ಒಂದೇ ಜಾಗದಲ್ಲಿ ಕುತೂಹಲದ ಆಟ
ಹೊಸ ಪ್ರಯತ್ನದ ಐ1 ತಂಡಕ್ಕೆ ಸುದೀಪ್ ಸಾಥ್
Team Udayavani, Nov 29, 2019, 5:18 AM IST
“ಇದೊಂದು ವಿಭಿನ್ನ ಮತ್ತು ಪ್ರಯೋಗಾತ್ಮಕ ಚಿತ್ರ…’
– ಹೀಗೆ ಹೇಳಿ ಕ್ಷಣ ಮೌನವಾದರು ನಿರ್ದೇಶಕ ಆರ್.ಎಸ್.ರಾಜಕುಮಾರ್. ಅವರು ಹೇಳಿದ್ದು, “ಐ1′ ಸಿನಿಮಾ ಬಗ್ಗೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ತಮ್ಮ ಸಿನಿಮಾ ಕುರಿತು ಹೇಳಿದ ಅವರು, “ಇದು ಒಂದೇ ಟಿಟಿಯಲ್ಲಿ ನಡೆಯುವ ಕಥೆ. ಮೂರು ಜನರು ಹೇಗೆ ಅದರ ಒಳಗೆ ಲಾಕ್ ಆಗ್ತಾರೆ, ಹೊರಗೆ ಅವರು ಬರುತ್ತಾರೋ, ಇಲ್ಲವೋ, ಅವರನ್ನು ಲಾಕ್ ಮಾಡಿದ್ದು ಯಾರು ಎಂಬಿತ್ಯಾದಿ ಅಂಶಗಳು ಚಿತ್ರದ ಹೈಲೈಟ್. ಆರಂಭದಿಂದ ಅಂತ್ಯದವರೆಗೂ ಸಸ್ಪೆನ್ಸ್-ಥ್ರಿಲ್ಲರ್ನಲ್ಲೇ ಚಿತ್ರ ಸಾಗುತ್ತದೆ. ಪ್ರತಿ ಹತ್ತು ನಿಮಿಷಕ್ಕೂ ಒಂದೊಂದು ಕುತೂಹಲ ಇಟ್ಟು ಸಾಗುವ ಚಿತ್ರದಲ್ಲಿ ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೆ, ಗುಣಮಟ್ಟದ ಚಿತ್ರ ಕೊಟ್ಟಿದ್ದೇವೆ. ಇದು ಹೊಸಬರ ಪ್ರಯತ್ನ. ನಮ್ಮ ಈ ಚಿತ್ರಕ್ಕೆ ನಿಮ್ಮ ಬೆಂಬಲ ಬೇಕು’ ಎಂದರು ನಿರ್ದೇಶಕರು.
ಚಿತ್ರದಲ್ಲಿ ಕಿಶೋರ್, ರಂಜನ್ ಮತ್ತು ಧೀರಜ್ ಮುಖ್ಯ ಪಾತ್ರಧಾರಿಗಳು. ಮೊದಲು ಮಾತನಾಡಿದ ಕಿಶೋರ್,”ಇದು ಹೊಸ ಅಂಶಗಳಿಂದ ಸಾಗುವ ಚಿತ್ರ. ಪ್ರಯೋಗವಿದ್ದರೂ, ಕಮರ್ಷಿಯಲ್ ಅಂಶಗಳೂ ಇಲ್ಲಿವೆ. ನಾನಿಲ್ಲಿ ವಿಶ್ವ ಎಂಬ ಚ್ಯುರ್ಡ್ ಪಾತ್ರ ಮಾಡಿದ್ದೇನೆ. ಪಾತ್ರಕ್ಕೆ ನ್ಯಾಯ ಸಲ್ಲಿಸಿರುವ ನಂಬಿಕೆ ನನ್ನದು. ನಿರ್ದೇಶಕರು ಕೊಟ್ಟ ಪಾತ್ರ ನಿಜಕ್ಕೂ ಚಾಲೆಂಜ್ ಎನಿಸಿತ್ತು. ಎರಡು ಗಂಟೆಗಳ ಕಾಲ, ಟಾಸ್ಕ್ನಲ್ಲೇ ಸಿನಿಮಾ ಕುತೂಹಲ ಮೂಡಿಸುತ್ತ ಹೋಗುತ್ತದೆ. ಬಿಡುಗಡೆ ಮುನ್ನವೇ ಕೊಲ್ಕತ್ತಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವುದು ಖುಷಿಯ ವಿಷಯ’ ಎಂದರು ಕಿಶೋರ್.
ರಂಜನ್ ಅವರಿಲ್ಲಿ ಸಿದ್ಧಾರ್ಥ ಪಾತ್ರ ಮಾಡಿದ್ದಾರಂತೆ. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರೂ ಪಾತ್ರದಲ್ಲಿ ಸಾಕಷ್ಟು ಏರಿಳಿತ ಇದ್ದುದರಿಂದ ಒಂದು ರೀತಿ ಚಾಲೆಂಜಿಂಗ್ ಆಗಿತ್ತು. ಹೊಸಬರೇ ಸೇರಿ ಮಾಡಿದ್ದೇವೆ’ ನಿಮ್ಮ ಬೆಂಬಲ ಇರಲಿ’ ಎಂದರು ರಂಜನ್.
ಮತ್ತೂಬ್ಬ ನಟ ಧೀರಜ್ ಅವರು ಅರ್ಜುನ್ ಪಾತ್ರ ಮಾಡಿದ್ದು, ಕ್ವಾಟ್ಲೆ ಕೊಡುವಂತಹ ಪಾತ್ರ ಮಾಡಿದ್ದಾರಂತೆ. ಅಂದು ಲಹರಿ ಸಂಸ್ಥೆಯ ವೇಲು, ಚಿತ್ರತಂಡಕ್ಕೆ ಶುಭಹಾರೈಸಿದರು. ಅದಕ್ಕೂ ಮುನ್ನ, ಸುದೀಪ್ ಅವರು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, “ಆರಂಭದಲ್ಲಿ ನಾನೂ ಕೂಡ ಇದೇ ವೇದಿಕೆಯಲ್ಲಿ ನಿಂತಾಗ ಹೊಸಬನಾಗಿದ್ದೆ. ಇಲ್ಲೂ ಹೊಸಬರಿದ್ದಾರೆ. ಯಾವಾಗ, ಯಾರು ಏನಾಗುತ್ತಾರೋ ಗೊತ್ತಿಲ್ಲ. ಚಿತ್ರದ ಕಾನ್ಸೆಪ್ಟ್ ಚೆನ್ನಾಗಿ ಕಾಣಿಸುತ್ತಿದೆ. ಒಂದೇ ಜಾಗದಲ್ಲಿ ನಡೆಯುವ ಕಥೆ ಎನಿಸುತ್ತದೆ. ಮೂವರು ನಟರ ಎಮೋಷನ್ಸ್ ಇಷ್ಟ ಆಯ್ತು. ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಶಿಕ್ಷಕಿ ಶೈಲಜಾ ಅವರು ನಿರ್ಮಾಣಕ್ಕಿಳಿದಿದ್ದಾರೆ. ಅದು ಹೊಸ ಬೆಳವಣಿಗೆ. ಚಿತ್ರ ಗೆಲುವು ಕೊಡಲಿ’ ಎಂದರು ಸುದೀಪ್. ಅಂದು, ವಿತರಕ ನಿಹಾಲ್ ಕೂಡ ಇದ್ದರು.