ನೈಜೀರಿಯಾದ ಕತೆ: ಆಮೆ ಮತ್ತು ಡ್ರಮ್‌


Team Udayavani, Jul 14, 2019, 5:00 AM IST

y-4

ಕಾಡಿನಲ್ಲಿ ಒಂದು ಸಲ ಭೀಕರ ಬರಗಾಲ ಆವರಿಸಿತು. ಯಾವ ಪ್ರಾಣಿಗೂ ಆಹಾರ ಸಿಗದೆ ಕಂಗಾಲಾದವು. ಆಹಾರವನ್ನು ಅರಸುತ್ತ ವಲಸೆ ಹೋಗಲಾರಂಭಿಸಿದವು. ಒಂದು ಆಮೆ ಕೂಡ ನಿಧಾನವಾಗಿ ಎಲ್ಲಿಯಾದರೂ ತಿನ್ನಲು ಏನಾದರೂ ಸಿಗಬಹುದೇ ಎಂದು ಹುಡುಕಿಕೊಂಡು ತುಂಬ ದೂರ ಹೋಯಿತು. ಏನೂ ಸಿಗಲಿಲ್ಲ. ಆಗ ನೀರಿಲ್ಲದೆ ಒಣಗಿದ್ದ ಒಂದು ನದಿಯ ದಡದಲ್ಲಿ ದೊಡ್ಡ ತಾಳೆಮರ ಅದರ ದೃಷ್ಟಿಗೆ ಗೋಚರಿಸಿತು. ಮರದ ತುಂಬ ಹಣ್ಣುಗಳು ತುಂಬಿದ ಗೊನೆಗಳು ತೂಗಾಡುತ್ತಿದ್ದವು. ಅದನ್ನು ಕಂಡು ಆಮೆಯ ನಾಲಿಗೆಯಲ್ಲಿ ನೀರೂರಿತು. ಆದರೆ ಅಷ್ಟು ಎತ್ತರದಲ್ಲಿರುವ ಹಣ್ಣುಗಳನ್ನು ಹೇಗೆ ಉದುರಿಸುವುದು ಎಂದು ತಿಳಿಯದೆ ಚಿಂತೆ ಮಾಡತೊಡಗಿತು.

ಆಗ ಅಲ್ಲಿಯೇ ಒಣಗಿ ನಿಂತಿದ್ದ ಒಂದು ಬಿದಿರು ಆಮೆಯನ್ನು ಕರೆಯಿತು. “”ಆಮೆಯಣ್ಣ, ನೆನಪಿಲ್ಲವೆ? ಎಷ್ಟೋ ವರ್ಷಗಳ ಹಿಂದೆ ನೀನು ನನ್ನ ಬೀಜಗಳನ್ನು ತಂದು ಇಲ್ಲಿ ಹಾಕಿದ್ದೆ. ನಾನೀಗ ಮಕ್ಕಳು, ಮರಿಗಳೊಂದಿಗೆ ಸುಖವಾಗಿದ್ದೇನೆ. ಎಷ್ಟು ಉದ್ದವಾಗಿದ್ದೇನೆ ನೋಡು. ನಿನಗೆ ತಾಳೆಹಣ್ಣುಗಳನ್ನು ಕೊಯ್ಯಬೇಕಾಗಿದೆ ತಾನೆ? ಎತ್ತಿಕೋ ನನ್ನನ್ನು. ಬೇಕಾದಷ್ಟು ಹಣ್ಣುಗಳನ್ನು ಕಿತ್ತು ಹಾಕುತ್ತೇನೆ” ಎಂದು ಹೇಳಿತು. ಆಮೆ ಸಂತೋಷದಿಂದ ಬಿದಿರನ್ನು ಎತ್ತಿಕೊಂಡಿತು. ಅದು ಮರದಲ್ಲಿದ್ದ ಹಲವು ಹಣ್ಣುಗಳನ್ನು ಉದುರಿಸಿ ಹಾಕಿತು.

ಆದರೆ ಹಣ್ಣುಗಳನ್ನು ಹೆಕ್ಕಲು ನೋಡಿದಾಗ ಆಮೆಗೆ ಒಂದು ಹಣ್ಣು ಕೂಡ ಕಾಣಿಸಲಿಲ್ಲ. ಎಲ್ಲವೂ ಹೇಗೆ ಮಾಯವಾದವು ಎಂದು ಹುಡುಕಿದಾಗ ನದಿಯಲ್ಲಿ ಒಂದು ಹೊಂಡ ಕಾಣಿಸಿತು. ಹಣ್ಣುಗಳು ನೇರವಾಗಿ ಹೋಗಿ ಹೊಂಡದೊಳಗೆ ಬಿದ್ದಿದ್ದವು. ಅದು ಹೊಂಡದೊಳಗೆ ಇಳಿಯಿತು. ಆಳದಲ್ಲಿ ಒಂದು ದೆವ್ವವು ಆಮೆ ಕೊಯಿದು ಹಾಕಿದ ಎಲ್ಲ ಹಣ್ಣುಗಳನ್ನೂ ತಿಂದು ಬಾಯಿ ಚಪ್ಪರಿಸುತ್ತ ಇತ್ತು. ಆಮೆಗೆ ಕೋಪ, ದುಃಖ ಏಕಕಾಲದಲ್ಲಿ ಬಂದಿತು. “”ಎಂತಹ ಅನ್ಯಾಯ ಮಾಡಿದೆಯಪ್ಪ! ಹಸಿವಿನಿಂದ ಸಾಯುತ್ತಿರುವಾಗ ದೇವರು ಎತ್ತರದ ಮರದಲ್ಲಿ ಹಣ್ಣುಗಳನ್ನು ತೋರಿಸಿದ. ಕೊಯ್ಯುವುದು ಹೇಗೆ ಎಂಬ ಚಿಂತೆಯಲ್ಲಿರುವಾಗ ಬಿದಿರು ಸಹಾಯ ಮಾಡಿತು. ಆದರೂ ಕಷ್ಟವಿಲ್ಲದೆ ನನ್ನ ಪಾಲಿನ ಹಣ್ಣುಗಳನ್ನು ನುಂಗಿ ಆರಾಮವಾಗಿ ಕುಳಿತಿದ್ದೀಯಲ್ಲ?” ಎಂದು ರೋಷದಿಂದ ಹೇಳಿತು.

ಅದರ ಮಾತು ಕೇಳಿ ದೆವ್ವಕ್ಕೆ ಪಶ್ಚಾತ್ತಾಪವಾಯಿತು. “”ನಿನಗೆ ಸೇರಿದ ಹಣ್ಣುಗಳೆಂದು ತಿಳಿಯಲಿಲ್ಲ, ತಿಂದುಬಿಟ್ಟೆ. ಆದರೆ ಆದ ಅನ್ಯಾಯವನ್ನು ಸರಿಪಡಿಸಲು ನಿನಗೊಂದು ಉಪಕಾರ ಮಾಡುತ್ತೇನೆ. ಅದೋ ಅಲ್ಲಿ ನೋಡು, ಸಾವಿರಾರು ಡ್ರಮ್ಮುಗಳಿವೆ. ನಿನಗೆ ಬೇಕೆನಿಸಿದುದನ್ನು ಆರಿಸಿಕೊಂಡು ಹೋಗು. ಎಲ್ಲ ಡ್ರಮ್ಮುಗಳಿಗೂ ಒಂದೊಂದು ಗುಣಗಳಿವೆ. ನಿನ್ನ ಅದೃಷ್ಟ ಒಳ್ಳೆಯದಿದ್ದರೆ ಅದನ್ನು ಬಾರಿಸಿದಾಗ ಒಳ್ಳೆಯದೇ ಆಗಬಹುದು” ಎಂದು ಹೇಳಿತು. ಆಮೆ ಅದರಲ್ಲಿ ತನಗೆ ಇಷ್ಟವಾದ ಡ್ರಮ್‌ ಮತ್ತು ಬಡಿಯುವ ಕೋಲನ್ನು ತೆಗೆದುಕೊಂಡು ಮನೆಗೆ ಬಂದಿತು.

ಡ್ರಮ್‌ ಹೇಗಿದೆಯೆಂದು ಗುಣ ಪರೀಕ್ಷೆ ಮಾಡಲು ಆಮೆ ಅದರ ಮೇಲೆ ಕೋಲಿನಿಂದ ಬಾರಿಸಿತು. ಸದ್ದು ಬರತೊಡಗಿದಾಗ ಎಲ್ಲಿಂದಲೋ ಒಂದೊಂದಾಗಿ ಪಾತ್ರೆಗಳು ಬಂದು ಅದರ ಮುಂದೆ ನಿಂತವು. ಎಲ್ಲ ಪಾತ್ರೆಗಳ ಒಳಗೆ ಬೇರೆ ಬೇರೆ ವಿಧದ ತಿಂಡಿ ತಿನಿಸುಗಳು ತುಂಬಿಕೊಂಡಿದ್ದವು. ಘಮಘಮ ಪರಿಮಳ ಬರುತ್ತಿದ್ದ ತಿಂಡಿಗಳನ್ನು ಆಮೆ ಮನದಣಿಯೆ ತಿಂದಿತು. ಹೊಟ್ಟೆ ತುಂಬಿದ ಮೇಲೆ ಇನ್ನೂ ತಿಂಡಿಗಳು ಉಳಿದಿದ್ದವು. ಮನೆಯ ಪಕ್ಕದಲ್ಲಿ ವಾಸವಾಗಿದ್ದ ಮೊಲ, ಇಲಿ, ಇಣಚಿ ಮೊದಲಾದ ಪ್ರಾಣಿಗಳನ್ನು ಕರೆದು ಅವುಗಳಿಗೂ ತಿನ್ನಲು ಕೊಟ್ಟಿತು.

“”ಇನ್ನು ಮೇಲೆ ಬರಗಾಲ ಇದೆಯೆಂದು ಯಾರೂ ಕಂಗೆಡುವುದು ಬೇಡ. ದಿನವೂ ನನ್ನ ಮನೆಗೆ ಬನ್ನಿ. ಹೊಟ್ಟೆ ತುಂಬ ಊಟ ಮಾಡಿಹೋಗಿ” ಎಂದು ಆಮೆ ಪ್ರಾಣಿಗಳಿಗೆ ಹೇಳಿತು. ಡ್ರಮ್‌ ಬಾರಿಸಿ ತಿಂಡಿಗಳನ್ನು ತರಿಸಿ ಅವುಗಳಿಗೂ ಕೊಟ್ಟು ಸುಖವಾಗಿತ್ತು. ಆದರೆ ಈ ವಿಷಯ ಆನೆಗೆ ಗೊತ್ತಾಯಿತು. ಎಂಥ ಅನ್ಯಾಯ! ಇಡೀ ಕಾಡು ಊಟವಿಲ್ಲದೆ ಬಳಲುತ್ತಿರುವಾಗ ಈ ಆಮೆಯೊಂದು ಸುಖವಾಗಿರಬೇಕೆ? ಎಂದು ಅದಕ್ಕೆ ಕೋಪ ಬಂತು. ಆಮೆಯನ್ನು ಹುಡುಕಿಕೊಂಡು ನೆಟ್ಟಗೆ ಅದರ ಮನೆಗೆ ಬಂದಿತು.

ಆಗ ಆಮೆ ಡ್ರಮ್‌ ಬಾರಿಸುತ್ತ ಇತ್ತು. ಸಣ್ಣ ಪುಟ್ಟ ಪ್ರಾಣಿಗಳು ಕುಳಿತುಕೊಂಡು ಬಗೆಬಗೆಯ ತಿಂಡಿಗಳನ್ನು ಮೆಲ್ಲುತ್ತ ಇದ್ದವು. ಇದನ್ನು ನೋಡಿ ಆನೆಗೆ ತಾಳಲಾಗದ ಕೋಪ ಬಂದಿತು. “”ಏನಿದು ಮೋಸ? ನೀವೆಲ್ಲರೂ ತಿನ್ನುವಾಗ ನಾವು ಉಪವಾಸವಿರಬೇಕೆ? ಒಳ್ಳೆಯ ಮಾತಿನಲ್ಲಿ ನನಗೂ ಏನಾದರೂ ಕೊಡುತ್ತೀಯೋ ಅಲ್ಲ, ನಿನ್ನನ್ನು ಈ ಕಾಡಿನಿಂದಲೇ ಓಡಿಸಿಬಿಡಬೇಕಾ?” ಎಂದು ಗರ್ಜಿಸಿತು.

ಆಮೆಯು, “”ಇದಕ್ಕೆಲ್ಲ ಕೋಪ ಮಾಡಿಕೊಳ್ಳುವುದೇಕೆ ಆನೆಯಣ್ಣ? ನಾನು ನನಗೆ ಸಿಕ್ಕಿದ ಸೌಕರ್ಯವನ್ನು ನಾನೊಬ್ಬನೇ ಬಳಸಿಕೊಳ್ಳದೆ ಬೇರೆಯವರಿಗೂ ಕೊಟ್ಟು ಹಸಿವು ನೀಗಿಸುತ್ತಿದ್ದೇನಲ್ಲವೆ? ಬಾ, ನೀನೂ ಪಂಕ್ತಿಯಲ್ಲಿ ಕುಳಿತುಕೋ. ಊಟ ಮಾಡು” ಎಂದು ಕರೆಯಿತು. ಆನೆ ಊಟಕ್ಕೆ ಕುಳಿತಿತು. ಊಟ ರುಚಿಯಾಗಿಯೇ ಇತ್ತು. ಆದರೆ ಆಮೆ ಬಡಿಸುತ್ತಿದ್ದ ತಿಂಡಿಗಳು ಅದಕ್ಕೆ ಸಾಕಾಗಲಿಲ್ಲ. “”ನೀನು ಹೀಗೆ ತಡವಾಗಿ ಸ್ವಲ್ಪ ಸ್ವಲ್ಪ ತಂದುಕೊಟ್ಟರೆ ಹಸಿವಿನಿಂದ ನನ್ನ ಪ್ರಾಣ ಹೋಗುತ್ತದೆ ಅಷ್ಟೇ. ಬೇಗ ಬೇಗ ಡ್ರಮ್‌ ಬಡಿದು ಆಹಾರ ಶೀಘ್ರವಾಗಿ ಬರುವಂತೆ ಮಾಡು” ಎಂದು ಅವಸರಿಸಿತು. ಆಮೆ ಡ್ರಮ್‌ ಬಡಿಯುವ ವೇಗ ಹೆಚ್ಚಿಸಿದರೂ ಅದು ಸಾಲದೆಂದೇ ಆನೆಗೆ ತೋರಿತು. ತಾನೇ ಎದ್ದುಬಂದಿತು. ಆಮೆಯ ಕೈಯಿಂದ ಡ್ರಮ್‌ ಬಡಿಯುವ ಕೋಲನ್ನು ಕಿತ್ತುಕೊಂಡು ಒಂದೇ ಸವನೆ ಬಡಿಯತೊಡಗಿತು.

ಆನೆ ಬಡಿಯುವ ರಭಸ ತಾಳಲಾಗದೆ ಕೋಲು ಮುರಿದು ಹೋಯಿತು. ಇದರಿಂದ ಆಹಾರ ಬರುವುದು ನಿಂತುಹೋಯಿತು. ಆಮೆಗೆ ದುಃಖವಾಯಿತು. “”ಅವಸರ ಮಾಡಿ ಎಲ್ಲ ಹಾಳು ಮಾಡಿಬಿಟ್ಟೆ. ತುಂಬ ಕಷ್ಟಪಟ್ಟು ಸಂಪಾದಿಸಿದ್ದೆ. ಕೆಲವು ಪ್ರಾಣಿಗಳ ಹಸಿವು ಶಮನಕ್ಕೆ ಸಹಾಯವೂ ಆಗಿತ್ತು” ಎಂದು ದುಃಖ ಪಟ್ಟಿತು. ಆನೆ, “”ಅದಕ್ಕೆ ಯಾಕೆ ದುಃಖೀಸುವೆ? ಆ ಡ್ರಮ್‌ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬುದನ್ನು ಹೇಳು. ಅವರ ಬಳಿಗೆ ಹೋಗಿ ಇದರ ಅಪ್ಪನಂತಹ ಡ್ರಮ್‌ ತಂದು ಇಡೀ ಕಾಡಿಗೆ ಸಾಕು ಸಾಕೆನಿಸುವಷ್ಟು ಊಟ ಹಂಚುತ್ತೇನೆ ನೋಡು” ಎಂದು ಮೀಸೆ ತಿರುವಿತು.

ಆಮೆ ತನಗೆ ಡ್ರಮ್‌ ಕೊಟ್ಟ ದೆವ್ವವಿರುವ ಸ್ಥಳವನ್ನು ಆನೆಗೆ ವಿವರಿಸಿತು. ಆನೆ ನೆಟ್ಟಗೆ ನದಿಯ ಬಳಿಗೆ ಹೋಯಿತು. ಹಣ್ಣುಗಳು ತುಂಬಿಕೊಂಡಿದ್ದ ತಾಳೆಮರದ ಬುಡಕ್ಕೆ ಸೊಂಡಿಲು ಹಾಕಿ ಗಡಗಡನೆ ಅಲ್ಲಾಡಿಸಿತು. ಹಣ್ಣುಗಳು ದೊಬದೊಬನೆ ಬೀಳತೊಡಗಿದವು. ಆಗ ಮರವು ನೋವಿನಿಂದ, “”ಅಣ್ಣ, ಎಲ್ಲ ಕಡೆ ಬರಗಾಲ ಕಾಡುತ್ತಿದೆ. ಹಕ್ಕಿಗಳಿಗೆ, ಪ್ರಾಣಿಗಳಿಗೆ ನನ್ನ ಹಣ್ಣುಗಳು ಆಹಾರವಾಗುತ್ತಿವೆ. ಎಲ್ಲವನ್ನೂ ಒಮ್ಮೆಲೇ ಕೆಡವಿ ಖಾಲಿ ಮಾಡುವ ಬದಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೋ” ಎಂದು ಬೇಡಿಕೊಂಡಿತು. ಅದರ ಮಾತಿಗೆ ಆನೆ ಜಗ್ಗಲಿಲ್ಲ. “”ಅಧಿಕ ಪ್ರಸಂಗಿ, ಸುಮ್ಮನಿರು. ನನ್ನನ್ನು ತಡೆಯಲು ಬಂದರೆ ನಿನ್ನನ್ನು ಮುರಿದುಹಾಕುತ್ತೇನೆ” ಎಂದು ಬೆದರಿಸಿತು.

ಹಣ್ಣು ಕಿತ್ತ ಬಳಿಕ ಆನೆ ದೆವ್ವವಿರುವ ಹೊಂಡವೆಲ್ಲಿದೆ ಎಂದು ಹುಡುಕಿ ಅದರೊಳಗೆ ಇಳಿಯಿತು. ಅಲ್ಲಿ ದೆವ್ವ ಮಲಗಿ ನಿದ್ರೆ ಮಾಡುತ್ತ ಇತ್ತು. ಆನೆ ಕಾಲಿನಿಂದ ತುಳಿದು ಅದನ್ನು ಎಬ್ಬಿಸಿತು. “”ನಾನು ಕೊಯಿದ ತಾಳೆಹಣ್ಣುಗಳನ್ನೆಲ್ಲ ತಿಂದು ಏನೂ ಅರಿಯದವರ ಹಾಗೆ ಕಳ್ಳನಿದ್ರೆಗೆ ಜಾರಿದ್ದೀಯಲ್ಲ? ಏಳು ಏಳು. ನನ್ನ ಹಣ್ಣು ತಿಂದುದಕ್ಕೆ ಪ್ರತಿಫ‌ಲವಾಗಿ ದೊಡ್ಡದೊಂದು ಡ್ರಮ್‌ ಕೊಟ್ಟುಬಿಡು” ಎಂದು ಜೋರು ಮಾಡಿತು.

ದೆವ್ವಕ್ಕೆ ಆಶ್ಚರ್ಯವಾಯಿತು. “”ನಾನು ಒಂದು ಹಣ್ಣು ಕೂಡ ತಿಂದಿಲ್ಲ” ಎಂದು ಹೇಳಿತು. ಆದರೂ ಆನೆ ಕೇಳಲಿಲ್ಲ. “”ನನಗೊಂದು ಡ್ರಮ್‌ ಕೊಡು. ಇಲ್ಲವಾದರೆ ನಿನ್ನನ್ನು ಕಾಲಿನಿಂದ ತುಳಿದು ಜಜ್ಜಿ ಹಾಕುತ್ತೇನೆ” ಎಂದು ಹೆದರಿಸಿತು. ದೆವ್ವ ಅಲ್ಲಿ ಸಾಲುಸಾಲಾಗಿದ್ದ ಡ್ರಮ್ಮುಗಳನ್ನು ತೋರಿಸಿತು. “”ಬೇಕಾದುದನ್ನು ಆರಿಸಿಕೋ. ನಿನ್ನ ಅದೃಷ್ಟದಲ್ಲಿ ಏನು ಬರೆದಿದೆಯೋ ಅದು ಸಿಗುತ್ತದೆ” ಎಂದು ಸುಮ್ಮನಾಯಿತು.

ಆನೆ ಭಾರವಾದ ಒಂದು ದೊಡ್ಡ ಡ್ರಮ್‌ ಎತ್ತಿಕೊಂಡು ಕಾಡಿಗೆ ಬಂದಿತು. ಹುಲಿ, ಸಿಂಹ, ಜಿರಾಫೆ, ತೋಳ ಮೊದಲಾದ ಎಲ್ಲ ಪ್ರಾಣಿಗಳನ್ನೂ ಕರೆಯಿತು. “”ಇನ್ನು ಮುಂದಕ್ಕೆ ಬರಗಾಲದ ಮಾತೇ ಇಲ್ಲ. ಅಂತಹ ವಿಶೇಷವಾದ ಆಸ್ತಿಯನ್ನು ಕಷ್ಟಪಟ್ಟು ಸಂಪಾದಿಸಿ ತಂದಿದ್ದೇನೆ. ಯಾರಿಗೆ ಯಾವ ತಿಂಡಿ ಬೇಕು ಎಂದು ಸ್ಮರಿಸಿಕೊಂಡು ಕಣ್ಣುಗಳನ್ನು ಮುಚ್ಚಿಕೊಳ್ಳಿ. ಅರೆಕ್ಷಣದಲ್ಲಿ ಘಮಘಮಿಸುವ ತಿಂಡಿ ತುಂಬಿದ ತಾಟುಗಳು ನಿಮ್ಮ ಮುಂದಿರುತ್ತವೆ” ಎಂದು ಹೇಳಿ ದಬದಬನೆ ಡ್ರಮ್‌ ಬಾರಿಸಲು ಆರಂಭಿಸಿತು.

ಮರುಕ್ಷಣವೇ ಝೊಯ್‌ ಎಂದು ಸದ್ದು ಮಾಡುತ್ತ ಲಿಂಬೆಹಣ್ಣಿನಷ್ಟು ದೊಡ್ಡ ಗಾತ್ರದ ಕಣಜಗಳು ರಾಶಿರಾಶಿಯಾಗಿ ಎದ್ದುಬಂದುವು. ಅದು ತಿಂಡಿಗಳು ಬರುವ ಸದ್ದು ಎಂದು ಭಾವಿಸಿ ಆನೆ ಇನ್ನಷ್ಟು ಉತ್ಸಾಹದಿಂದ ಡ್ರಮ್‌ ಬಡಿಯಿತು. ಅದರಿಂದ ಕಣಜಗಳು ಸಾವಿರ ಸಂಖ್ಯೆಯಲ್ಲಿ ಬಂದು ಕಣ್ಮುಚ್ಚಿ ಕುಳಿತಿದ್ದ ಪ್ರಾಣಿಗಳಿಗೆ ಕುಟುಕತೊಡಗಿದವು. ನೋವು ತಾಳಲಾಗದೆ ಕಣ್ತೆರೆದು ನೋಡಿದಾಗ ಕಣಜಗಳ ದಾಳಿ ಕಂಡು “”ಅಯ್ಯಯ್ಯೋ ಸತ್ತೇಹೋದೆವು” ಎಂದು ಬೊಬ್ಬೆ ಹಾಕುತ್ತ ದಿಕ್ಕು ಸಿಕ್ಕತ್ತ ಓಡಿಹೋದವು. ಆನೆಯನ್ನೂ ಕಣಜಗಳು ಬಿಡಲಿಲ್ಲ. ಅದರ ಮೇಲೆ ದಾಳಿ ಮಾಡಿ ಕಚ್ಚಿದಾಗ ಅದು ಅವುಗಳಿಂದ ಪಾರಾಗಲು ಓಡಿಹೋಗಿ ಒಂದು ನದಿಗೆ ಧುಮುಕಿ ಅಲ್ಲಿರುವ ಕೆಸರಿನ ಹೊಂಡದಲ್ಲಿ ಮುಳುಗಿತು. ಆಮೇಲೆ ಡ್ರಮ್ಮಿನ ಕಡೆಗೆ ತಲೆ ಹಾಕಲಿಲ್ಲ.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.