ಮಕ್ಕಳ ರಾಜ್ಯ
Team Udayavani, Aug 3, 2018, 6:00 AM IST
ಸಾಮಾನ್ಯವಾಗಿ ಮಕ್ಕಳ ಸಿನಿಮಾವೆಂದರೆ ಬರೋದು, ಹೋಗೋದು ಗೊತ್ತಾಗಲ್ಲ. ಪ್ರಚಾರದಿಂದಲೂ ಆ ಸಿನಿಮಾಗಳು ದೂರವೇ ಇರುತ್ತವೆ. ಆದರೆ, “ರಾಮರಾಜ್ಯ’ ಸಿನಿಮಾ ಮಾತ್ರ ಅದರಿಂದ ಭಿನ್ನ. ಎಲ್ಲಾ ಕಮರ್ಷಿಯಲ್ ಸಿನಿಮಾಗಳಂತೆ ಚಿತ್ರವನ್ನು ಪ್ರಚಾರ ಮಾಡಲು ಹಾಗೂ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಅದರ ಮೊದಲ ಅಂಗವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಚಿತ್ರವನ್ನು ನೀಲ್ ಕೆಂಗಾಪುರ ನಿರ್ದೇಶಿಸಿದ್ದು, ಆರ್.ಶಂಕರ್ ಗೌಡ ನಿರ್ಮಿಸಿದ್ದಾರೆ. ಈ ಚಿತ್ರ ಆಗಸ್ಟ್ 10 ರಂದು ಬಿಡುಗಡೆಯಾಗುತ್ತಿದೆ.
ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡಲು ಹೋರಾಡುವ ನಾಲ್ಕು ಮಕ್ಕಳ ಸುತ್ತ ಈ ಸಿನಿಮಾ ಸಾಗುತ್ತದೆ. ಅದೇ ಕಾರಣದಿಂದ ಈ ಚಿತ್ರಕ್ಕೆ “ಗಾಂಧಿ ತಾತನ ಕನಸು’ ಎಂಬ ಟ್ಯಾಗ್ಲೈನ್ ಕೂಡಾ ಇದೆ. ನಿರ್ದೇಶಕ ನೀಲ್ ಹೇಳುವಂತೆ, ಈ ಚಿತ್ರದಲ್ಲಿ ದೊಡ್ಡವರು ಕಲಿಯುವಂತಹ ಸಾಕಷ್ಟು ಅಂಶಗಳಿವೆಯಂತೆ. ಎಲ್ಲರಿಗೂ ಒಂದೇ ನ್ಯಾಯ ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ಸಾಗುತ್ತದೆಯಂತೆ. ಮಕ್ಕಳು ತಮ್ಮ ಕೆಲಸದಿಂದ ಹೇಗೆ ದೊಡ್ಡವರ ಕಣ್ಣು ತೆರೆಸುತ್ತಾರೆ ಎಂಬ ಅಂಶವೂ ಈ ಸಿನಿಮಾದಲ್ಲಿ ಪ್ರಮುಖವಾಗಿದೆಯಂತೆ. ಚಿತ್ರದಲ್ಲಿ ನಾಲ್ಕು ಮಕ್ಕಳು ಪ್ರಮುಖ ಪಾತ್ರ ಮಾಡಿದ್ದು, ಆ ಸಂದರ್ಭದಲ್ಲಿನ ಅನುಭವ, ಮಕ್ಕಳ ತುಂಟಾಟವನ್ನು ಹಂಚಿಕೊಂಡು ಖುಷಿಯಾದರು ನೀಲ್. ಚಿತ್ರವನ್ನು ನಿರ್ಮಿಸುತ್ತಿರುವ ಶಂಕರೇಗೌಡ ಅವರಿಗೆ ಕಥೆ ತುಂಬಾನೇ ಇಷ್ಟವಾಯಿತಂತೆ. ಕಥೆಯೊಂದಿಗೆ ನಟ ಪ್ರೇಮ್ ಅವರ ಬಳಿ ಹೋಗಿ, “ನಿಮ್ಮ ಮಗ ಈ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ’ ಎಂದಾಗ ಪ್ರೇಮ್ ಕಥೆ ಕೇಳಿ ಖುಷಿಯಿಂದ ಒಪ್ಪಿಕೊಂಡರಂತೆ. ಹಾಗಾಗಿ, ಪ್ರೇಮ್ ಪುತ್ರ ಏಕಾಂತ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾನೆ. ಇನ್ನು, ಮಕ್ಕಳ ಸಿನಿಮಾದ ಹಾಡಿಗೆ ಗ್ರಾಫಿಕ್ ಬಳಸೋದು ಕಡಿಮೆ. ಆದರೆ “ರಾಮರಾಜ್ಯ’ ಚಿತ್ರದ “ಓದು ಓದು …’ ಹಾಡು ಗ್ರಾಫಿಕ್ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಈ ಹೆಗ್ಗಳಿಕೆ ನಿರ್ಮಾಪಕರಿಗಿದೆ.
ಚಿತ್ರದಲ್ಲಿ ಅಶ್ವಿನಿ ಗೌಡ ಕೂಡಾ ನಟಿಸಿದ್ದಾರೆ. ಇಲ್ಲಿ ಅವರು ಗೃಹಿಣಿಯಾಗಿ ಕಾಣಿಸಿಕೊಂಡಿದ್ದು, ತುಂಬಾ ಖುಷಿಕೊಟ್ಟ ಪಾತ್ರವಂತೆ. ಚಿತ್ರದಲ್ಲಿ ನಟಿಸಿದ ಏಕಾಂತ್, ಹೇಮಂತ್, ಕಾರ್ತಿಕ್ ಹಾಗೂ ಶೋಯೆಭ್ ಕೂಡಾ ತಮ್ಮ ಖುಷಿ ಹಂಚಿಕೊಂಡರು. ಇನ್ನು, ನಟಿ ಸ್ವಾತಿ ಒಪ್ಪಿಕೊಂಡ ಮೊದಲ ಸಿನಿಮಾ ಇದಂತೆ. ಆದರೆ, ಮೊದಲು ಬಿಡುಗಡೆಯಾಗಿದ್ದು “ಎಡಕಲ್ಲು ಗುಡ್ಡದ ಮೇಲೆ’.
ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದು, ರೀರೆಕಾರ್ಡಿಂಗ್ ಮಾಡುವಾಗ ಸಿನಿಮಾ ನೋಡಿ ಖುಷಿಯಾಯಿತಂತೆ. ಇನ್ನು, ಮಗನ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದ ಪ್ರೇಮ್ “ರಾಮರಾಜ್ಯ’ ತಂಡಕ್ಕೆ ಶುಭಕೋರಿದರು. “ಮಗ ಆತನ ಸ್ವ ಆಸಕ್ತಿಯಿಂದ ಸಿನಿಮಾದತ್ತ ವಾಲಿದ್ದಾನೆ. ಆತನನ್ನು ನಟನೆ, ಜಿಮ್ನಾಸ್ಟಿಕ್ ಸೇರಿದಂತೆ ಹಲವು ಕೆಟಗರಿಗಳಲ್ಲಿ ತರಬೇತಿಗೊಳಿಸಿರುವ ಚಾಮರಾಜ್ ಮಾಸ್ಟರ್ಗೆ ನಾನು ಥ್ಯಾಂಕ್ಸ್ ಹೇಳಲೇಬೇಕು’ ಎಂದರು. ಉಳಿದಂತೆ ಯತಿರಾಜ್, ನಾಗೇಂದ್ರಪ್ರಸಾದ್, ಹನುಮಂತೇಗೌಡ ನಟಿಸಿದ್ದಾರೆ.