ಹೊಸ ಪ್ರೇಮಿಗಳ ಹಳೆಯ ಆದರ್ಶ
Team Udayavani, Jun 1, 2018, 6:55 PM IST
“ಆದರ್ಶ’ ಎಂಬ ಸಿನಿಮಾವೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ್ದು ನಿಮಗೆ ನೆನಪಿರಬಹುದು. ಆ ಚಿತ್ರ ಬಿಡುಗಡೆಯಾಯಿತು ಅಥವಾ ನಿಂತು ಹೋಯಿತಾ ಎಂಬ ಸಂದೇಹ ಕೂಡಾ ಅನೇಕರಲ್ಲಿತ್ತು. ಈ ಸಂದೇಹ, ಪ್ರಶ್ನೆಗಳ ನಡುವೆಯೇ ಈಗ “ಆದರ್ಶ’ ಚಿತ್ರ ಬಿಡುಗಡೆಯ ಹಂತಕ್ಕೆಬಂದಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ. ಎಲ್ಲಾ ಓಕೆ ಸಿನಿಮಾ ತಡವಾಗಿದ್ದು ಯಾಕೆ ಎಂಬ ಪ್ರಶ್ನೆಗೆ ನಿರ್ದೇಶಕ ಸಾಯಿಪ್ರಭಾಕರ್ ಕೊಡುವ ಉತ್ತರ, ನಿರ್ಮಾಪಕರು ಬಿಝಿ ಇದ್ದರು. ನಿರ್ಮಾಪಕ ಸತೀಶ್ಬಾಬು ಬಿಲ್ಡರ್, ಇಂಜಿನಿಯರ್ ಆಗಿದ್ದು, ಸಿಕ್ಕಾಪಟ್ಟೆ ಬಿಝಿ ಇದ್ದರಂತೆ. ಇದರಿಂದಾಗಿ ಸಿನಿಮಾ ಬಿಡುಗಡೆ ತಡವಾಯಿತಂತೆ ಎಂಬುದು ನಿರ್ದೇಶಕರು ಕೊಡುವ ಕಾರಣ.
ಈ ಚಿತ್ರಕ್ಕೆ “ಪ್ರೀತಿಯಿಂದ ಪ್ರೀತಿಗಾಗಿ, ಪ್ರೀತಿಗೋಸ್ಕರ’ ಎಂಬ ಟ್ಯಾಗ್ಲೈನ್ ಇದೆ. “ಕಾಲೇಜು ಬಿಟ್ಟು ಹೋದಾಗ ನೆನಪುಗಳು ಕಾಡುತ್ತವೆ. ಆ ಅಂಶವೂ ಸಿನಮಾದಲ್ಲಿರಲಿದೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ಗೂ ಹೆಚ್ಚಿನ ಒತ್ತು ನೀಡಲಾಗಿದೆ. “ಮೈ ಆಟೋಗ್ರಾಫ್’ ಚಿತ್ರದ ಶೈಲಿಯಲ್ಲಿ ಈ ಸಿನಿಮಾ ಸಾಗಲಿದೆ’ ಎನ್ನುವುದು ನಿರ್ದೇಶಕರ ಮಾತು. ಅಂದಹಾಗೆ, “ಆದರ್ಶ’ ಚಿತ್ರ ತಮಿಳಿನ “ಏಪ್ರಿಲ್ ಮಾಸತ್ತಿಲ್’ ಸಿನಿಮಾದಿಂದ ಸ್ಫೂರ್ತಿ ಪಡೆದಿದೆ. ನಿರ್ದೇಶಕರು ಹೇಳುವಂತೆ, ಆ ಕತೆಯ ಒನ್ಲೈನ್ ಇಟ್ಟುಕೊಂಡು ಉಳಿದಂತೆ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರಕತೆ ಸಿದ್ದಪಡಿಸಲಾಗಿದೆಯಂತೆ.
ಚಿತ್ರದಲ್ಲಿ ನಾಗಕಿರಣ್ ನಾಯಕರಾಗಿ ನಟಿಸಿದ್ದಾರೆ. ಪ್ರಜ್ವಲ್ ಪೂವಯ್ಯ ಚಿತ್ರದ ನಾಯಕಿ. ಇಲ್ಲಿ ಅವರು ಶ್ರೀಮಂತ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅಮ್ಮನ ಪ್ರೀತಿ ಕಾಣದೇ ಇರುವ ಹುಡುಗಿಗೆ ಕಾಲೇಜಿನಲ್ಲಿ ಪ್ರೀತಿ ಸಿಕ್ಕಾಗ ಆಗುವ ಬದಲಾವಣೆಯ ಮೂಲಕ ಅವರ ಪಾತ್ರ ಸಾಗುತ್ತದೆಯಂತೆ. ನಿಹಾರಿಕಾ ಚಿತ್ರದ ಮತ್ತೂಬ್ಬ ನಾಯಕಿ. ಚಿತ್ರದಲ್ಲಿ ರಾಮಕೃಷ್ಣ, ಪದ್ಮವಾಸಂತಿ, ಬ್ಯಾಂಕ್ ಜನಾರ್ದನ್, ದಶಾವರ ಚಂದ್ರು, ತರಂಗ ವಿಶ್ವ, ಕೆಂಪೇಗೌಡ, ಕುರಿರಂಗ ನಟಿಸಿದ್ದಾರೆ. ಆರು ಹಾಡುಗಳಿಗೆ ಬಿ.ಆರ್.ಹೇಮಂತ್ಕುಮಾರ್ ಸಂಗೀತ ನೀಡಿದ್ದು, ಹರಿಚರಣ್, ರಾಜೇಶ್ ಕೃಷ್ಣ, ಅನುರಾಧ ಭಟ್, ಕುನಾಲ್ ಧ್ವನಿಯಾಗಿ¨ªಾರೆ. . ಚಿಕ್ಕಮಗಳೂರು, ಹೊರನಾಡು, ಕನಕಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ.