ಮಲಯಾಳ ಕತೆ ನೇತಾಡಿದ ಹುಡುಗಿ


Team Udayavani, Jan 20, 2019, 12:30 AM IST

pipli-appliqu-two.jpg

ಹುಚ್ಚು  ಹಿಡಿದಂತಿದ್ದ ನಗರ; ವಾಹನಗಳಿಂದ ತುಂಬಿ ತುಳುಕುತ್ತಿದ್ದ ಆರು ರಸ್ತೆಗಳು… ಎಲ್ಲವೂ ಕಂಟ್ರೋಲ್‌ ರೂಮಿಗೆ ಸ್ಪಷ್ಟವಾಗಿ ಕಾಣುತ್ತಿದ್ದವು. ಮೋಟಾರುಗಳು ತಮ್ಮ ನಿಯಂತ್ರಣವನ್ನು ಕಳೆದುಕೊಂಡಿದ್ದವೋ ಏನೋ, ಲಂಗುಲಗಾಮಿಲ್ಲದಂತೆ ಎಲ್ಲೆಂದರಲ್ಲಿ ನುಗ್ಗುತ್ತಿದ್ದವು.

ಆರು ರಸ್ತೆಗಳ ಮಾರ್ಗವನ್ನು ದಾಟುತ್ತಿದ್ದ ಆ ಹುಡುಗಿ ನುಗ್ಗಿಬರುತ್ತಿದ್ದ ಮೋಟಾರುಗಳು ಒಂದು ಕ್ಷಣವಾದರೂ ನಿಲ್ಲಬಹುದೆಂದು ಕಾಯುತ್ತಿದ್ದಳು. ಅವಳ ಮುಂದೆ ವಾಹನವೊಂದು ಕಿರ್ರೆಂದು ನಿಂತದ್ದೇ ಹುಡುಗರ ಗುಂಪೊಂದು ಹೊರಗೆ ಜಿಗಿದು ಅವಳ ಕಡೆ ಹಸಿವಿನಿಂದ ನುಗ್ಗಿತು. ಎಲ್ಲ ನಡೆದದ್ದು ಹಠಾತ್ತಾಗಿ. 

ನಗರದ ಆ ಹುಚ್ಚು ನಾಯಿಗಳ ಆಕ್ರಮಣದಿಂದ ಹುಡುಗಿ ಒಂದು ಕ್ಷಣ ದಿಗ್ಭ್ರಾಂತಳಾದಳು. ಮರುಕ್ಷಣ ಸಾವರಿಸಿಕೊಂಡು ಅವರ ವಿರುದ್ಧ ಸೆಣೆಸತೊಡಗಿದಳು. ಜನರ ಗುಂಪು ಆ ದೃಶ್ಯವನ್ನು ನೋಡುತ್ತಿತ್ತು. ಹೆದ್ದಾರಿಯಲ್ಲಿ ಎಲ್ಲವೂ ಮಿಸುಕಾಡದೆ ನಿಂತುಬಿಟ್ಟಿದ್ದವು. ಮೊಬೈಲುಗಳು ನಿರಂತರವಾಗಿ ಗಣಗಣವೆಂದವು. ಎಲ್ಲಿಂದಲೋ ಬಂದ ಬಹು ದೊಡ್ಡ ಕ್ರೇನಿನ ಭಾರಿ ಕೊಕ್ಕೆಯೊಂದು ಸೆಣಸಾಡುತ್ತಿದ್ದ ಆ ಹುಡುಗಿಯ ಹಾಗೂ ಅವಳನ್ನು ಗೇಲಿಮಾಡುತ್ತಿದ್ದ ಗುಂಪಿನ ನಡುವೆ ಇಳಿಬಿದ್ದು, ಆ ಹುಡುಗಿಯ ಸೊಂಟದ ಪಟ್ಟಿಗೆ ಸಿಕ್ಕಿಕೊಂಡು ಅವಳನ್ನು ಅನಾಮತ್ತಾಗಿ ಮೇಲಕ್ಕೆತ್ತಿಬಿಟ್ಟಿತು. ಗುಂಪು ಬೆಳೆಯಿತು; ಕೂಗಾಟವೂ ಹೆಚ್ಚಾಯಿತು. ಆ ದೊಂಬಿಯ ನಡುವೆ ಹುಡುಗಿ ಕೈಕಾಲುಗಳನ್ನು ಬೀಸಿದಳು, ಅಸಹಾಯಕತೆಯಿಂದ. 

ಹೀಗೆ ತೂಗಾಡುತ್ತಿದ್ದ ಆ ಹುಡುಗಿ ಇದ್ದಕ್ಕಿದ್ದಂತೆ ಒಂದು ರೋಚಕ ಸುದ್ದಿಯಾದಳು. ಟಿ.ವಿ. ಚಾನಲ್ಲುಗಳು ಆ ಅಪರೂಪದ ದೃಶ್ಯವನ್ನು ಪ್ರಸಾರ ಮಾಡಿದವು. ಆಧುನಿಕ ಕಾಲದ ಟೆಕ್ಕಿಗಳು ಇಂಟರ್‌ನೆಟ್ಟಿಗೆ ಆತುಕೊಂಡು ಅವಳನ್ನು ಸಫ್ì ಮಾಡಿದರು. ಇನ್ನೂ ದೂರದ ಹಳ್ಳಿಗಳಲ್ಲಿದ್ದ, ಅಷ್ಟು ಆಧುನಿಕರಲ್ಲದ ಜನರು ಅವಳನ್ನು ಬೆಳಗಿನ ಚಹಾದ ಜೊತೆ ಸವಿದರು.

ಈ ಮಧ್ಯೆ ತುಂಬ ಜನಪ್ರಿಯವಾಗಿದ್ದ ಒಂದು ಟಿ.ವಿ. ಚಾನಲ್ಲಿನಲ್ಲಿ ಕೆಲವರು ಸ್ತ್ರೀವಾದಿ ಚಿಂತಕಿಯರು “ಭಾಷೆಗಳಲ್ಲಿ ಪಿತೃಪ್ರಧಾನ ಪ್ರಭಾವ’ ಎಂಬ ವಿಷಯವನ್ನು ಕುರಿತ ಚರ್ಚೆಯಲ್ಲಿ ಭಾಗವಹಿಸಿ ಬಿಸಿ ಬಿಸಿಯಾಗಿ ವಾದಿಸಿದರು. ಅದು ಕೂಡ ಟಿ.ವಿ.ಯಲ್ಲಿ ಪ್ರಸಾರವಾಯಿತು.

ಎಲ್‌ ಸಾಲ್ವದೋರ್‌ ಕತೆ
ಪೋಸ್ಟರ್‌ 
 -ಮೌರೀಸಿಯೊ ರೊಸಾಲೆಸ್‌

ಕೆಥೀಡ್ರಲ್ಲಿನ ಹೊರಗೆ ಹಿರಿಯರು-ಕಿರಿಯರೆನ್ನದೆ ಎಲ್ಲರೂ ಮನುಷ್ಯನ ಘನತೆಯನ್ನು ಹಾಡಿಹೊಗಳುವುದಕ್ಕಾಗಿ ಜಮಾಯಿಸಿದರು. ಆದರೆ, ಅಷ್ಟು ಹೊತ್ತಿಗಾಗಲೇ ತಮ್ಮ ತಮ್ಮ ಜಾಗಗಳಲ್ಲಿ ನಿಂತುಬಿಟ್ಟಿದ್ದ ಸೈನಿಕರಿಗೆ ಗುಂಡು ಹಾರಿಸಬೇಕೆಂಬ ಆಜ್ಞೆಯಾಗಿತ್ತು. ಜನರು ಕಂಗಾಲಾಗಿ ಕೆಥಡ್ರಲ್ಲಿನ ಬಾಗಿಲಿನತ್ತ ದೌಡಾಯಿಸಿದರು. ಆದರೆ, ರಹಸ್ಯ ಸರಕಾರಿ ಶಾಸನವೊಂದನ್ನು ಹೊರಡಿಸಿ ಆ ಬಾಗಿಲನ್ನು ಮುಚ್ಚಲಾಗಿತ್ತು. ಸೈನಿಕರ ನಡುವೆ ಸೈನಿಕರಾಗಿದ್ದವರು ಹ್ವಾನ್‌, ಪಾಬ್ಲೊ, ಪೆದೊÅ, ಸೆಸಿಲಿಯೊ ಮತ್ತು ಮರಿಯೊ. ಅವರು ತಮ್ಮ ಬಂದೂಕುಗಳ ಗುಂಡುಗಳು ಮುಗಿಯುವವರೆಗೂ ಗುಂಡು ಹಾರಿಸಿದರು. ಕೆಥಡ್ರಲ್ಲಿನ ಮೆಟ್ಟಿಲ ಕೆಳಗೆ ಕೆಂಪುರಕ್ತದ ಗುಂಡಿಗಳು ತುಂಬಿಕೊಂಡು ಸೂರ್ಯನನ್ನು ಪ್ರತಿಫ‌ಲಿಸಿದವು; ರಾಶಿ ರಾಶಿ ನೊಣಗಳನ್ನು ಆಕರ್ಷಿಸಿದವು. ಸೈನಿಕರು ಬ್ಯಾರಕ್ಕುಗಳಿಗೆ ಹಿಂದಿರುಗಿ ತಮ್ಮ ತಮ್ಮ ಕರ್ತವ್ಯಗಳತ್ತ ಗಮನ ಹರಿಸಿದರು. ಆಮೇಲೆ ತುಂಬ ವಿಚಿತ್ರವಾದದ್ದು ಸಂಭವಿಸಿತು.  ಹ್ವಾನ್‌ ನೀರು ಕುಡಿಯಲು ಹೋದರೆ ನಲ್ಲಿಯಿಂದ ಸುರಿದದ್ದು ಅವನು ಕೊಂದವರ ಕಣ್ಣೀರು. ಪಾಬ್ಲೊ ತನ್ನ ಬಂಕಿಗೆ ಹೋಗಿ ಹೊದಿಕೆಯಿಂದ ಮುಸುಕುಹಾಕಿಕೊಂಡರೆ ಅದು ಅವನು ಕೊಂದವರ ಚರ್ಮವಾಯಿತು. ಪೆದೊÅ ದೀಪ ಹಾಕಿದಾಗ ಪ್ರತಿಯೊಂದು ಬಲ್ಬೂ ಅವನಿಂದ ಹತ್ಯೆಗೊಂಡವರ ಕಣ್ಣುಗಳಾದವು. ಸೆಸಿಲಿಯೊ ತನ್ನ ಬೂಟುಗಳನ್ನು ಬಿಚ್ಚಿಟ್ಟು ಬರಿಗಾಲಲ್ಲಿ ನಡೆಯತೊಡಗಿದ್ದೇ ನೆಲಕ್ಕೆ ಹಾಸಿದ್ದ ಟೈಲುಗಳು ಅವನು ಕೊಂದುಹಾಕಿದವರ ಮೂಳೆಗಳಾದವು. ಮರಿಯೊ ಕೆಳಗೆ ಕುಳಿತು ತಿನ್ನತೊಡಗಿದ ಪದಾರ್ಥಗಳು ಅವನು ಹತ್ಯೆಮಾಡಿದವರ ಕೂದಲಾದವು, ಉಗುರುಗಳಾದವು. ಅವರು ಭಯಭೀತರಾಗಿ ಅಂಗಳಕ್ಕೆ ಓಡಿ ಒಬ್ಬರನ್ನೊಬ್ಬರು ನೋಡಿಕೊಳ್ಳತೊಡಗಿದರು. ಹ್ವಾನ್‌ ಉದ್ದ ಕೂದಲನ್ನು ಬೆಳೆಸಿಕೊಂಡವನು ಹೊಟ್ಟೆಯಲ್ಲೇ ಹತವಾದ ಮಗುವನ್ನಿಟ್ಟುಕೊಂಡ ಗರ್ಭಿಣಿ ಮಾರ್ಥಾ ಆದ; ಪಾಬ್ಲೊ ತನ್ನ ಕುಟುಂಬದ ಇದಿರಲ್ಲೇ ತಲೆ ಕತ್ತರಿಸಲ್ಪಟ್ಟ ಇಸಾಬೆಲ್‌ ಆಗಿ ಬೆಳೆದ; ಪೆದೊ ನಾಲ್ಕು ಇಂಚುಗಳಷ್ಟು ಬೆಳೆದು ಎಂದೂ ಯಾರಿಗೂ ಸಿಕ್ಕದೆ ಕಣ್ಮರೆಯಾದ ನೋಯೆಲ್‌ ಆಗಿಬಿಟ್ಟ; ಸೆಸಿಲಿಯೊ ಮೊದಲ ಇಯತ್ತೆಯಲ್ಲಿದ್ದ, ತನ್ನ ಹಲ್ಲುಗಳಿಂದಷ್ಟೇ ಗುರುತಿಗೆ ಸಿಗುತ್ತಿದ್ದ ಮಿಗೆಲಿತೊ ಆಗಿ ಕುಗ್ಗಿದ; ಮರಿಯೊ ಬೊಕ್ಕಲೆಯವನಾಗಿ ಮೂರು ದಿನ ಹಿಂಸಾಚಾರಕ್ಕೆ ಗುರಿಯಾದ ಅರ್ನೆಸ್ಟೊ ಆದ. ಆಮೇಲೆ ದೇಶದ ಎಲ್ಲ ಬ್ಯಾರಕ್ಕುಗಳ ಎಲ್ಲ ಸೈನಿಕರೂ ಒಬ್ಬೊಬ್ಬರಾಗಿ ತಾವು ಕೊಂದವರೇ ಆಗಿಬಿಟ್ಟರು. ಅವರ ಕಣ್ಣುಗಳಲ್ಲಿ ಸಮ್ಮತಿಯ ಹೊಳಪು; ಗಂಟಲುಗಳಲ್ಲಿ ಹಿಂದೆ ಉಚ್ಚರಿಸಲಾಗದಿದ್ದ, ಜೀವಂತ ಉಸಿರಿನತ್ತ ತೆವಳುತ್ತಿದ್ದ ಮಾತುಗಳು: ನ್ಯಾಯ ಮುಸುಕು ಹಾಕಿಕೊಳ್ಳುವುದಿಲ್ಲ. ಸತ್ಯ ಹಿಂಸೆಯ ಶತ್ರು. ಸಾವು ಸೇವೆ ಸಲ್ಲಿಸಬೇಕಾದ್ದು ಬದುಕಿಗೆ. ದಯವಿಟ್ಟು ಕ್ಷಮಿಸಿ, ನಾವು ಮಾಡಿಲ್ಲೊಂದೂ ನಮಗೆ ಗೊತ್ತಿರಲಿಲ್ಲ.  

ಬ್ರೆಜಿಲ್‌ ಕತೆ
ಹೆಜ್ಜೆಗಳು 
 -ಕ್ಲಾರೀಸ್‌ ಲೀಸ್ಪೆಕ್ತರ್‌

ಆಕೆಗೆ ಎಂಬತ್ತೂಂದು ವರ್ಷ. ಹೆಸರು ದೋನಾ ಕ್ಯಾಂಡಿಡಾ ರಪೋಸೊ.
ಅವಳಿಗೆ ಅವಳ ಬದುಕಿನಿಂದಾಗಿಯೇ ತಲೆ ಸುತ್ತುತ್ತಿತ್ತು. ಕೆಲವು ದಿನ ಇದ್ದುಬರೋಣ ಎಂದು ಒಂದು ಫಾರಂಗೆ ಹೋದಾಗ ತಲೆ ಸುತ್ತುವುದು ಇನ್ನಷ್ಟು ಹೆಚ್ಚಿತು. ಎತ್ತರದ ಆ ಜಾಗ, ಮರಗಳ ಹಸಿರು, ಮಳೆ ಎಲ್ಲವೂ ಅವಳ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದವು. ಲಿಟ್ಜ್ ಎಂಬ ಸಂಗೀತಗಾರನ ಸಂಗೀತ ಕೇಳಿದರೆ ಸಾಕು, ಅವಳು ಅಡಿಯಿಂದ ಮುಡಿಯವರೆಗೆ ನಡುಗುತ್ತಿದ್ದಳು. ತಾರುಣ್ಯದಲ್ಲಿ ಆಕೆ ಸುಂದರವಾಗಿದ್ದವಳು. ರೋಜಾ ಹೂವಿನ ಪರಿಮಳವನ್ನು ಆಳವಾಗಿ ಆಘ್ರಾಣಿಸಿದರೆ ಸಾಕು, ತಲೆ ಸುತ್ತಿಬರುತ್ತಿತ್ತು. 
 ದೋನಾ ಕ್ಯಾಂಡಿಡಾ ರಪೋಸಾಳಲ್ಲಿ ಸುಖಪಡಬೇಕೆಂಬ ಆಸೆ ಇಂಗಲಿಲ್ಲ. 
 ಕೊನೆಗೂ ಧೈರ್ಯ ಮಾಡಿ ಒಬ್ಬ ಗೈನಕಾಲಜಿಸ್ಟರನ್ನು ಭೇಟಿ ಮಾಡಿದಳು. ಅವರ ಇದಿರಿನಲ್ಲಿ ತಲೆ ತಗ್ಗಿಸಿಕೊಂಡು, “”ಅದು ನಿಂತು ಹೋಗುತ್ತಾ?” ಎಂದು ಕೇಳಿದಳು.
 “”ಯಾವುದಮ್ಮಾ, ನಿಂತುಹೋಗೋದು?”
“”ಅದು”
“”ಅದು ಅಂದರೆ?”
“”ಅದೇ… ಸುಖಪಡೋ ಆಸೆ” ಎಂದಳು ಕೊನೆಗೆ.
“”ನೋಡೀಮ್ಮಾ, ಅದು ನಿಲ್ಲೋದೇ ಇಲ್ಲ”
ಆಕೆ ಆಶ್ಚರ್ಯದಿಂದ ಅವರನ್ನು ನೋಡಿದಳು.
“”    ನಂಗೆ ಎಂಬತ್ತೂಂದು ವರ್ಷ ಆಯಿತಲ್ಲ!”
“”    ಆದರೇನು, ಸಾಯುವವರೆಗೂ ಅದು ನಿಲ್ಲೋಲ್ಲ.”
“”ಅಯ್ಯೋ ನರಕ ನರಕ”
“”ಅದೇ ಬದುಕಮ್ಮಾ”
“”    ಅಂದರೆ ಇದೇ ಬದುಕೇ? ಈ ಮಾನಗೆಟ್ಟ ಸ್ಥಿತಿ? ಹಾಗಾದರೆ ಏನು ಮಾಡಬೇಕು? ಯಾರಿಗೂ ನಾನು ಬೇಡ” ಡಾಕ್ಟರು ಆಕೆಯನ್ನು ಅನುಕಂಪದಿಂದ ನೋಡಿದರು.
“”ಅದಕ್ಕೇನೂ ಔಷಧಿ ಇಲ್ಲಮ್ಮಾ”
“”ನಾನೇ ದುಡ್ಡು ಕೊಡೋದಾದರೆ?”
“”ಏನೂ ವ್ಯತ್ಯಾಸ ಇಲ್ಲ. ನಿಮಗೆ ಎಂಬತ್ತೂಂದು ವರ್ಷ ಅಂತ ನೆನಪಿರಲಿ”
“”    ಮತ್ತೆ… ಮತ್ತೆ… ನಾನೇ ಏನಾದರೂ? ಗೊತ್ತಾಯಿತಾ, ಏನು ಹೇಳ್ತಾ ಇದೀನಿ ಅಂತ?”
“”    ಹೂ, ಆಗಬಹುದೇನೊ” ಎಂದರು ಡಾಕ್ಟರು.
 
ಆಕೆ ಡಾಕ್ಟರ ಕೋಣೆಯನ್ನು ಬಿಟ್ಟು ಹೊರಟಳು. ಅವಳ ಮಗಳು ಕೆಳಗಡೆ ಕಾರಿನಲ್ಲಿ ಕಾಯುತ್ತಿದ್ದಳು. 
ಕ್ಯಾಂಡಿಡಾ ರಪೋಸೊ ಯುದ್ಧದಲ್ಲಿ ತನ್ನ ಮಗನನ್ನು ಕಳೆದುಕೊಂಡವಳು; ಅವನು ಸತ್ತಾಗ ಇನ್ನೂ ಹುಡುಗ. ಅವಳ ಹೃದಯದಲ್ಲಿ ಅತೀವ ವೇದನೆ; ತನ್ನ ಮುದ್ದಿನವನು ಸತ್ತು ತಾನು ಬದುಕಿರಬೇಕಾಯಿತಲ್ಲ ಎಂಬ ವೇದನೆ.   
 
ಅದೇ ರಾತ್ರಿ ಒಬ್ಬಳೇ ತನಗೆ ಸಾಧ್ಯವಾದದ್ದನ್ನು ಮಾಡಿಕೊಂಡಳು. ಸದ್ದಿಲ್ಲದ ಪಟಾಕಿ. ಆಮೇಲೆ ಅತ್ತಳು. ಅವಮಾನವಾಯಿತು. ಆಮೇಲೆ ಅದೇ ಪದ್ಧತಿ ಅನುಸರಿಸಿದಳು. ಯಾವಾಗಲೂ ನಿರಾಶೆಯೇ. ಅದೇ ಬದುಕು ರಪೋಸೊ, ಅದೇ ಬದುಕು. ಸಾಯುವವರೆಗೂ. ಸಾವು.ಆಕೆಗೆ ಹೆಜ್ಜೆ ಸದ್ದು ಕೇಳಿಸಿದಂತಾಯಿತು. ಅವಳ ಗಂಡ ಆಂತೆನಾರ್‌ ರಪೋಸೋನ ಹೆಜ್ಜೆ ಸದ್ದು.

– ಪಾಯಿಪ್ರ ರಾಧಾಕೃಷ್ಣನ್‌
– ಅನುವಾದ: ಎಸ್‌. ದಿವಾಕರ್‌

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.