ರುಕ್ಕು 25 ನಾಟೌಟ್!
Team Udayavani, May 11, 2018, 7:20 AM IST
ಹಾಕಿದ ಹಣ ಬಂದಿಲ್ಲ, ಜನ ಚಿತ್ರ ನೋಡೋದು ಬಿಟ್ಟಿಲ್ಲ ವಾರಕ್ಕೆ ಐದಾರು ಚಿತ್ರಗಳು ಬರುತ್ತವೆ. ಒಂದೇ ವಾರಕ್ಕೇ ಚಿತ್ರಮಂದಿರದಿಂದ ಹೋಗುತ್ತವೆ. ಹೊಸಬರ ಚಿತ್ರಗಳಂತೂ ಚಿತ್ರಮಂದಿರದಲ್ಲಿ ನಿಲ್ಲುವುದೇ ವಿರಳ. ಆ ಸಾಲಿನಲ್ಲಿ “ರುಕ್ಕು’ ಯಶಸ್ವಿ 25 ದಿನ ಪೂರೈಸಿದೆ ಎಂಬುದೇ ಈ ವಾರದ ವಿಶೇಷ. ಹೌದು, ಬಸವರಾಜ್ ಬಳ್ಳಾರಿ ನಿರ್ದೇಶನದ “ರುಕ್ಕು’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಇಂದಿಗೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಖುಷಿ ಹಂಚಿಕೊಳ್ಳಲೆಂದೇ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಕುಳಿತಿದ್ದರು ನಿರ್ದೇಶಕ ಬಸವರಾಜ್ ಬಳ್ಳಾರಿ.
ಮೊದಲು ಮಾತು ಶುರು ಮಾಡಿದ ನಿರ್ದೇಶಕರು ಹೇಳಿದ್ದಿಷ್ಟು. “ಕಷ್ಟಪಟ್ಟು ಮಾಡಿದ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ನಿರೀಕ್ಷೆಯಷ್ಟು ಗಳಿಕೆ ಆಗಿಲ್ಲ. ಚಿತ್ರಮಂದಿರದ ಬಾಡಿಗೆ ಆಗುತ್ತಿದೆ. ಹಾಗಾಗಿ ಚಿತ್ರಮಂದಿರದವರೇ, “ಚಿತ್ರದ ರಿಪೋರ್ಟ್ ಚೆನ್ನಾಗಿದೆ, ಇನ್ನೂ ಇರಲಿ’ ಅಂದಿದ್ದಕ್ಕೆ ಬಿಟ್ಟಿದ್ದೇವೆ. ಚುನಾವಣೆ ಹಿನ್ನೆಲೆಯಲ್ಲಿ ಜನ ಬರುತ್ತಿಲ್ಲ. ಒಳ್ಳೆಯ ಚಿತ್ರ ಅವರು ತಪ್ಪದೆ ನೋಡಬೇಕು. ಹಾಗಾಗಿ, ಇನ್ನೂ ಚಿತ್ರಮಂದಿರದಲ್ಲಿದೆ. ಚುನಾವಣೆ ಬಳಿಕವಾದರೂ ನೋಡಿ, ನಮ್ಮನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು. ಮೂವಿಲ್ಯಾಂಡ್ನಲ್ಲಿ ಸಿನಿಮಾ ಇದೆ. ಉತ್ತರ ಕರ್ನಾಟಕದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ’ ಅಂದರು ಅವರು.
ಚಿತ್ರಕ್ಕೆ ನಿರ್ಮಾಣ ಮಾಡುವುದರ ಜೊತೆಗೆ ನಟಿಸಿರುವ ಶ್ರೇಯಸ್ ಅವರಿಗೆ ಒಳ್ಳೆಯ ಕಥೆಯ ಚಿತ್ರ ಮಾಡಬೇಕೆಂಬ ಆಸೆ ಇತ್ತಂತೆ. ಕೊನೆಗೆ ಅವರೇ ಒಂದು ಕಥೆ ಹಿಡಿದು ನಿರ್ದೇಶಕರ ಬಳಿ ಹೋಗಿ ಈ ಚಿತ್ರ ಮಾಡಿದ್ದಾರೆ. “ನನಗೆ ಹಾಕಿದ ಹಣ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಒಳ್ಳೆಯ ಚಿತ್ರ ಮಾಡಿರುವ ಖುಷಿ ಇದೆ. ಒಂದುಕಾಲು ಕೋಟಿ ಖರ್ಚು ಮಾಡಿದ್ದೇನೆ. ಈವರೆಗೆ 25 ಲಕ್ಷ ಬಂದಿರಬಹುದಷ್ಟೇ. ಎಲ್ಲರ ಪ್ರೋತ್ಸಾಹದಿಂದ ಈ ಚಿತ್ರ ಆಗಿದೆ. ನಮ್ಮಂತಹ ಹೊಸಬರಿಗೆ ಜನರೇ ಕೈ ಹಿಡಿಯಬೇಕು. ಈಗಾಗಲೇ ಸಿನಿಮಾ ಕುರಿತು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಚಿತ್ರವಿನ್ನೂ ಚಿತ್ರಮಂದಿರದಲ್ಲಿದೆ. ಜನರು ನೋಡಿ, ಆಶೀರ್ವದಿಸಬೇಕು’ ಅಂದರು ಅವರು.
ಚಿತ್ರಕ್ಕೆ ಸತೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎ.ಟಿ. ರವೀಶ್ ಅವರು ಚಿತ್ರಕ್ಕೆ ಹಾಡುಗಳನ್ನು ಕೊಟ್ಟಿದ್ದಾರೆ. ಇವರಿಬ್ಬರಿಗೂ ಜನರ ಸ್ವೀಕರಿಸಿರುವುದು ಸಂತಸ ತಂದಿದೆಯಂತೆ. ಹೊಸಬರ ಚಿತ್ರಕ್ಕೆ ಜನ ಸ್ಪಂದಿಸಿದ್ದಾರೆ. ಚುನಾವಣೆ ಬಳಿಕ ಈ ಚಿತ್ರಕ್ಕೆ ಮತ್ತಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತೆ ಎಂಬ ಲೆಕ್ಕಾಚಾರ ಅವರದು. ಛಾಯಾಗ್ರಾಹಕ ರೇಣುಕುಮಾರ್ ಅವರು ಕಥೆ ಕೇಳಿದಾಗ, ಇದರಲ್ಲಿ ಒಳ್ಳೆಯ ಸಂದೇಶವಿದೆ. ಎಮೋಷನ್ಸ್ ಜನರಿಗೆ ಇಷ್ಟವಾಗುತ್ತೆ ಅಂತ ಹೇಳಿದ್ದರಂತೆ. ಅದೇ ಇಲ್ಲಿ ಹೆಚ್ಚು ವರ್ಕೌಟ್ ಆಗಿದೆ ಎಂಬುದು ರೇಣುಕುಮಾರ್ ಮಾತು. ಎಲ್ಲರೂ “ರುಕ್ಕು’ ಕುರಿತು ಖುಷಿ ಹಂಚಿಕೊಳ್ಳುವ ಹೊತ್ತಿಗೆ ಸಮಯ ಮೀರಿತ್ತು. ಆ ಮಾತುಕತೆಗೂ ಬ್ರೇಕ್ ಬಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್