ನೋವಿಗೂ ನಲಿವಿಗೂ ಹಾಲು ತುಪ್ಪ!
Team Udayavani, Mar 31, 2017, 10:42 AM IST
“ತಿಥಿ’ ಖ್ಯಾತಿಯ ಗಡ್ಡಪ್ಪ ಹಾಗೂ ಸೆಂಚ್ಯುರಿ ಗೌಡ ಅವರು “ಹಾಲು ತುಪ್ಪ’ ಸಿನಿಮಾ ಮಾಡುತ್ತಿದ್ದಾರೆ ಅಂತ ಈ ಹಿಂದೆಯೇ ಹೇಳಲಾಗಿತ್ತು. ಈಗ ವಿಷಯ ಏನೆಂದರೆ, ಆ ಸಿನಿಮಾ ಬಹುಬೇಗ ಮುಗಿದಿದ್ದು, ಇನ್ನೇನು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
“ಹಾಲು ತುಪ್ಪ’ ಶುಭಸೂಚನೆಯ ಸಂಕೇತ. ಇದು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ಮನುಷ್ಯ ಹುಟ್ಟಲಿ, ಸಾಯಲಿ, ದೇವರ ಹಬ್ಬ
ಇರಲಿ ಎಲ್ಲದ್ದಕ್ಕೂ ಹಾಲು ತುಪ್ಪ ಮುಖ್ಯವಾಗುತ್ತದೆ.
ಇಂಥದ್ದೊಂದು ಶುಭಸೂಚಕವಾಗಿರುವ “ಹಾಲು ತುಪ್ಪ’ ಎಂಬ ಹೆಸರಲ್ಲಿ ಸಿನಿಮಾ ಮಾಡಿರುವ ನಿರ್ದೇಶಕ ಶಶಾಂಕ್ರಾಜ್,
ಒಂದು ಸಂದೇಶ ಸಾರುವ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಗಡ್ಡಪ್ಪ ಹಾಗೂ ಸೆಂಚ್ಯುರಿ ಗೌಡ ಇದ್ದಾರೆ ಅನ್ನುವ ಕಾರಣಕ್ಕೆ ಇದು “ತಿಥಿ’ ಸಾಲಿನ ಸಿನಿಮಾ ಅಲ್ಲ. ಹಾಗಂತ ಶೀರ್ಷಿಕೆಗೆ “ತಿಥಿ’ ಅಲ್ಲ ಅಂತಾನೇ ಅಡಿಬರಹ ಬರೆದಿದ್ದಾರೆ ನಿರ್ದೇಶಕರು. ಹಾಲು-ತುಪ್ಪ ಶ್ರೇಷ್ಠವಾದದ್ದು. ಅದನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಅದರಂತೆಯೇ ನಮ್ಮ ಬದುಕು ಕೂಡ ತುಪ್ಪದಂತೆಯೇ
ಸಾಗಬೇಕು ಎಂಬ ಅಂಶವನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರೆ.
ಚಿತ್ರದಲ್ಲಿ ಪವನ್ ಸೂರ್ಯ ನಾಯಕರಾಗಿದ್ದಾರೆ. ಅವರಿಗೆ ಇದು ಮೂರನೇ ಸಿನಿಮಾ. ಮೌನ ಅವರಿಗೆ ನಾಯಕಿ. ಇದು ಮೌನ ಅವರ ಮೊದಲ ಚಿತ್ರ. ಇವರೊಂದಿಗೆ ಹೊನ್ನವಳ್ಳಿ ಕೃಷ್ಣ, ಜಯರಾಂ ಇತರರು ನಟಿಸಿದ್ದಾರೆ. ನಿರ್ಮಾಪಕ ದೊಡ್ಮನೆ ವೆಂಕಟೇಶ್ ಅವರು ಈ
ಹಿಂದೆ “ಭೂಮಿಪುತ್ರ’ ಶೀರ್ಷಿಕೆಯಲ್ಲಿ ಸ್ಟಾರ್ ನಟರೊಬ್ಬರ ಚಿತ್ರ ಮಾಡಲು ಅಣಿಯಾಗಿದ್ದರು. ಅಷ್ಟರಲ್ಲಿ ಶಶಾಂಕ್ ರಾಜ್ ಈ ಕಥೆ ಹೇಳಿದ್ದೇ ತಡ, ಆ ಚಿತ್ರವನ್ನು ಬದಿಗೊತ್ತಿ, “ಹಾಲುತುಪ್ಪ’ ಬಿಡೋಕೆ ರೆಡಿಯಾದರು. ಇಲ್ಲಿ ಯಾವುದೇ ಡಬ್ಬಲ್ ಮೀನಿಂಗ್ ಮಾತಾಗಲಿ, ಅಶ್ಲೀಲ ದೃಶ್ಯವಾಗಲಿ ಇರಬಾರದು ಎಂಬ ಒಪ್ಪಂದದ ಮೇಲೆಯೇ ಸಿನಿಮಾಗೆ ಹಣ ಹಾಕಿದ್ದರಂತೆ. ಚಿತ್ರ ಕೂಡ ಹಾಗಯೇ ಮೂಡಿಬಂದಿದೆ ಎಂಬ ಖುಷಿ ನಿರ್ಮಾಪಕರದ್ದು. ಇಂದ್ರ ಸಂಗೀತ ನೀಡಿದ್ದಾರೆ. ದಿಲ್ಸೇ ದಿಲೀಪ್ ನಾಲ್ಕು ಗೀತೆಗಳನ್ನು ರಚಿಸಿದ್ದಾರೆ. “ಜೋಗಿ’ ಪ್ರೇಮ್, ಚಂದನ್ಶೆಟ್ಟಿ, ಇಂದು ನಾಗರಾಜ್ ಹಾಡಿದ್ದಾರೆ. ಆರ್.ವಿ.ನಾಗೇಶ್ವರರಾವ್ ಅವರ ಛಾಯಾಗ್ರಹಣವಿದೆ. ಸಾಯಿರಾಂ ಸಂಭಾಷಣೆ ಬರೆದಿದ್ದಾರೆ. “ಹಾಲು ತುಪ್ಪ’ ಚಿತ್ರಕ್ಕೆ ಈಗ ಹಿನ್ನೆಲೆ ಸಂಗೀತ ಕಾರ್ಯ ಡೆಯುತ್ತಲಿದ್ದು, ಏಪ್ರಿಲ್ನಲ್ಲಿ ಆಡಿಯೋ ಸಿಡಿ ಬಿಡುಗಡೆಯಾಗಲಿದೆ. ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ.