ಎಂಟು ತಿಂಗಳ ಬಳಿಕ ಒಂದೇ ದಿನ ಮೂರು ಸಿನಿಮಾ
ಇಂದು ತೆರೆಗೆ ಮೂರು ಚಿತ್ರಗಳು
Team Udayavani, Nov 27, 2020, 10:55 AM IST
ಎಂಟು ತಿಂಗಳ ಹಿಂದಿನ ಗಾಂಧಿನಗರದ ಚಿತ್ರಣವನ್ನು ನೀವೊಮ್ಮೆ ರಿವೈಂಡ್ಮಾಡಿಕೊಂಡರೆ ನಿಮಗೆ ವಾರ ವಾರ ಐದಾರು ಸಿನಿಮಾಗಳು ತೆರೆಕಾಣುತ್ತಿದ್ದ ದೃಶ್ಯಗಳು ನೆನಪಾಗುತ್ತವೆ.
ಚಿತ್ರಮಂದಿರಗಳಿಗೆ ಪೈಪೋಟಿ, ಒಂದು ವಾರಕ್ಕೆ ನಮ್ಮ ಸಿನಿಮಾವನ್ನುಕಿತ್ತಾಕಿದರು ಎಂಬ ಬೇಸರ,ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಹಿಡಿಯುವ ಪ್ರಯತ್ನ … ಎಲ್ಲವೂ ಜೋರಾಗಿಯೇ ನಡೆಯುತ್ತಿತ್ತು. ಆದರೆ,ಕೋವಿಡ್ ಎಂಬ ಮಹಾಮಾರಿಯಿಂದ ಎಲ್ಲವೂಸ್ತಬ್ಧವಾಗಿತ್ತು. ಈಗ ಮತ್ತೆ ಚಿತ್ರರಂಗ ಚಿಗುರುತ್ತಿದೆ. ಹಳೆಯ ದಿನಗಳಿಗೆ ಮರಳುವ ಎಲ್ಲಾ ಲಕ್ಷಣಗಳುಕಾಣುತ್ತಿವೆ.ಕಳೆದ ವಾರ “ಆಕ್ಟ್1978′ ಚಿತ್ರ ತೆರೆಕಾಣುವ ಮೂಲಕ ಹೊಸ ಸಿನಿಮಾಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ. ವಿಶೇಷವೆಂದರೆ ಈ ವಾರ ಬರೋಬ್ಬರಿ ಮೂರು ಹೊಸ ಸಿನಿಮಾಗಳು ತೆರೆಕಾಣುತ್ತಿವೆ.
ಎಂಟು ತಿಂಗಳ ನಂತರ ಒಂದೇ ದಿನ ಮೂರು ಸಿನಿಮಾಗಳು ತೆರೆಕಾಣುತ್ತಿರುವುದರಿಂದ ಸಹಜವಾಗಿಯೇ ಸಿನಿಮಾ ಮಂದಿ ಹಾಗೂ ಪ್ರೇಕ್ಷಕರು ಖುಷಿಯಾಗಿದ್ದಾರೆ. “ಗಡಿಯಾರ’, “ಅರಿಷಡ್ವರ್ಗ’ ಹಾಗೂ “ಮುಖವಾಡ ಇಲ್ಲದವನು 84′ ಚಿತ್ರಗಳು ಇಂದು (ನ.27) ತೆರೆಕಾಣುತ್ತಿವೆ. ಈ ಮೂಲಕ ಮೂರು ವಿಭಿನ್ನ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಈಗ ಮುಖ್ಯವಾಗಿ ಬೇಕಾಗಿರೋದುಕನ್ನಡ ಚಿತ್ರಗಳಿಗೆ ಪ್ರೋತ್ಸಾಹ. ಬಿಡುಗಡೆಯಾದ ಸಿನಿಮಾಗಳನ್ನು ಸರ್ಕಾರದ ಮಾರ್ಗಸೂಚಿಯನ್ವಯ ಬಂದು ವೀಕ್ಷಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳು ತೆರೆಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ : ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ;ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪತಿ!
ಈಗಾಗಲೇ ಡಿಸೆಂಬರ್ನಲ್ಲಿ ಒಂದಷ್ಟು ಹೊಸ ಸಿನಿಮಾಗಳು ಬಿಡುಗಡೆಯ ಸಾಲಿನಲ್ಲಿವೆ. ಹೀಗಿರುವಾಗ ಈ ವಾರ ತೆರೆಕಾಣುತ್ತಿರುವ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ, ಮುಂಬರುವ ಸಿನಿಮಾಗಳ ನಿರ್ಮಾಪಕರು ಹೆಚ್ಚುಧೈರ್ಯದಿಂದ ಸಿನಿಮಾ ಬಿಡುಗಡೆ ಮಾಡಬಹುದು. ಈ ವಾರ ತೆರೆಕಾಣುತ್ತಿರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ ಮೂರಕ್ಕೆ ಮೂರು ಚಿತ್ರಗಳುಕೂಡಾ ಬೇರೆ ಬೇರೆ ಜಾನರ್ಗೆ ಸೇರಿವೆ.
ಗಡಿಯಾರ : ಯುವ ನಿರ್ದೇಶಕ ಪ್ರಬಿಕ್ ಮೊಗವೀರ್ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ “ಗಡಿಯಾರ’ ಚಿತ್ರ ಇಂದು ತೆರೆಕಾಣುತ್ತಿದೆ.
ಇನ್ನು “ಗಡಿಯಾರ’ ಚಿತ್ರದಲ್ಲಿ ಬೃಹತ್ ಕಲಾವಿದರ ದಂಡೇ ಇದೆ. ರಾಜ್ ದೀಪಕ್ ಶೆಟ್ಟಿ, ಶೀತಲ್ ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮನ್ದೀಪ್ ರಾಯ್, ಪ್ರಣಯ ಮೂರ್ತಿ, ರಾಜ್ ಮುನಿ, ದಬಾಂಗನಾ ಚೌದರಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಸಾಂಗ್ಲಿಯಾನ, ಮಲಯಾಳಂ ನಟ ರಿಹಾಜ್, ಹಿಂದಿ ನಟ ಗೌರಿ ಶಂಕರ್ಕೂಡ ಚಿತ್ರದ ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಅರಿಷಡ್ವರ್ಗ :
ಥ್ರಿಲ್ಲರ್ ಸಿನಿಮಾವಾಗಿ ಗಮನ ಸೆಳೆದಿರುವ ಮತ್ತೂಂದು ಚಿತ್ರವೆಂದರೆ ಅದು “ಅರಿಷಡ್ವರ್ಗ’. ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹಿಟ್ಲಿಸ್ಟ್ ಸೇರಿದೆ. ಕನಸು ಟಾಕೀಸ್’ ಬ್ಯಾನರ್ ಅಡಿಯಲ್ಲಿ ಆನಂದ್ ಮತ್ತು ಸ್ನೇಹಿತರ ಜೊತೆ ಸೇರಿ ಅರವಿಂದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರನಾಡು, ಅಂಜು, ಅವಿನಾಶ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿಕಾಣಿಸಿಕೊಂಡಿದ್ದಾರೆ. ಅಂದಹಾಗೆ, “ಈ ಚಿತ್ರದಲ್ಲಿ ಯಾವುದೇ ಲೀಡ್ ರೋಲ್ ಅಂತ ಇಲ್ಲ,ಕೇವಲ ಆರೇಳು ಮುಖ್ಯ ಪಾತ್ರಗಳಿವೆ ಅಷ್ಟೇ. ಆ ಎಲ್ಲ ಪಾತ್ರಗಳೂ ಕಥೆಯ ಸುತ್ತ ಸುತ್ತುತ್ತವೆ’ ಎನ್ನುತ್ತಾರೆ ನಿರ್ದೇಶಕರು.
ಮುಖವಾಡ ಇಲ್ಲದವನು 84 :
ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ “ಮುಖವಾಡ ಇಲ್ಲದವನು 84’ಕೂಡಾ ಈ ವಾರ ತೆರೆಕಾಣುತ್ತಿದೆ. ಗಣಪತಿ ಪಾಟೀಲ್ ಈ ಚಿತ್ರದನಿರ್ಮಾಪಕರು. ನಿರ್ಮಾಣದ ಜೊತೆಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೂಲತಃ ವೈದ್ಯಕೀಯ ವೃತ್ತಿಯಲ್ಲಿರುವ ಗಣಪತ್ ಪಾಟೀಲ್ಕಳೆದ ಎರಡು ದಶಕಗಳಿಂದ ನ್ಯೂಜಿಲ್ಯಾಂಡ್ನಲ್ಲಿ ವಾಸವಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸಿನಿಮಾ ಕಲಿಕೆಗೆ ಮೀಸಲಿಡುತ್ತಿದ್ದ ಗಣಪತಿ ಪಾಟೀಲ್, ಈಗ “ಮುಖವಾಡ ಇಲ್ಲದವನು84′ ಚಿತ್ರದ ಮೂಲಕ ನಟನಾಗಿ, ನಿರ್ಮಾಪಕನಾಗಿ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದಾರೆ.
ಶಿವಕುಮಾರ್ ಈ ಚಿತ್ರದ ನಿರ್ದೇಶಕರು. “ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳುಕೇಳಿಬರುತ್ತಿದೆ. ಮುಂದೆಯೂ ಒಳ್ಳೆಯಕಥೆಗಳನ್ನು ಇಟ್ಟುಕೊಂಡು ಸದಭಿರುಚಿ ಸಿನಿಮಾ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಪಾಟೀಲ್ “ಮುಖವಾಡ ಇಲ್ಲದವನು84′ ಚಿತ್ರದಲ್ಲಿ ಗಣಪತಿ ಪಾಟೀಲ್ ಜೊತೆಗೆಕಾವ್ಯಾ ಗೌಡ, ರಚನಾ, ಸೊನಾಲಿ ರಾಯ್, ಹರೀಶ್ ಸಾರಾ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದುರ್ಗಾ ಪ್ರಸಾದ್ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಛಾಯಾಗ್ರಹಣವಿದೆ.