ಆ್ಯಕ್ಷನ್‌… ಕಟ್‌ ; ಸಿನಿಮಾ ನಿಂತು ಹೋದ ಮೇಲೆ ನೆನಪೊಂದು ಉಳಿದಿದೆ..


Team Udayavani, May 26, 2017, 3:47 PM IST

Kannda-movies.jpg

ಒಂದು ದೊಡ್ಡ ಚಿತ್ರ ಶುರುವಾದಾಗ, ಅದರ ಚಿತ್ರತಂಡದವರಿಗಷ್ಟೇ ಅಲ್ಲ, ಪ್ರೇಕ್ಷಕರಿಗೂ ಆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ.ಚಿತ್ರ ನಿಂತಾಗ, ಚಿತ್ರ ಮತ್ತು ನಿರೀಕ್ಷೆಗಳೆರಡೂ ನೆನಪಾಗಷ್ಟೇ ಉಳಿಯುತ್ತವೆ …

ಒಂದೇ ಏಟಿಗೆ 10 ಸಿನಿಮಾಗಳು ನಿಂತು ಹೋಗಿವೆ. ನೂರಾರು ಕನಸುಗಳು ನುಚ್ಚು ನೂರಾಗಿವೆ. ಆ ಚಿತ್ರಗಳನ್ನು ಮುಂದೆ ಬೇರೆ ಯಾರಾದರೂ ಟೇಕಾಫ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಖಾಸನೀಸ್‌ ಸಹೋದರರು ಶುರು ಮಾಡಿದ್ದ ಮತ್ತು ಶುರು ಮಾಡಬೇಕೆಂದಿದ್ದ “ಐರಾ’, “ಶಾದಿಭಾಗ್ಯ’, “ಎಂಟಿವಿ ಸುಬ್ಬುಲಕ್ಷ್ಮೀ’, “ಪ್ರೇಮದಲಿ’, “ಪ್ರೀತಿ ಪ್ರಾಪ್ತಿರಸ್ತು’,
“ದಂಡಯಾತ್ರೆ’, “ಉತ್ಸವ್‌’, “ಸೆಕೆಂಡ್‌ ಬಕೆಟ್‌ ಬಾಲ್ಕನಿ’ ಮುಂತಾದ ಚಿತ್ರಗಳೆಲ್ಲಾ ನಿಂತು ಹೋಗಿವೆ. ಹೇಗೆ ಒಂದೇ ನಿರ್ಮಾಣ ಸಂಸ್ಥೆಯು 10 ಚಿತ್ರಗಳನ್ನು ಒಂದರ ಹಿಂದೊಂದು ಪ್ರಾರಂಭಿಸುವ ಮೂಲಕ ಒಂದು ದಾಖಲೆ ಎಂದು ಸುದ್ದಿಯಾಯಿತೋ, ಅದೇ ರೀತಿ ಒಟ್ಟಿಗೇ 10 ಚಿತ್ರಗಳು ನಿಂತು ಹೊಸ ದಾಖಲೆಯಾಗಿದೆ ಎಂದರೆ ತಪ್ಪಿಲ್ಲ.

ಒಂದು ಸಿನಿಮಾ ಯಾಕೆ ಶುರುವಾಗುತ್ತದೆ ಎಂಬ ವಿಷಯ ಅದೆಷ್ಟು ನಿಗೂಢವೋ, ಚಿತ್ರ ಯಾಕೆ ನಿಂತಿತು ಎಂಬ ವಿಷಯ ಸಹ ಅಷ್ಟೇ ನಿಗೂಢ. ಬಹಳಷ್ಟು ಚಿತ್ರಗಳು ಬಜೆಟ್‌ ಹೆಚ್ಚಿದ್ದರಿಂದಲೋ, ದುಡ್ಡಿನ ಅಭಾವದಿಂದಲೋ ನಿಂತು ಹೋಗುತ್ತವೆ. ಹಾಗಂತ ಅದೊಂದೇ ಕಾರಣವಲ್ಲ. ಕೆಲವೊಮ್ಮೆ ಕಥೆಯ ಕುರಿತು ಅಸಮಾಧಾನವಿದ್ದರೆ, ಚಿತ್ರತಂಡದವರ ನಡುವೆ ಇಗೋ ಸಮಸ್ಯೆ ಕಾಣಿಸಿಕೊಂಡರೆ, ಚಿತ್ರತಂಡದವರ ಪೈಕಿ ಯಾರಾದರೂ ಪ್ರಮುಖರು ನಿಧನಹೊಂದಿದರೆ ಸಹ ಅನೇಕ ಚಿತ್ರಗಳು ಡ್ರಾಪ್‌ ಆಗುವುದೂ ಉಂಟು. ಕೆಲವೊಮ್ಮೆ ಎಲ್ಲಾ ಸರಿಯಿದ್ದೂ, ಡೇಟ್‌ ಹೊಂದಾಣಿಕೆಯಾಗದಿದ್ದರೂ ಚಿತ್ರಗಳು ನಿಂತು ಹೋಗುತ್ತವೆ. ಸಣ್ಣ-ಪುಟ್ಟ ಚಿತ್ರಗಳು, ದೊಡ್ಡ ಹೀರೋ ಮತ್ತು ಬಜೆಟ್‌ ಇಲ್ಲದ ಚಿತ್ರಗಳು ಶುರುವಾಗುವುದು, ನಿಲ್ಲುವುದು ದೊಡ್ಡ ವಿಷಯವೇ ಅಲ್ಲ. ಆದರೆ, ಒಬ್ಬ ಸ್ಟಾರ್‌ ಚಿತ್ರ ನಿಂತರೆ ಮಾತ್ರ ಸುದ್ದಿ. ಪ್ರಮುಖವಾಗಿ ದೊಡ್ಡ ಹೀರೋಗಳ ಕಾಲ್‌ಶೀಟ್‌ ಸಿಗುವುದೇ ಕಷ್ಟ.ಅಂಥದ್ದರಲ್ಲಿ ಕಾಲ್‌ಶೀಟ್‌ ಸಿಕ್ಕಿ, ಸ್ವಲ್ಪ ಚಿತ್ರೀಕರಣವೂ ನಡೆದು, ಆ ಬಗ್ಗೆ ನಿರೀಕ್ಷೆಗಳು ಗರಿಗೆದರಿ … ಅಂತಹ ಚಿತ್ರಗಳು ಬಿಡುಗಡೆಯಾಗಲಿಲ್ಲ ಎಂದರೆ, ಅವರ ಅಭಿಮಾನಿಗಳಿಗಾಗುವ ನಿರಾಸೆ ಅಷ್ಟಿಷ್ಟಲ್ಲ. ಹಾಗಾಗಿ ಇಲ್ಲಿ, ನಿಂತು ಹೋದ ದೊಡ್ಡ ಚಿತ್ರಗಳು ಮತ್ತು ಪ್ರಮುಖ ನಟರ ಚಿತ್ರಗಳ ಕುರಿತಷ್ಟೇ ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಹಾಗೆ ನಿಂತ ಪ್ರಮುಖ ಚಿತ್ರವೆಂದರೆ “ಕಲಿ’. ಪ್ರೇಮ್‌ ನಿರ್ದೇಶನದ ಶಿವರಾಜಕುಮಾರ್‌ ಮತ್ತು ಸುದೀಪ್‌ ಅಭಿನಯದ “ಕಲಿ’ ಚಿತ್ರದ ಟೈಟಲ್‌ ಲಾಂಚ್‌ಗೆ  ಖುದ್ದು ಮುಖ್ಯಮಂತ್ರಿಗಳು ಬಂದು ಟೈಟಲ್‌ ಲಾಂಚ್‌ ಮಾಡಿ ಹೋಗಿದ್ದರು. ಇನ್ನೇನು ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಆ ಚಿತ್ರ ಸದ್ಯಕ್ಕಿಲ್ಲ ಎಂಬ ಸುದ್ದಿ ಇಬ್ಬರೂ ಕಲಾವಿದರ, ಲಕ್ಷಾಂತರ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ, ಪ್ರೇಮ್‌ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಅದೇ ಡೇಟ್‌ ಇಟ್ಟುಕೊಂಡು, “ಕಲಿ’ ಬದಲು, “ದಿ ವಿಲನ್‌’ ಎಂಬ ಚಿತ್ರವನ್ನು ಶುರು ಮಾಡಿದ್ದಾರೆ. ಮುಂದೊಮ್ಮೆ “ಕಲಿ’ ಮಾಡಬಹುದು ಎಂದು ಪ್ರೇಮ್‌ ಅವರೇ ಹೇಳಿಕೊಂಡಿದ್ದಾರೆ. ಆದಾಗಷ್ಟೇ ಅದು ಸತ್ಯ. 

ಇದು ಇತ್ತೀಚಿನ ಉದಾಹರಣೆ. ಈ ಹಿಂದೆ ಒಂದು ಚಿತ್ರ ಶುರುವಾಗಿ, ಸುದ್ದಿ ಮಾಡಿ, ಕೊನೆಗೆ ಕಾರಣಾಂತರಗಳಿಂದ ನಿಂತು ಅಥವಾ ಬಿಡುಗಡೆಯಾಗದ ಚಿತ್ರಗಳು ಸಾಕಷ್ಟು ಇವೆ. ಇಂತಹ ಚಿತ್ರಗಳ ಪೈಕಿ ಮೊದಲು ಕಾಣುವುದು ವಿನಯ್‌ ರಾಜಕುಮಾರ್‌ ಅಭಿನಯದಲ್ಲಿ “ಆರ್‌ – ದಿ ಕಿಂಗ್‌’. ಈ ಚಿತ್ರ ಮಾಡುವುದಾಗಿ ಪ್ರೇಮ್‌ ಹೇಳಿಕೊಂಡಿದ್ದರು. ಚಿತ್ರ ಮುಹೂರ್ತದವರೆಗೂ ಬಂದು ಅದ್ಯಾಕೋ ನಿಂತುಹೋಯಿತು. ಆ ನಂತರ ರವಿಚಂದ್ರನ್‌ ಅವರ “ಮಂಜಿನ ಹನಿ’. ಈ ಚಿತ್ರ ರವಿಚಂದ್ರನ್‌ ಅವರ ಮಹತ್ವಾಕಾಂಕ್ಷೆಯ ಚಿತ್ರ ಎಂದರೆ ತಪ್ಪಿಲ್ಲ. ನಾಲ್ಕೈದು ವರ್ಷಗಳ ಕಾಲ ಈ ಚಿತ್ರಕ್ಕಾಗಿ ಅವರು ಬೆವರು ಸುರಿಸಿದ್ದರು. ಸಾಕಷ್ಟು ಚಿತ್ರೀಕರಣ ಸಹ ಮಾಡಿದ್ದರು. ಎಲ್ಲಾ ಆದರೂ, ಈ ಚಿತ್ರ ಮುಕ್ತಾಯವಾಗಲಿಲ್ಲ. ಈ ಪಟ್ಟಿಯಲ್ಲಿ ಹೆಸರಿಸಬಹುದಾದ ಇನ್ನೂ ಎರಡೂ ಚಿತ್ರಗಳೆಂದರೆ, ಉಪೇಂದ್ರ ಅವರ “ದೇವದಾಸ್‌’ ಮತ್ತು “ಕಲ್ಕಿ’. ಮುನಿರತ್ನ ನಿರ್ಮಾಣದ ಈ ಎರಡೂ ಚಿತ್ರಗಳು ಶುರುವಾಗಿ ಒಂದಿಷ್ಟು ಚಿತ್ರೀಕರಣ ಸಹ ಆಗಿತ್ತು. ಆದರೆ, ಅದ್ಯಾಕೋ ಮುಕ್ತಾಯ ಮಾತ್ರ ಆಗಲಿಲ್ಲ. ಇನ್ನು ಅವರದೇ ಅಭಿನಯದ “ಭೀಮೂಸ್‌ ಬ್ಯಾಂಗ್‌ ಬ್ಯಾಂಗ್‌ ಕಿಡ್ಸ್‌’ ಚಿತ್ರದ ಚಿತ್ರೀಕರಣ ಮುಗಿದರೂ, ಅದ್ಯಾಕೋ ಬಿಡುಗಡೆಯಾಗಿಲ್ಲ. ಅದೇ ರೀತಿ ಅವರ ಅಭಿನಯದ “ದಶಾವತಾರ’ ಎಂಬ ಚಿತ್ರ 15 ವರ್ಷಗಳ ಹಿಂದೆ ಸೆಟ್ಟೇರಿ, ಚಿತ್ರೀಕರಣವಾಗಿ ಕೊನೆಗೆ ಮುಂದುವರೆಯಲೇ ಇಲ್ಲ.

ಸುದೀಪ್‌ ವಿಷಯದಲ್ಲೂ ಅದೇ ಆಯಿತು. ಅವರು ಕೆಲವು ವರ್ಷಗಳ ಹಿಂದೆ ಶುರು ಮಾಡಿದ “ಕನ್ವರ್‌ಲಾಲ್‌’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಕಾಲ ನಡೆದು ನಿಂತು ಹೋಗಿತ್ತು. ಪುನೀತ್‌ ರಾಜಕುಮಾರ್‌ ಅಭಿನಯದ “ಮಯೂರ’ ಎಂಬ ಚಿತ್ರದ ಮುಹೂರ್ತ ಇಸ್ಕಾನ್‌ ದೇವಸ್ಥಾನದಲ್ಲಿ ಭರ್ಜರಿಯಾಗಿ ನಡೆದಿತ್ತು. ಆದರೆ, ನಿರ್ದೇಶಕ ಶೋಭನ್‌ ಅವರ ನಿಧನದಿಂದಾಗಿ ಚಿತ್ರ ನಿಂತೇ ಹೋಯಿತು. ದರ್ಶನ್‌ ಅವರ ಲಿಸ್ಟ್‌ ನಲ್ಲಿ ಅಂಥ ಯಾವುದೇ ಸಿಗುವುದಿಲ್ಲವಾದರೂ, 12-13 ವರ್ಷಗಳ ಹಿಂದೆ, ದರ್ಶನ್‌ ಅವರು “ರೈ’ ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಪಿ. ಧನರಾಜ್‌ ನಿರ್ಮಿಸಬೇಕಿದ್ದ ಈ ಚಿತ್ರದ ಪತ್ರಿಕಾಗೋಷ್ಠಿ ಸಹ ಆಗಿತ್ತು. ಈ ಚಿತ್ರ ಸಹ ಕಾರಣಾಂತರದಿಂದ ಶುರುವಾಗಲಿಲ್ಲ. ಆದಿತ್ಯ ವಿಷಯದಲ್ಲೂ ಹಾಗೆಯೇ ಆಯಿತು. ಆದಿತ್ಯ ಅಭಿನಯದ “ರಕ್ತಾಕ’, “ಕಾಟನ್‌ಪೇಟೆ’, “ಮಾಸ್‌’ ಮತ್ತು “ರ್ಯಾಸ್ಕಲ್‌’ ಎಂಬ ನಾಲ್ಕು ಚಿತ್ರಗಳು ಅದ್ಧೂರಿಯಾಗಿ ಮುಹೂರ್ತವಾಗಿ ಒಂದಿಷ್ಟು ಚಿತ್ರೀಕರಣ ಸಹ ಆಗಿತ್ತು. ಆದರೆ, ಅದ್ಯಾಕೋ ಈ ನಾಲ್ಕೂ ಚಿತ್ರಗಳು ಇದುವರೆಗೂ ಬಿಡುಗಡೆಯಾಗುತ್ತಿರುವ ಸುದ್ದಿ ಬಂದಿಲ್ಲ.

ಇನ್ನು ಇತಿಹಾಸದುದ್ದಕ್ಕೂ ಈ ತರಹ ಹಲವು ಸಿನಿಮಾಗಳು ಸಿಗುತ್ತವೆ. ಡಾ. ರಾಜಕುಮಾರ್‌ ಅಭಿನಯದ “ಭಕ್ತ ಅಂಬರೀಶ’ ಮತ್ತು “ಕುಮಾರರಾಮ’ ಚಿತ್ರಗಳು ಮುಹೂರ್ತವೂ ಆಗಿತ್ತು. “ಭಕ್ತ ಅಂಬರೀಶ’ ಚಿತ್ರವನ್ನು ಪಾರ್ವತಮ್ಮ ರಾಜಕುಮಾರ್‌ ನಿರ್ಮಿಸಿ, ಹಿರಿಯ ನಿರ್ದೇಶಕ ವಿಜಯ್‌ ಅವರು ನಿರ್ದೇಶಿಸಬೇಕಿತ್ತು. ಈ ಚಿತ್ರ ಮುಹೂರ್ತವಾಗಿದ್ದಷ್ಟೇ, ಶುರುವಾಗಲಿಲ್ಲ. ಇನ್ನು ಡಾ. ರಾಜಕುಮಾರ್‌ ಅವರು ಬಹಳ ಆಸೆಪಟ್ಟು ಮಾಡಬೇಕೆಂದಿದ್ದ “ಕುಮಾರರಾಮ’ ಚಿತ್ರವನ್ನು ಶಿವರಾಜಕುಮಾರ್‌ ಮಾಡಿ ತಮ್ಮ ತಂದೆಯ ಆಸೆಯನ್ನು ಪೂರೈಸಿದ್ದರು. ಇನ್ನು ಶಿವರಾಜಕುಮಾರ್‌ ಅವರು ಟಿ.ಎಸ್‌. ನಾಗಾಭರಣ ಅವರ ನಿರ್ದೇಶನದಲ್ಲಿ ನಟಿಸಿದ “ಗೆಳೆಯ ಗೆಳೆಯ’ ಚಿತ್ರದ ಚಿತ್ರೀಕರಣವಾಗಿ ನಿಂತರೆ, ನಾಗಾಭರಣ ನಿರ್ದೇಶನದ “ಶುಭಕಾಲ ಬರ್ತೈತೆ’ ಎಂಬ ಚಿತ್ರ ಸಹ ಬಹುತೇಕ ಮುಗಿದು ನಿಂತು ಹೋಗಿತ್ತು. ಹಂಸಲೇಖ ಅವರ ಮಗ ಅಲಂಕಾರ್‌ ಅಭಿನಯದ ಮೊದಲ ಚಿತ್ರ “ಸುಗ್ಗಿ’ ಸಹ ಇದೇ ಸಾಲಿಗೆ ಸೇರುವ ಇನ್ನೊಂದು ಚಿತ್ರ. ಈ ಚಿತ್ರವನ್ನು ಎಸ್‌. ಮಹೇಂದರ್‌ ಆರಂಭದಲ್ಲಿ ಶುರು ಮಾಡಿ, ಆ ನಂತರ ಹಂಸಲೇಖ ಅವರು ಟೇಕ್‌ಓವರ್‌ ಮಾಡಿದ್ದರು. ಈ ಚಿತ್ರದ ಕೆಲಸಗಳೆಲ್ಲಾ ಮುಗಿದರೂ ಈ ಚಿತ್ರ ಬಿಡುಗಡೆಯಾಗಲಿಲ್ಲ.

ಇದು ಶುರುವಾಗಿ ನಿಂತ ಹಲವು ಚಿತ್ರಗಳ ಪೈಕಿ ಕೆಲ ಉದಾಹರಣೆಯಾದರೆ, ಬರೀ ಸುದ್ದಿ ಮಾಡಿ, ನಿಂತು ಹೋದ ಚಿತ್ರಗಳ ಸಂಖ್ಯೆಯೂ ಸಾಕಷ್ಟಿವೆ. “ಗಂಡುಗಲಿ ಕುಮಾರರಾಮ’ ನಂತರ ಪಟ್ಟಾಭಿರಾಮ್‌ ಅವರು ಘೋಷಿಸಿದ್ದ “ಭರತೇಶ ವೈಭವ’, ಶಿವಾರಾಜಕುಮಾರ್‌-ರಾಘವೇಂದ್ರ ರಾಜಕುಮಾರ್‌-ಪುನೀತ್‌ ರಾಜಕುಮಾರ್‌ ಒಟ್ಟಾಗಿ ಅಭಿನಯಿಸಿದ್ದ “ಓಂ’, ಡಾ. ವಿಷ್ಣುವರ್ಧನ್‌ ಮತ್ತು ಉಪೇಂದ್ರ ಒಟ್ಟಾಗಿ ನಟಿಸಬೇಕಿದ್ದ “ಯುಗೇ ಯುಗೇ’, ಕುಮಾರ್‌ ಬಂಗಾರಪ್ಪ ಅಭಿನಯದಲ್ಲಿ ನಾಗಾಭರಣ ನಿರ್ದೇಶಿಸಬೇಕಿದ್ದ “ಕೆಳದಿ ಶಿವಪ್ಪನಾಯಕ’, ತ.ರಾ.ಸು ಅವರ ಮೂರು ಕಾದಂಬರಿಗಳನ್ನಾಧರಿಸಿದ ಟಿ.ಎಸ್‌. ನಾಗಾಭರಣ ಅವರು ಪ್ರಕಾಶ್‌ ರೈ ಅಭಿನಯದಲ್ಲಿ ನಿರ್ದೇಶಿಸಬೇಕಿದ್ದ “ದಳವಾಯಿ ಮುದ್ದಣ್ಣ’ ಈ ಎಲ್ಲಾ ಚಿತ್ರಗಳು ಆಯಾ ಕಾಲಕ್ಕೆ ಸುದ್ದಿ ಮಾಡಿದ್ದವು. ಆದರೆ, ಈ ಚಿತ್ರಗಳು ಶುರುವಾಗಲೇ ಇಲ್ಲ ಎಂದರೆ ತಪ್ಪಿಲ್ಲ. ಮೊದಲೇ ಹೇಳಿದಂತೆ, ಇದು ಕೆಲವು ಉದಾಹರಣೆಗಳಷ್ಟೇ. ಈ ತರಹದ ಸಾಕಷ್ಟು ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗಗಳಲ್ಲೂ ಸಿಗುತ್ತವೆ. ಒಂದು ದೊಡ್ಡ ಚಿತ್ರ ಶುರುವಾದಾಗ, ಅದರ ಚಿತ್ರತಂಡದವರಿಗಷ್ಟೇ ಅಲ್ಲ, ಪ್ರೇಕ್ಷಕರಿಗೂ ಆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಚಿತ್ರ ನಿಂತಾಗ, ಚಿತ್ರ ಮತ್ತು ನಿರೀಕ್ಷೆಗಳೆರಡೂ ನೆನಪಾಗಷ್ಟೇ ಉಳಿಯುತ್ತವೆ. ಅಂತಹ ನೆನಪುಗಳನ್ನು ಮೆಲಕು ಹಾಕುವ ಪ್ರಯತ್ನವೇ ಇದು.

– ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.