ತನ್ನದೇ ಆದ್ದೊಂದು ಮೂಲೆ


Team Udayavani, Feb 9, 2020, 12:19 PM IST

edition-tdy-2

ಸಾಂಧರ್ಬಿಕ ಚಿತ್ರ

ಒಂದು ದಿನ, ಇದ್ದಕ್ಕಿದ್ದಂತೆ, ಬರೆಯಲು ಹಾಗೂ ಓದಲು ಸ್ವಂತದ್ದಾದೊಂದು ಜಾಗವಿಲ್ಲವೆಂದೆನಿಸಿ, ತುಸು ತಮಾಷೆಯಲ್ಲಿ, ತುಸು ಗಂಭೀರವಾಗಿಯೇ ಅದನ್ನು ಘೋಷಿಸಿದೆ. ಮನೆಯವರೆಲ್ಲ ಜೋರಾಗಿ ನಕ್ಕರು. “”ಒಂದ್ಸಲ ಬೆಳಿಗ್ಗೆ ನಾವು ಕಾಲೇಜಿಗೆ, ಆಫೀಸಿಗೆ ಹೋದಮೇಲೆ, ಇಡೀ ಮನೆ ನಿಂದೇ. ಎಲ್ಲಿ ಬೇಕಾದ್ರೂ ಓದಬಹುದು, ಬರೀಬಹುದು” ಎಂದರು. ಎಲ್ಲೆಲ್ಲಿ, ಹೇಗೆ ರಾಣಿಯ ಹಾಗೆ ಕುಳಿತು ಓದಬಹುದು, ಬರೆಯಬಹುದು- ಎಂದು ಸೂಚಿಸತೊಡಗಿದರು. “ಹೌದಲ್ಲವೇ’ ಎಂದೆನಿಸಿತು.

ಮಲಗುವ ಕೋಣೆಯ ಮೂಲೆಯ ಮೇಜು, ಊಟದ ಮೇಜು, ಮಕ್ಕಳ ಕೋಣೆಯ ಎರಡೆರಡು ಮೇಜುಗಳು- ಒಂದೇ ಜಾಗಕ್ಕೆ ಜೋತುಬೀಳಬೇಕೆಂದೇ ಇಲ್ಲ. ಬರೆಯಲು ಕುಳಿತೆ. ಇದ್ದಕ್ಕಿದ್ದಂತೆ, ಯಾವುದಾದರೂ ಕೆಲಸಕ್ಕೆಂದು ಎದ್ದುಹೋದೆನೇ, ಪುಸ್ತಕವೋ, ಕಂಪ್ಯೂಟರೋ ಅಲ್ಲಿಯೇ! ಸಂಜೆ ಯಾರಾದರೂ, “”ಅಮ್ಮಾ, ನಿನ್ನ ಪುಸ್ತಕ ನನ್ನ ಮೇಜಿನ ಮೇಲುಂಟು”, ಎಂದೋ, “”ಇದು ಯಾರ ಕಂಪ್ಯೂಟರ್‌? ಜಾಗ್ರತೆ, ಅಲ್ಲಲ್ಲಿ ಬಿಡಬೇಡ” ಎಂದೋ ಕರೆಕೊಡುತ್ತಿದ್ದರು. “”ಓ! ಕತೆ! ಎಲ್ಲಿವರೆಗೆ ಬಂತು? ಯಾವ ವಿಷಯ?” ಎಂಬಿತ್ಯಾದಿ ಪ್ರಶ್ನೆಗಳೂ ಹೊರಡುತ್ತಿದ್ದವು. ಇಂತಹ ಮಾತುಗಳ ಪರಿಣಾಮವೆನ್ನುವುದು- ಪರೀಕ್ಷೆಯಲ್ಲಿ ಬರೆಯುತ್ತಿರುವಾಗ, ಉಪಾಧ್ಯಾಯರು ಹತ್ತಿರ ಬಂದು ನಿಂತಾಗ ಆಗುವ ಮುಜುಗರ- ಗೊಂದಲಗಳಂತೆ. ಒಂದು ಕತೆಯ ಅಥವಾ ಲೇಖನದ ಸೂಕ್ತ ಆರಂಭಕ್ಕಾಗಿ, ವಿಷಯಕ್ಕಾಗಿ, ಸರಿಯಾದ ಶಬ್ದಗಳಿಗಾಗಿ ತಡಕಾಡುತ್ತಿರುವಾಗ, ಇಂತಹ ಉದ್ಗಾರಗಳಿಂದ ಫ‌ಟಕ್ಕನೆ ತಂತಿಯೊಂದು ತುಂಡಾದಂತಾಗಿ, ಒಳಗಿರುವ ಅಭಿವ್ಯಕ್ತಿಯ ಸೂಕ್ಷ್ಮ ಜಗತ್ತು ನಲುಗಿಬಿಡುತ್ತದೆ.

ಹೆಂಗಸಿನ ಏಕಾಂತ.. :  ಹೆಂಗಸೊಬ್ಬಳಿಗೆ ಬರೆಯುವ ಸ್ವಾತಂತ್ರ್ಯ ಇರಬೇಕಾದರೆ, ಅವಳದೇ ಒಂದು ಕೋಣೆ ಬೇಕೇ ಬೇಕು ಎಂದಿದ್ದ ಇಪ್ಪತ್ತನೆಯ ಶತಮಾನದ ಪ್ರಮುಖ ಸಾಹಿತಿಗಳಲ್ಲಿ ಒಬ್ಬಳಾದ ವರ್ಜಿನಿಯಾ ವೂಲ್ಫ್ಳ ಮಾತು ಅದೆಷ್ಟು ಸತ್ಯ ಎಂಬುದು ವಿಷದವಾಗತೊಡಗಿತು. ಆಕೆ ತನ್ನ ಪ್ರಬಂಧದಲ್ಲಿ ಪ್ರಚಲಿತ ವ್ಯವಸ್ಥೆಯನ್ನು ಖಂಡಿಸುವುದರೊಂದಿಗೆ, ಸಾಹಿತ್ಯವನ್ನು ರಚಿಸಲು ಮಹಿಳೆಯೊಬ್ಬಳಿಗೆ ಏನೇನು ಬೇಕು ಎಂಬುದನ್ನೂ ವಿಶ್ಲೇಷಿಸುತ್ತ, ದೈಹಿಕ ಶಕ್ತಿ, ಮನಃಶ್ಶಾಂತಿ ಹಾಗೂ ಬರೆಯುವಾಗ ಯೋಚಿಸಲು ಸಮಯ ಮತ್ತು ಏಕಾಂತ ಅಗತ್ಯ ಎನ್ನುತ್ತಾಳೆ.

ಶೇಕ್ಸ್‌ಪಿಯರನಿಗಿರದ ತಂಗಿಯೊಬ್ಬಳನ್ನು ವರ್ಜಿನಿಯಾ ಊಹಿಸಿಕೊಳ್ಳುತ್ತಾಳೆ; ಓದುಬರಹವಿದ್ದಿರದ, ಒಂದಕ್ಷರವನ್ನೂ ಬರೆಯದ ಆ ಕವಿ ಇನ್ನೂ ಬದುಕಿದ್ದಾಳೆ, ನನ್ನಲ್ಲೂ, ನಿಮ್ಮಲ್ಲೂ, ಮಕ್ಕಳನ್ನು ಮಲಗಿಸುತ್ತಿರುವ ಹೆಂಗಳೆಯರಿಂದ ಹಿಡಿದು ಎಲ್ಲ ಹೆಂಗಸರಲ್ಲೂ ಆಕೆ ಇದ್ದಾಳೆ- ಎನ್ನುತ್ತಾಳೆ ಆಕೆ. ಹೆಂಗಸರು ಕೇವಲ ಗಂಡಸರ ಆಕೃತಿಯನ್ನು ಎರಡರಷ್ಟಾಗಿ ಪ್ರತಿಫ‌ಲಿಸುವ ಸೊಗಸಾದ ಮಾಯಾಕನ್ನಡಿಯಾಗಿದ್ದಾರೆ ಎನ್ನುವ ಅವಳ ಕಟುಮಾತು ಬೆಚ್ಚಿಬೀಳಿಸುವಂತಿದೆ. ಆದರೆ, ಸೃಜನಶೀಲ ಸೆಲೆಯ ಅಭಿವ್ಯಕ್ತಿಯಾದ ತುಳು ಪಾಡ್ದನ ಕಾವ್ಯ ಸಿರಿ ಯಂತಹ ಮೌಖೀಕ ಸಾಹಿತ್ಯವು ಈ ಮಾತಿಗೊಂದು ಅಪವಾದ. ತಮಗಾದ ಅನ್ಯಾಯ, ಅಪಮಾನಗಳ ರೋಷಕ್ಕೆ ಜಾನಪದ ಸಾಹಿತ್ಯದಲ್ಲಿ “ಕವಿ-ದನಿ’ ದೊರೆತಿದೆ ಎನ್ನುವುದಕ್ಕೆ ಈ ತುಳು ಜಾನಪದ ಸಾಕ್ಷಿಯಾಗಿದೆ.

ಗಂಡುಮಕ್ಕಳಿಗೆ ಮಾತ್ರ ವಿದ್ಯಾಭ್ಯಾಸ ಕೊಡಬೇಕೆನ್ನುವ ಜಾಯಮಾನದವನಾಗಿದ್ದ ವರ್ಜಿನಿಯಾಳ ತಂದೆ, ತನ್ನ ಹೆಣ್ಣುಮಕ್ಕಳನ್ನು ವಿದ್ಯಾವಂಚಿತರನ್ನಾಗಿ ಮಾಡಿದ್ದ. ಇವತ್ತಿಗೂ ಜಗತ್ತಿನಾದ್ಯಂತ ಈ ರೀತಿಯ ತಾರತಮ್ಯವು ಹೆಚ್ಚುಕಡಿಮೆ ಎಲ್ಲೆಡೆಯಲ್ಲೂ ಇದೆ. ಚಿಕ್ಕಂದಿನಲ್ಲಿ ಊಟಕ್ಕೆ ಕುಳಿತಾಗ, ಹುಳಿಯ ಹೋಳುಗಳನ್ನೆಲ್ಲ ಅಣ್ಣನಿಗೆ ಹಾಕಿ, ಹೆಣ್ಣುಮಕ್ಕಳಿಗೆ ಬರೀ ರಸವನ್ನು ಅಮ್ಮ ಬಡಿಸುತ್ತಿದ್ದಳೆಂದು ನನ್ನ ವಾರಗಿತ್ತಿಯೊಬ್ಬರು ನೋವಿನಿಂದ ನೆನಪಿಸುತ್ತಿರುತ್ತಾರೆ. ಒಮ್ಮೆ ಅಷ್ಟಮಿಯ ತಿಂಡಿಯನ್ನು ಸಹಾಯಕ್ಕೆ ಬರುತ್ತಿದ್ದ ಕಮಲಾಳಿಗೆ ಕೊಟ್ಟಿದ್ದೆ. ಮರುದಿನ ಅವಳ ಮಗಳೊಂದಿಗೆ, “ಉಂಡೆ ತಿಂದ್ಯಾ?’ ಎಂದರೆ “ಇಲ್ಲ’ ಎಂದು ತಲೆಯಲ್ಲಾಡಿಸಿದ್ದಳು. ಕಮಲಾ ಮಗಂದಿರಿಬ್ಬರಿಗೆ ಮಾತ್ರ ಕೊಟ್ಟಿದ್ದಳಂತೆ. ಗಂಡಸರನ್ನು, ಗಂಡುಮಕ್ಕಳನ್ನು ಅಟ್ಟಕ್ಕೇರಿಸುವ ಮನೋಭಾವವು ಹೆಂಗಸರಲ್ಲೂ ವ್ಯಾಪಕವಾಗಿದೆ.

ನಾವು ಆರು ಜನ ಅಕ್ಕತಂಗಿಯರಿಗೆ, ಒಬ್ಬನೇ ಅಕ್ಕರೆಯ ಸಹೋದರ. ವಿಚಾರವಂತರಾದ ನಮ್ಮ ತಂದೆ-ತಾಯಿಯರಿಗೆ ಮಕ್ಕಳೆಲ್ಲರಲ್ಲೂ ಸಮಾನ ಪ್ರೀತಿ-ಆದರಗಳಿದ್ದುವಷ್ಟೇ ಅಲ್ಲ, ಕೆಲವೊಂದು ವಿಷಯಗಳಲ್ಲಿ ಹುಡುಗಿಯರಿಗೇ ಹೆಚ್ಚು ರಿಯಾಯತಿ ಇತ್ತೆನ್ನಬಹುದು. ಆದರೆ, ಪ್ರತಿವರ್ಷ ತಮ್ಮನ ಹುಟ್ಟುಹಬ್ಬದಂದು ಬಂಧುಗಳನ್ನೆಲ್ಲ ಕರೆದು ಮನೆಯಲ್ಲಿ ಟೀಪಾರ್ಟಿ ಏರ್ಪಡಿಸುವ ಕ್ರಮ ಇತ್ತು. ಎಷ್ಟೋ ದಿನಗಳಿಂದ ಹಬ್ಬದಂತೆ ಅದನ್ನು ಎದುರುನೋಡುತ್ತ, ಆವತ್ತು ಹೊಸ ಲಂಗ-ರವಕೆ ತೊಟ್ಟು ಸಂಭ್ರಮದಲ್ಲಿ ಓಡಾಡುತ್ತಿದ್ದಾಗ, ಒಂದೇ ಒಂದು ಕ್ಷಣಕ್ಕೂ ನಮ್ಮ ಹುಟ್ಟುಹಬ್ಬವನ್ನು ಯಾಕೆ ಹೀಗೆ ಆಚರಿಸುತ್ತಿಲ್ಲ ಎಂಬ ಬೇಸರವಾಗಲಿ, ಆಶ್ಚರ್ಯವಾಗಲಿ ಆಗಿರಲಿಲ್ಲವೆಂಬುದೇ ನನಗಿಂದು ಅಚ್ಚರಿಯ ವಿಷಯವೆನಿಸುತ್ತದೆ. ಮನಸ್ಸು ಅಷ್ಟೊಂದು ಮಟ್ಟಿಗೆ ಅಂದಿನ ಪಿತೃಪ್ರಧಾನ ವ್ಯವಸ್ಥೆಯ ರೀತಿನೀತಿಗಳಿಗೆ ಒಗ್ಗಿಕೊಂಡಿದ್ದಿರಬೇಕು.

ವರ್ಜಿನಿಯಾ ವೂಲ್ಫ್ ಬರೆದ ಕಾಲದಲ್ಲಿ, ಅಂದರೆ 1929ರ ಹೊತ್ತಿನ ಪಾಶ್ಚಿಮಾತ್ಯ ಸಮಾಜದಲ್ಲಿ ಕೆಲವು ವಿಶ್ವವಿದ್ಯಾಲಯಗಳಿಗೆ, ಪುಸ್ತಕಾಲಯಗಳಿಗೆ ಮಹಿಳೆಯರ ಪ್ರವೇಶವು ನಿಷಿದ್ಧವಾಗಿತ್ತು. “ನಿಮ್ಮ ಪುಸ್ತಕಾಲಯಗಳನ್ನು ಬೇಕಾದರೆ ಮುಚ್ಚಿರಿ. ಆದರೆ, ಮನಸ್ಸಿನ ಸ್ವಾತಂತ್ರ್ಯವನ್ನು ಮುಚ್ಚುವ ಗೇಟಾಗಲೀ, ಚಿಲಕವಾಗಲೀ, ಬೀಗವಾಗಲೀ ನಿಮ್ಮಲ್ಲಿ ಇಲ್ಲ’ ಎಂದು ಅವಳು ಬರೆದಳು. ಕಾಲ ಬದಲಾಗಿದ್ದರೂ, ವರ್ಜಿನಿಯಾಳ ಎಷ್ಟೋ ಮಾತುಗಳು ಇವತ್ತಿಗೂ ಪ್ರಸಕ್ತವಾಗಿದ್ದು, ಮಹಿಳಾ ಅಧ್ಯಯನಗಳ ಮುಖ್ಯ ಭಾಗಗಳಾಗಿವೆ.

ಇಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ, ದೇಶ-ವಿದೇಶಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು, ಎಲ್ಲ ಕ್ಷೇತ್ರಗಳಲ್ಲೂ ಹೆಂಗಳೆಯರು ಮಿಂಚುತ್ತಿದ್ದಾರೆ. ತಮ್ಮ ಪರಿಸರವನ್ನು ತಾವೇ ರೂಪಿಸಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯನ್ನು ಸಮಾಜವು ಅಂಗೀಕರಿಸುತ್ತ ಬಂದಿರುವ ಬಗೆ, ಪ್ರೋತ್ಸಾಹಿಸುತ್ತಿರುವ ರೀತಿ ಆಶಾದಾಯಕವೂ, ಹೃದಯಸ್ಪರ್ಶಿಯೂ ಆಗಿದೆ. ಆದರೆ, ಈ ಸುಧಾರಣೆಯ ವೇಗವು ಮಾತ್ರ ಬೇರೆ ಬೇರೆ ಜಾತಿ, ಮತ, ಅಂತಸ್ತುಗಳಲ್ಲಿ ವಿಭಿನ್ನವಾಗಿವೆ.ರೈತ-ಕಾರ್ಮಿಕರನ್ನೊಳಗೊಂಡಂತೆ, ದೇಶದ ಅರ್ಧಕ್ಕಿಂತಲೂ ಹೆಚ್ಚಿನ ಹೆಣ್ಣುಮಕ್ಕಳ ಬದುಕು ಸರಿಯಾದ ವಿದ್ಯಾಭ್ಯಾಸವಿಲ್ಲದೆ ಮುರುಟಿಹೋಗುತ್ತಿದೆ. ಪೂರ್ತಿಯಾಗಿ ಅರಳಲು ಅವಕಾಶವೇ ಸಿಗದೆ, ಸಾರ್ವಜನಿಕವಾಗಿ ಗಂಡಸರಿಗಿಂತ ಕಡಿಮೆ ಪ್ರಾಮುಖ್ಯದ ಬದುಕನ್ನು ಬಾಳುವಂತಾಗಿದೆ.

ನನ್ನ ಒಬ್ಬ ಗೆಳತಿಗೆ ಮನೆಯೊಳಗೆಲ್ಲೂ ಬರೆಯುವ ಸ್ವಾತಂತ್ರ್ಯವಿರಲಿಲ್ಲ. ಬರೆದುದೇ ಆದರೆ ವಿಚ್ಛೇದನ ಕೊಟ್ಟು ಮನೆಯಿಂದ ಹೊರಹಾಕಲ್ಪಡುವ ಪರಿಸ್ಥಿತಿ. ಕೊನೆಗೆ ಅವಳು ರಾತ್ರಿ ಹೊತ್ತು ಬಚ್ಚಲುಮನೆಯಲ್ಲಿ ಕುಳಿತು, ಯಾರಿಗೂ ಗೊತ್ತಾಗದಂತೆ ಬರೆಯುತ್ತಿದ್ದಳು. ಅವಳೇ ತಿರುವರಂಕುರುಚಿಯ ಸಲ್ಮಾ, ತಮಿಳಿನ ಓರ್ವ ಪ್ರತಿಭಾವಂತ ಕವಯಿತ್ರಿ. ಎಲ್ಲ ವಿರೋಧಗಳ ನಡುವೆ ತನ್ನದೇ ಆದ ಜಾಗವನ್ನು ಕೊರೆದುಕೊಂಡು ಬರೆಯುತ್ತಿರುವ ಅವಳು- “ನನ್ನತನವನ್ನು

ಬರವಣಿಗೆಯ ಮೂಲಕವಷ್ಟೇ ಹೊರಹಾಕಬಲ್ಲೆ; ಕೌಟುಂಬಿಕ ಜೀವನದಲ್ಲಿ ಕಳೆದುಹೋಗುವುದು ನನಗೆ ಬೇಕಿರಲಿಲ್ಲ; ನನ್ನ ಹುಡುಕಾಟದಲ್ಲಿ ಯಾರೂ ಮಧ್ಯ ಪ್ರವೇಶಿಸಬಾರದೆಂದು ಯೋಚಿಸುತ್ತಿದ್ದೆ’ ಎನ್ನುತ್ತಾಳೆ.

2000ದಲ್ಲಿ ಅವಳ ಮೊದಲನೆಯ ಕವನ ಸಂಕಲನ ಒರು ಮಾಲಯುಮ್‌ ಇನ್ನೊರು ಮಾಲಯುಮ್‌ ಪ್ರಕಟವಾದಾಗ ಸ್ತ್ರೀಯರ ಅನುಭವದ ಹೊಸ ಜಗತ್ತೇ ತೆರೆಯಲ್ಪಟ್ಟಂತಾಗಿತ್ತು. “ನನ್ನ ಕವನಗಳೆಂದರೆ ಅವು ನನ್ನೊಬ್ಬಳದೇ ಅನುಭವವಲ್ಲ, ನನಗೆ ಗೊತ್ತಿರುವ ಎಲ್ಲ ಸ್ತ್ರೀಯರ ಒಟ್ಟು ಅನುಭವಗಳ, ಭಾವನೆಗಳ ಅಭಿವ್ಯಕ್ತಿ’ ಎನ್ನುತ್ತ ಸಲ್ಮಾ ಹೆಂಗಸರ ಯೋಚನೆಗಳೂ ಅವರ ಅರಿವಿಗೆ ಬಾರದಂತೆ ನಿರ್ಬಂಧಿತವಾಗಿದ್ದು, ಅವರು ಗಂಡಸರ ಆಲೋಚನೆಗಳನ್ನೇ ಕಡ ಪಡೆದು ಯೋಚಿಸುವಂತಾಗಿದೆ; ತಮ್ಮದೇ ಯೋಚನಾಶಕ್ತಿಯನ್ನು ಅವರು ಬೆಳೆಸಿಕೊಳ್ಳುವುದಿಲ್ಲ ಏಕೆ? ಎಂದು ಪ್ರಶ್ನಿಸುತ್ತಾಳೆ. ಶತಮಾನಗಳ ಕಾಲ ಓದು-ಬರಹಗಳಿಂದ ವಂಚಿತರಾಗಿದ್ದ ಸ್ತ್ರೀಯರು ಸ್ವಂತ ಆಲೋಚನೆ ಮಾಡುವ ಶಕ್ತಿಯನ್ನೇ ಕಳಕೊಳ್ಳುವಂತಾಗಿದೆ.

ಹೆಣ್ಣು ಗಂಡಿಗಿಂತ ಹೇಗೆ ಬೇರೆ ಎಂದೋ ಅಥವಾ ಹೆಣ್ಣು-ಗಂಡು ಸಮಾನರಲ್ಲವೇ ಎಂದೋ ಕೇಳಿ-ಹೇಳಿ ಹಳಸಲಾದ ಅದೇ ಪ್ರಶ್ನೆಯನ್ನು ಎತ್ತುವುದರಲ್ಲಿ ಅರ್ಥವಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಹೆಂಗಸು ತನ್ನದೇ ಚಿಂತನೆಗಳನ್ನು ಬೆಳೆಸಿಕೊಂಡು, ಗಂಡಸಿನ ವ್ಯಕ್ತಿತ್ವದಷ್ಟೇ ವಿಶಿಷ್ಟವಾದ ಸ್ವಂತ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಸಮಾಜದಲ್ಲೊಂದು ಸ್ಥಾನವನ್ನು ರೂಪಿಸಿಕೊಂಡು ಗಂಡಸಿನೊಂದಿಗೆ ಸಹ(ಮ)ಬಾಳ್ವೆ ನಡೆಸಬೇಕಾಗಿದೆ.

 

-ಮಿತ್ರಾ ವೆಂಕಟ್ರಾಜ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.