ಅಬ್ಬರಿಸಲು ಪ್ರಜ್ವಲ್ ದೇವರಾಜ್ ರೆಡಿ: ಆಗಸ್ಟ್ 12ಕ್ಕೆ ‘ಅಬ್ಬರ’ ತೆರೆಗೆ
Team Udayavani, Jul 22, 2022, 1:33 PM IST
ನಟ ಪ್ರಜ್ವಲ್ ದೇವರಾಜ್ ಅಭಿನಯದ “ಅಬ್ಬರ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ “ಅಬ್ಬರ’ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟೀಸರ್ ಬಿಡುಗಡೆಯ ಮೂಲಕ “ಅಬ್ಬರ’ದಿಂದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಅಂದಹಾಗೆ, “ಅಬ್ಬರ’ ಚಿತ್ರ ಇದೇ ಆಗಸ್ಟ್ 12ಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ “ಅಬ್ಬರ’ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರದ ಬಿಡುಗಡೆಯ ಡೇಟ್ ಅನ್ನು ಅನೌನ್ಸ್ ಮಾಡಿತು. ಪಕ್ಕಾ ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಕಥಾಹಂದರ ಹೊಂದಿರುವ “ಅಬ್ಬರ’ ಚಿತ್ರದಲ್ಲಿ ನಾಯಕ ಪ್ರಜ್ವಲ್ ದೇವರಾಜ್, ಮೂರು ಶೇಡ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ಗೆ ನಾಯಕಿಯರಾಗಿ ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ಮೂವರು ಜೋಡಿಯಾಗಿದ್ದಾರೆ. ಉಳಿದಂತೆ ರವಿಶಂಕರ್, ಶೋಭರಾಜ್, ಕೋಟೆ ಪ್ರಭಾಕರ್, ಶಂಕರ್ ಅಶ್ವಥ್, ವಿಕ್ಟರಿ ವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇ ಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್, ಸಲ್ಮಾನ್, ಮಮತಾ ರಾಹುತ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:2022 ಸ್ಟಾರ್ ಧಮಾಕಾ! ಮುಂಚೂಣಿ ನಟರ ದರ್ಶನ ಭಾಗ್ಯ
“ಸಿ ಆ್ಯಂಡ್ ಎಂ ಮೂವೀಸ್’ ಬ್ಯಾನರ್ನಲ್ಲಿ ಬಸವರಾಜ್ ಮಂಚಯ್ಯ ನಿರ್ಮಿಸಿರುವ “ಅಬ್ಬರ’ ಚಿತ್ರಕ್ಕೆ ಕೆ. ರಾಮ್ನಾರಾಯಣ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ.
ಇದೇ ವೇಳೆ ಮಾತನಾಡಿದ ನಟ ಪ್ರಜ್ವಲ್ ದೇವರಾಜ್, “ಇದು ನನ್ನ 29ನೇ ಚಿತ್ರ. “ಅಬ್ಬರ’ ಟೈಟಲ್ಗೆ ತಕ್ಕಂತೆ ಕಥೆ ಸಿನಿಮಾದಲ್ಲಿದೆ. ಮೂರು ಶೇಡ್ನ ಪಾತ್ರಗಳು ಸಿನಿಮಾದಲ್ಲಿದ್ದು, ಐದು ರೀತಿಯಲ್ಲಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದೇನೆ. ಶೂಟಿಂಗ್ ಸಮಯದಲ್ಲಿ ಒಂದೇ ದಿನ ಮೂರೂ ಶೇಡ್ನಲ್ಲೂ ಪಾತ್ರಗಳನ್ನು ಮಾಡಬೇಕಾಗಿತ್ತು. ಕೊನೆವರೆಗೂ ಸಿನಿಮಾ ಆಡಿಯನ್ಸ್ ಮನಸ್ಸಿನಲ್ಲಿ ಕುತೂಹಲ ಕೆರಳಿಸುತ್ತಲೇ ಸಾಗುತ್ತದೆ. ನಮ್ಮ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತ ನಾಗಿರಬೇಕು ಎಂಬ ಮೆಸೇಜ್ ಸಿನಿಮಾ ದಲ್ಲಿದೆ’ ಎಂದರು.
ಜಿ.ಎಸ್.ಕಾರ್ತಿಕ ಸುಧನ್