ವಾಸು ಪಕ್ಕಾ ಡಿಫ್ರೆಂಟ್
Team Udayavani, Jul 27, 2018, 6:00 AM IST
ಪ್ರೀ-ರಿಲೀಸ್ ಇವೆಂಟ್!
ಮುಹೂರ್ತ ಸಮಾರಂಭ ಗೊತ್ತು. ಆಡಿಯೋ ಬಿಡುಗಡೆ, ಟೀಸರ್ ಬಿಡುಗಡೆ, ಟ್ರೇಲರ್ ಬಿಡುಗಡೆ ಇವೆಲ್ಲವೂ ಗೊತ್ತು. ಆದರೆ, ಈ ಪ್ರೀ-ರಿಲೀಸ್ ಇವೆಂಟ್ ಅಂದರೆ ಏನು ಗೊತ್ತಾ? ಗೊತ್ತಿಲ್ಲದಿದ್ದರೆ ಕೇಳಿ. ಚಿತ್ರ ಬಿಡುಗಡೆಗೂ ಮುನ್ನ ಒಂದು ಸಮಾರಂಭ ಮಾಡಿ, ಆ ಸಮಾರಂಭದಲ್ಲಿ ಚಿತ್ರ ಯಾವ ದಿನ ಬಿಡುಗಡೆಯಾಗುತ್ತದೆ ಎಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಇದುವರೆಗೂ ಎಲ್ಲರೂ ಪತ್ರಿಕಾಗೋಷ್ಠಿ ಮಾಡಿ, ತಮ್ಮ ಚಿತ್ರ ಯಾವತ್ತು ಬಿಡುಗಡೆಯಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ, ಅನೀಶ್ ತೇಜೇಶ್ವರ್, ಅಂಬೇಡ್ಕರ್ ಭವನದಲ್ಲಿ ಒಂದು ಸಮಾರಂಭ ಮಾಡಿ, ಅಲ್ಲಿ ತಮ್ಮ ಹೊಸ ಚಿತ್ರ “ವಾಸು – ಪಕ್ಕಾ ಕಮರ್ಷಿಯಲ್’ ಆಗಸ್ಟ್ 3ರಂದು ಬಿಡುಗಡೆಯಾಗುತ್ತಿದೆ ಎಂದು ಅಧಿಕೃತವಾಗಿ ಘೋಷಿಸಿದರು. ಅಷ್ಟೇ ಅಲ್ಲ, ದರ್ಶನ್ ಅವರನ್ನು ಮುಖ್ಯ ಅತಿಥಿಯಾಗಿ ಕರೆದು, ಅವರಿಂದ ಘೋಷಿಸಲಾಯಿತು.
ಅಂದು ಮೊದಲ ಒಂದು ಗಂಟೆ ಹಾಡು, ಡ್ಯಾನ್ಸು, ಟ್ರೇಲರ್ ಎಂದೆಲ್ಲಾ ಸಂಭ್ರಮವಿತ್ತು. ನಟಿಯರಾದ ಅನೂಷಾ ರಂಗನಾಥ್, ಕೃಷಿ ತಾಪಂಡ, ಅನಿತಾ ಭಟ್ ಮುಂತಾದವರು ವೇದಿಕೆಗೆ ಬಂದು ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿ ಹೋದರು. ಯುವ ಪ್ರತಿಭೆ ಯಶವಂತ್, ಯೋಗಾಸನದ ವಿವಿಧ ಭಂಗಿಗಳನ್ನು ತೋರಿಸಿ ಪ್ರೇಕ್ಷಕರನ್ನು ಖುಷಿಪಡಿಸಿದರು. ಆ ನಂತರ ದರ್ಶನ್ ಬಂದರು. ಅದಕ್ಕೂ ಮುನ್ನ ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮುಂತಾದವರು ಬಂದಿದ್ದರು. ಎಲ್ಲರೂ ವೇದಿಕೆ ಮೇಲೆ ಆಗಸ್ಟ್ ಮೂರರಂದು ಬಿಡುಗಡೆ ಇರುವ ಪೋಸ್ಟರ್ನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ದರ್ಶನ್, “ಚಿತ್ರದ ಪ್ರಚಾರ ಮಾಡುವುದನ್ನು ನಾವು ಅನೀಶ್ರಿಂದ ಕಾಪಿ ಮಾಡಬೇಕು. ಏಳು ಚಿತ್ರಗಳಲ್ಲಿ ನಟಿಸಿ, ಮೊದಲ ಬಾರಿ ನಿರ್ಮಾಪಕರಾಗುತ್ತಿದ್ದಾರೆ. ಚಿತ್ರರಂಗಕ್ಕೆ ಏನಾದರೂ ಮಾಡಬೇಕೆಂದು ಅವರು ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಒಂದು ಸಿನಿಮಾ ಬಂದರೆ, ನೂರಾರು ಜನರಿಗೆ ಕೆಲಸ ಸಿಗುತ್ತದೆ. ಅಷ್ಟೇ ಅಲ್ಲ, ಇದರ ಲಾಭದಲ್ಲಿ ಪ್ರತಿಯೊಬ್ಬರಿಗೂ ಶೇರ್ ಹೋಗುತ್ತದೆ. ವಾಸು ತುಣುಕುಗಳು ಪಕ್ಕಾ ಕಮರ್ಷಿಯಲ್ ಆಗಿದೆ. ಇಲ್ಲಿ ಯಾರೂ ಸ್ಟಾರ್ಗಳು ಇಲ್ಲ. ಸ್ಟಾರ್ಗಳನ್ನು ಹುಟ್ಟು ಹಾಕುವವರು ಅಲ್ಲಿದ್ದಾರೆಂದು ಜನರತ್ತ ಮೈಕ್ ತೋರಿ’ ಚಪ್ಪಾಳೆ ಗಿಟ್ಟಿಸಿಕೊಂಡರು ದರ್ಶನ್.
ಈ ಸಮಾರಂಭಕ್ಕೆ ದರ್ಶನ್ ಅವರನ್ನು ಆಹ್ವಾನಿಸಬೇಕೆಂದು ಅನೀಶ್ ಹೋದಾಗ, ಆತ್ಮೀಯವಾಗಿ ಬರಮಾಡಿಕೊಂಡರಂತೆ ದರ್ಶನ್. ಅಷ್ಟೇ ಅಲ್ಲ, ಸಮಾರಂಭಕ್ಕೆ ಖಂಡಿತಾ ಬರುವುದಾಗಿ ಅವರು ಹೇಳಿದರಂತೆ. ಜೀವ ಇರುವ ತನಕ ದರ್ಶನ್ ಅವರ ಸಹಕಾರವನ್ನು ಮರೆಯುವುದಿಲ್ಲ ಎಂದರು ಅನೀಶ್. “ಬಾಕ್ಸ್ ಆಫೀಸ್ ಸುಲ್ತಾನ್’ ಬಂದು ಆಶಿರ್ವಾದ ಮಾಡಿದ್ದಾರೆಂದರೆ ಚಿತ್ರ ಹಿಟ್ ಆದಂತೆ ಅಂತ ಭವಿಷ್ಯ ನುಡಿದರು ರಿಶಬ್ ಶೆಟ್ಟಿ. ಇನ್ನು ದರ್ಶನ್ ಅವರು ಸಿನಿಮಾಕ್ಕೆ ಹರಸಲು ಬಂದಿದ್ದು ನಮಗೆ ಶಕ್ತಿ ಬಂದಂತೆ ಆಗಿದೆ ಎಂದು ನಾಯಕಿ ನಿಶ್ವಿಕಾ ನಾಯ್ಡು
ಖುಷಿಪಟ್ಟರು.