ಇನ್ ಫೋಕಸ್: ರಾಜ್ಮಂಜರಿ
Team Udayavani, Mar 30, 2018, 8:15 AM IST
ಬಹುತೇಕ ಹೊಸ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಹೊಸ ನಾಯಕ ನಟ ಇರಬೇಕೆಂದು ಬಯಸುತ್ತಾರೆ. ಅದಕ್ಕೆ ಕಾರಣ ತಮ್ಮ ಕಲ್ಪನೆಯನ್ನು ಸುಲಭವಾಗಿ ತೆರೆಮೇಲೆ ತೋರಿಸಬಹುದೆಂದು. ಹೊಸಬರಾದರೆ ಪಾತ್ರಕ್ಕೆ ಬೇಕಾದಂತೆ ತಯಾರಿ ಮಾಡುವುದು ಸುಲಭ ಎಂಬ ಲೆಕ್ಕಾಚಾರ ನಿರ್ದೇಶಕರದು. ಅದೇ ಕಾರಣದಿಂದ ಅನೇಕ ಹೊಸ ನಾಯಕ ನಟರು ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಈ ಸಾಲಿಗೆ ಹೊಸ ಸೇರ್ಪಡೆ ರಾಜ್ ಚರಣ್. ಯಾವ ರಾಜ್ಚರಣ್ ಎಂದರೆ “ರತ್ನಮಂಜರಿ’ ಸಿನಿಮಾ ಬಗ್ಗೆ ಹೇಳಬೇಕು. ಈಗಷ್ಟೇ ಆರಂಭವಾಗಿರುವ ಈ ಸಿನಿಮಾದಲ್ಲಿ ರಾಜ್ಚರಣ್ ನಾಯಕ. ಸಿನಿಮಾಕ್ಕೆ ಬರುವ ಮುನ್ನ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾಸ್ ನಲ್ಲಿ ನಟನಾ ತರಬೇತಿ ಪಡೆದಿರುವ ರಾಜ್ ಚರಣ್ ಈ ಸಿನಿಮಾಕ್ಕೆ ಆಡಿಷನ್ ಮೂಲಕವೇ ಆಯ್ಕೆಯಾಗಿದ್ದಾರೆ. ಹಾಗಾಗಿ, ಮುಂದೆ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯ ಸಿಗುವ ನಿರೀಕ್ಷೆ ಇದೆ. ಇನ್ನು, ಸದ್ಯ ಕನ್ನಡ ಚಿತ್ರರಂಗಕ್ಕೆ ಬರುವ ಬಹುತೇಕ ಹೊಸ ನಟರು ಹೊಸ ಬಿರುದಿನೊಂದಿಗೆ ಬರುತ್ತಾರೆ. ಇದರಿಂದ ರಾಜ್ ಚರಣ್ ಕೂಡಾ ಹೊರತಾಗಿಲ್ಲ. ಅವರಿಗೆ “ರೈಸಿಂಗ್ ಸ್ಟಾರ್’ ಎಂಬ ಬಿರುದು ನೀಡಲಾಗಿದೆ. ಈ ಚಿತ್ರದಲ್ಲಿ ಅವರ ಪಾತ್ರ ಕೂಡಾ ವಿಭಿನ್ನವಾಗಿದೆಯಂತೆ. ಅಂದಹಾಗೆ, ಅಮೆರಿಕಾದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದು, ಇದೊಂದು ಮರ್ಡರ್ ಮಿಸ್ಟರಿ ಚಿತ್ರ. “ಪಾತ್ರ ತುಂಬಾ ಚೆನ್ನಾಗಿದೆ. ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರವಾಗಿದ್ದು, ಮೊದಲ ಚಿತ್ರದಲ್ಲೇ ಗಂಭೀರ ಪಾತ್ರ ಸಿಕ್ಕಿದೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ರಾಜ್ಕಿರಣ್.
ರವಿ ರೈ