ಒಂದು ಸೂಫಿ ಕತೆ
Team Udayavani, Aug 5, 2018, 6:00 AM IST
ಮನುಷ್ಯ ಬದುಕಿರುವವರೆಗೆ ಎಲ್ಲವೂ. ಸತ್ತಮೇಲೆ ಯಾರಿಗೆ ಯಾರಿಲ್ಲ. ಜೀವಂತವಿರುವಾಗ ಅವನ ಬಗ್ಗೆ ಮಾತನಾಡಲು ಹಿಂಜರಿಯುವವರೆಲ್ಲ ಮೆಲ್ಲನೆ ದನಿ ಎತ್ತತೊಡಗುತ್ತಾರೆ. ಇದು ಅಂಥದೇ ಒಂದು ಕತೆ. ಒಬ್ಬನಿದ್ದ ಅವನು ಅನಿರೀಕ್ಷಿತವಾಗಿ ಮರಣಹೊಂದಿದ. ಒಳ್ಳೆಯ ಆಸ್ತಿ ಅವನಲ್ಲಿತ್ತು. ಅವನಿಗೊಬ್ಬ ದತ್ತುಮಗನಿದ್ದ. ಆಸ್ತಿಯನ್ನು ದತ್ತುಮಗನಿಗೆ ತಿಳಿಯದಂತೆ “ಒಳಗು’ ಮಾಡಿಕೊಳ್ಳಲು ಎಲ್ಲರೂ ಹವಣಿಸಿದರು. ಆದರೆ, ಊರ ಕೋತ್ವಾಲ ಬಂದು ನೋಡಿದಾಗ ಒಂದು ಉಯಿಲು ಸಿಕ್ಕಿತು. ಅದರಲ್ಲಿ ಸತ್ತುಹೋದ ಮನುಷ್ಯ ವಿವರವಾಗಿ ಬರೆದಿದ್ದ.
“ತನ್ನ ಆಸ್ತಿಯ ಒಂದಂಶವನ್ನು ಬಂಧುಗಳು ಬಳಸಿಕೊಳ್ಳಬಹುದು. ಉಳಿದುದನ್ನು ನನ್ನ ದತ್ತುಪುತ್ರ ಪಡೆಯಬೇಕು’ಎಲ್ಲ ಬಂಧುಗಳು ಮುಂದೆ ಬಂದರು. ಆಸ್ತಿಯಲ್ಲಿ ತಮಗೂ ಪಾಲಿದೆ ಎಂದು ವಾದಿಸಿದರು. ಆಗ ಕೋತ್ವಾಲ ಮಧ್ಯ ಪ್ರವೇಶಿಸಿ ಮುಂದಿರುವ ಒಕ್ಕಣೆಯನ್ನು ತೋರಿಸಿದ.”ಬಂಧುಗಳು ತಾವು ಇಚ್ಛಿಸಿರುವುದನ್ನು ದತ್ತುಪುತ್ರನಿಗೆ ನೀಡಬಹುದು’ಆ ದತ್ತುಪುತ್ರ ಏನೂ ಅರಿಯದ ಬಾಲಕ. ಬಂಧುಗಳೆಲ್ಲ ಸ್ವೇಚ್ಛೆಯಿಂದ ಭೂಮಿಯ ಬಹುತೇಕ ಭಾಗವನ್ನು “ಒಳಗು’ ಮಾಡಿಕೊಂಡರು. ಒಬ್ಬ ನವಣೆಯ ಗದ್ದೆಯನ್ನು ತನ್ನ ಹೆಸರಿಗೆ ಬರೆದುಕೊಂಡ. ನನಗೆ ದ್ರಾಕ್ಷಿಯ ತೋಟವಿರಲಿ ಎಂದ ಮತ್ತೂಬ್ಬ. ಇನ್ನೊಬ್ಬ ನಂದನವನವನ್ನು ತನ್ನ ಸುಪರ್ದಿಗೆ ತಂದುಕೊಂಡ.
ಎಲ್ಲ ಹಿರಿಯರು ತಮಗೆ ಬೇಕಾದಂತೆ ಜಾಗವನ್ನು ಪಡೆದುಕೊಳ್ಳುತ್ತಿರುವುದನ್ನು ದತ್ತುಪುತ್ರ ಸುಮ್ಮನೆ ನೋಡುತ್ತಿದ್ದ. ಅವನಿಗೆ ತನಗಿಷ್ಟವಾದುದನ್ನು ಕೇಳುವ ಆಸೆಯಾದರೂ ಹೇಳುವ ಅವಕಾಶವಿರಲಿಲ್ಲ. ಬರಡು ಜಮೀನು ಸ್ವಯಂ ಇಚ್ಛೆಯಿಂದ ಬಂಧುಗಳು ಅವನಿಗೆ ನೀಡಿದರು.
ಕೆಲವು ವರ್ಷಗಳು ಕಳೆದವು. ದತ್ತುಪುತ್ರ ಸ್ವಲ್ಪ ದೊಡ್ಡವನಾದ. ಅವನಿಗೆ ತನಗಾದ ಮೋಸದ ಅರಿವಾಯಿತು. ಅವನು ಬಂಧುಗಳ ಬಳಿಗೆ ಹೋಗಿ ತನಗೆ ಉತ್ತಮ ಜಾಗ ಬೇಕು ಎಂಬಂತೆ ಕೇಳಿದ.
ಅವರು ಯಾರೂ ಈ ಹುಡುಗನ ಮಾತು ಕೇಳಲು ಸಿದ್ಧರಿರಲಿಲ್ಲ ! ಹೊಲವನ್ನು ಪಡೆದವ ಅದನ್ನು ಫಲವತ್ತಾಗಿ ಬೆಳೆಸಿದ್ದ. ತೋಟವನ್ನು ಮತ್ತೂಬ್ಬ ಸೊಂಪಾಗಿ ಉಳಿಸಿದ್ದ. ದ್ರಾಕ್ಷೆ ತೋಟವನ್ನು ಕಾಳಜಿಯಿಂದ ನೋಡಿಕೊಂಡಿದ್ದ ಮತ್ತೂಬ್ಬ. ಎಲ್ಲರಿಗೂ ತಮ್ಮ ಜಾಗವೆಂಬ ಆಸ್ಥೆ. ಯಾವುದೇ ವಸ್ತು ತಮ್ಮದು ಎಂಬ ಭಾವನೆ ಬಂದ ಕೂಡಲೇ ಅದರ ಬಗ್ಗೆ ವ್ಯಾಮೋಹ ಮೂಡುತ್ತದೆ. ಯಾರೂ ತಾವು ಪಡೆದ ಜಮೀನನ್ನು ಹುಡುಗನಿಗೆ ಕೊಡಲು ಸಿದ್ಧರಿರಲಿಲ್ಲ. “ನಾವು ಉಯಿಲಿನ ಪ್ರಕಾರವೇ ಜಮೀನು ಪಡೆದುಕೊಂಡದ್ದು’ ಎಂದು ವಾದಿಸಿದರು.ದತ್ತುಪುತ್ರ ಕೋತ್ವಾಲನ ಮೊರೆಹೋದ. ಕೋತ್ವಾಲ ವಿಚಾರಣೆಗೆ ಬಂದ. ಉಯಿಲನ್ನು ಒಮ್ಮೆ ಸರಿಯಾಗಿ ಓದಿದ.
“ಬಂಧುಗಳು ತಾವು ಇಚ್ಛಿಸಿರುವುದನ್ನು ದತ್ತುಪುತ್ರನಿಗೆ ನೀಡಬಹುದು’ಒಬ್ಬ ಬಂಧು ನವಣೆಯ ಗದ್ದೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದ. ನನಗೆ ದ್ರಾಕ್ಷಿಯ ತೋಟವಿರಲಿ ಎಂದು ಇಚ್ಛೆಪಟ್ಟಿದ್ದ ಮತ್ತೂಬ್ಬ. ಇನ್ನೊಬ್ಬ ನಂದನವನವನ್ನು ತನ್ನ ಸುಪರ್ದಿಗೆ ತಂದುಕೊಳ್ಳುವ ಇಚ್ಛೆಯನ್ನು ಈಡೇರಿಸಿಕೊಂಡಿದ್ದ. ಹಾಗಾದರೆ, ಸತ್ತವನ ಉಯಿಲಿಗೆ ಪ್ರಾಶಸ್ತ್ಯ ಕೊಡಬೇಕಲ್ಲವೆ? ಕೋತ್ವಾಲ ದೃಢವಾಗಿ ಹೇಳಿದ, “ಬಂಧುಗಳು ತಾವು ಇಚ್ಛಿಸಿರುವುದನ್ನು ದತ್ತುಪುತ್ರನಿಗೆ ನೀಡಬಹುದು- ಎಂದರೆ ಈಗಾಗಲೇ ಬಂಧುಗಳು ಇಚ್ಛಿಸಿದ ಜಾಗಗಳೆಲ್ಲವೂ ದತ್ತುಪುತ್ರನಿಗೆ ಸಲ್ಲಬೇಕು ಕೋತ್ವಾಲ ಮುಂದುವರಿಸಿದ, “”ಉಯಿಲು ಬರೆದವನು ತನ್ನ ಆಸ್ತಿಯನ್ನು ಸಂರಕ್ಷಿಸಲಾಗದೆ ಸತ್ತ. ಅದನ್ನು ಬಂಧುಗಳಾದ ನಿಮ್ಮ ಸುಪರ್ದಿಗೆ ತಾತ್ಕಾಲಿಕ ಅವಧಿಯವರೆಗೆ ನೀಡುವುದು ಅವನ ಆಶಯ. ಏಕೆಂದರೆ, ನಿಮ್ಮ ಸ್ವಂತ ಆಸ್ತಿಯೆಂದು ಬಗೆದಾಗ, ಅದನ್ನು ಸಮರ್ಪಕವಾಗಿ ಆರೈಕೆ ಮಾಡುವಿರಷ್ಟೆ. ಅವನ ಉಯಿಲಿನ ಪ್ರಕಾರ ಇವೆಲ್ಲ ನೀವು ಇಚ್ಛಿಸಿದ ಜಮೀನು ಆಗಿರುವುದರಿಂದ ದತ್ತುಪುತ್ರನಿಗೆ ನೀಡುವುದು ಅನಿವಾರ್ಯ’ಸೂಫಿ ಕವಿ ಸೈಯದ್ ಗೌಸ್ ಆಳಿ ಶಾ ಹೇಳಿದ ಕತೆ.ನಮ್ಮ ಬಳಿ ಸಂಚಯನಗೊಂಡ ಸಂಪತ್ತು ನಮ್ಮದಾಗಿರುವುದಿಲ್ಲ. ನಮ್ಮದೆಂಬ ಭ್ರಮೆ ಅಷ್ಟೇ ಇರುತ್ತದೆ.
– ಶಿವ ಕೆ.