ಹಾರರ್ ವಿನಾಶಿನಿ: ಹಳ್ಳಿ ಪಂಚಾಯ್ತಿಂದ ಭೂತಬಂಗ್ಲೆಗೆ
Team Udayavani, Aug 11, 2017, 7:00 AM IST
“ಹಳ್ಳಿ ಪಂಚಾಯ್ತಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಉಮೇಶ್ ಈಗ ಸದ್ದಿಲ್ಲದೆ ಇನ್ನೊಂದು ಚಿತ್ರ ಮಾಡಿ ಮುಗಿಸಿದ್ದಾರೆ. ಈ ಬಾರಿ ಅವರು ಹಳ್ಳಿ, ಪಂಚಾಯ್ತಿ ಎಂಬ ವಿಷಯಗಳನ್ನು ಬಿಟ್ಟು ನೇರವಾಗಿ ದೆವ್ವದ ಮೊರೆ ಹೋಗಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇತ್ತೀಚೆಗೆ ಹಾಡುಗಳು ಬಿಡುಗಡೆಯಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಡಾ. ದೊಡ್ಡರಂಗೇಗೌಡ ಅವರು “ವಿನಾಶಿನಿ’ ಚಿತ್ರಕ್ಕೆ ಹರಿಕಾವ್ಯ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.
ಡಾ. ದೊಡ್ಡರಂಗೇಗೌಡ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳಿಗಿಂತ ಭಯಾನಕ ಚಿತ್ರಗಳೇ ಜಾಸ್ತಿಯಾಗಿವೆ. ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಂದೇಶ ಕೊಡುವ ಚಿತ್ರಗಳು ಬರಬೇಕಿದೆ. ಹರಿಕಾವ್ಯ ಉತ್ತಮ ಸಂಗೀತ ಸಂಯೋಜಕ. ಹಾಡುಗಳನ್ನು ಚೆನ್ನಾಗಿಯೇ ಮಾಡಿರುತ್ತಾರೆ’ ಎಂದು ಹೇಳಿದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, “ಈಗಿನ ಯುವಕರಲ್ಲಿ ಹೊಸ ಆಲೋಚನೆ, ಹೊಸ ಯೋಜನೆಗಳಿರುತ್ತವೆ. ಅದು ಜನರನ್ನು ತಲುಪುವಂತಾಗಬೇಕು. ನಾವು ಯಾವುದೇ ಹೊಸ ನಿರ್ಮಾಪಕರು ಬಂದರೂ ಅವರನ್ನು ಪೋ›ತ್ಸಾಸುತ್ತೇವೆ’ ಎಂದು ಹೇಳಿದರು.
“ವಿನಾಶಿನಿ’ಯ ಬಗ್ಗೆ ಮಾತನಾಡಿದ ನಿರ್ದೇಶಕ ಉಮೇಶ್, “ಈವರೆಗೆ ನಿರ್ಮಾಣವಾಗಿರುವ ಹಾರರ್ ಚಿತ್ರಗಳನ್ನು ಹೊರತಾಗಿ ವಿಶೇಷವಾದಂಥ ಕಂಟೆಂಟ್ ನಮ್ಮ ಚಿತ್ರದಲ್ಲಿದೆ. ಆಕಸ್ಮಿಕವಾಗಿ ಸತ್ತು ಹೋಗುವ ನಾಯಕಿ ತನ್ನನ್ನು ಹತ್ಯೆಮಾಡಿದ ಹಂತಕರನ್ನು ಪತ್ತೆ ಹಚ್ಚಿ ಅವರ ಮೇಲೆ ಸೇಡು ತೀರಿಸಿಕೊಳ್ಳುವಂಥ ವಿಭಿನ್ನ ಕಥೆ ಈ ಚಿತ್ರದಲ್ಲಿ’ ಎಂದರು. “ವಿನಾಶಿನಿ’ ಚಿತ್ರವನ್ನು ಎಸ್.ನಾಗೇಶ್, ಎ.ಧನಂಜಯ, ಎಂ.ಹರೀಶ ಹಾಗೂ ಜಯಶ್ರೀಕೃಷ್ಣ ನಿರ್ಮಿಸಿದ್ದು, ಸುಮಲತಾ ಹಾಗೂ ಆರ್ಯನ್ ಕಾಣಿಸಿಕೊಂಡಿದ್ದಾರೆ. ಜೊತೆಗೆ “ಸಿಲ್ಲಿಲಲ್ಲಿ’ ಖ್ಯಾತಿಯ ಶ್ರೀನಿವಾಸಗೌಡ, ಹೊನ್ನವಳ್ಳಿ ಕೃಷ್ಣ, ಕಿಲ್ಲರ್ ವೆಂಕಟೇಶ್, ಜ್ಯೋತಿ ಮುಂತಾದವರಿದ್ದಾರೆ.