ಕಾಲೇಜಿನಲ್ಲಿ ಆದಿಯ ಕೀಟಲೆ ಪುರಾಣ!
Team Udayavani, Mar 16, 2018, 8:15 AM IST
ಲವ್ಸ್ಟೋರಿ ಇಲ್ಲ; ಮರಸುತ್ತುವ ಹಾಡುಗಳಿಲ್ಲ… “ಇದು ಮತ್ತೂಂದು ಪ್ರಯತ್ನ. ಈ ಬಾರಿ ಗೆಲ್ಲಲೇಬೇಕೆಂಬ ಕಾರಣಕ್ಕೆ ಈಗಿನ ಟ್ರೆಂಡ್ಗೆ ತಕ್ಕ ಚಿತ್ರ ಮಾಡಿದ್ದೇವೆ. ಒಳ್ಳೆಯ ತಂಡದ ಜೊತೆ ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಸಿನಿಮಾ ಮಾಡಿರುವ ತೃಪ್ತಿ ನನಗಿದೆ …’
– ಹೀಗೆ ಹೇಳಿ ಸಣ್ಣ ನಗು ಹೊರ ಹಾಕಿದರು ನಿರ್ಮಾಪಕ ಶಮಂತ್. ಈ ಹಿಂದೆ “ಮೆಲೋಡಿ’ ಮತ್ತು “ಪ್ರೀತಿ ಕಿತಾಬು’ ಚಿತ್ರ ನಿರ್ಮಿಸಿದ್ದ ಅವರು, ಈಗ “ಆದಿ ಪುರಾಣ’ ಹೇಳಲು ಬಂದಿದ್ದಾರೆ. ಈ ಬಾರಿ ಅವರು ತಮ್ಮ ಸಹೋದರ ಶಶಾಂಕ್ ಅವರನ್ನು ಹೀರೋ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದು, ರೀ-ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಆ ಕುರಿತು ಹೇಳಲೆಂದೇ ಪತ್ರಕರ್ತ ಮುಂದೆ ತಂಡದೊಂದಿಗೆ ಹಾಜರಾಗಿದ್ದರು ಶಮಂತ್.
“ಬಹುತೇಕ ಬೆಂಗಳೂರಲ್ಲಿ 40 ದಿನಗಳ ಕಾಲ ಚಿತ್ರೀಕರಣಗೊಂಡಿದೆ. ಅಂದುಕೊಂಡ ಬಜೆಟ್ನಲ್ಲೇ ಚಿತ್ರ ಮುಗಿದಿದೆ. ಸಹೋದರ ಶಶಾಂಕ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಇದೊಂದು ಯೂತ್ಸ್ಗೆ ಸಂಬಂಧಿಸಿದ ಚಿತ್ರ. ರೊಮ್ಯಾಂಟಿಕ್ ಕಾಮಿಡಿ ಚಿತ್ರದ
ಹೈಲೈಟ್. ಕನ್ನಡಕ್ಕೆ ಹೊಸತನ ಬೇಕೆಂಬ ಕಾರಣಕ್ಕೆ ಫ್ರೆಶ್ ಎನಿಸುವ ಕಥೆಯೊಂದಿಗೆ ಬರುತ್ತಿದ್ದೇವೆ’ ಎಂದರು ಶಮಂತ್. ಮೋಹನ್ “ಆದಿ ಪುರಾಣ’ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಅವರಿಗೆ ಸಿನಿಮಾ ರಂಗ ಹೊಸದಲ್ಲ. ಕಳೆದ ಒಂದು ದಶಕದಿಂದಲೂ ಅವರು
ಸಂಕಲನಕಾರರಾಗಿ ಕೆಲಸ ಮಾಡಿದವರು. “ಒಬ್ಬ ನಿರ್ದೇಶಕರಿಗೆ ಒಳ್ಳೆಯ ಚಿತ್ರ ಮಾಡಲು ಸಿನಿಮಾ ಪ್ರೀತಿಸುವ ನಿರ್ಮಾಪಕ ಬೇಕು. ಶಮಂತ್ ಆ ವಿಚಾರದಲ್ಲಿ ಯಾವುದಕ್ಕೂ ಕೊರತೆ ಮಾಡದೆ, ಕೇಳಿದ್ದೆಲ್ಲವನ್ನೂ ಕೊಟ್ಟು, ನೀಟ್ ಚಿತ್ರವಾಗಲು ಕಾರಣವಾಗಿದ್ದಾರೆ.
ಸಿನಿಮಾ ಸ್ವಲ್ಪ ತಡವಾಯ್ತು. ಕಾರಣ, ಹೀರೋ ಎಂಜಿನಿಯರಿಂಗ್ ಸ್ಟುಡೆಂಟ್. ಪರೀಕ್ಷೆ ಬಂದಿದ್ದರಿಂದ ಡೇಟ್ಸ್ ಸಮಸ್ಯೆಯಾಯ್ತು. ನಾಯಕಿ ತಮಿಳು ಚಿತ್ರದಲ್ಲಿ ಬಿಜಿ ಇದ್ದುದರಿಂದ ಹೊಂದಿಸಿಕೊಂಡು ಮಾಡೋಕೆ ತಡವಾಯ್ತು. ಇದು ಒಬ್ಬ ಕಾಲೇಜು ಓದು ವಿದ್ಯಾರ್ಥಿ ತನ್ನ ಲೈಫಲ್ಲಿ ಆಡುವ ಆಟಗಳು, ಗೃಹಸ್ಥನಾದಾಗ ಎದುರಾಗುವ ಪರಿಪಾಟಿಲುಗಳು ಕುರಿತು ಸುತ್ತುತ್ತದೆ. ಇಲ್ಲಿ ಲವ್ ಸ್ಟೋರಿ ಇಲ್ಲ. ಯಾವುದೇ ಮರಸುತ್ತುವ ಹಾಡುಗಳಿಲ್ಲ. ರೊಮ್ಯಾಂಟಿಕ್ ಕಾಮಿಡಿ ಇದೆ. ಈಗಿನ ಜನರೇಷನ್ ಕುರಿತ ಕಥೆ ಇಲ್ಲಿದೆ’ ಎಂದು ವಿವರ ಕೊಡುತ್ತಾರೆ ಮೋಹನ್.
ನಾಯಕ ಶಶಾಂಕ್ ಅವರಿಗೆ ಇದು ಮೊದಲ ಚಿತ್ರ. “ದೊಡ್ಡವರ ಜತೆ ನಟಿಸುವ ಅದೃಷ್ಟ ನನ್ನದಾಗಿದೆ. ಇಲ್ಲಿ ನಿರ್ವಹಿಸಿರುವ ಪಾತ್ರ, ಕಾಶೀನಾಥ್ ಅವರ ಸ್ಫೂರ್ತಿಯಿಂದ ಆದದ್ದು. ಈ ಚಿತ್ರವನ್ನು ಅವರಿಗೆ ತೋರಿಸುವ ಆಸೆ ಇತ್ತು. ಆದರೆ, ಅವರಿಲ್ಲ ಎಂಬ ಬೇಸರವಿದೆ. ನನ್ನ ಕೆಲಸವನ್ನು ಪರಿಪೂರ್ಣವಾಗಿ ಮುಗಿಸಿರುವ ತೃಪ್ತಿ ನನಗಿದೆ. ಇಲ್ಲಿ ನಾನು ಕೇವಲ ಶೇ.2ರಷ್ಟು ಎಫರ್ಟ್ ಹಾಕಿದ್ದೇನೆ. ಮಿಕ್ಕ ಶೇ.98 ರಷ್ಟು ನಿರ್ದೇಶಕರು ಹೇಳಿಕೊಟ್ಟಿದ್ದಾರೆ’ ಎಂದರು ಶಶಾಂಕ್.
ನಾಯಕಿ ಮೋಕ್ಷ, ಚಿತ್ರದ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಬೇರೆ ವಿಷಯ ಮಾತಾಡಿದ್ದೇ ಹೆಚ್ಚು. ಅವರಿಗೆ ಇದು ಮೊದಲ ಚಿತ್ರ. ಮಾಡೆಲಿಂಗ್ ಮಾಡುತ್ತಿದ್ದ ಅವರಿಲ್ಲಿ ಬೋಲ್ಡ್ ಆಗಿರುವ ಪಾತ್ರ ಮಾಡಿದ್ದಾರಂತೆ. ಕಾಲೇಜ್ನಲ್ಲಿ ಹುಡುಗರು ಅವರನ್ನು ನೋಡಿದರೆ ಎಲ್ಲರೂ ಹೆದರುವಂತಹ ಪಾತ್ರ ನಿರ್ವಹಿಸಿದ್ದಾರಂತೆ. ಲವ್ ಮಾಡಲ್ಲ, ಲವ್ವಲ್ಲಿ ಬಿದ್ದರೆ ಏನಾಗುತ್ತೆ ಅನ್ನೋ ಪಾತ್ರವದು ಅಂದರು ಮೋಕ್ಷ. ಅಹಲ್ಯ ಅವರಿಲ್ಲಿ ರೊಮ್ಯಾಂಟಿಕ್ ಸೀನ್ಗಳಲ್ಲಿ ಕಾಣಿಸಿಕೊಂಡ ಬಗೆ ವಿವರಿಸಿ ಸುಮ್ಮನಾದರು. ಗುರು ಛಾಯಾಗ್ರಹಣ ಮಾಡಿದ್ದಾರೆ. ಸಿದಾಟಛಿರ್ಥ್, ಚಂದನಾ, ವಿಕ್ರಮ್ ಸಂಗೀತ ನೀಡಿದ್ದಾರೆ. ವಿಶೇಷವೆಂದರೆ, ಹಿರಿಯ ನೃತ್ಯ ನಿರ್ದೇಶಕಿ ತಾರಾ ಮಾಸ್ಟರ್, ಚಿತ್ರದಲ್ಲಿರುವ ಕ್ಯಾಬರೆ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.