ಹಳೇ ಕೋರ್ಟು ಹೊಸ ಕೇಸು
Team Udayavani, Aug 11, 2017, 7:50 AM IST
ಬರೋಬ್ಬರಿ 10 ವರ್ಷ
– ಒಂದು ದೊಡ್ಡ ಗ್ಯಾಪ್ ಮುಗಿಸಿಕೊಂಡು ಮತ್ತೆ ನಿರ್ದೇಶನಕ್ಕೆ ವಾಪಾಸ್ಸಾಗಿದ್ದಾರೆ ಟಿ.ಎನ್. ಸೀತಾರಾಂ. “ಮೀರಾ ಮಾಧವ ರಾಘವ’ ಸಿನಿಮಾದ ನಂತರ ಟಿ.ಎನ್.ಎಸ್ ಯಾವುದೇ ಸಿನಿಮಾ ಮಾಡಿರಲಿಲ್ಲ. ಈಗ “ಕಾಫಿ ತೋಟ’ ಮೂಲಕ ಬಂದಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್ ಬಿಡುಗಡೆಯಾಗಿವೆ. ಸಿನಿಮಾ ಪಾಸಿಟಿವ್ ಸೈನ್ ತೋರಿಸುತ್ತಿರುವುದರಿಂದ ಟಿ.ಎನ್.ಎಸ್ ಕೂಡಾ ಖುಷಿಯಾಗಿದ್ದಾರೆ. ಯಾಕೆ ಹತ್ತು ವರ್ಷ ಗ್ಯಾಪ್ ಆಯಿತು ಎಂದು ನೀವು ಟಿಎನ್ಎಸ್ ಅವರನ್ನು ಕೇಳುವಂತಿಲ್ಲ. ಏಕೆಂದರೆ ಅವರು ಕಿರುತೆರೆಯಲ್ಲಿ ಎಷ್ಟು ಬಿಝಿಯಾಗಿದ್ದರು ಎಂಬುದು ನಿಮಗೆ ಗೊತ್ತೇ ಇದೆ. ಬಹುಶಃ ಮನೆಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಉಗುರು ಕಚ್ಚಿಕೊಂಡು ಟೆನÒನ್ನಲ್ಲಿ ಕೋರ್ಟ್ ಸೀನ್ ನೋಡುವಂತೆ ಮಾಡಿದ್ದು ಟಿ.ಎನ್.ಎಸ್ ಎಂದರೆ ತಪ್ಪಲ್ಲ. ಆ ಮಟ್ಟಿಗೆ ಕೌಟುಂಬಿಕ ಧಾರಾವಾಹಿಗಳ ಮೂಲಕ ಅವರು ಕಿರುತೆರೆ ಮಂದಿಯನ್ನು ಆವರಿಸಿಕೊಂಡಿದ್ದರು. ಕಿರುತೆರೆಯಲ್ಲಿ ಬಿಝಿ ಇದ್ದರೂ ಕಥೆ ಮಾಡಿಕೊಂಡಿಟ್ಟಿದ್ದರು ಟಿ.ಎನ್.ಎಸ್. ಆದರೆ, ಸಿನಿಮಾ ಮಾಡೋದಾ, ಬೇಡವಾ ಎಂಬ ಗೊಂದಲದಲ್ಲಿ ಅವರಿದಿದ್ದು ಸುಳ್ಳಲ್ಲ. ಏಕೆಂದರೆ, ಸಿನಿಮಾ ಮಾಡೋದು ದೊಡ್ಡ ಪ್ರಕ್ರಿಯೆ.
ಅವರೇ ಹೇಳುವಂತೆ ಅವರ ಈ ಹಿಂದಿನ “ಮೀರಾ ಮಾಧವ ರಾಘವ’ ಸಿನಿಮಾ ಅಷ್ಟೊಂದು ಚೆನ್ನಾಗಿ ಹೋಗಲಿಲ್ಲ. ಹಾಗಾಗಿ, ಸಿನಿಮಾ ಮಾಡುವ ಬಗ್ಗೆ ಯೋಚಿಸುತ್ತಿದ್ದರು. ಹೀಗಿರುವಾಗ ಅದೊಂದು ದಿನ ಯೋಗರಾಜ್ ಭಟ್ಟರು, ಟಿ.ಎನ್.ಎಸ್ ಅವರ ಮನೆಗೆ ಬಂದು “ಸಿನಿಮಾ ಮಾಡಿ ಮೆಷ್ಟ್ರೇ’ ಎಂದರಂತೆ. ಅದಕ್ಕೆ ಮೆಷ್ಟ್ರ ಉತ್ತರ “ನಿರ್ಮಾಪಕರು ಬೇಕಲ್ಲ’ ಎಂದಾಗಿತ್ತು. “ನಿಮ್ಮ ಮನೆ ಮುಂದೆ ನಿರ್ಮಾಪಕರು ಸಾಲುಗಟ್ಟಿ ನಿಲ್ಲುವಂತೆ ಮಾಡುತ್ತೇನೆ’ ಎಂದು ಅಭಯದ ಮಾತಿನೊಂದಿಗೆ ಭಟ್ಟರು ಕೊಟ್ಟ ಐಡಿಯಾ, ಫೇಸ್ಬುಕ್ ಸ್ಟೇಟಸ್. “ಸಿನಿಮಾ ಮಾಡುತ್ತಿದ್ದೇನೆ. ಆಸಕ್ತರು ಬಂಡವಾಳ ಹೂಡಬಹುದು’ ಎಂದು ಸ್ಟೇಟಸ್ ಹಾಕಿ ಎಂದರಂತೆ ಭಟ್ಟರು. ಅದರಂತೆ ಟಿ.ಎನ್.ಎಸ್ ಸ್ಟೇಟಸ್ ಹಾಕುತ್ತಾರೆ. ಭಟ್ಟರ ಪ್ಲ್ರಾನ್ ವಕೌìಟ್ ಆಗಿ ಸಾಕಷ್ಟು ಮಂದಿ “ನಾವು ಇಷ್ಟು ದುಡ್ಡು ಹಾಕುತ್ತೇವೆ’ ಎನ್ನುತ್ತಾ ಮುಂದೆ ಬರುತ್ತಾರೆ. ಹೀಗೆ ಮುಂದೆ ಬಂದ ಮಂದಿಯಲ್ಲಿ ಈಗ 29 ಮಂದಿಯನ್ನು ಚಿತ್ರದ ನಿರ್ಮಾಪಕರನ್ನಾಗಿ ಮಾಡಲಾಗಿದೆ.
ಟಿ.ಎನ್.ಎಸ್ ಅವರಿಗೆ ಹೋದಲ್ಲೆಲ್ಲಾ ಎದುರಾಗುವ ಒಂದು ಪ್ರಶ್ನೆ ಎಂದರೆ ಚಿತ್ರದ ಟೈಟಲ್ “ಕಾಫಿ ತೋಟ’ ಎಂದು ಯಾಕಿಟ್ಟಿದ್ದೀರಿ, ಕಥೆಯಲ್ಲಿ ಏನಿದೆ ಎಂಬುದು. “ಕಾಫಿ ತೋಟ ಅಂದರೆ ಒಂದು ನಿಗೂಢತೆ, ಬೆಳಗಿನ ಆಹ್ಲಾದ, ಆತ್ಮೀಯ ಫೀಲಿಂಗ್ … ಇವೆಲ್ಲವೂ ಅಂತರ್ಗತವಾಗಿರುವ ಒಂದು ಕಥೆ. ಹಾಗಾಗಿ, “ಕಾಫಿ ತೋಟ’ ಎಂದು ಟೈಟಲ್ ಇಟ್ಟಿದ್ದೇನೆ. ಚಿತ್ರದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳಿವೆ. ವ್ಯಕ್ತಿ ಒಂಟಿಯಾಗಿದ್ದಾಗ ಆತನ ಮನಸ್ಸು ಒಂದಾ ಆಧ್ಯಾತ್ಮ ಅಥವಾ ಕ್ರೈಮ್ ಕಡೆ ವಾಲುತ್ತದೆ. ಈ ಅಂಶವನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದೇನೆ’ ಎನ್ನುವುದು ಟಿ.ಎನ್.ಸೀತಾರಾಂ ಅವರ ಮಾತು. ನೀವು ಟಿ.ಎನ್.ಸೀತಾರಾಂ ಅವರ ಧಾರಾವಾಹಿಗಳನ್ನು ನೋಡಿದ್ದರೆ ಅದರಲ್ಲಿ ಬರುವ ಕೋರ್ಟ್ ರೂಂ ಡ್ರಾಮಾಗಳನ್ನು ಖಂಡಿತಾ ಇಷ್ಟಪಟ್ಟಿರುತ್ತೀರಿ. ಅವರ ಧಾರಾವಾಹಿಗಳ ದೊಡ್ಡ ಶಕ್ತಿ ಆ ಕೋರ್ಟ್ ರೂಂಗಳಾಗಿತ್ತೆಂದರೆ ತಪ್ಪಲ್ಲ.
ಆ ಟ್ರೇಡ್ ಮಾರ್ಕ್ ಅನ್ನು ಟಿ.ಎನ್.ಸೀತಾರಾಂ “ಕಾμ ತೋಟ’ದಲ್ಲೂ ಬಳಸಿಕೊಂಡಿದ್ದಾರೆ.
“ವಾಸ್ತುಪ್ರಕಾರ ನನಗೆ ಕಪ್ಪು ಬಣ್ಣ ಚೆನ್ನಾಗಿ ಹೊಂದುತ್ತೆ ಅನ್ಸುತ್ತೆ. ನಾನು ಲಾಯರ್ ಆಗಿ¨ಾªಗ ನನಗೆ ಕರಿಕೋಟಿನಿಂದ ಹೆಚ್ಚು ಹಣ ಹುಟ್ಟಲಿಲ್ಲ. ಅದೇ ನಾನು ಧಾರಾವಾಹಿುಲ್ಲಿ ಅದನ್ನು ಬಳಸಿದ ನಂತರ ಸ್ವಲ್ಪ ಹಣ ನೋಡಿದೆ. ಈಗ ಮತ್ತೆ ಈ ಸಿನಿಮಾದಲ್ಲೂ ಆ ಕರಿಕೋಟ್ ಬಳಸಿದ್ದೇನೆ. ಅಂದರೆ ಚಿತ್ರದಲ್ಲಿ ನಾನು ಲಾಯರ್ ಆಗಿ
ನಟಿಸಿದ್ದು, ಕೋರ್ಟ್ ದೃಶ್ಯ ಕೂಡಾ ಪ್ರಮುಖವಾಗಿರುತ್ತದೆ. ಚಿತ್ರದ ಪ್ರಮುಖ ಅಂಶ ನಡೆಯೋದು ಕೋರ್ಟ್ನಲ್ಲಿ’ ಎನ್ನುತ್ತಾರೆ ಸೀತಾರಾಂ.
ಮೊದಲೇ ಹೇಳಿದಂತೆ ಚಿತ್ರಕ್ಕೆ 29 ನಿರ್ಮಾಪಕರು. ಒಂದು ವೇಳೆ ಸಿನಿಮಾದಿಂದ ಕಾಸು ಬಾರದೇ ಹೋದರೆ ಏನು ಮಾಡುತ್ತೀರಿ ಎಂದು ನಿರ್ಮಾಪಕರಲ್ಲಿ ಕೇಳಿದರಂತೆ. ಅದಕ್ಕೆ ನಿರ್ಮಾಪಕರು, ಈಗಾಗಲೇ ಕಾಸು ಬಂದಿದೆಯಲ್ಲ ಎಂದರಂತೆ. ಟಿ.ಎನ್.ಎಸ್ ಅವರಿಗೆ ಆಶ್ಚರ್ಯ. ಸಿನಿಮಾ ಬಿಡುಗಡೆ ಮುಂಚೆ ಹೇಗಪ್ಪಾ ಕಾಸು ಬಂತೆಂದು. ಆಗ ನಿರ್ಮಾಪಕರು, “ನಾವು ಇಷ್ಟು ದಿನ ಖುಷಿಯಿಂದ ಚಿತ್ರೀಕರಣದಲ್ಲಿ ಭಾಗವಹಿಸಿದೆವು. ಒಳ್ಳೆಯ ತಂಡದ ಜೊತೆ ಬೆರೆತೆವು. ಹೊಸ ಲೋಕ ನೋಡಿದೆವು. ಅದೇ ನಮಗೆ ಕಾಸು ಬಂದಂತೆ’ ಎಂದರಂತೆ. ಹಾಗಂತ ಟಿ.ಎನ್.ಎಸ್ ಅಷ್ಟಕ್ಕೆ ಸುಮ್ಮನಾಗಲಿಲ್ಲ. “ಆ ಖುಷಿಯ ಜೊತೆಗೆ ಚಿತ್ರದಿಂದ ಕಾಸು ಕೂಡಾ ಬರುವ ಲಕ್ಷಣಗಳು ಕಾಣುತ್ತಿವೆ. ಎಲ್ಲಾ ಕಡೆ ಪಾಸಿಟಿವ್ ಎನರ್ಜಿ ಕಾಣುತ್ತಿದೆ’ ಎಂದರಂತೆ. ಅದರಂತೆ ಚಿತ್ರದ ವಿತರಣೆಯನ್ನು ಜಯಣ್ಣ ಮಾಡುತ್ತಿದ್ದಾರೆ. ಇದು ಕೂಡಾ ಟಿ.ಎನ್.ಎಸ್ ಅವರಿಗೆ ಖುಷಿ ತಂದಿದೆ.
ಅಂದಹಾಗೆ, ಚಿತ್ರದ ಟೀಸರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ಯಶ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಯೋಗರಾಜ್ ಭಟ್ಟರು ಕೂಡಾ ಸಾಥ್ ನೀಡಿದರು. ಚಿತ್ರದಲ್ಲಿ ರಘು ಮುಖರ್ಜಿ, ರಾಧಿಕಾ ಚೇತನ್, ಅಪೇಕ್ಷಾ, ಸಂಯುಕ್ತಾ ಹೊರನಾಡು ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಚಿತ್ರದಲ್ಲಿ ನಟಿಸಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮಾತನಾಡಲು ಟಿ.ಎನ್.ಎಸ್ ಮರೆಯಲಿಲ್ಲ.
– ರವಿಪ್ರಕಾಶ್ ರೈ