ಒಂದು ಝೆನ್ ಕತೆ: ಹೆಸರೂರು ಎಂಬ ಊರಿನಲ್ಲಿ
Team Udayavani, Feb 16, 2020, 5:39 AM IST
ಅದೊಂದು ಚಿಕ್ಕ ಊರು. ಹೆಸರು ಹೆಸರೂರು. ಅದರ ಬಗ್ಗೆ ಕೇಳಿದವರಿಲ್ಲ, ಅದನ್ನು ನೋಡಿದವರಿಲ್ಲ. ಅಂಥ ಊರೊಂದು ಇದೆ ಎಂದೇ ಯಾರಿಗೂ ತಿಳಿದಿರಲಿಲ್ಲ.
ಒಮ್ಮೆ ಹೀಗಾಯಿತು. ಹಕುಯಿಕ ಎಂಬ ಸರದಾರ ಅಲ್ಲಿಗೆ ಬಂದ. ಅವನ ಕಸುಬು ವ್ಯಾಪಾರ. ಮಣ್ಣಿನಿಂದ ಚಿನ್ನದವರೆಗಿನ ವ್ಯವಹಾರ. ಒಂದು ದಿನ ಚಿನ್ನದ ಪಾತ್ರೆಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಬೀದಿಬೀದಿ, ಕೇರಿಕೇರಿ ವ್ಯಾಪಾರ ಹೊರಟಿದ್ದ. “ಚಿನ್ನದ ಪಾತ್ರೆಗಳು ಬೇಕೆ, ಕಡಿಮೆ ಬೆಲೆಗೆ ಲಭ್ಯ. ಬನ್ನಿ ಬನ್ನಿ’ ಎಂದು ಕೂಗುತ್ತ ಮನೆಗಳ ಬಾಗಿಲಲ್ಲಿ ವಿಚಾರಿಸಿಕೊಂಡು ಸಾಗುತ್ತಿದ್ದ. ಸಾಗುತ್ತ ಸಾಗುತ್ತ ಊರ ಸುಪರ್ದಿ ದಾಟಿ ಕಾಡಿನ ದಾರಿ ಹಿಡಿದದ್ದು ಆತನಿಗೆ ತಿಳಿಯಲೇ ಇಲ್ಲ.
ಅವನಿಗರಿವಿಲ್ಲದಂತೆಯೇ ಅವನು ಹೆಸರೂರನ್ನು ಪ್ರವೇಶಿಸಿದ್ದ. ಪಾತ್ರೆಗಳನ್ನು ಎತ್ತಿ ಹಿಡಿದು, “ಚಿನ್ನದ ಪಾತ್ರೆ ಬೇಕೆ ಸ್ವಾಮೀ, ಅತೀ ಕಡಿಮೆ ಮೌಲ್ಯ’ ಎಂದು ಕೂಗುತ್ತ ಹೆಸರೂರಿನ ಬೀದಿಲ್ಲಿ ಸಾಗುತ್ತಿರಬೇಕಾದರೆ ಒಂದು ಅಚ್ಚರಿ ನಡೆಯಿತು. ಎಲ್ಲರೂ ಇವನನ್ನು ನೋಡಿ ಅವರವರಷ್ಟಕ್ಕೆ ನಗತೆೊಡಗಿದರು. “ನೀವೆಲ್ಲ ಯಾಕೆ ನಗುತ್ತಿರುವಿರಿ?’ ಎಂದು ಹಕುಯಿಕನಿಗೆ ಜನರಲ್ಲಿ ಕೇಳಬೇಕೆನಿಸಿತು.
ಬಹುಶಃ ಹುಚ್ಚರ ಊರಾಗಿರಬಹುದು ಭಾವಿಸಿ ಹಕುಯಿಕ ಅಲ್ಲಿಂದ ಬೇಗಬೇಗನೆ ಕಾಲ್ಕಿತ್ತ.
ಮರುದಿನವೂ ಎಂದಿನಂತೆ ವ್ಯಾಪಾರಕ್ಕೆ ಹೊರಟಿದ್ದ. ಗೋಣಿಚೀಲದ ತುಂಬ ಮಣ್ಣಿನ ಪಾತ್ರೆ-ಪಗಡೆಗಳು. ಯಾಕೋ ಕುತೂಹಲದಿಂದ ಈ ದಿನವೂ ಹೆಸರೂರಿಗೆ ಬಂದ. ಕೈಯಲ್ಲಿ ಮಣ್ಣಿನ ಪಾತ್ರೆ ಎತ್ತಿ ಹಿಡಿದು, “ಮಣ್ಣಿನ ಪಾತ್ರೆಗಳು ಬೇಕೆ, ಅತೀ ಕಡಿಮೆ ಕ್ರಯಕ್ಕೆ, ತೆೆಗೆದುಕೊಳ್ಳಿ’ ಎಂದು ಕೂಗುತ್ತ ಸಾಗಿದ. ಎಲ್ಲರೂ ನಗತೊಡಗಿದರು. “ನಿನ್ನೆ ಬಂದಿದ್ದ ಹುಚ್ಚ ಇಂದೂ ಬಂದ’ ಎಂದು ಅವರವರಷ್ಟಕ್ಕೇ ಹೇಳಿಕೊಂಡರು.
ಹಕುಯಿಕನಿಗೆ ಎಲ್ಲಿಲ್ಲದ ಅಚ್ಚರಿ. ಅವನಿಗದು ಚಿದಂಬರ ರಹಸ್ಯ.
ಕೊನೆಗೂ ಒಂದು ದಿನ ಗುಟ್ಟು ತಿಳಿಯಿತು.
.
.
ಹೆಸರೂರಿನಲ್ಲಿ ಒಂದು ವಿಶಿಷ್ಟ ಭಾಷಾ ಪದ್ಧತಿಯಿತ್ತು¤. ಕಿವಿಗೆ ಕಣ್ಣು ಎಂದೂ, ಕಣ್ಣಿಗೆ ಕಿವಿ ಎಂದೂ, ಕುಡಿಯುವುದಕ್ಕೆ ಉಣ್ಣುವುದು ಎಂದೂ, ಉಣ್ಣುವುದಕ್ಕೆ ಕುಡಿಯುವುದು ಎಂದೂ ಹೇಳುವ ವಾಡಿಕೆ ಅಲ್ಲಿನದು. ಹಾಗೆಯೇ ಚಿನ್ನಕ್ಕೆ ಮಣ್ಣು ಎಂದೂ, ಮಣ್ಣಿಗೆ ಚಿನ್ನ ಎಂದೂ ಕರೆಯುವ ರೂಢಿ. ಮಣ್ಣು ಮಣ್ಣೇ, ಚಿನ್ನ ಚಿನ್ನವೇ. ಆದರೆ, ಅದನ್ನು ಕರೆಯುವ ಕ್ರಮ ಮಾತ್ರ ಉಲ್ಪಾಪಲ್ಟಾ!
ಅಂದಹಾಗೆ ಹೆಸರಿನಲ್ಲೇನಿದೆ, ಹೇಳಿ!