ಕೆಜಿಎಫ್ 2 ಅಬ್ಬರದ ನಡುವೆ ಥಿಯೇಟರ್ ನಲ್ಲಿ ‘ಗಂಡುಲಿ’ ಘರ್ಜನೆ
Team Udayavani, Apr 22, 2022, 9:10 AM IST
“ಕೆಜಿಎಫ್-2′ ಅಬ್ಬರ ಜೋರಾಗಿರುವುದರಿಂದ ಈ ವಾರ ತೆರೆಕಾಣಬೇಕಾಗಿದ್ದ ಕನ್ನಡ ಬಹುತೇಕ ಸಿನಿಮಾಗಳು ತಮ್ಮ ಬಿಡುಗಡೆಗೆ ಹಿಂದೇಟು ಹಾಕಿವೆ. ಆದರೆ “ಕೆಜಿಎಫ್-2′ ಅಬ್ಬರದ ನಡುವೆಯೇ ಇಂದು ಯುವನಟ ವಿನಯ್ ರತ್ನಸಿದ್ದಿ ನಟನೆ ಮತ್ತು ನಿರ್ದೇಶನದ “ಗಂಡುಲಿ’ ಚಿತ್ರ ತೆರೆ ಕಾಣುತ್ತಿದೆ.
ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಥಾಹಂದರ ಹೊಂದಿರುವ “ಗಂಡುಲಿ’ ಚಿತ್ರದಲ್ಲಿ ನಾಯಕ ವಿನಯ್ ರತ್ನಸಿದ್ದಿ ಅವರಿಗೆ ಛಾಯಾದೇವಿ ನಾಯಕಿಯಾಗಿ ಜೋಡಿಯಾಗಿದ್ದಾರೆ.
ಉಳಿದಂತೆ ಸುಧಾ ನರಸಿಂಹರಾಜು, ಧರ್ಮೇಂದ್ರ ಅರಸ್, ಶಿವಮೊಗ್ಗ ರಾಮಣ್ಣ, ಸುಬ್ಬೆಗೌಡ್ರು, ಶಿವು, ವಿಜಯ್, ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಕಳೆದ ಕೆಲ ದಿನಗಳಿಂದ “ಗಂಡುಲಿ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇಂದು ಚಿತ್ರವನ್ನು ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
“ಈಗಾಗಲೇ ಬಿಡುಗಡೆಯಾಗಿರುವ “ಗಂಡುಲಿ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಡಬ್ಬಿಂಗ್ ರೈಟ್ಸ್ ಕೂಡ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ. ಸಿನಿಮಾದ ಕಂಟೆಂಟ್ ಕೂಡ ತುಂಬ ಚೆನ್ನಾಗಿರುವುದರಿಂದ, ವಿತರಕರು ಮತ್ತು ಪ್ರದರ್ಶಕರಿಂದಲೂ ಸಿನಿಮಾಕ್ಕೆ ಒಳ್ಳೆಯ ಬೇಡಿಕೆ ಬರುತ್ತಿದೆ. ಸಿನಿಮಾ ಥಿಯೇಟರ್ನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತುಗಳು “ಗಂಡುಲಿ’ ಚಿತ್ರದ ನಾಯಕ ಕಂ ನಿರ್ದೇಶಕ ವಿನಯ್ ರತ್ನಸಿದ್ದಿ ಅವರದ್ದು.