ಮನರಂಜನೆ ಪ್ರಸಾದ ವಿನಯಾ ಪ್ರಪಂಚ
Team Udayavani, Oct 6, 2017, 12:07 PM IST
ಅದು “ತುಂಬಿದ ಮನೆ’ ಚಿತ್ರದ ಚಿತ್ರೀಕರಣದ ಸೆಟ್. ಆ ಚಿತ್ರದ ನಾಯಕಿ, ಕೈಯಲ್ಲೊಂದು ನೋಟ್ಬುಕ್ ಹಿಡಿದು ಏನನ್ನೋ ಗೀಚುತ್ತಿದ್ದರಂತೆ. ಆ ನಟಿಯ ಪಕ್ಕದಲ್ಲೇ ಕೂತಿದ್ದ ಆ ಚಿತ್ರದ ನಾಯಕ, “ಏನ್ ಬರೀತಾ ಇದೀರಾ’ ಅಂತ ಕೇಳಿದರಂತೆ.
ಅದಕ್ಕೆ ಉತ್ತರಿಸಿದ ಆ ನಾಯಕಿ, “ಈ ಸೀನ್ನ ಕೆಲ ಶಾಟ್ಸ್ ಬಗ್ಗೆ ನೋಟ್ ಮಾಡ್ತಾ ಇದೀನಿ …’ ಅಂದರಂತೆ. ಆ ನಾಯಕಿಯ ಮಾತು ಕೇಳಿದ ಆ ನಟ, “ಓಹೋ, ನಿಮ್ಗೂ ಡೈರೆಕ್ಷನ್ ಮೇಲೆ ಆಸಕ್ತಿ ಇದೆ ಅನ್ನಿ. ಹಾಗಾದರೆ, ನಿವೇಕೆ ನಿರ್ದೇಶನ ಮಾಡಬಾರದು?ಅಂತ ಪ್ರಶ್ನಿಸಿದರಂತೆ. ಅಂದು ಆ ನಾಯಕ ನಿರ್ದೇಶನವನ್ನೇಕೆ ಮಾಡಬಾರದು ಅಂತ ಹೇಳಿದ್ದೇ ತಡ, ಅಂದಿನಿಂದಲೂ ತಾನೊಂದು ಚಿತ್ರ ನಿರ್ದೇಶಿಸಬೇಕು ಅಂತ ಕನಸು ಕಟ್ಟಿಕೊಂಡಿದ್ದ ಆ ನಾಯಕಿ, ಎರಡು ದಶಕದ ಬಳಿಕ ನಿರ್ದೇಶಕಿಯಾಗುವ ಮೂಲಕ ಆ ಕನಸು ನನಸು ಮಾಡಿಕೊಂಡಿದ್ದಾರೆ! ಇಲ್ಲಿ ಹೇಳ ಹೊರಟಿರುವ ವಿಷಯ ನಟಿ ವಿನಯಾ ಪ್ರಸಾದ್ ಅವರ ಬಗ್ಗೆ. ಅಂದು ಅವರನ್ನು ನಿರ್ದೇಶನ ಮಾಡಬಾರದೇಕೆ ಅಂತ ಕೇಳಿದ್ದು ಡಾ.ವಿಷ್ಣುವರ್ಧನ್. ಅಷ್ಟು ವರ್ಷಗಳ ನಿರ್ದೇಶನದ ಕನಸು, ಈಗ “ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ’ ಚಿತ್ರದ ಮೂಲಕ ಈಡೇರಿದೆ.
ಇಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಟನೆ ಬದಿಗಿಡಲು ಇಷ್ಟವಿರಲಿಲ್ಲ…: “ನನಗೆ ಈ ಚಿತ್ರ ಮಾಡಿದ್ದೇ ಗೊತ್ತಾಗಲಿಲ್ಲ. ಯಾಕೆಂದರೆ, ಕುಟುಂಬದವರ ಜತೆ ಮನೆಯ ಕೆಲಸ ಮಾಡಿದಂತಹ ಅನುಭವ ಆಯ್ತು. ಚಿತ್ರಕ್ಕೆ ನನ್ನ ಪತಿ ಜ್ಯೋತಿಪ್ರಕಾಶ್ ಅತ್ರೆ ಕಥೆ, ಚಿತ್ರಕಥೆ, ಸಂಭಾಷಣೆ ಕೊಟ್ಟಿದ್ದಾರೆ. ಜತೆಗೆ ನಟನೆಯನ್ನೂ ಮಾಡಿದ್ದಾರೆ. ಮಗಳು ಪ್ರಥಮ ಕೂಡ ಅಭಿನಯಿಸಿದ್ದಾಳೆ. ನನ್ನ ನಿರ್ದೇಶನ, ನಿರ್ಮಾಣ ಚಿತ್ರಕ್ಕಿದೆ. ಇನ್ನು, ನನ್ನ ಹಿತ ಬಯಸುವ ಇಡೀ ತಂಡ ನನ್ನೊಂದಿಗಿತ್ತು. ಹಾಗಾಗಿ, ಕುಟುಂಬದವರ ಜತೆ ಒಳ್ಳೆಯ ಚಿತ್ರ ಮಾಡಿದ ಖುಷಿ ನನ್ನದು. ಕಳೆದ 26 ವರ್ಷಗಳಿಂದ ತಂತ್ರಜ್ಞರು, ಕಲಾವಿದರ ಜತೆ ಸೌಹಾರ್ದಯುತವಾಗಿ ಕೆಲಸ ಮಾಡಿದ್ದೇನೆ.
ವೃತ್ತಿ ಜೀವನದಲ್ಲಿ ಎಲ್ಲೂ ಮನಸ್ತಾಪ ಇಲ್ಲದೆ ಕೆಲಸ ಮಾಡಿದ್ದು, ಈಗ ನಿರ್ದೇಶಕಿಯಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಪ್ರತಿಯೊಬ್ಬರ ಸಹಕಾರ, ಪ್ರೋತ್ಸಾಹ ಇರದಿದ್ದರೆ, ಯಶಸ್ವಿಯಾಗಿ ನಿರ್ದೇಶನ ಕೆಲಸ ಮಾಡಲು ಆಗುತ್ತಿರಲಿಲ್ಲ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ವಿನಯಾಪ್ರಸಾದ್.
“ನನಗೆ ಕಳೆದ ಒಂದುವರೆ ದಶಕದಿಂದಲೂ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಕಾರಣ, ಆಗ ನಟಿಯಾಗಿ ವೃತ್ತಿ ಜೀವನದಲ್ಲಿ ಬಿಝಿಯಾಗಿದ್ದೆ. ಕನ್ನಡ, ಮಲಯಾಳಂ, ತಮಿಳು, ತುಳು, ತೆಲುಗು ಭಾಷೆಗಳ ಚಿತ್ರಗಳಲ್ಲಿ ಬಿಜಿಯಾಗಿದ್ದೆ. ನಟಿಯಾಗಿ ಬಿಜಿಯಾಗಿರುವಾಗ ಇದ್ದಕ್ಕಿದ್ದಂತೆ ನಟನೆಯನ್ನು ಬದಿಗೊತ್ತಿ ಬೇರೆ ಕೆಲಸಕ್ಕೆ ಕೈ ಹಾಕಬಾರದು ಅಂತ ತೀರ್ಮಾನಿಸಿದ್ದೆ. ನಿರ್ದೇಶನಕ್ಕೆ ಬಂದರೆ, ಒಂದು ವರ್ಷ ಮೀಸಲಿಡಬೇಕು. ಹಾಗಾಗಿ, ಬಿಝಿಯಾಗಿರುವ ನಟನೆ ಬಿಟ್ಟು, ನಿರ್ದೇಶನದತ್ತ ಗಮನಕೊಡೋಕೆ ಧೈರ್ಯ ಸಾಲಲಿಲ್ಲ. ಕೈಯಲ್ಲಿರುವ ಕೆಲಸ ಬಿಟ್ಟು ಯಾವತ್ತೂ ಬರಬಾರದು ಅಂತ ಸುಮ್ಮನಿದ್ದೆ. ಅದೂ ಅಲ್ಲದೆ, ಹೆಣ್ಣುಮಕ್ಕಳಿಗೆ ಮನೆ ಕಡೆ ಜವಾಬ್ದಾರಿ ಹೆಚ್ಚು. ಅದನ್ನೂ ನೋಡಿಕೊಳ್ಳಬೇಕಿತ್ತು.
ನಟಿಯಾಗಿ ಬೆಳಗ್ಗೆ, ಹೋಗಿ ಸಂಜೆ ಬರಬಹುದು. ಆದರೆ, ನಿರ್ದೇಶನ, ನಿರ್ಮಾಣ ಅಂದಾಗ, ಜವಾಬ್ದಾರಿ ಹೆಚ್ಚುತ್ತೆ. ಸಮಯ ಬರೋವರೆಗೂ ಸುಮ್ಮನಿದ್ದೆ. ಈಗ ಆ ಕನಸು ನನಸಾಗಿದೆ. ಅದು ನನ್ನ ಪತಿ ಜ್ಯೋತಿಪ್ರಕಾಶ್ ಅತ್ರೆ ಅವರಿಂದ ಸಾಧ್ಯವಾಗಿದೆ’ ಅನ್ನುತ್ತಾರೆ ಅವರು.
ತಾಂತ್ರಿಕತೆ ಆಸಕ್ತಿ ನಿರ್ದೇಶನಕ್ಕೆ ಕಾರಣ: “ಒಂದು ಸಿನಿಮಾ ಮಾಡುವುದು ಸುಲಭವಲ್ಲ. ಇಲ್ಲಿ ಹಣ ಮುಖ್ಯ ಆಗಲ್ಲ. ಒಳ್ಳೆಯ ಕಥೆ, ಚಿತ್ರಕಥೆ ಮುಖ್ಯವಾಗುತ್ತೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಪಕ್ಕಾ ತಯಾರಿ ಇರಬೇಕು. ಅದಿರದಿದ್ದರೆ, ನಿರ್ದೇಶನ ಅಸಾಧ್ಯ. ಅಂದುಕೊಂಡಿದ್ದನ್ನು ಮಾಡುವುದಕ್ಕೂ ಆಗುವುದಿಲ್ಲ. ಇಲ್ಲಿ ನಿರ್ದೇಶನ, ನಿರ್ಮಾಣ ಮತ್ತು ನಟನೆ ಈ ಮೂರನ್ನು ನಿರ್ವಹಿಸಿದ್ದು ಚಾಲೆಂಜಿಂಗ್ ಆಗಿತ್ತು. ಏಕೆಂದರೆ, ನಿರ್ದೇಶನ ಒಂದು ಕಡೆಯಾದರೆ, ಪ್ರೊಡಕ್ಷನ್ ಇನ್ನೊಂದು ಕಡೆ, ಮತ್ತೂಂದು ಕಡೆ ನಟನೆ ಎಲ್ಲವನ್ನೂ ತೂಗಿಸಿಕೊಂಡು ಹೋಗಬೇಕಿತ್ತು. ಎಲ್ಲದ್ದಕ್ಕೂ ಮೊದಲೇ ತಯಾರಿ ಇದ್ದುದರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಹಾಗಾಗಿ ಈ ಚಿತ್ರ ನಿರ್ದೇಶನ ಮಾಡಿದ್ದಕ್ಕೆ ನನಗೆ ಖುಷಿ ಇದೆ.
ಈ ಚಿತ್ರದ ಬಳಿಕ ಪುನಃ ನಿರ್ದೇಶನಕ್ಕೆ ಕೈ ಹಾಕ್ತೀರಾ ಅಂದರೆ, ಖಂಡಿತವಾಗಿಯೂ ಆ ಪ್ರಯತ್ನ ಮುಂದುವರೆಯುತ್ತೆ ಎಂಬ ಮಾತು ಕೊಡ್ತೀನಿ. ನಿರ್ಮಾಣ ಮುಂದುವರೆಯುತ್ತೋ ಎಂಬುದು ಈ ಚಿತ್ರದ ಯಶಸ್ಸಿನ ಮೇಲಿದೆ. ಆದರೆ, ನಿರ್ದೇಶಕಿಯಾಗಿ ಪ್ರಯತ್ನ ಬಿಡಲ್ಲ’ ಅನ್ನುತ್ತಾರೆ ವಿನಯಾಪ್ರಸಾದ್.
“ನನಗೆ ನಿರ್ದೇಶನಕ್ಕಿಳಿಯಬೇಕು ಅಂತನಿಸಿದ್ದು, ತಾಂತ್ರಿಕ ವಿಭಾಗದ ಮೇಲಿದ್ದ ಪ್ರೀತಿ ಮತ್ತು ಆಸಕ್ತಿ. ಹಿಂದೆ ಅಭಿನಯಿಸುವಾಗ, ನಿರ್ದೇಶಕರು ಒಂದು ಶಾಟ್ ಇಡುತ್ತಿದ್ದಂತೆಯೇ, ಆ ಶಾಟ್ ಯಾಕೆ ಇಡುತ್ತಿದ್ದಾರೆ, ಯಾವ ಆ್ಯಂಗಲ್ನಲ್ಲಿಡುತ್ತಿದ್ದಾರೆ. ಅದು ಲೋ ಆ್ಯಂಗಲ್ಲೋ, ಮಿಡ್ ಆ್ಯಂಗಲ್ಲೋ, ಲೈಟಿಂಗ್ ಯಾವ ರೀತಿ ಮಾಡುತ್ತಿದ್ದಾರೆ, ಟ್ರಾಲಿ ಹೇಗೆ ಬಳಸುತ್ತಾರೆ ಎಂಬಿತ್ಯಾದಿ ವಿಷಯಗಳನ್ನು ಆಸಕ್ತಿಯಿಂದ ತಿಳಿದುಕೊಳ್ಳುತ್ತಿದ್ದೆ. ಅದು ನನ್ನ ಭಾಗ
ಹೊರತಾಗಿ, ಬೇರೆ ಕಲಾವಿದರು ನಟಿಸುವಾಗ ತುಂಬಾ ಇಂಟ್ರೆಸ್ಟಿಂಗ್ ಆಗಿ ಅದನ್ನು ಗಮನಿಸುತ್ತಿದ್ದೆ. ಅಷ್ಟೇ ಅಲ್ಲ, ನೆಗೆಟಿವ್ ಇದ್ದ ಕಾಲದಲ್ಲೇ ನಾನು ಎಡಿಟಿಂಗ್ ರೂಮ್ನಲ್ಲಿ ಕೂತು ಎಡಿಟಿಂಗ್ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದೆ.
ಎಲ್ಲದ್ದಕ್ಕಿಂತಲೂ ಹೆಚ್ಚಾಗಿ, ಒಳ್ಳೆಯ ಚಿತ್ರಗಳನ್ನು ನೋಡಿದಾಗ, ನಾನೇಕೆ ಈ ರೀತಿಯ ಚಿತ್ರ ನಿರ್ದೇಶಿಸಬಾರದು ಅಂತೆನಿಸಿದ್ದು ನಿಜ. ಆ ಎಲ್ಲಾ ಕಾರಣಗಳೂ ನಿರ್ದೇಶನ ಮಾಡೋಕೆ ಕಾರಣವಾಯ್ತು’ ಎನ್ನುವುದನ್ನು ಮರೆಯುವುದಿಲ್ಲ
ವಿನಯಾ ಪ್ರಸಾದ್.
ನನ್ನ ಪ್ರಪಂಚದೊಳಗೆ ಎಲ್ಲವೂ ಉಂಟು!:
ಹಾಗಾದರೆ, ವಿನಯಾ ಪ್ರಸಾದ್ ಅವರ ಈ “ಪ್ರಪಂಚ’ದೊಳಗೆ ಏನೆಲ್ಲಾ ಇದೆ? ಇದೊಂದು ಫ್ಯಾಮಿಲಿ ಡ್ರಾಮ ಎಂದು ಉತ್ತರಿಸುತ್ತಾರೆ ಅವರು. “ಮನರಂಜನೆಯಾಗಿ ಸಾಗುವ ಚಿತ್ರದಲ್ಲೊಂದು ಸಣ್ಣ ಸಂದೇಶವೂ ಇದೆ. ಸಂದೇಶಕ್ಕೆ ಸಿನಿಮಾ ಮಾಡಿಲ್ಲ. ಮನರಂಜನೆಯೊಂದಿಗೆ ಚಿಕ್ಕ ಮೆಸೇಜ್ ಇಲ್ಲಿದೆ. ಸಿನಿಮಾ ಮಾಧ್ಯಮ ಪ್ರತಿಭಾವಂತರನ್ನು ಎಂದೂ ಬಿಡುವುದಿಲ್ಲ. ಹೆಣ್ಣಮಕ್ಕಳು ನಿರ್ದೇಶನ ಮಾಡುವುದು ದೊಡ್ಡ ವಿಷಯವಲ್ಲ. ಆದರೆ, ಪೂರ್ವ ತಯಾರಿ ಇದ್ದರೆ ಮಾತ್ರ ಇಲ್ಲಿಗೆ ಬನ್ನಿ. ನೀವು ಸಿನಿಮಾ ನಿರ್ದೇಶಿಸುವ ಕನಸು ಕಾಣುತ್ತಿದ್ದರೆ, ಅದಕ್ಕೆ ಮೊದಲು ಒಳ್ಳೆಯ ಕಥೆ ಆಯ್ಕೆ ಮಾಡಿಕೊಳ್ಳಿ. ಹೇಗೆ ಮಾಡಬೇಕು ಎಂಬ ಪ್ಲಾನ್ ಇಟ್ಟುಕೊಳ್ಳಿ ಎಲ್ಲಕ್ಕಿಂತ ಹೆಚ್ಚಾಗಿ, ಧೈರ್ಯ ಕಳೆದುಕೊಳ್ಳದೆ
ನಿರ್ದೇಶನಕ್ಕೆ ಬನ್ನಿ’ ಎಂದು ಯುವತಿಯರಿಗೆ ಕಿವಿಮಾತು ಹೇಳುತ್ತಾರೆ ವಿನಯಾ ಪ್ರಸಾದ್.
ವಿಜಯ್ ಭರಮಸಾಗರ