ಒಂದು ಝೆನ್ ಕತೆ
Team Udayavani, Jul 21, 2019, 5:03 AM IST
ಒಬ್ಬ ಸಂತನಿದ್ದನಂತೆ. ಅವನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು- ಯಾವನೇ ವ್ಯಕ್ತಿಯನ್ನು ಮಾತನಾಡಿಸುವಾಗ ಅವರ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ. ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ ಅಸ್ತಿತ್ವದ ಕೇಂದ್ರವನ್ನಷ್ಟೇ ಗಮನಕ್ಕೆ ತೆಗೆದುಕೊಳ್ಳುತ್ತಿದ್ದ. ಹೀಗಾಗಿ, ತಾನು ಕಂಡ ಪ್ರತಿಯೊಬ್ಬನನ್ನೂ ಪ್ರೀತಿಸುತ್ತಿದ್ದ ಹಾಗೂ ಕ್ಷಮಿಸುತ್ತಿದ್ದ. ಇದನ್ನೆಲ್ಲ ಅವನು ಮಹಾಕಾರ್ಯವೆಂದು ಭಾವಿಸಿಯೂ ಇರಲಿಲ್ಲ. ಅವನಿದ್ದುದೇ ಹಾಗೆ !
ಒಂದು ದಿನ ಒಬ್ಬ ದೇವತೆ ಅವನ ಮುಂದೆ ಪ್ರತ್ಯಕ್ಷಳಾಗಿ ”ದೇವರು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ. ಯಾವುದಾದರೂ ವರ ಕೇಳಿಕೋ, ರೋಗ ಪರಿಹಾರದ ವರ ಕೊಡಲಾ?” ಎಂದು ಕೇಳಿದಳು.
”ಬೇಡ. ದೇವರೇ ಆ ಕೆಲಸ ಮಾಡಲಿ.”
”ಪಾಪಿಗಳನ್ನು ಸರಿದಾರಿಗೆ ತರುವ ಸಾಮರ್ಥ್ಯ ಕೊಡಲಾ?”
”ಬೇಡ. ಮಾನವ ಹೃದಯಗಳನ್ನು ಸ್ಪರ್ಶಿಸುವ ಕೆಲಸ ನನ್ನದಲ್ಲ, ದೇವತೆಗಳದು”.
”ಸದ್ಗುಣದ ಮಾದರಿ ಪುರುಷನಾಗಿ ಇತರರನ್ನು ಪ್ರೇರಿಸುವ ಚೈತನ್ಯ?”
”ಬೇಡ, ಹಾಗಾಗಿ ಬಿಟ್ಟರೆ ನಾನು ಆಕರ್ಷಣೆಯ ಕೇಂದ್ರವಾದೇನು?”
”ಮತ್ತೇನು ವರ ಕೊಡಲಿ?”
”ದೇವರ ದಯೆಯಿಂದ ನಾನು ಬಯಸಿದ್ದೆಲ್ಲ ನನಗೆ ಸಿಕ್ಕಿದೆ”.
”ಅದಾಗದು, ಏನಾದರೂ ಪವಾಡದ ಶಕ್ತಿಗಾಗಿ ಕೇಳಲೇಬೇಕು ನೀನು”- ದೇವತೆ ಒತ್ತಾಯಿಸಿದಳು.
”ಹಾಗಿದ್ದರೆ, ನನ್ನ ಅರಿವಿಗೆ ಬರದಂತೆಯೇ ಇತರರಿಗೆ ಒಳಿತನ್ನೆಸಗುವಂತಾಗಲಿ”.
ಒಪ್ಪಿದ ದೇವತೆ, ಅವನಿಗೆ ಕೊಟ್ಟ ವರ ಬಹಳ ವಿಚಿತ್ರವಾದುದು. ಅವನ ನೆರಳು, ಅದು ಬೆನ್ನ ಹಿಂದೆ ಇರುವಷ್ಟು ಹೊತ್ತು ಅದಕ್ಕೊಂದು ದಿವ್ಯ ಶಕ್ತಿ ಇರುತ್ತಿತ್ತು. ಆ ನೆರಳಿನ ವ್ಯಾಪ್ತಿಯಲ್ಲಿದ್ದ ನೆಲ ಫಲವತ್ತಾಗುತ್ತಿತ್ತು. ನೆರಳು ಯಾವ ರೋಗಿಗಳ ಮೇಲೆ ಬೀಳುತ್ತಿತ್ತೋ ಅವರು ಗುಣಮುಖರಾಗುತ್ತಿದ್ದರು. ನೆರಳು ಬಿದ್ದಲ್ಲೆಲ್ಲ ನೀರ ಚಿಲುಮೆಗಳು ಚಿಮ್ಮುತ್ತಿದ್ದವು. ದುಃಖೀಗಳ ಮುಖಕ್ಕೆ ಅವನ ನೆರಳು ಬಿದ್ದರೆ ಸಾಕು, ಅವರ ಮುಖದಲ್ಲಿ ಖುಷಿಯ ರಂಗು ಹಮ್ಮತೊಡಗುತ್ತಿತ್ತು. ಆದರೆ, ಈ ಯಾವ ಪವಾಡವೂ ಆ ಸಂತನ ಅರಿವಿಗೆ ಬರಲೇ ಇಲ್ಲ. ಕಾರಣ, ಜನರ ಗಮನ ಕೇವಲ ಅವನ ನೆರಳ ಮೇಲಿತ್ತು; ಅವನ ಮೇಲಲ್ಲ. ಅವರು ಅವನ ನೆರಳಿನಿಂದ ಉಪಕೃತರಾದರು. ಅವನನ್ನು ಮಾತ್ರ ಮರೆತೇ ಬಿಟ್ಟರು.
ಅವನು ಬಯಸಿದ್ದುದೂ ಅದೇ ತಾನೆ?
– ಪ್ರತಿಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ