ಮತ್ತೆ ಬಂದ್ರು ರಾಘಣ್ಣ
Team Udayavani, Jan 18, 2019, 12:30 AM IST
ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ರಾಜಕುಮಾರ್ ಸುಮಾರು ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ಬೆಳ್ಳಿ ತೆರೆಮೇಲೆ ರೀ ಎಂಟ್ರಿಯಾಗುತ್ತಿದ್ದಾರೆ. ಹೌದು, ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದ ರಾಘವೇಂದ್ರ ರಾಜಕುಮಾರ್, “ಪಕ್ಕದ್ಮನೆ ಹುಡುಗಿ’ ಚಿತ್ರದ ಬಳಿಕ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಬಳಿಕ ನಟನೆಯಿಂದ ನಿರ್ಮಾಣದತ್ತ ಮುಖ ಮಾಡಿದ್ದ ರಾಘವೇಂದ್ರ ರಾಜಕುಮಾರ್ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಇವೆಲ್ಲದರ ನಡುವೆ ರಾಘಣ್ಣ ಮತ್ತೆ ಬಣ್ಣ ಹಚ್ಚುತ್ತಾರೆ ಎಂಬ ಸುದ್ದಿ ಆಗಾಗ್ಗೆ ಚಿತ್ರರಂಗದಲ್ಲಿ ಹರಿದಾಡುತ್ತಿದ್ದರೂ, ಅದ್ಯಾವುದೂ ನಿಜವಾಗಿರಲಿಲ್ಲ. ಆದರೆ, ಈಗ ಈ ಸುದ್ದಿ ನಿಜವಾಗಿದ್ದು, ರಾಘಣ್ಣ ಅಭಿನಯದ “ಅಮ್ಮನ ಮನೆ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ.
ಇತ್ತೀಚೆಗೆ “ಅಮ್ಮನ ಮನೆ’ ಚಿತ್ರದ ಟೀಸರ್ ಹೊರಬಂದಿದೆ. ಚಾಮರಾಜಪೇಟೆಯಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ನಟ ಪುನೀತ್ ರಾಜಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ನಿರ್ಮಾಪಕ ಎಸ್.ಎ ಗೋವಿಂದರಾಜು, ನಾಗಮ್ಮ ಸೇರಿದಂತೆ ರಾಜ್ ಕುಟುಂಬದ ಸದಸ್ಯರು, ಚಿತ್ರರಂಗದ ಅನೇಕ ಗಣ್ಯರ ಸಮ್ಮುಖದಲ್ಲಿ “ಅಮ್ಮನ ಮನೆ’ಯ ಟೀಸರ್ ಹೊರಬಂದಿತು.
ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ನಟ ಪುನೀತ್ ರಾಜಕುಮಾರ್, “ಬಹಳ ವರ್ಷಗಳ ನಂತರ ರಾಘಣ್ಣ ಅವರು ಬಣ್ಣ ಹಚ್ಚಿ¨ªಾರೆ. ರಾಘಣ್ಣ ಈ ಚಿತ್ರದಲ್ಲಿ ಹೊಸಥರ ಕಾಣುತ್ತಿದ್ದಾರೆ. ಚಿತ್ರವನ್ನು ನೋಡಲು ನಾನು ಕಾಯುತ್ತಿದ್ದೇನೆ. ಇಷ್ಟು ವರ್ಷಗಳ ಕಾಲ ಕರ್ನಾಟಕದ ಜನ ನಮ್ಮ ಕುಟುಂಬವನ್ನು ಹರಸಿ¨ªಾರೆ. ಮುಂದೆಯೂ ಈ ಪ್ರೀತಿ-ಹಾರೈಕೆ ನಮ್ಮ ಕುಟುಂಬದ ಮೇಲೆ ಹೀಗೆ ಇರಲಿ. ರಾಘಣ್ಣನ “ಅಮ್ಮನ ಮನೆ’ ಚಿತ್ರವನ್ನು ಹರಸಿ-ಹಾರೈಸಿ’ ಎಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್, “ತುಂಬಾ ದಿನಗಳ ನಂತರ ಈ ಚಿತ್ರದಲ್ಲಿ ಮತ್ತೆ ನಿಮ್ಮ ಮುಂದೆ ಬರುವುದಕ್ಕೆ ಖುಷಿ ಇದೆ. ಅನಾರೋಗ್ಯದಿಂದ ತುಂಬಾ ವರ್ಷಗಳು ನಟನೆಯಿಂದ ದೂರ ಇದ್ದ ಕಾರಣ ನನಗೆ ನಟನೆ ಮರೆತು ಹೋಗಿದಂತಾಗಿತ್ತು. ಆದರೆ ನಿರ್ದೇಶಕರು ಪ್ರತಿ ಸೀನ್ನಲ್ಲೂ ನನ್ನ ತಿದ್ದಿ ನನಗೆ ನಟನೆಗೆ ಸಹಾಯ ಮಾಡಿದರು’ ಎಂದು ನಿರ್ದೇಶಕರಿಗೆ ಧನ್ಯವಾದ ಹೇಳಿದರು.
ಬಳಿಕ ಮಾತನಾಡಿದ ನಿರ್ದೇಶಕ ನಿಖೀಲ್ ಮಂಜು, “”ಅಮ್ಮನ ಮನೆ’ ಹೆಸರು ಪ್ರತಿಯೊಬ್ಬರಿಗೂ ಆಪ್ತವಾಗುವಂಥದ್ದು. ಹಾಗೆಯೇ ಈ ಚಿತ್ರ ಕೂಡ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ಒಬ್ಬ ಪುರುಷನ ಜೀವನದಲ್ಲಿ ಒಂದು ಹೆಣ್ಣು ತಾಯಿಯಾಗಿ, ಮಡದಿಯಾಗಿ ಹಾಗೂ ಮಗಳಾಗಿ ಯಾವ ರೀತಿ ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಾಳೆ ಎಂಬುದೇ ಚಿತ್ರದ ಕಥೆಯ ಒಂದು ಎಳೆಯಾಗಿದೆ’ ಎಂದು ತಿಳಿಸಿದರು.
“ಅಮ್ಮನ ಮನೆ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ, ಮಾನಸಿ ಸುಧೀರ್, ರೋಹಿಣಿ ನಾಗೇಶ್, ಕುಮಾರಿ ಶೀತಲ್ ನಿಖೀಲ್ ಮಂಜು, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಎಂ.ಡಿ ಕೌಶಿಕ್ ಮೊದಲಾದ ಕಲಾವಿದರ ತಾರಾ ಗಣವಿದೆ. “ಶ್ರೀಲಲಿತೆ ಚಿತ್ರಾಲಯ ಪೊ›ಡಕ್ಷನ್’ ಬ್ಯಾನರ್ನಲ್ಲಿ ಆತ್ಮಶ್ರೀ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿ¨ªಾರೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ಛಾಯಾಗ್ರಹಣ, ಸಮೀರ್ ಕುಲಕರ್ಣಿ ಸಂಗೀತ, ಬಿ. ಶಿವಾನಂದ ಸಂಭಾಷಣೆ ಇದೆ. ಚಿತ್ರವನ್ನು ನಿಖೀಲ್ ಮಂಜು ನಿರ್ದೇಶಿಸಿದ್ದಾರೆ. ಸದ್ಯ ಸೆನ್ಸಾರ್ ಮಂಡಳಿಯಿಂದ ಬಿಡು ಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಅಮ್ಮನ ಮನೆ’ ಚಿತ್ರ ಮುಂದಿನ ಫೆಬ್ರವರಿ ಅಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.