ಸೋತು ಗೆದ್ದ ಕೃಷ್ಣ! ಪರಿಶ್ರಮಕ್ಕೆ ಸಿಕ್ಕ ಫಲ
Team Udayavani, Feb 14, 2020, 5:30 AM IST
“ನನಗೊಂದು ನಂಬಿಕೆ ಇತ್ತು. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಅಂತ. ಅದೀಗ ನಿಜವಾಗಿದೆ…’
– ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಕಮ್ ನಟ “ಡಾರ್ಲಿಂಗ್’ ಕೃಷ್ಣ. ಅವರು ಹೇಳಿದ್ದು, “ಲವ್ ಮಾಕ್ಟೇಲ್’ ಯಶಸ್ಸಿನ ಬಗ್ಗೆ. ಹೌದು, ಈ ಚಿತ್ರ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಷ್ಟೇ ಅಲ್ಲ, ಮೊದಲ ವಾರದ ಐದು ದಿನ ಗಳಿಕೆಯೇ ಇಲ್ಲದೆ 130 ಚಿತ್ರಮಂದಿರಗಳಲ್ಲಿದ್ದ ಚಿತ್ರ ಕೇವಲ ಒಂದೇ ಚಿತ್ರಮಂದಿರಕ್ಕೆ ಬಂದು ನಿಂತಿತ್ತು. ಅಲ್ಲಿಂದ ಶುರುವಾದ ಸಿನಿಮಾ ಪ್ರದರ್ಶನ ಮೂರು ದಿನದಲ್ಲಿ 14 ಮಾಲ್ಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಂಡಿದ್ದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಆ ಸಂಭ್ರಮ ಹಂಚಿಕೊಳ್ಳಲೆಂದೇ ಕೃಷ್ಣ ಟೀಮ್ ಜೊತೆ ಬಂದಿದ್ದರು.
“ನಾನು ಮತ್ತು ಮಿಲನಾ ಇಬ್ಬರೇ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬಗ್ಗೆ ಚರ್ಚಿಸಿ, ಎಲ್ಲಾ ವಿಭಾಗದ ಕೆಲಸವನ್ನೂ ಮಾಡಿ, ಏನಾದರೂ ಸರಿ ಗೆಲ್ಲಬೇಕು ಅಂತ ಸಿನಿಮಾ ಮಾಡಿದ್ದಕ್ಕೂ ಈಗ ಸಾರ್ಥಕವಾಗಿದೆ. ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತು. ನಾನು ಗೆದ್ದೆ ಅಂತ ಖುಷಿ ಆದೆ.
ಆದರೆ, ಸಂಜೆ ಹೊತ್ತಿಗೆ ಕಲೆಕ್ಷನ್ ಡಲ್ ಅಂತ ಸುದ್ದಿ ಬಂತು. ಚೆನ್ನಾಗಿದೆ ಎಂಬ ಮಾತು ಕೇಳಿ ಖುಷಿಪಡಲೋ, ಗಳಿಕೆ ಇಲ್ಲ ಅಂತ ಬೇಸರ ಪಡಲೋ ಗೊತ್ತಾಗಲಿಲ್ಲ. ಮಿಲನಾ ಅವರಲ್ಲಿ ಒದ್ದಾಟ ಕಾಣುತ್ತಿತ್ತು. ಇನ್ನು ಯಾವ ರೀತಿ ಸಿನಿಮಾ ಕೊಡಬೇಕೋ ಎನಿಸಿತು. ಆದರೂ, ಎಲ್ಲೋ ಒಂದು ಕಡೆ ನಂಬಿಕೆ ಇತ್ತು. ಗುರುವಾರ ಒಂದು ಚಿತ್ರಮಂದಿರ ಬಿಟ್ಟು ಎಲ್ಲಾ ಚಿತ್ರಮಂದಿರದಿಂದಲೂ ಚಿತ್ರ ತೆಗೆಯಲಾಯಿತು. ಶಾರದಾ ಚಿತ್ರಮಂದಿರದಿಂದಲೇ ಚಿತ್ರ ಗೆಲ್ಲುತ್ತೆ ನೋಡ್ತಾ ಇರಿ ಅಂತ ಪಾಸಿಟಿವ್ ಆಗಿ ಹೇಳಿದ್ದೆ. ಜನ ಬಂದರು ಹೌಸ್ಫುಲ್ ಆಯ್ತು. ಪ್ರದರ್ಶನಗಳು ಹೆಚ್ಚಾದವು.
ಮಾಲ್ಗಳಲ್ಲೂ ಕಾಡಿ ಬೇಡಿ ಒಂದು ಶೋ ಪಡೆದೆ. ಅಲ್ಲೂ ಹೌಸ್ಫುಲ್ ಆಯ್ತು. ಕೊನೆಗೆ ಎಲ್ಲಾ ಮಾಲ್ಗಳಲ್ಲೂ ಶೋ ಹೌಸ್ಫುಲ್ ಕಂಡವು. ನನ್ನ ಜರ್ನಿಯಲ್ಲಿ 14 ಶೋ ಹೌಸ್ಫುಲ್ ಪ್ರದರ್ಶನ ಕಂಡಿದ್ದು ಹೆಮ್ಮೆ ಎನಿಸುತ್ತಿದೆ.
ಎಷ್ಟೋ ಜನ ಗಂಡ ಹೆಂಡತಿ ಜಗಳ ಮಾಡಿಕೊಂಡರೆ, “ಲವ್ ಮಾಕ್ಟೇಲ್’ ನೋಡಿ ಸರಿ ಹೋಗ್ತಿàರಾ ಅಂತಿದ್ದಾರೆ. ಇನ್ನು, ಶೈನ್ಶೆಟ್ಟಿ ಸಿನಿಮಾ ನೋಡಿ, “ನನಗೆ ಚಿತ್ರದೊಳಗಿರುವ ನಿಧಿ ಥರ ಹೆಂಡ್ತಿ ಸಿಗಬೇಕು’ ಅಂದಿದ್ದಾರೆ. ಸದ್ಯಕ್ಕೆ ಚಿತ್ರ ಚೆನ್ನಾಗಿ ಹೋಗುತ್ತಿದೆ. ಕನ್ನಡಿಗರಿಗೆ ಧನ್ಯವಾದ’ ಎಂದರು ಕೃಷ್ಣ.
ಮಿಲನಾ ನಾಗರಾಜ್ ಕೂಡ ಖುಷಿಯಲ್ಲಿದ್ದರು. “ಒಳ್ಳೆಯ ಚಿತ್ರಕ್ಕೆ ಬೆಂಬಲವೇ ಇಲ್ಲವಲ್ಲ ಅಂತ ಬೇಸರವಿತ್ತು. ಅದಕ್ಕೆ ಸರಿಯಾಗಿ ಚಿತ್ರಮಂದಿರಗಳಿಂದಲೂ ಚಿತ್ರ ಹೋಗುತ್ತಿದೆ ಎಂಬ ಫೀಲ್ ಇತ್ತು. ಆದರೂ, ಕೃಷ್ಣ ನಂಬಿಕೆ ಕಳೆದುಕೊಳ್ಳಲಿಲ್ಲ. ಒಂದು ಚಿತ್ರಮಂದಿರದಿಂದಲೇ ಚಿತ್ರ ಗೆಲ್ಲುತ್ತೆ ನೋಡು ಅಂದರು. ಅದು ಹಾಗೆಯೇ ಆಗಿದೆ. ಇಷ್ಟಕ್ಕೆಲ್ಲಾ ಕನ್ನಡಿಗರು, ಮಾಧ್ಯಮ, ಪತ್ರಕರ್ತರು ಕಾರಣ’ ಎಂದರು ಮಿಲನಾ.
ನಿರ್ಮಾಪಕ ನಾಗಪ್ಪ ಅವರು, “ನಾವೀಗ ಸೋತು ಗೆದ್ದಿದ್ದೇವೆ. ಒಳ್ಳೆಯ ಸಿನಿಮಾಗೆ ಜನ ಕೈ ಬಿಡಲ್ಲ ಎಂಬುದು ಸಾಬೀತಾಗಿದೆ ಎಂದರು. ಯುವ ನಟ ಅಭಿಲಾಶ್, ಈ ಚಿತ್ರದ ಮೂಲಕ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಕನ್ನಡಿಗರಿಗೆ ಸಲಾಂ ಎಂದರು. ಕ್ರೇಜಿಮೈಂಡ್ ಶ್ರೀ ಕೂಡ ಗೆಲುವಿನ ಸಂಭ್ರಮ ಹಂಚಿಕೊಂಡರು.