ಭಗವದ್ಗೀತೆ:ಆಪ್ತಗೀತೆ


Team Udayavani, Sep 16, 2018, 6:00 AM IST

venkathesha.jpg

ನಮ್ಮ ನಡುವಿನ ಹಿರಿಯ ಸಾಹಿತಿಗಳಾದ ಎಚ್‌. ಎಸ್‌. ವೆಂಕಟೇಶಮೂರ್ತಿಯವರು ಸಂಸ್ಕೃತ, ಹಳೆಗನ್ನಡ ಮಹಾಕೃತಿಗಳ ಪ್ರತಿಬಿಂಬಗಳನ್ನು ಕನ್ನಡದ ಕನ್ನಡಿಯಲ್ಲಿ ಕಾಣುತ್ತಿದ್ದಾರೆ. ಶ್ರೀರಾಮಚಾರಣ, ಋಗ್ವೇದ ಸು#ರಣ, ಪಂಪನ ಕಾವ್ಯಗಳ ತಿಳಿಗನ್ನಡ ಅವ‌ತರಣ, ಕುಮಾರವ್ಯಾಸ ಕಥಾಂತರಗಳಂಥ ಅವರ ಕೃತಿಗಳು ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸುತ್ತಿವೆ. ಇದೀಗ ಭಗವದ್ಗೀತೆಯ ತಿಳಿಗನ್ನಡ ಅವತರಣ: ಆಪ್ತಗೀತೆಯನ್ನು ಬೆಂಗಳೂರಿನ ಅಭಿನವ ಪ್ರಕಾಶನ ಪ್ರಕಟಿಸಿದೆ,

ಭಾರತೀಯ ಸಂದರ್ಭದಲ್ಲಿ ಆಧುನೀಕತೆಯು ತನ್ನ ವೈಚಾರಿಕತೆಯನ್ನು ರೂಪಿಸುವ ಸಂದರ್ಭದಲ್ಲಿ ಒಂದು ಸುಲಭದ ಮಾರ್ಗವನ್ನು ಹಿಡಿಯಿತೆನ್ನಿಸುತ್ತದೆ. ಅದು ಸಂಪೂರ್ಣವಾಗಿ ಪಾಶ್ಚಾತ್ಯ ಶಿಕ್ಷಣವನ್ನು ನಂಬಿ ಹೊರಟಿತು. ಪಾಶ್ಚಾತ್ಯ ಶಿಕ್ಷಣವು ಅಳವಡಿಸಿಕೊಂಡಿದ್ದ ವಿಜ್ಞಾನ ಬೋಧನೆಯ ವಸ್ತು ಮತ್ತು ವಿಧಾನಗಳೆರಡೂ ನಮ್ಮ ಚಿಂತಕರ ಕಣ್ಣು ಕುಕ್ಕಿಸಿಬಿಟ್ಟವು. ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡ ಯುವ ವೈಚಾರಿಕರು, ಪಾಶ್ಚಾತ್ಯದ ಎಲ್ಲವೂ “ತೀರ್ಥ’ ಎಂದು ಒಪ್ಪಿಕೊಂಡುಬಿಟ್ಟರು. ಜೊತೆಗೆ ಸಮಕಾಲೀನ ಜಾತಿ ವೈಷಮ್ಯಗಳು, ಉನ್ನತವೆನ್ನಿಸಿಕೊಂಡ ಬ್ರಾಹ್ಮಣ ಮತ್ತು ಉಳಿದ ಮೇಲ್ಜಾತಿಯವರ ಒಣಕೊಬ್ಬುಗಳು, ಅಂಧ ನಡಾವಳಿಕೆಗಳಿಂದ ನಮ್ಮಲ್ಲಿನ ಯುವ ಪ್ರಗತಿಪರರು, “ಪಶ್ಚಿಮದ ವೈಚಾರಿಕತೆ ಬಿಟ್ಟು ಬೇರಿಲ್ಲ, ಅದೇ ನಮ್ಮ ಉದ್ಧಾರದ ಏಕೈಕ ಮಾರ್ಗ’ ಎಂದುಕೊಂಡು ಅದನ್ನು ಬೆನ್ಹತ್ತಿ ಹೊರಟರು. ಗೋಪಾಲಕೃಷ್ಣ ಅಡಿಗರು ಹೇಳುವಂತೆ “ಎಂದಿಗೆ ಪುರೋಹಿತರ ನಂಬಿ(!) ಪಶ್ಚಿಮ ಬುದ್ಧಿಯಾದೆವೋ’, ಈ ಹೊಸ ದೀಕ್ಷಿತರು ಭಾರತೀಯ ಜ್ಞಾನ ಸಮುಚ್ಚಯಕ್ಕೆ ಸಂಪೂರ್ಣವಾಗಿ ಮೊಗದಿರುಹಿ, ನಮ್ಮ ಸಮಾಜವನ್ನು ತಮ್ಮ ಹೊಸ ಅಳತೆಯ ಕಡ್ಡಿಯಿಂದ ಅಳೆಯತೊಡಗಿದರು. ಆದರೆ, ಇವರ ಅಳತೆಯ ಪ್ರಕ್ರಿಯೆಯು ಎ. ಕೆ. ರಾಮಾನುಜನ್ನರ ಅಂಗುಲಹುಳುವಿನ ಕತೆಯಂತಾಯಿತು. ಆ ಹುಳುವು ಅಂಗೈಯಲ್ಲಿ ಜೀವ ಇಟ್ಟುಕೊಂಡು ಹಕ್ಕಿಯ ನಾಲಗೆಯನ್ನೇನೋ ಅಳೆಯಿತು. ನಾಚಿಕೆಯಿಲ್ಲದೆ ನಾಚಿಕೆಯ ಅಂಗಗಳನ್ನೂ ಅಳೆಯಿತು. ಆದರೆ ಕೋಗಿಲೆಯ ಹಾಡನ್ನು ಅಳೆಯುವುದು ಹೇಗೆ? ಅದೇ ನೆವವನ್ನಿಟ್ಟುಕೊಂಡು ದೂರ ದೂರಕ್ಕೆ ಹೋಗಿ ಮರೆಯಾಯಿತು. ಹೊಸ ದೀಕ್ಷಿತರ ಸಮಸ್ಯೆಯೂ ಅದೇ ಆಗಿದ್ದಿತು.

ಅವರು ಕೆಲವು ಪಠ್ಯಗಳನ್ನು ಆಯ್ದುಕೊಂಡು ಅವುಗಳಲ್ಲಿನ ಸಾಮಾಜಿಕ ಕೊರತೆಗಳನ್ನು ಮುಂದೊಡ್ಡುತ್ತ ಆ ಕೊರತೆಗಳನ್ನು ಇಡೀ ದರ್ಶನ- ಜ್ಞಾನ ಸಮುಚ್ಚಯಕ್ಕೆ ಅನ್ವಯಿಸಿ, ಭಾರತೀಯ ಜ್ಞಾನ-ದರ್ಶನ ಸಮಸ್ತವೂ ಸಾಮಾಜಿಕ ಅಸಹ್ಯವೆನ್ನುವ ಪ್ರಮೇಯವನ್ನು ಮಂಡಿಸಿದರು. 

ಇಂಥ ಸ್ಥಿತಿ ಯಾವುದೇ ಸಮುದಾಯಕ್ಕೂ ಆರೋಗ್ಯಪೂರ್ಣವಾಗಿರಲಾರದು. ಅಲ್ಲಮನು ಹೇಳುವಂತೆ ಹಿಂದಿನ ಹೆಜ್ಜೆಯನ್ನರಿಯದೇ ಮುಂದಿನ ಹೆಜ್ಜೆಯನ್ನಿಡಲಾಗದು ಎನ್ನುವಂತೆ ಸಮುದಾಯಗಳು ಭೂತದೊಂದಿಗಿನ ಅನುಸಂಧಾನ, ಸ್ವೀಕರಣ-ವಿಸರ್ಜನಗಳ ಮುಖಾಂತರ ತಮ್ಮ ವಿಕಾಸವನ್ನು ಸಾಧಿಸಬೇಕಾಗುತ್ತದೆ. ನಾವು ನಮ್ಮ ಭೂತಕಾಲದೊಂದಿಗೆ, ಅದರ ಜ್ಞಾನ-ದರ್ಶನ ಸಮುಚ್ಚಯದೊಂದಿಗೆ ಅನುಸಂಧಾನ ನಡೆಸುವುದು ನಮ್ಮ ಸಮುದಾಯಕ್ಕೆ ಒಳ್ಳೆಯದು ಮತ್ತು ಅತ್ಯಗತ್ಯ. 

ಈ ಹಿನ್ನೆಲೆಯಲ್ಲಿ ಗೆಳೆಯ ಎಚ್‌. ಎಸ್‌. ವೆಂಕಟೇಶಮೂರ್ತಿಯವರು ನಡೆಸುತ್ತಿರುವ ಬರೆಹದ ಬದುಕು ಅತ್ಯಂತ ಅರ್ಥಪೂರ್ಣ ಎನ್ನಿಸುತ್ತದೆ. ವೆಂಕಟೇಶಮೂರ್ತಿಯವರು ಸಮಕಾಲೀನ ಸಮುದಾಯವು ಕಡಿದುಕೊಂಡಿದ್ದ ತನ್ನ ಪರಂಪರೆಯೊಂದಿಗಿನ ಸಂಬಂಧವನ್ನು ಪುನರ್‌ಸ್ಥಾಪಿಸುವ ದಿಕ್ಕಿನ ಅರ್ಥಪೂರ್ಣ ಪ್ರಯೋಗಗಳನ್ನು ಕಳೆದ ಹತ್ತಾರು ವರ್ಷಗಳಲ್ಲಿ ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಕುಮಾರವ್ಯಾಸನ ಭಾರತ ಕಥಾಮಂಜರಿಯನ್ನು ಕುಮಾರವ್ಯಾಸ ಕಥಾಂತರದ ಮೂರು ಸಂಪುಟಗಳ ಮೂಲಕ ಸಮಕಾಲೀನ ಚಿಂತನೆಯ ಆಯಾಮವನ್ನಾಗಿಸಿ¨ªಾರೆ. ಆದಿಪರ್ವ-ಸಭಾಪರ್ವ ಗಳನ್ನು ಕುರಿತ ಕುಮಾರವ್ಯಾಸ ಕಥಾಂತರದ ಎರಡನೆಯ ಸಂಪುಟದಲ್ಲಿ ಭಾರತವಾದರೋ ಗೋತ್ರ ದಾಯಾದಿಗಳೂ ಮತ್ತು ಅವರ ನಂಟರಿಷ್ಟರ ಕತೆ. ನಿಕಟ ನಂಟಿಲ್ಲದ ಯಾವ ಪಾತ್ರವೂ ಕುರುಕ್ಷೇತ್ರ ಕಳದಲ್ಲಿ ಸೇರಿಲ್ಲ. ಸ್ವತಃ  ದೈವವೂ ಈ ಸಂಬಂಧ ಸೂತ್ರದಲ್ಲಿ ಬಂಧಿತ. ಹಾಗಾಗಿ, ಮಹಾಭಾರತ ಎಂಬುದು ಸಂಬಂಧಗಳ ವಿಷಮ ವ್ಯೂಹ. ಪಾತ್ರಗಳ ಸಂಬಂಧ ಮತ್ತು ವಿಚ್ಛೇದವೇ ಮಹಾಭಾರತದ ಕಥನದ ಸ್ವರೂಪವನ್ನು ನಿರ್ಧರಿಸುತ್ತದೆ. ಈ ತತ್ವ ಸಮಕಾಲೀನ ಸಮುದಾಯಕ್ಕೂ ಅನ್ವಯವಾಗುವಂತಹದೇ. ವಿಚ್ಛೇದವೇ ಸಮಕಾಲೀನ ವಿಷಮ ಸಾಮಾಜಿಕ ಸ್ಥಿತಿಗೆ ಕಾರಣವಾಗಿದೆ. ಕಳೆದುಹೋದ, ಮರೆತುಹೋದ ಸಂಬಂಧಗಳನ್ನು ಸ್ಮರಣೆಗೆ ತಂದುಕೊಳ್ಳುವುದೇ (ಪ್ರತ್ಯಭಿಜ್ಞಾನ) ಸಮಕಾಲೀನ ಸಂಘರ್ಷಗಳಿಗೆ ಹರ್ಷದಾಯಕ ಪರಿಹಾರವಾಗುತ್ತದೆ ಎಂಬುದನ್ನು ಎಚ್‌ಎಸ್ವಿ ಸೂಚಿಸುತ್ತಾರೆ. ಹೀಗೆ ಸಮಕಾಲೀನ ವಾಸ್ತವಗಳನೇಕವು ಕುಮಾರವ್ಯಾಸನ ಭಾರತದ ಪ್ರಸಂಗಗಳೊಡನೆ ತುಲನೆಗೊಳ್ಳುತ್ತವೆ, ಬೆಲೆಗಟ್ಟಲ್ಪಡುತ್ತವೆ. 

ಇಂದಿನ ಪಾತ್ರಗಳು ಅಂದಿನ ಪಾತ್ರಗಳ ಜೊತೆ ಕೈಹಿಡಿದು ನಡೆಯುತ್ತವೆ. ಅಂದಂದು ಬಂದ ಮಹತ್ವದ ಕಾವ್ಯಗಳು ಅಂದಂದಿನ ಯುಗಗಳ ವಾಸ್ತವಗಳನ್ನು, ಅವುಗಳ ಹಿನ್ನೆಲೆಯಲ್ಲಿ ಕ್ರಿಯಾಶಾಲಿಯಾಗಿದ್ದ ತಣ್ತೀ-ದರ್ಶನಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತವೆ. ಭಾಷಿಕ ಅಥವಾ ಇನ್ನಾವುದೋ ಕಾರಣಗಳಿಂದ ಅವುಗಳ ಓದನ್ನು ಕಳೆದುಕೊಂಡ ಸಮಕಾಲೀನ ಸಮುದಾಯಕ್ಕೆ ಅವು ದಕ್ಕುವಂತೆ ಮಾಡುವುದು ಬಹು ಮುಖ್ಯವಾದ ಕ್ರಿಯೆ. ಎಚ್‌ಎಸ್ವಿಯವರು ಪಂಪನನ್ನು ನಮ್ಮ ಓದಿಗೆ ತಂದುಕೊಡುವ ಮೂಲಕ ಈ ಕ್ರಿಯೆಯನ್ನು ಸಾಧಿಸಿದ್ದಾರೆ. ಅವರ ಕಿರಿಯರಿಗಾಗಿ ಪಂಪ, ವಿಕ್ರಮಾರ್ಜುನ ವಿಜಯ: ತಿಳಿಗನ್ನಡ ಅವತರಣ ಮತ್ತು ಆದಿಪುರಾಣ: ತಿಳಿಗನ್ನಡ ಅವತರಣ ಗ್ರಂಥಗಳು ಪಂಪನೊಂದಿಗೆ ಮತ್ತು ಅವನ ಕಾಲದ ತಣ್ತೀ ಮೌಲ್ಯಗಳೊಂದಿಗೆ ಸಮಕಾಲೀನ ಸಮುದಾಯವನ್ನು ಜೋಡಣೆಗೊಳಿಸುತ್ತವೆ. ಅವರು ವಿಕ್ರಮಾರ್ಜುನ ವಿಜಯ: ತಿಳಿಗನ್ನಡ ಅವತರಣಿಕೆಯ ಅರಿಕೆಯಲ್ಲಿ ಹೇಳಿರುವ ಈ ಮಾತುಗಳನ್ನು ನೋಡಿರಿ : ಪಂಪನನ್ನು ಅವನ ಕಾವ್ಯದ ಸಂವೇದನೆ ಸಮೇತ ನಮ್ಮ ಹೊಸ ಪೀಳಿಗೆಗೆ ದೊರಕಿಸಬೇಕೆಂಬುದೇ ಈ ಸಾಹಸದ ಬೆನ್ನಿಗಿರುವ ತುತೊìತ್ತಿನ ಕಾರಣ… ಪಂಪ ಕೇವಲ ಒಂದು ಹೆಸರಲ್ಲ, ಅವನೊಂದು ಮಹಾವ್ಯಕ್ತಿತ್ವದ ತೇಜಃಪುಂಜ ಎಂಬುದನ್ನು ಹೊಸಪೀಳಿಗೆಯ ಬೋಧೆಗೆ ತರಬೇಕು ಎಂಬುದೇ ಈ ಶ್ರಮದ ಹಿಂದಿನ ಸಂಕಲ್ಪ. 

ಎಚ್‌ಎಸ್ವಿ ಸಮಕಾಲೀನ ಸಮುದಾಯಗಳನ್ನು ನಮ್ಮ ಹಳೆಗನ್ನಡ – ನಡುಗನ್ನಡ ಪರಂಪರೆಗಳೊಂದಿಗೆ ಜೋಡಿಸುವುದಲ್ಲದೆ, ಇದಕ್ಕೂ ಹಿಂದಲಿನ ಯುಗಗಳೊಂದಿ ಗಿನ ನಮ್ಮ ಸಂಬಂಧಗಳನ್ನು ಹೊಳೆಯಿಸುವ ಸಾರ್ಥಕ ಸಾಹಸಗಳನ್ನೂ ಕೈಕೊಂಡಿದ್ದಾರೆ. ಅವರು ಕವಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣದ ಎಲ್ಲ ಕಾಂಡಗಳ ಆಯ್ದ ಶ್ಲೋಕಗಳ ಕನ್ನಡ ಕಾವ್ಯಾನುವಾದದ ಶ್ರೀರಾಮಚಾರಣವನ್ನು ತಂದಿದ್ದಾರೆ. ವೇದಗಳನ್ನು ಓದದೇ ಅವುಗಳನ್ನು ನಿತ್ಯ ಖಂಡನೆಗೆ ಒಳಪಡಿಸುತ್ತಿರುವವರ ಎದುರು ಋಗ್ವೇದ ಸು#ರಣವನ್ನಿಟ್ಟು ಅದನ್ನು ಓದಿ ತಿಳಿದು ಖಂಡಿಸಲು ಅನುವು ಮಾಡಿಕೊಟ್ಟಿದ್ದಾರೆ. ಸ್ತ್ರೀಯರೂ ಸೇರಿದಂತೆ ವಿವಿಧ ಜಾತಿಗಳ ದೃಷ್ಟಾರರು ರಚಿಸಿದ ಇಲ್ಲಿನ ರುಕ್ಕುಗಳು ಐಹಿಕ ಜೀವನವೂ ಸೇರಿದಂತೆ ಹಲವು ವಿಷಯಗಳನ್ನು ಕುರಿತ ಜಿಜ್ಞಾಸೆಯನ್ನು ಮಂಡಿಸುತ್ತವೆ. ಋಗ್ವೇದದ ನಂತರ ಇದೀಗ ವೆಂಕಟೇಶಮೂರ್ತಿಯವರು ಭಗವದ್ಗೀತೆಯ ಸಮಗ್ರ ಕನ್ನಡ ಕಾವ್ಯಾನುವಾದ ರಚಿಸಿದ್ದಾರೆ. ಆ ಮೂಲಕ ನಮ್ಮ ಜಿಜ್ಞಾಸೆಗೆ ಹೊಸ ಆಕರವನ್ನು ಒದಗಿಸಿದ್ದಾರೆ. ಇದರ ನೆಲೆಯಲ್ಲಿ ನಮ್ಮ ಚರ್ಚೆ-ಜಿಜ್ಞಾಸೆಗಳು ಹೆಚ್ಚು ನಿರಪೇಕ್ಷಗೊಳ್ಳುವುದು ಸಾಧ್ಯವಾಗಲಿ ಎಂದು ಹಾರೈಸುವೆ.

ಇದು ವೇದ, ಇದು ಭಗವದ್ಗೀತೆ ಎಂದು ಮೂಗು ಮುರಿಯುವ ಆವಶ್ಯಕತೆಯಿಲ್ಲ. ಯಾವ ದರ್ಶನಗಳೂ ಕೆಡುಕನ್ನು ಬೋಧಿಸುವುದಿಲ್ಲ. ಒಂದೊಮ್ಮೆ ಅವುಗಳಲ್ಲಿ ಕೆಡುಕು ಇದ್ದರೆ ಅದನ್ನು ನಿರಾಕರಿಸಿ, ಅದರಲ್ಲಿರುವ ಒಳಿತನ್ನು ಸ್ವೀಕರಿಸುವ ಸ್ವಾತಂತ್ರ್ಯ ನಮಗಿದ್ದೇ ಇದೆ. ಬೋರೆಯ ಹಣ್ಣನ್ನು ತಿನ್ನುವಾಗ ಬೀಜವನ್ನು ಉಗುಳುವುದಿಲ್ಲವೇ, ಹಾಗೆ ! 

– ರಾಘವೇಂದ್ರ ಪಾಟೀಲ

ಟಾಪ್ ನ್ಯೂಸ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.