ಭವತಾರಿಣಿಯ ಮಂದಿರ
Team Udayavani, Sep 30, 2018, 6:00 AM IST
ಹೆಚ್ಚಿನವರಿಗೆ ಚೆನ್ನಾಗಿ ಗೊತ್ತು- ಕೊಲ್ಕತಾದ ದಕ್ಷಿಣೇಶ್ವÌರ ಯಾಕೆ ಪ್ರಸಿದ್ಧವೆಂದು! ಅಲ್ಲಿನ ಭವತಾರಿಣಿ ಮಂದಿರ ಅಥವಾ ಕಾಳಿಕಾಮಾತೆಯ ದೇವಸ್ಥಾನ ನೂರಾರು ವರ್ಷಗಳಷ್ಟು ಹಿಂದಿನದ್ದು. ಮಹಾರಾಣಿ ರಶ್ಮನಿ ದೇವಿ ಕಟ್ಟಿಸಿದ ಈ ದೇಗುಲದಲ್ಲಿ ಬಂಗಾಲಿಗರ ಅಧಿದೇವತೆ ಕಾಳಿಕಾಂಬೆ ನೆಲಸಿದ್ದಾಳೆ. ಹೆಚ್ಚು-ಕಡಿಮೆ ಸುಮಾರು ನೂರು ಅಡಿಗಳೆತ್ತರದ ಈ ಮಂದಿರ ಮೂರು ಅಂತಸ್ತುಗಳದು. ಕಾಳಿಕಾದೇವಿಯಲ್ಲದೆ ಇಲ್ಲಿ ಶಿವನ ಸಹಿತ ಇತರ ದೇವರುಗಳ ಮಂದಿರಗಳೂ ಇವೆ. ದಕ್ಷಿಣಾಭಿಮುಖೀಯಾದ ಮಂದಿರವಿದು. ರಾಮಕೃಷ್ಣ ಪರಮಹಂಸರಿಗೆ ಮತ್ತು ಇಲ್ಲಿನ ಕಾಳಿಕಾಮಂದಿರಕ್ಕೆ ಬಲುಹತ್ತಿರದ ನಂಟು. ನಾವು ಮಂದಿರಕ್ಕೆ ತಲುಪಿದಾಗ ಅಲ್ಲಿ ಮಧ್ಯಾಹ್ನದ ಅರ್ಚನೆ ಮುಗಿದು ಗರ್ಭಗುಡಿ ಬಾಗಿಲು ಮುಚ್ಚಿದ್ದರು. ಹೊರಗಿನಿಂದ ಅವಲೋಕಿಸಿದೆವು.
ಒಂದು ದೇವತಾಕ್ಷೇತ್ರವನ್ನು, ಅಲ್ಲಿನ ಪರಿಸರವನ್ನು, ಅದ್ಯಾವ ಪರಿಯಲ್ಲಿ ಗಲೀಜು ಮಾಡಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ! ಪಾವಿತ್ರ- ಶುಭ್ರತೆ ಇರಬೇಕಾದಲ್ಲಿ ಕಸ-ಕೊಳಕು-ಎಂಜಲು ತುಂಬಿ ನೊಣಗಳು ಹಾರಾಡುತ್ತಿದ್ದವು. ಅಲ್ಲಿ ಭಕ್ತರಿಗೆ ಕೂರಲು ಇದ್ದ ಜಾಗವಷ್ಟೂ ದೂರದಿಂದ ಬಂದ ಯಾತ್ರಿಕರ ಆಹಾರಸೇವನೆಯ ತಾಣವಾಗಿತ್ತು.
ನೋಡುತ್ತ ನೋಡುತ್ತ ಗರ್ಭಗುಡಿಯ ಎದುರಿಗೆ ಬಂದಿದ್ದೆವು. ಬಾಗಿಲು ಮುಚ್ಚಿತ್ತು. ಎದುರಿಗೆ ವಿಸ್ತಾರವಾದ ಖಾಲಿ ಜಾಗವಿತ್ತು. ಅಲ್ಲಿ ಕಂಡ ದೃಶ್ಯ ಬೆಚ್ಚಿ ಬೀಳಿಸುವಂತಿತ್ತು. ಅಲ್ಲಿನ ಖಾಲಿ ಜಾಗದ ಅಡ್ಡಕ್ಕೆ ಕೆಂಪಿನ ದಾಸವಾಳಗಳನ್ನು ರಾಶಿ ಹಾಕಿ ಅದರಲ್ಲಿ ಮೇಣದ ಬತ್ತಿ ಉರಿಸಿ ಇಟ್ಟು ನಿಂತಿದ್ದರೊಬ್ಬರು. ಮಧ್ಯಾಹ್ನದ ಪೂಜಾವೇಳೆಗೆ ತಲುಪಲಾಗದ ಪ್ರವಾಸಿಗರು ಅದನ್ನೇ ಮಹಾಪೂಜೆ ಎಂದು ತಿಳಿದು ಕೈಮುಗಿದು ಆತನ ಕೈಗೆ ಹೇಳಿ¨ ಮೊತ್ತ ಇಟ್ಟು ಮುಚ್ಚಿದ ಗರ್ಭಗುಡಿಯತ್ತ ನೋಡದೆ ಬೆಂಕಿ ಹತ್ತಿ ಹೊಗೆಯಾಡುವ ಹೂಗಳಿಗೆ ನಮಸ್ಕರಿಸಿ ಹೊರಡುತ್ತಿದ್ದರು. ಆತನೋ ಅಲ್ಲಿನ ಅರ್ಚಕ ವರ್ಗದ ಪೈಕಿಯವನಾಗಿರಬಹುದು.
ಕೊಲ್ಕತಾದಲ್ಲಿ ಹತ್ತು ಹೆಜ್ಜೆಗೊಂದರ ಹಾಗೆ ಕಾಳಿ ಮಾತೆ ರಕ್ತಗೆಂಪಿನ ನಾಲಿಗೆ ಹೊರಚಾಚಿ ಹೂಂಕರಿಸುವ ಭಂಗಿಯಲ್ಲಿ ಇರುವ ಗುಡಿಗಳಿವೆ. ಆ ಗುಡಿಗಳಲ್ಲಿ ಪ್ರವೇಶದ್ವಾರದಲ್ಲಿ ಬಾಗಿಲು ಕಾಯಲು ಅಷ್ಟೇ ರುದ್ರ ಭೀಕರವಾಗಿರುವ ಎರಡು ಸಿಂಹಗಳಿವೆ. ರಸ್ತೆಯಲ್ಲಿ ಹೋಗುವವರು ಅಲ್ಲಿ ಒಳಹೋಗಿ ಕೆಂಪು ದಾಸವಾಳ ದೇವಿಯ ಪಾದಕ್ಕೆ ಇಟ್ಟು ಅಲ್ಲಿಟ್ಟ ಕುಂಕುಮ ಹಚ್ಚಿ ಹೊರಬರುವ ನೋಟ ಎಲ್ಲೆಡೆ ಕಾಣುತ್ತ ಇತ್ತು. ದಾಸವಾಳದ ಹಾಗೆ ಇಲ್ಲಿ ಎಕ್ಕದ ಹೂವು ಕಾಳಿಕಾಂಬೆಗೆ ಬಲುಪ್ರಿಯ. ರಸ್ತೆಯುದ್ದಕ್ಕೆ ಸಾಲು ಸಾಲು ಮಹಿಳೆಯರು ಕಡುಗೆಂಪಿನ ಸೀರೆಗಳಲ್ಲಿ ಇದ್ದಿದ್ದು ಕಂಡೆವು. ಕಾಟನ್ ಸೀರೆಗಳೇ ಹೊರತು ಸಿಂಥೆಟಿಕ್ ಸೀರೆಗಳು ಉಪಯೋಗ ಇಲ್ಲಿ ಕಂಡದ್ದು ಬಲು ಕಮ್ಮಿ.
ಕೃಷ್ಣವೇಣಿ ಕಿದೂರು