ರೆಬೆಲ್ ಸ್ಟಾರ್: ಹಳೆಯ ಪ್ರಭುತ್ವದಲ್ಲೊಬ್ಬ ಹೊಸ ಪ್ರಜೆ
Team Udayavani, Apr 13, 2018, 7:30 AM IST
ಆ ಕಥೆಯನ್ನು ಐದು ಹೀರೋಗಳಿಗೆ ಹೇಳಿದರಂತೆ ನಿರ್ದೇಶಕ ರಂಗನಾಥ್. ಆದರೆ, ಕಥೆ ಕೇಳಿದ ಅವರೆಲ್ಲರೂ, ಸ್ವಲ್ಪ ಹೆವಿ
ಆಯ್ತು ಅಂತ ಬೇಡ ಎಂದರಂತೆ. ಕೊನೆಗೆ ರಂಗನಾಥ್, ನಟ ಚೇತನ್ ಚಂದ್ರ ಹತ್ತಿರ ಹೋಗಿದ್ದಾರೆ. ಅವರೂ ಕಥೆ ಕೇಳಿ,
“ಸ್ವಲ್ಪ ಹೆವಿ ಆಯ್ತಲ್ಲ …’ ಎಂದಿದ್ದಾರೆ. ಆದರೂ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಹಾಗೆ ಒಪ್ಪಿಕೊಂಡ ಚಿತ್ರವೇ “ಪ್ರಭುತ್ವ’. ಆ ಚಿತ್ರಕ್ಕೆ 65 ದಿನಗಳ ಚಿತ್ರೀಕರಣ ಮಾಡುತ್ತಿದ್ದು, ಆ ಪೈಕಿ ಈಗಾಗಲೇ 30 ದಿನಗಳ ಚಿತ್ರೀಕರಣ ಮುಗಿದಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿ, ಚಿತ್ರತಂಡದವರು ಮಾಧ್ಯಮದವರೆದುರು ಬಂದಿದ್ದರು.
ಚಿತ್ರದ ಬಗ್ಗೆ ಮಾತನಾಡುವುದರ ಜೊತೆಗೆ ಇನ್ನೂ ಎರಡು ವಿಷಯಗಳಿದ್ದವು. ಪ್ರಮುಖವಾಗಿ ಮುತ್ತಪ್ಪ ರೈ ಬಿಡುಗಡೆ ಮಾಡಿರುವ ಚಿತ್ರದ ಟೀಸರ್ ತೋರಿಸುವುದು ಮತ್ತು ನಾಯಕ ಚೇತನ್ ಚಂದ್ರ ಅವರ ಹುಟ್ಟುಹಬ್ಬ ಆಚರಿಸುವುದು. ಇವೆರಡರ ಮಧ್ಯೆ ಚಿತ್ರತಂಡದವರು ಚಿತ್ರ ನಡೆದು ಬಂದ ಹಾದಿಯನ್ನು ವಿವರಿಸಿದರು. ಅಂದು ಮಾತನಾಡುವುದಕ್ಕೆ ವೇದಿಕೆಯ ಮೇಲೆ 12 ಜನ ಇದ್ದರು. ಆ ಕಡೆಯಿಂದ ಸಂಗೀತ ನಿರ್ದೇಶಕ ಎಮಿಲ್ ಅವರಿಂದ ಶುರುವಾಗಿ, ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್, ನಾಯಕಿ ಅನಿತಾ ಭಟ್, ಪಾವನಾ, ಹರೀಶ್ ರೈ, ಅಶ್ವತ್ಥ್ ನೀನಾಸಂ, ಚೇತನ್ ಚಂದ್ರ, ನಿರ್ಮಾಪಕರಾದ ಮೇಗನಹಳ್ಳಿ ಶಿವಕುಮಾರ್, ರವಿರಾಜ್, ಆದಿ ಲೋಕೇಶ್, ಸಂಭಾಷಣೆಕಾರ ವಿನಯ್, ಈ ಕಡೆ ನಿರ್ದೇಶಕ ರಂಗನಾಥ್ಗೆ ಮುಗಿಯಿತು.
ಮೊದಲು ನಿರ್ದೇಶಕರೇ ಮಾತನಾಡಿದರು. ಇದಕ್ಕೂ ಮುನ್ನ “ಅರಿವು’ ಎಂಬ ಚಿತ್ರ ಮಾಡಿದ್ದ ಅವರು, ಈಗ “ಪ್ರಭುತ್ವ’ ಮೂಲಕ ವಾಪಸ್ಸು ಬಂದಿದ್ದಾರೆ. ಮೊದಲ ಚಿತ್ರ ಶಿಕ್ಷಣದ ಕುರಿತಾದರೆ, ಈ ಚಿತ್ರ ರಾಜಕೀಯದ ಕುರಿತಾಗಿದೆಯಂತೆ. ಈ ಚಿತ್ರದ ಮೂಲಕ ಅವರು ಅಧಿಕಾರದ ಮೋಹ ಹೇಗಿರುತ್ತದೆ ಮತ್ತು ಮತದಾನ ಎಷ್ಟು ಮುಖ್ಯ ಎಂಬುದನ್ನು ಹೇಳುವುದಕ್ಕೆ ಹೊರಟಿದ್ದಾರಂತೆ.
“ಪ್ರಮುಖವಾಗಿ ದುಡ್ಡು ಪಡೆದು ಮತ ಹಾಕಬೇಡಿ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ಈ ಚಿತ್ರದ ಸಂಭಾಷಣೆ ಪವರ್ಫುಲ್ ಆಗಿರಬೇಕು ಎಂದು ನಮ್ಮ ಸಂಭಾಷಣೆಕಾರ ವಿನಯ್ ಅವರಿಗೆ 30-40 ಪುಸ್ತಕ ಕೊಡಿಸಿಕೊಟ್ಟೆ. ಅವರು ಸಾಕಷ್ಟು ಓದಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಯಾವುದೇ ರಾಜಿ ಇಲ್ಲದೆ ಚಿತ್ರ ಮಾಡಿದ್ದೇವೆ. ಒಂದೊಂದು ¨ ೃಶ್ಯವನ್ನ ಮೂರ್ನಾಲ್ಕು ದಿನ ಶೂಟ್ ಮಾಡಿದ್ದೀವಿ. ಒಂದು ಫ್ರೆಮ್ ಸರಿಬರಲಿಲ್ಲ ಎಂದರೂ ರೀಶೂಟ್ ಮಾಡಿದ್ದೇವೆ’ ಎಂದರು. ಈ ಚಿತ್ರವನ್ನು ಶಿವಕುಮಾರ್ ಅವರು ತಮ್ಮ ಮಗನ ಹೆಸರಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ ಬರೆದಿದ್ದಾರಂತೆ. “ನನಗೆ ಗೊತ್ತಿರುವ ಒಂದು ರಿಯಲ್ ಕಥೆ ಇತ್ತು. ಈ ಕಥೆ ಹೇಳಲೇಬೇಕು ಅಂತನಿಸಿತು. ಈ ಚಿತ್ರದಲ್ಲಿ ಯಾರ್ಯಾರಿಗೋ ವೋಟ್ ಮಾಡಿ, ಕೊನೆಗೆ ಸಮಸ್ಯೆ ಮಾಡಿಕೊಳ್ಳಬೇಡಿ ಅಂತ
ಹೇಳುತ್ತಿದ್ದೇವೆ. ಇವತ್ತಿನ ಸನ್ನಿವೇಶಕ್ಕೆ ತಕ್ಕ ಹಾಗೆ ಕಥೆ ಇದೆ. ಈ ಚಿತ್ರದಲ್ಲಿ ದೊಡ್ಡದೊಡ್ಡ ಕಲಾವಿದರು ನಟಿಸುತ್ತಿದ್ದಾರೆ’
ಎನ್ನುತ್ತಾರೆ ಶಿವಕುಮಾರ್.
ಚೇತನ್ ಚಂದ್ರ ಕೆರಿಯರ್ನಲ್ಲೇ ಇದು ಕಾಸ್ಟಿ ಚಿತ್ರವಂತೆ. “ಅದ್ಭುತ ಚಿತ್ರಕಥೆ ಮಾಡಿಕೊಂಡಿದ್ದಾರೆ. ದೊಡ್ಡ ದೊಡ್ಡ ಕಲಾವಿದರು ಇದ್ದಾರೆ. ನಾನೊಬ್ಬ ಗೊಂಬೆ ಇಲ್ಲಿ. ನಿರ್ದೇಶಕರು ಹೇಳಿದ್ದನ್ನ ಮಾಡುತ್ತಿದ್ದೀನಿ. ಇಲ್ಲೊಬ್ಬ ಸಾಮಾನ್ಯ ಪ್ರಜೆ ನಾನು. ನನ್ನ ಬದುಕಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಮತ್ತು ಹೇಗೆ ರೆಬೆಲ್ ಆಗುತ್ತೀನಿ ಎಂಬುದು ಕಥೆ. ಇಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್ಗಳಿವೆ. “ಚಕ್ರವ್ಯೂಹ’ ಚಿತ್ರದ ಅಂಬರೀಶ್ ಅವರ ಪಾತ್ರದ ತರಹವೇ ನನ್ನ ಪಾತ್ರವೂ ಇದೆ. ಈ ಚಿತ್ರ ನನಗೆ ದೊಡ್ಡ ಬ್ರೇಕ್ ಕೊಡಬಹುದೆಂಬ ನಿರೀಕ್ಷೆ ಇದೆ ಎಂದರು.
ಇನ್ನು ಚೇತನ್ಗೆ ಇಲ್ಲಿ ಸಿಕ್ಸ್ಪ್ಯಾಕ್ ಇಲ್ಲವಾ ಎಂಬ ಪ್ರಶ್ನೆಯೂ ಬಂತು. ಅದರ ಅವಶ್ಯಕತೆ ಈ ಚಿತ್ರದಲ್ಲಿ ಇಲ್ಲ ಎಂಬ ಉತ್ತರ ಬಂತು. ಇನ್ನು ಮಾತಾಡುವವರು ಸಾಕಷ್ಟು ಜನ ಇದ್ದರು. ಎಲ್ಲರೂ ಚಿತ್ರ ಮೂಡಿಬರುತ್ತಿರುವ ರೀತಿಯ ಬಗ್ಗೆ, ನಿರ್ಮಾಪಕರ ಔದಾರ್ಯತೆಯ
ಬಗ್ಗೆ ಎಲ್ಲರೂ ಮಾತನಾಡಿದರು.
ಚೇತನ್ ನಾಡಿಗೇರ್