ್ರಭೇದದ ಹಾವುಗಳನ್ನು ಹಿಡಿದ ಅನುಭ ವವಿರುವ ಸ್ನೇಕ್ ಸುಕುಮಾರ್ ಈಚೆಗೆ ಮೈನವಿರೇಳಿಸುವ ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಂಡಿದ್ದರು. ಆ ವಿವರಣೆ ಹೀಗೆ- ನಾಗರಹಾವನ್ನು ದೇವರೆಂದು ಕಾಣುವ, ಆರಾಧಿಸುವ ತುಳುನಾಡಿನವರಾದ ನಮಗೆ ದಾರಿಯಲ್ಲಿ ಸತ್ತ ಹಾವು ಕಾಣಲು ಸಿಕ್ಕಿದರೂ ಕೂಡಾ ಹಾಗೇ ಬಿಟ್ಟು ಹೋಗುವುದಿಲ್ಲ.ಅದಕ್ಕೆ ಸೂಕ್ತ ಅಂತ್ಯಸಂಸ್ಕಾರವನ್ನು ಮಾಡಿ ಅದಕ್ಕೆ ಸದ್ಗತಿಯನ್ನು ಕೊಡುವ ವಿಧಿವಿಧಾನಗಳನ್ನೂ ನೆರವೇರಿಸುವವರು ನಾವು. ಇನ್ನು ನಾಗರಹಾವೊಂದು ನಮ್ಮ ಕಣ್ಣೆದುರೇ ಹೀಗೆ ಒ¨ªಾಡುವುದನ್ನು ನಾವೆಂದೂ ನೋಡಲಾರೆವು. ಆದರೆ ಇಂತಹುದೇ ಒಂದು ವಿದ್ಯಮಾನಕ್ಕೆ ಸಾಕ್ಷಿಯಾದದ್ದು ನಮ್ಮ ಕಂಪೆನಿಯ ಒ.ಎಮ್.ಎಸ್ ವಿಭಾಗದ ಉದ್ಯೋಗಿಯಾದ ದಿನೇಶ್ ಪೂಜಾರಿಯವರ ಮನೆಯ ಬಾವಿ. ಅವರ ಮನೆಯ ಬಾವಿಗೆ ಹಾಕಿದ್ದ ಬಲೆಯೊಳಗೆ ನಾಗರಹಾವೊಂದು ಸಿಕ್ಕಿಕೊಂಡು ಮುಂದಕ್ಕೂ ಹಿಂದಕ್ಕೂ ಹೋಗಲಾಗದೇ ಒ¨ªಾಡುತಿತ್ತು. ಅತೀ ಸೂಕ್ಷ¾ವಾದ ದೇಹ ಪ್ರಕೃತಿ ಹೊಂದಿರುವ ನಾಗರ ಹಾವು ಇನ್ನು ಸ್ವಲ್ಪ ಹೊತ್ತು ಅದೇ ಪರಿಸ್ಥಿಯಲ್ಲಿ ಒದ್ದಾಡಿದರೂ ಜೀವ ಕಳೆದುಕೊಳ್ಳುವ ಆತಂಕವಿತ್ತು. ಆ ಪರಿಸ್ಥಿತಿಯಲ್ಲಿ ಹಾವನ್ನು ನೋಡಿದ ದಿನೇಶ್ ಕೂಡಲೇ ಸುಕುಮಾರ್ಗೆ ದೂರವಾಣಿ ಮುಖಾಂತರ ವಿಷಯ ತಿಳಿದ್ದಾರೆ. ಇಂತಹ ಕರೆ ಬಂದ ಕೂಡಲೇ ಸುಕುಮಾರ್ ಹೆಚ್ಚು ಹೊತ್ತು ಕಾಯಿಸುವವರಲ್ಲ.ಎಲ್ಲಿದ್ದರೂ ತನ್ನ ಬೈಕನ್ನೇರಿ ಕ್ಷಣದಲ್ಲಿಯೇ ಹಾಜರಾಗುತ್ತಾರೆ. ಇಲ್ಲೂ ಅವರು ಬಂದದ್ದು ಅದೇ ವೇಗದಿಂದ.
ಬಾವಿಯ ಹತ್ತಿರ ಹೋದ ಸುಕುಮಾರ್ ಮೊದಲು ಪರಿಸ್ಥಿತಿಯನ್ನು ಸೂಕ್ಷ¾ವಾಗಿ ಅವಲೋಕಿಸುತ್ತಾರೆ.ಹಾವಿನ ಇದುವರೆಗಿನ ಹೋರಾಟದಲ್ಲಿ ಎಲ್ಲಿಯೂ ಗಾಯವಾಗಿಲ್ಲ ಅನ್ನುವುದನ್ನು ಖಾತರಿ ಪಡಿಸಿಕೊಂಡು ನಿಧಾನವಾಗಿ ಹತ್ತಿರ ಸುಳಿದು ಹಾವಿನ ಬಾಲವನ್ನು ಎಡಗೈಯಲ್ಲಿ ಹಿಡಿದು ಬಲಗೈಯಿಂದ ಕತ್ತರಿಹಿಡಿದು ನಿಧಾನಕ್ಕೆ ಬಲೆಯನ್ನು ಕತ್ತರಿಸುತ್ತಾ ಹೋಗುತ್ತಾ ರೆ.ಹಾಗೆಯೇ ಇಡೀ ದೇಹವನ್ನು ಬಲೆಯಿಂದ ಬಿಡಿಸಿದ ನಂತರವೇ ಇರುವುದು ಫೈನಲ್ ಆಪರೇಷನ್, ತಲೆಯನ್ನು ಬಿಡಿಸುವುದು! ಕೋಲಿನಿಂದ ಒಮ್ಮೆ ಅದರ ತಲೆಯನ್ನು ಆಧರಿಸಿ ಕೈಯಿಂದ ಹಾವಿನ ತಲೆಯನ್ನು ಗಕ್ಕನೆ ಹಿಡಿದುಬಿಡುತ್ತಾರೆ! ನೆರೆದವರಿಗೆ ರೋಮಾಂಚನ!
ನಂತರ ಅದರ ಸುತ್ತಲಿನ ಬಲೆಯನ್ನೂ ಕತ್ತರಿಸಿ ಇಡೀ ಹಾವಿನ ದೇಹವನ್ನು ಬಲೆಯಿಂದ ಬಂಧಮುಕ್ತಗೊಳಿಸಿ ತನ್ನ ಕೈಯಲ್ಲಿ ತೆಗೆದುಕೊಳ್ತಾರೆ.
ಇಲ್ಲಿಗೇ ಈ ಕಾರ್ಯಾಚರಣೆ ಮುಗಿಯಿತು ಅಂದುಕೊಂಡು ಹೋದವರು ಕೊನೆಯ ಬಹಳ ರೋಮಾಂಚಕ ಅಂಕವನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ತಾರೆ, ಧೋನಿಯ ಗೆಲುವಿನ ಹೆಲಿಕಾಪ್ಟರ್ ಶಾಟ್ ಮಿಸ್ ಮಾಡಿಕೊಂಡ ಹಾಗಿನ ಬೇಸರ ಅವರಿಗೆ ಬಾರದೇ ಇರದು. ಅದುವೇ ಹಿಡಿದ ವಿಷಪೂರಿತ ಹಾವನ್ನು ಚೀಲದೊಳಕ್ಕೆ ಹಾಕುವುದು.ಈ ಹಂತದಲ್ಲಿ ಹಾವಿನ ತಲೆ ಸುಕುಮಾರ್ ಕೈಯಲ್ಲಿದೆ ಮತ್ತು ಅದೇ ರೀತಿಯಲ್ಲಿ ಚೀಲದೊಳಗೆ ಹಾಕಿ ಕೈಯನ್ನು ಬಿಡಬೇಕು! ಈಗಾಗಲೇ ಹೆದರಿದ ಹಾವು ಮೇಲೆ ಚಿಮ್ಮಿ ಕೈಗೆ ಕಚ್ಚುವ ಅಪಾಯ ಇಲ್ಲಿ ಅತೀ ಹೆಚ್ಚು.ಸಾಧಾರಣವಾಗಿ ತಾನು ಹಿಡಿಯುವ ಎಲ್ಲಾ ಹಾವುಗಳ ಗುಣಲಕ್ಷಣಗಳು ಸುಕುಮಾರ್ಗೆ ಚೆನ್ನಾಗಿ ಪರಿಚಿತ. ಹಾಗೆಂದೇ ಈ ನಾಗರ ಹಾವು ಕೂಡಾ ಹೆದರಿದ ಇಂತಹ ಸಂದರ್ಭ ಗಳಲ್ಲಿ ಏನೆಲ್ಲಾ ಮಾಡಬಲ್ಲದು ಅನ್ನುವುದರ ಸಂಪೂರ್ಣವಾದ ಅರಿವೂ ಇವರಲ್ಲಿದೆ. ಆದ್ದರಿಂದಲೇ ಬಹಳ ಬಹಳ ಸಂಯಮದಿಂದ,ಮೈಯೆಲ್ಲಾ ಕಣ್ಣಾಗಿ ಹಾವನ್ನು ಪೂರ್ತಿಯಾಗಿ ಚೀಲಕ್ಕೆ ವರ್ಗಾಯಿಸಿ ಕೊನೆಯ ಹಂತವಾಗಿ ಕ್ಷಿಪ್ರಗತಿಯಲ್ಲಿ ಹಾವಿನ ತಲೆಯನ್ನು ಬಿಟ್ಟು ಚೀಲದ ಬಾಯನ್ನು ಸುತ್ತುತ್ತಾರೆ.ಅಷ್ಟಾದರೂ ಆ ಹಾವು ಮೇಲ್ಮುಖವಾಗಿ ಚಿಮ್ಮಿದ್ದು ಚೀಲದ ಹೊರ ಮೈಯಿಂದಲೇ ಸ್ಪಷ್ಟವಾಗಿ ಗೋಚರಿಸಿ ನೆರೆದು ನೋಡಿದವರ ಮೈ ಒಂದು ಕ್ಷಣ ಜುಮ್ಮೆಂದಿತು!
ಹೀಗೆ ಜೀವ ಕಳೆದುಕೊಳ್ಳುವ ಅಪಾಯದಲ್ಲಿದ್ದ ನಾಗರಹಾವನ್ನು ಉಪಾಯದಿಂದ ಬಿಡಿಸಿ ಮತ್ತೆ ಕಾಡಿಗೆ ಕಳಿಸುವಲ್ಲಿ ಈ ಕಾರ್ಯಾಚರಣೆ ಸುಖಾಂತ್ಯ ಕಂಡಿತು. ಈ ಸಮಾಜ ಮುಖೀ ಕಾರ್ಯವನ್ನು ಊರಿನ ಸಂಘಸಂಸ್ಥೆಗಳು ಬೇಗನೆ ಗುರುತಿಸುವಂತಾಗಲಿ. ಸುಕುಮಾರ್ಗೆ ಸಿಗುವಂತಾಗಲಿ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು