ಬೋಳು ತಲೆಯ ಗೋಳು
Team Udayavani, Jul 7, 2017, 3:50 AM IST
“ಈ ಚಿತ್ರ ಮಂಗಳೂರು ಮತ್ತು ಉಡುಪಿಯಲ್ಲಿ ರಿಲೀಸ್ ಮಾಡಿದರೆ ಸಾಕು, ಹಾಕಿದ ಹಣ ಅಲ್ಲಿಗಲ್ಲಿಗೆ ಆಗಿಬಿಟ್ಟರೆ ಅಷ್ಟೇ ಸಾಕು ಅಂದುಕೊಂಡಿದ್ವಿ. ಆದರೆ, ನಮ್ಮ ಸಿನಿಮಾ ಸಾಗರದಾಚೆಗೂ ಹೋಗಿದೆ. ಈಗ ದೇಶಾದ್ಯಂತ ತೆರೆಕಾಣುತ್ತಿದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ…’
– ಹೀಗೆ ಹೇಳುತ್ತಲೇ ಹಾಗೊಂದು ಸೆ¾„ಲ್ ಕೊಟ್ಟರು ನಿರ್ದೇಶಕ ಕಮ್ ನಟ ರಾಜ್ ಬಿ.ಶೆಟ್ಟಿ. ಅವರು ಹೇಳಿದ್ದು ತಮ್ಮ ಚೊಚ್ಚಲ ನಿರ್ದೇಶನದ “ಒಂದು ಮೊಟ್ಟೆಯ ಕಥೆ’ ಕುರಿತು. ಈಗಾಗಲೇ ಈ ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ವಿದೇಶಿ ನೆಲದಲ್ಲೂ ಅಲ್ಲಿನ ಜನರನ್ನು ರಂಜಿಸಿದೆ. ಈ ವಾರ ರಾಜ್ಯ ಸೇರಿದಂತೆ ಅನ್ಯರಾಜ್ಯಗಳಲ್ಲೂ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕ ರಾಜ್ ಬಿ.ಶೆಟ್ಟಿ ಹೇಳಿದ್ದು ಹೀಗೆ.
“ಇದೊಂದು ಬೊಕ್ಕತಲೆ ವ್ಯಕ್ತಿಯ ಕುರಿತ ಕಥೆ. ಜನಾರ್ದನ ಎಂಬ 28 ವಯಸ್ಸಿನ ಕೇಶಹೀನ ಕನ್ನಡ ಪ್ರಾಧ್ಯಾಪಕ. ತನ್ನ ಬೊಕ್ಕ ತಲೆ ಅವನ ದೊಡ್ಡ ಸಮಸ್ಯೆ. ಅದರಿಂದ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ಅಸಮಾಧಾನಗೊಳ್ಳುತ್ತಾನೆ. ಅವನಿಗೆ ಅಂತಹ ಸಂದರ್ಭದಲ್ಲೊಂದು ಆಸೆ ಹುಟ್ಟುತ್ತೆ. ಅದು ಎಲ್ಲರಿಗಿಂತಲೂ ಸುಂದರಿ ಹುಡುಗಿಯನ್ನು ಮದುವೆ ಆಗೋದು. ವಧು ಅನ್ವೇಷಣೆಯಲ್ಲೂ ಅವನಿಗೆ ಬೊಕ್ಕತಲೆಯದ್ದೇ ಸಮಸ್ಯೆ. ಕೊನೆಗೆ ಲವ್ ಮಾಡುವ ಯೋಚನೆ ಮಾಡುತ್ತಾನೆ. ಅವನಿಗೆ ಹೊಂದಿಕೊಳ್ಳುವ ಹುಡುಗಿ ಸಿಗುತ್ತಾಳಾ, ಇಲ್ಲವಾ ಅನ್ನೋದೇ ಚಿತ್ರ’ ಎಂದು ವಿವರ ಕೊಡುವ ರಾಜ್ ಶೆಟ್ಟಿ, “ಇದು ಮಂಗಳೂರು ಭಾಷೆಯಲ್ಲಿರುವ ಸಿನಿಮಾ. ಲೇವಡಿಗೆ ಇಲ್ಲಿ ಹೆಚ್ಚು ಜಾಗವಿದೆ. ಇಲ್ಲಿರುವ 53 ಕಲಾವಿದರಿಗೆ ಮೊದಲ ಅನುಭವ. ಚಿತ್ರಕ್ಕಾಗಿಯೇ ಎರಡು ತಿಂಗಳು ವರ್ಕ್ಶಾಪ್ ನಡೆಸಲಾಗಿತ್ತು. ಇಲ್ಲಿ ನೈಜತೆ ಬಿಟ್ಟು ಹೊರ ಹೋಗಿಲ್ಲ. ಪವನ್ಕುಮಾರ್ ಸಿಕ್ಕಿದ್ದರಿಂದಲೇ ಈ ಚಿತ್ರ ಈ ಮಟ್ಟಕ್ಕೆ ಸುದ್ದಿಯಾಯ್ತು. ನಮ್ಮಂತಹ ಹೊಸಬರಿಗೆ ಸಿಕ್ಕ ಪ್ರೋತ್ಸಾಹ ಇನ್ನೂ ಹೊಸಬರಿಗೂ ಸಿಗಬೇಕು’ ಅಂದರು ರಾಜ್ ಶೆಟ್ಟಿ.
ಪವನ್ ಕುಮಾರ್ಗೆ ಸಿನಿಮಾ ನಿರ್ಮಾಣದಲ್ಲಿ ತೊಡಗಬೇಕು ಅಂತೆನಿಸಿದ್ದು, ಚಿತ್ರದಲ್ಲಿರುವ ಕಂಟೆಂಟ್ ನೋಡಿಯಂತೆ. “ಸಿನಿಮಾ ಚೆನ್ನಾಗಿದೆ. ಬೊಕ್ಕತಲೆ ವ್ಯಕ್ತಿಯ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಅಪಹಾಸ್ಯವಿದೆ, ಅನುಕಂಪವಿದೆ, ಅಪ್ಪಟ ಮನರಂಜನೆಯೂ ಇದೆ. ಇಂತಹ ಸಿನಿಮಾಗಳು ಜನರನ್ನು ತಲುಪಬೇಕು ಎಂಬ ಉದ್ದೇಶದಿಂದ ನಾನು ಜಾಕ್ ಮಂಜು ಜತೆಗೂಡಿ ರಿಲೀಸ್ ಮಾಡುತ್ತಿದ್ದೇನೆ. ಪ್ರಮೋಷನ್ ಸಾಂಗ್ ಮಾಡುವ ಮೂಲಕ ಪ್ರಚಾರ ಮಾಡಲಾಗಿದೆ. ಪೂರ್ಣಚಂದ್ರ ತೇಜಸ್ವಿ ಪ್ರಮೋಷನ್ ಸಾಂಗ್ ಮಾಡಿದ್ದಾರೆ. ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಸದ್ಯಕ್ಕೆ ರಾಜ್ಯದ 30 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿ, ಒಳ್ಳೆಯ ಮೆಚ್ಚುಗೆ ಬಂದ ಬಳಿಕ ಥಿಯೇಟರ್ ಸಂಖ್ಯೆ ಹೆಚ್ಚಿಸಲಾಗುತ್ತದೆ. ಅಕ್ಟೋಬರ್ ಬಳಿಕ ಡಿಜಿಟಲ್ ರಿಲೀಸ್ ಮಾಡುವ ಯೋಚನೆ ಇದೆ’ ಎಂದರು ಪವನ್ಕುಮಾರ್.
ನಿರ್ಮಾಪಕ ಸುಹಾನ್ ಪ್ರಸಾದ್ಗೆ, ನಿರ್ದೇಶಕರು ಕಥೆ ಹೇಳಿ, ಇದನ್ನ ಶಾರ್ಟ್ ಫಿಲ್ಮ್ ಮಾಡೋಣ ಅಂದಿದ್ದರಂತೆ. ಆಗ ಸುಹಾನ್, ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದರಂತೆ. “ಕೊನೆಗೆ ಸಿನಿಮಾ ಮುಗಿಸಿದ ಬಳಿಕ ನಮ್ಮೂರಲ್ಲೇ ರಿಲೀಸ್ ಮಾಡಿದರಾಯ್ತು ಅಂದುಕೊಂಡಿದ್ವಿ. ಆದರೆ, ಪವನ್ಕುಮಾರ್ ಸಿಕ್ಕಾಗ, ಸಿನಿಮಾ ಬೇರೆ ರೂಪ ಪಡೆಯಿತು’ ಅಂದರು ಸುಹಾನ್.
ವಿತರಕ ಜಾಕ್ ಮಂಜು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದು, “ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಇದೆ. 40 ರಿಂದ 70 ಚಿತ್ರಮಂದಿರದಲ್ಲಿ ರಿಲೀಸ್ ಮಾಡುವ ಯೋಚನೆ ಇದೆ. ಆರಂಭದಲ್ಲಿ ಕಡಿಮೆ ಚಿತ್ರಮಂದಿರದಲ್ಲೇ ಚಿತ್ರ ರಿಲೀಸ್ ಮಾಡುವುದಾಗಿ’ ಹೇಳಿದರು ಜಾಕ್ ಮಂಜು.
– ವಿಜಯ್ ಭರಮಸಾಗರ