ರತ್ನಾವತಿ ಕಹಾನಿ; ಇಂದಿನ ಕಥೆಗೆ 200 ವರ್ಷಗಳ ಹಿಂದಿನ ಫ್ಲಾಶ್ ಬ್ಯಾಕ್
Team Udayavani, Mar 24, 2017, 3:45 AM IST
200 ವರ್ಷಗಳ ಹಿಂದಿನ ಘಟನೆಯೊಂದು ಇವತ್ತಿನ ಲವ್ಸ್ಟೋರಿಯಲ್ಲಿ ಸೇರಿಕೊಳ್ಳುತ್ತದೆ. ಜೊತೆಗೆ ಅದರಿಂದ ಸಾಕಷ್ಟು ಘಟನೆಗಳು ಕೂಡಾ ನಡೆಯುತ್ತದೆ. ಹೀಗೆ 200 ವರ್ಷಗಳ ಹಿಂದಿನ ಘಟನೆಯನ್ನು ಇವತ್ತಿನ ಲವ್ಸ್ಟೋರಿಗೆ ಕನೆಕ್ಟ್ ಮಾಡಲು ಹೊರಟಿರೋದು ಅಪರಾಜಿತ್ ಎಂಬ ಹೊಸ ನಿರ್ದೇಶಕ. ಅದು “ರತ್ನಾವತಿ’ ಎಂಬ ಸಿನಿಮಾ ಮೂಲಕ.
ಹೌದು, “ರತ್ನಾವತಿ’ ಎಂಬ ಸಿನಿಮೊಂದು ಸದ್ದಿಲ್ಲದೇ ಆರಂಭವಾಗಿ ಮೊದಲ ಹಂತದ ಚಿತ್ರೀಕರಣ ಕೂಡಾ ಮುಗಿಸಿದೆ. ಇತ್ತೀಚೆಗೆ ಚಿತ್ರದ ಮೋಶನ್ ಫೋಸ್ಟರ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗೂ ನಟ ಹರ್ಷ ಫೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರವನ್ನು ಅಪರಾಜಿತ್ ನಿರ್ದೇಶಿಸಿದ್ದಾರೆ. ಈ ಹಿಂದೆ ಕಿರುಚಿತ್ರ ಮಾಡಿದ್ದ ಅಪರಾಜಿತ್ಗೆ ಇದು ಚೊಚ್ಚಲ ಸಿನಿಮಾ. ಈ ಚಿತ್ರಕ್ಕೆ “18+ ನಾಟ್ ಅಲೌಡ್’ ಎಂಬ ಟ್ಯಾಗ್ಲೈನ್ ಇದೆ. ಕಥೆಗೂ ಈ ಟ್ಯಾಗ್ಲೈನ್ಗೂ ಸಂಬಂಧವಿದೆಯಂತೆ.
“200 ವರ್ಷಗಳ ಹಿಂದೆ ನಡೆದ ಘಟನೆಯೊಂದು ಇವತ್ತಿನ ಲವ್ಸ್ಟೋರಿಗೆ ಕನೆಕ್ಟ್ ಆಗುತ್ತದೆ. ಹಾಗೆ ಆಗಲು ಕಾರಣವೇನು ಎಂಬುದೇ ಚಿತ್ರದ ಹೈಲೈಟ್’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಅಪರಾಜಿತ್. ಚಿತ್ರದಲ್ಲಿ ರತ್ನಾವತಿ ಎಂಬ ಪಾತ್ರ ಪ್ರಮುಖವಾಗಿರುತ್ತದೆಯಂತೆ. ಈ ಕಥೆಗೆ ಪ್ರೇರಣೆ ಏನು ಎಂದರೆ ಇತಿಹಾಸದಲ್ಲಿ ಓದಿರೋದು ಎನ್ನುತ್ತಾರೆ ಅಪರಾಜಿತ್. ಬೇರೆ ರಾಜ್ಯದಲ್ಲಿ ಈ ತರಹದ ಘಟನೆಯೊಂದು ನಡೆದಿದೆ. ಅದು ಇತಿಹಾಸದಲ್ಲಿ ದಾಖಲಾಗಿದೆ ಕೂಡಾ. ಅದರ ಪ್ರೇರಣೆಯೊಂದಿಗೆ ಈ ಕಥೆ ಮಾಡಿದ್ದೇನೆ’ ಎಂದು ವಿವರ ಕೊಡುತ್ತಾರೆ ಅಪರಾಜಿತ್. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಎರಡನೇ ಹಂತಕ್ಕಾಗಿ ಸೆಟ್ ಹಾಕುತ್ತಿದೆಯಂತೆ. ಚಿತ್ರದಲ್ಲಿ ಬರುವ ಫ್ಲ್ಯಾಶ್ಬ್ಯಾಕ್ ದೃಶ್ಯಗಳನ್ನು ಸಂಗೀತದ ಮೂಲಕವೇ ಕಟ್ಟಿಕೊಡುವ ಆಲೋಚನೆ ಕೂಡಾ ನಿರ್ದೇಶಕರಿಗಿದೆ. ಈ ಚಿತ್ರವನ್ನು ರವೀಂದ್ರ ಬಾಬು ಅವರು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಭರತ್, ಪಚ್ಚಿ, ಪವನ್ ರವಿ ರಾಜ್, ಕೃಷ್ಣ, ಸಾಗರ್, ಸುನೀಲ್ ರಾಣಾ, ರಶ್ಮಿ ಗೌಡ, ಶಿಲ್ಪಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಟಿಟ್ಸು ಸಂಗೀತ, ನಿರ್ಮಲ್ ಅವರ ಛಾಯಾಗ್ರಹಣವಿದೆ.