ಒಂದು ಪುಟ್ಟ ಕಥೆ
Team Udayavani, Sep 30, 2018, 6:00 AM IST
ಒಬ್ಬನ ಹೆಂಡತಿ ಕಾಣೆಯಾಗಿದ್ದಳು. ಆತ ತುಂಬಾ ಗಾಬರಿಗೊಂಡಿದ್ದ. ಒಂದು ಕ್ಷಣವೂ ತನ್ನನ್ನು ಬಿಟ್ಟಿರದೆ ಅಂಟಿಕೊಂಡೇ ಇದ್ದವಳು ಇದ್ದಕ್ಕಿದ್ದಂತೆ ಕಾಣೆಯಾಗುವುದೆಂದರೆ?
ಆತ ಅವಳಿಗಾಗಿ ಹುಡುಕಾಟ ನಡೆಸತೊಡಗಿದ. ತನಗೆ ಪರಿಚಯವಿದ್ದಲ್ಲೆಲ್ಲ ಹೋಗಿ ವಿಚಾರಿಸಿದ. ಅವಳ ಸಂಬಂಧಿಕರು, ಪರಿಚಿತರು, ಗೆಳತಿಯರು – ಎಲ್ಲರ ಮನೆಗೂ ಹೋಗಿಬಂದ. ಸಂಜೆಯ ಹೊತ್ತಿಗೆ ಯಾವುದೋ ಕಾಡಬದಿಯ ಊರನ್ನು ತಲುಪಿದ. ದಣಿದು ಹೈರಾಣಾಗಿದ್ದ ಅವನಿಗೆ, ಕಾಡಿನ ಹಾದಿ ಆರಂಭವಾಗುವಲ್ಲೇ ಸನ್ಯಾಸಿಯೊಬ್ಬ ಕುಟೀರ ಕಟ್ಟಿಕೊಂಡು ನೆಲೆಸಿದ್ದ ವಿಚಾರ ತಿಳಿಯಿತು. ಸರಿ, ಕೊನೆಯ ಪ್ರಯತ್ನವೆಂದು ಆತ ಕಾಲೆಳೆದುಕೊಂಡು ಕುಟೀರದ ಬಳಿ ಬಂದ. ಸನ್ಯಾಸಿಯನ್ನು ಕಂಡು ಉದ್ದಂಡ ನಮಸ್ಕಾರ ಮಾಡಿ ನಿಡುಸುಯುತ್ತ ನಿಂತ.
ಸನ್ಯಾಸಿ ಯಾವುದೋ ಧ್ಯಾನದಲ್ಲಿ ಮುಳುಗಿದ್ದವ ಕಣ್ತೆರೆದು ನೋಡುತ್ತಾನೆ – ವ್ಯಕ್ತಿಯೊಬ್ಬ ಅಳುತ್ತ ನಿಂತಿದ್ದಾನೆ.
“”ಯಾರಪ್ಪ ನೀನು?” – ಸಂನ್ಯಾಸಿ ಕರುಣೆಯಿಂದ ಕೇಳಿದ.
“”ನಾನೊಬ್ಬ ನತದೃಷ್ಟ ಸ್ವಾಮಿ. ನಾನೊಂದು ಅಮೂಲ್ಯವಾದ ವಸ್ತುವನ್ನು ಕಳೆದುಕೊಂಡಿದ್ದೇನೆ”.
“”ಹೌದೆ? ಏನದು?”
“”ಅದು ಅಲ್ಲ ಸ್ವಾಮಿ! ಅವಳು! ನನ್ನವಳು! ಇಂದು ಮುಂಜಾನೆಯಿಂದ ಕಾಣೆಯಾಗಿದ್ದಾಳೆ. ಅವಳನ್ನು ಇಡೀ ದಿನ ಹುಡುಕಿದೆ. ಸಿಗಲಿಲ್ಲ. ಕಡೆಗೆ ನಿಮ್ಮನ್ನೊಮ್ಮೆ ನೋಡಿ ವಿಚಾರಿಸೋಣವೆಂದು ಬಂದೆ. ಹೇಳಿ, ಯಾವುದಾದರೂ ಹೆಂಗಸು ಈ ದಾರಿಯಾಗಿ ಬಂದು ಹೋದದ್ದನ್ನು ಕಂಡಿರಾ?”
“”ಇಲ್ಲಪ್ಪ . ಏನವಳ ಹೆಸರು?”
“”ಹೆಸರು ಕಟ್ಟಿಕೊಂಡು ಏನು ಮಾಡೋಣ ಸ್ವಾಮಿ. ಅವಳ ಹೆಸರು ಆತಂಕ”.
ಸನ್ಯಾಸಿಗೆ ನಗು ಬಂತು. “”ಏನಂದೆ? ಆತಂಕ? ಹೆಣ್ಣನ್ನು ಆತಂಕ ಅಂತ ಕರೆಯುತ್ತಿರುವ ಒಬ್ಬನನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಅಂದ ಹಾಗೆ, ನಿನ್ನ ಹೆಸರೇನು?”
“”ನಾನು ತಿಳಿಗೇಡಿ, ಸ್ವಾಮಿ!”
ಸನ್ಯಾಸಿಗೆ ಈಗ ನಗು ತಡೆಯಾಗಲಿಲ್ಲ. “ಹೋ, ಹೋ’ ಎಂದು ನಗುತ್ತಲೇ ಹೇಳಿದ – “”ಅಯ್ನಾ ತಿಳಿಗೇಡಿ, ಹಾಗಿದ್ದರೆ ನೀನು ಎಲ್ಲೂ ಹುಡುಕಬೇಕಾಗಿಲ್ಲ. ಸುಮ್ಮಗೆ ಇದ್ದಲ್ಲೇ ಇದ್ದು ಬಿಟ್ಟರೆ ಸಾಕು. ಆತಂಕ ತಾನೇ ನಿನ್ನನ್ನು ಅರಸಿ ಬರುವುದನ್ನು ನೀನೇ ನೋಡುವೆಯಂತೆ. ತಿಳಿಗೇಡಿಯನ್ನು ಆತಂಕ ಎಂದಾದರೂ ಹೆಚ್ಚು ಕಾಲ ಬಿಟ್ಟಿರಲು ಸಾಧ್ಯವೇ?”
ಎಸ್ಎನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ